ಗಾಯಗೊಂಡ ಜಗತ್ತಿನ ದರ್ಶನ ಮಾಡಿಸಿದ ಸೆಬಾಸ್ಟಿಯೋ ಸಾಲ್ಗಾಡೊ!
x

ಗಾಯಗೊಂಡ ಜಗತ್ತಿನ ದರ್ಶನ ಮಾಡಿಸಿದ ಸೆಬಾಸ್ಟಿಯೋ ಸಾಲ್ಗಾಡೊ!

ಬ್ರೆಜಿಲ್ ನ ಚಿನ್ನದ ಗಣಿಯ ದುರ್ಗಮ ಕಣಿವೆಯಲ್ಲಿ ದುಡಿವ ನರಪೇತಲ ದೇಹಗಳ ಸಾಲಿನಿಂದ ಅಮೆಜಾನಿನ ಅಬೇಧ್ಯ ಕಾನನದ ತನಕ, ಧನಬಾದ್ ಕಲ್ಲಿದ್ದಲ ಗಣಿಯ ಧೂಳಿನ ಪ್ರಪಂಚದ ತನಕ ಗಾಯಗೊಂಡ ಜಗತ್ತಿನ ದರ್ಶನ ಮಾಡಿಸಿದ ಬ್ರೆಜಿಲ್ ಫೋಟೊಗ್ರಾಫರ್ ಸೆಬೆಸ್ಟಿಯೋ ಸಾಲ್ಗಾಡೊ. ಅವರ ಚಿತ್ರಗಳು ಜಗತ್ತಿನಲ್ಲಿ ನಾವು ಮರೆತುಹೋದವರ ವೇದನೆ, ಘನತೆ ಮತ್ತು ಪ್ರತಿಭಟನೆಯನ್ನು ನಮ್ಮ ಮುಂದೆ ಅನಾವರಣ ಮಾಡುತ್ತವೆ....


ಸೆಬಾಸ್ಟಿಯೊ ಸಾಲ್ಗಾಡೊ (ಫೆ.8, 1944-ಮೇ23,2025) ತಮ್ಮ ಎಂಭತ್ತೊಂದನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಿಶ್ವ ಛಾಯಾಗ್ರಹಣ ಇತಿಹಾಸದಲ್ಲಿ ಶ್ರೇಷ್ಠ ಛಾಯಾಗ್ರಾಹಕರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾಲ್ಗಾಡೊ ಹೆಸರು ಎಂದೆಂದಿಗೂ ಚಿರಸ್ಥಾಯಿ.

ಸೆಬಾಸ್ಟಿಯೊ ಸಾಲ್ಗಾಡೊ ಅವರು ಬಿಟ್ಟುಹೋಗಿರುವ ಚಿತ್ರಗಳ ಪರಂಪರೆಯೇ ಐದು ಲಕ್ಷಕ್ಕೂ ಅಧಿಕ. ಅವುಗಳಲ್ಲಿ ಹೆಚ್ಚಿನವು ನಾವು ಕಂಡು-ಕೇಳಿ ಅರಿಯದ, ಅತ್ಯಂತ ದುರ್ಗಮ ಜಗತ್ತಿನ ಕಪ್ಪು-ಬಿಳುಪು ಛಾಯಾಚಿತ್ರಗಳು. ನಾವೆಂದೂ ತಲುಪಲಾಗದ ತಾಣಗಳಿಗೆ ಆಗಿನ ಕಾಲದಲ್ಲೇ ಭೇಟಿ ನೀಡಿ ಸೆರೆಹಿಡಿದ ಅನರ್ಘ್ಯ ರತ್ನಗಳು. ಅವರ ಕಾರ್ಯನಿರ್ವಹಣೆಯ ರೀತಿ ಎಂಥವರನ್ನೂ ಬೆರಗುಗೊಳಿಸುತ್ತದೆ, ಆಘಾತಕ್ಕೆ ಒಳಪಡಿಸುತ್ತದೆ, ದಂಗುಪಡಿಸುತ್ತದೆ. ಅವರು ಚಿತ್ರಗಳನ್ನು ಬಣ್ಣಿಸಲು ಪದಗಳು ಸಾಲವು.

ಅಪರ್ಚರ್ ಒಳಗೆ ಕನಸುಗಳನ್ನು ತುಂಬಿಕೊಂಡು ಕ್ಯಾಮರಾ ಬಳಸುವವರೆಲ್ಲರ ಮನಸ್ಸಿನಲ್ಲಿ, ಕಣ್ಣುಗಳಲ್ಲಿ ಸಾಲ್ಗಾಡೊ ಚಿತ್ರಗಳು ಸ್ಥಾಯಿರೂಪ ತಾಳುತ್ತವೆ. ಒಂದು ಚಿತ್ರದಲ್ಲಿ ಇರಬಹುದಾದ ಪಾರದರ್ಶಕ ಸ್ಪಷ್ಟತೆ, ಸೌಂದರ್ಯ ಮೌಲ್ಯ, ಕರುಣೆ, ನೀತಿ ಎಲ್ಲವನ್ನು ಮರುವ್ಯಾಖ್ಯಾನಿಸಲು ಬಯಸುವ ಪ್ರತಿಯೊಬ್ಬರ ಚಿತ್ತ ಭಿತ್ತಿಯಲ್ಲಿ ಈ ಛಾಯಾಚಿತ್ರಗಳು ಅಚ್ಚೊತ್ತಿಬಿಡುತ್ತವೆ.

1990ರಲ್ಲಿ ಲಂಡನ್ನಿನ ದ ಫೋಟೊಗ್ರಾಫರ್ ಗ್ಯಾಲರಿಯಲ್ಲಿ ಅವರದೊಂದು ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಏರ್ಪಾಟಾಗಿತ್ತು. ಆಗ ಸೆಬಾಸ್ಟಿಯೊ ಸಾಲ್ಗಾಡೊ ಅವರನ್ನು ಬ್ರಿಟಿಷ್ ಜರ್ನಲ್ ಆಫ್ ಫೋಟೋಗ್ರಫಿಯ ಅಮಂಡಾ ಹಾಪ್ಕಿನ್ಸನ್ ಸಂದರ್ಶನ ಮಾಡಿದ್ದರು. ಆಗ ಆ ಜರ್ನಲ್ ನಲ್ಲಿ ಹೀಗೆ ಬರೆಯಲಾಗಿತ್ತು:

“ಮಾನವೀಯ ಮತ್ತು ಪರಿಸರ ಕಾಳಜಿಯನ್ನು ಬಿಂಬಿಸುವಲ್ಲಿ ಚಿತ್ರಗಳು ಸಮರ್ಪಿತವಾದ ರೀತಿ ನೋಡಿದರೆ ಅವರೊಬ್ಬ ಆತ್ಮಸಾಕ್ಷಿಯ ಫೋಟೊಗ್ರಾಫರ್ ಆಗಿ ಹೊರಹೊಮ್ಮಿದ್ದಾರೆ.” ಅದೇ ವರ್ಷ ಅವರ ಪ್ರಸಿದ್ಧ ಚಿತ್ರಗಳು ಮೆಕ್ಸಿಕೊ ನಗರ, ಫ್ರಾನ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿಯೂ ಪ್ರದರ್ಶನ ಕಂಡವು.

ತಮ್ಮ ಛಾಯಾಚಿತ್ರಗಳನ್ನು ಹೊರತುಪಡಿಸಿ ಅವರು ಅಮೆಜಾನ್ ನಲ್ಲಿರುವ ಸಸ್ಯ ಸಂಪತ್ತು, ವನ್ಯಜೀವಿಗಳಿಂದ ಸಮೃದ್ಧವಾಗಿರುವ 2000 ಎಕರೆಗಳಷ್ಟು ಪ್ರದೇಶದಲ್ಲಿ ಈಗಲೂ ಅನಂತವಾಗಿ ಬೆಳೆಯುತ್ತಿರುವ ಅರಣ್ಯವನ್ನು ಬಿಟ್ಟುಹೋಗಿದ್ದಾರೆ.

ಎಡಪಂಥೀಯ ಹಾಗೂ ಮಾನವತಾವಾದಿಯಾಗಿರುವ ಸಾಲ್ಗಾಡೊ ಅವರ ಜೀವನದ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು ಜೊತೆಯಾದವರು ಅವರ ಜೀವನ ಸಂಗಾತಿ ಲೆಲಿಯಾ ವನಿಕಾ ಸಾಲ್ಗಾಡೊ. ವಾಸ್ತುಶಿಲ್ಪಿಯಾದ ಆಕೆ ಸಾಲ್ಗಾಡೊ ಜೊತೆಗೆ ಸಹಪ್ರಯಾಣಿಕರಾದರು, ನೈಜ ಜೀವನಸಾಥಿಯಾದರು. ತಮ್ಮ ತಾಯ್ನಾಡು ಬ್ರೆಜಿಲ್ ಮಿಲಿಟರಿ ಸರ್ವಾಧಿಕಾರದಿಂದ ದಮನಕ್ಕೊಳಗಾದಾಗ ಅದನ್ನು ತೊರೆದು 1960ರ ದಶಕದ ಕೊನೆಯ ಭಾಗದಲ್ಲಿ ಪ್ಯಾರಿಸ್ ನಲ್ಲಿ ನೆಲೆನಿಂತರು. ಸಾಲ್ಗಾಡೊ ಅವರ ಪ್ರತಿ ಹೆಜ್ಜೆಯಲ್ಲಿ ಜೊತೆಯಾದವರು ವನಿಕಾ.

ಚಿನ್ನದ ಗಣಿಯ ಗರ್ಭದಲ್ಲಿ...

ತಮ್ಮ ಆರಂಭಿಕ ಪ್ರಯತ್ನದಲ್ಲಿ ಅವರು ಒಬ್ಬ ನಿರಾಯುಧ ನಾಯಕರಾಗಿ ಹೆಜ್ಜೆ ಇಟ್ಟಿದ್ದು ಬ್ರೆಜಿಲ್ ಸೆರಾ ಪೆಲಡಾ ಎಂಬ ಬೃಹತ್ ಚಿನ್ನದ ಗಣಿಗಾರಿಕೆಯಲ್ಲಿ. ಅತ್ಯಂತ ಕಡಿದಾದ ಆ ತೆರೆದ ಚಿನ್ನದ ಗಣಿ ಆಗ ಭಾರೀ ಕುಖ್ಯಾತವಾಗಿತ್ತು. ಯಾವತ್ತೂ ಹಿಂಸೆ-ಗದ್ದಲಕ್ಕೆ ಹೆಸರುವಾಸಿಯಾಗಿದ್ದ ಈ ಸೆರಾ ಪೆಲಡಾವನ್ನು ‘ನಗ್ನ ಬೆಟ್ಟಗಳ ಸಾಲು’ ಎಂದು ಕರೆಯಲಾಗುತ್ತದೆ. ಅಲ್ಲಿರುವ ತೀರಾ ಕೃಶಕಾಯರಾದ ಗಣಿ ಕಾರ್ಮಿಕರ ಜೊತೆಗೇ ಸೇರಿಕೊಂಡು ಮಾನವಶಾಸ್ತ್ರಜ್ಞರಾದರು. ತಮ್ಮ ಕ್ಯಾಮರಾ ಕಣ್ಣುಗಳಿಗೆ ಜೀವ ತುಂಬಿದರು. ನೋಟ್-ಬುಕ್ ಗಳಲ್ಲಿ ಕಾರ್ಮಿಕರ ವೃತ್ತಾಂತಗಳನ್ನು ಬರೆದರು.

ಅಲ್ಲಿಂದಾಚೆಗೆ ಅವರು ತಮ್ಮ ಕಪ್ಪು-ಬಿಳುಪು ಚಿತ್ರಗಳ ಮೂಲಕ ದುಡಿಯುವ ವರ್ಗದ ಅಂತ್ಯವಿಲ್ಲದ ಹಾಗೂ ಬುದ್ಧಿರಹಿತ ಕಠಿಣ ಶ್ರಮಕ್ಕೆ ಜೀವ ತುಂಬುತ್ತ ಹೋದರು. ದುಡಿಯುವ ಜನರ ಕಳಾಹೀನ ಮುಖಗಳು. ದಿನವೂ ಗಂಟೆಗಟ್ಟಲೆ ಬಿಡುವಿಲ್ಲದೆ ದುಡಿಯುವ ತೆಳ್ಳಗಿನ ಕಾಲುಗಳು, ದುರ್ಬಲ ಕೈಗಳು, ಕಣ್ಣು, ಮೂಗು, ತುಟಿಯೂ ಕಾಣದಂತೆ ಇಡೀ ದೇಹವನ್ನು ಮೆತ್ತಿಕೊಂಡ ಧೂಳು ಮತ್ತು ಮಣ್ಣು ಎಲ್ಲವನ್ನೂ ಸಾಲ್ಗಾಡೊ ಕ್ಯಾಮರಾ ಸೆರೆಹಿಡಿಯುತ್ತ ಹೋಯಿತು. ಅವೆಲ್ಲವೂ ಅಸಹನೀಯ ದೃಶ್ಯಗಳಾಗಿದ್ದವು. ಮೇಲೆ ಸುವರ್ಣ ಲೇಪನ, ಆದರೆ ಚಿನ್ನದ ಗಣಿಯೊಳಗಿನ ದುಡಿಯುವ ಮಂದಿಯ ಬದುಕು ಎಷ್ಟು ಬರ್ಬರ, ದಯನೀಯ ಎಂಬುದನ್ನು ಅವರ ಚಿತ್ರಗಳು ಸಾಬೀತುಪಡಿಸಿದ್ದವು. ಅವೆಲ್ಲವೂ ನೋವಿನಲ್ಲಿ ಅದ್ದಿ ತೆಗೆದ ಚಿತ್ರಗಳಿಂತಿದ್ದವು. ದುಡಿಯುವ ಜನ ಹೇಗೆ ಪ್ರತಿ ಕ್ಷಣವೂ ಸಾವಿನ ಮೊನೆಯಡಿ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಜಗತ್ತಿಗೆ ಸಾರಿ ಹೇಳುತ್ತಿದ್ದವು.

ಬ್ರೆಝಿಲ್‌ನ ಚಿನ್ನದ ಗಣಿಯೊಂದರಲ್ಲಿ ಸಾವಿರಾರು ಕಾರ್ಮಿಕಕರ ಬವಣೆಯ ಚಿತ್ರ; (ಸೆಬಾಸ್ಟಿಯೋ ಸಾಲ್ಗಾಡೊ)

ಸಾಲ್ಗಾಡೊ ಸೆರೆಹಿಡಿದ ಪ್ರತಿಯೊಂದು ಚಿತ್ರವೂ ದುರಂತದ ಮಹಾಕಾವ್ಯದಂತೆ ಕಾಣುತ್ತಿದ್ದವು ಎಂದರೆ ಅಚ್ಚರಿಯಲ್ಲ. ತನ್ನ ದೇಹಕ್ಕಾಗದಷ್ಟು ಹೊರೆಯನ್ನು ಹೊತ್ತು ಬೆನ್ನು ಬಾಗಿದ ಒಬ್ಬನೇ ಒಬ್ಬ ಕಾರ್ಮಿಕನಿರಲಿ, ಅಂತ್ಯವೇ ಇಲ್ಲದ ಗುಲಾಮರ ಸಾಲುಗಳಲ್ಲಿರುವ ಸಾವಿರಾರು ಜನರ ಚಿತ್ರವಿರಲಿ, ಪುಟ್ಟ ಪುಟ್ಟ ಇರುವೆಗಳಂತೆ ಅಥವಾ ಆದಿಮ ಜೀವಿಗಳಂತೆ ಕಾಣುವ ಮಾನವರ ಸಾಲುಗಳು ಸಿರಿವಂತರು ಮತ್ತು ಅಧಿಕಾರದಲ್ಲಿರುವವರು ಬಡವರು ಹಾಗೂ ತಳವರ್ಗದ ಮೇಲೆ ಹೇರಿದ ಅನಾಗರಿಕತೆಯ ಹೇಯ ಹಾಗೂ ಶಾಶ್ವತ ಕಥೆಯನ್ನು ಹೇಳುತ್ತವೆ.

ಪೆಂಟಾಕ್ಸ್ ಕ್ಯಾಮರಾವನ್ನು ಕೊರಳಿಗೆ ನೇತುಹಾಕಿಕೊಂಡ ಸಾಲ್ಗಾಡೊ ಸಾಗಿದ್ದು ರುವಾಂಡಾದಿಂದ ಮೊಜಾಂಬಿಕ್ ವರೆಗೆ. ಈ ಪಯಣದಲ್ಲಿ ಅವರು ಪ್ರವೇಶಪಡೆದಿದ್ದು ಅತ್ಯಂತ ಸಂಘರ್ಷಮಯ ಹಾಗೂ ದುರ್ಗಮ ವಲಯಗಳು. ಅವು ಬೆಟ್ಟ-ಗುಡ್ಡಗಳು, ಬರಿಯ ಬಯಲು ಪ್ರದೇಶದ ಚಿತ್ರಗಳಾಗಿರಲಿಲ್ಲ. ಅವು ಸಹಾನುಭೂತಿ, ಸಂವೇದನೆ ಮತ್ತು ಸೂಕ್ಷ್ಮ ಸಂಗತಿಗಳನ್ನು ಹೊರಜಗತ್ತಿಗೆ ಸಾರಿ ಹೇಳುವ ಬಿಂಬಗಳಾಗಿದ್ದವು. ಬಲಿಪಶುಗಳು ಅವರ ಚಿತ್ರದ ವಿಷಯಗಳಾಗಿರಲಿಲ್ಲ. ವಿಮೋಚನೆಯ ಯಾವುದೇ ಸಾಮೂಹಿಕ ಸಾಧನಗಳಿಲ್ಲದವರ, ಶಾಪಗ್ರಸ್ತರ ದಮನದ ಇತಿಹಾಸವನ್ನು ಅವು ಅನಾವರಣ ಮಾಡಿದವು.

ಬಾಂಬೆ ರೈಲು ನಿಲ್ದಾಣ...

ಭಾರತದಲ್ಲಿ, ಬಹುಷಃ ಶಿಥಿಲ ಸೇತುವೆಯ ಮೇಲಿನಿಂದ ಕ್ಲಿಕ್ಕಿಸಿದ ಒಂದು ಅಪರೂಪದ ದೃಶ್ಯದಲ್ಲಿ ಅವರು ಮನುಕುಲದ ಬೃಹತ್ ಸಾಗರವನ್ನೇ ನೋಡುತ್ತಾರೆ; ಅದು ಬೇರಿನ್ನಾವುದೂ ಅಲ್ಲ, ಬಾಂಬೆಯ ಚರ್ಚ್-ಗೇಟ್ ರೈಲು ನಿಲ್ದಾಣದ ದೃಶ್ಯ. ಎರಡು ಉಗಿ ಎಂಜಿನ್ ರೈಲುಗಳ ನಡುವೆ ಮಸುಕು ಮಸುಕಾದ ಮಾನವ ದೇಹಗಳ ಸಮುದ್ರವೇ ಪ್ರವಾಹೋಪಾದಿಯಲ್ಲಿ ಮುನ್ನುಗ್ಗುತ್ತಿರುವ ದೃಶ್ಯವದು. ತುಕ್ಕು ಹಿಡಿದ ಕಬ್ಬಿಣದ ದಡಗಳಿಗೆ ಅಪ್ಪಳಿಸುವ ಅಲೆಗಳಂತೆ ಕಾಣಿಸುವ ಮನುಷ್ಯರು, ಸವೆದ ಮತ್ತು ದಣಿದು ಮೂಕಪ್ರೇಕ್ಷಕರಂತೆ ನಿಂತಿರುವ ರೈಲುಗಳು, ಇದರ ನಡುವೆ ನಿಶ್ಚಲತೆಯಲ್ಲಿ ನಿಟ್ಟುಸಿರು ಬಿಡುತ್ತಾ, ದೈನಂದಿನ ಅವಸರದಲ್ಲಿ ಶಕ್ತಿಹೀನವಾಗಿ ಕರಗಿಹೋಗುವ ಮನುಷ್ಯ ಪ್ರವಾಹ.... ಇಂತಹ ಚಿತ್ರವನ್ನು ಒಂದು ದೃಶ್ಯ ಕಾವ್ಯವೆನ್ನದೇ ಇರಲಾದೀತೇ?

ಮುಂಬಯಿ ಪಶ್ಚಿಮ ರೈಲ್ವೇ- ಚರ್ಚ್‌ಗೇಟ್‌ ನಿಲ್ದಾಣದ ಸನ್ನಿವೇಶ (ಚಿತ್ರ: ಸೆಬಾಸ್ಟಿಯೋ ಸಾಲ್ಗಾಡೊ)

ಇಷ್ಟೇ ಅದ್ಭುತವಾದ ಚಿತ್ರಗಳು ಅವರು ಭಾರತದ ಜಾರ್ಖಂಡ್ ರಾಜ್ಯದಲ್ಲಿರುವ ಧನ್-ಬಾದ್ ಕಲ್ಲಿದ್ದಲು ಗಣಿಗಳಿಗೂ ತೆರಳಿ ತೆಗೆದಿದ್ದರು. ಗಣಿ ಕಾರ್ಮಿಕರ ತುಟಿ, ಗಲ್ಲ, ಹುಬ್ಬುಗಳ ಮೇಲೆ ಮೆತ್ತಿಕೊಂಡ ಧೂಳಿನ ಕಣಗಳನ್ನು ತಮ್ಮ ಕಪ್ಪು-ಬಿಳುಪು ಚಿತ್ರದಲ್ಲಿ ಬಿಂಬಿಸುವಲ್ಲಿ ಅವರು ಯಶಸ್ವಿಯಾಗಿದ್ದರು.

ಬ್ರಿಟಿಷ್ ಜರ್ನಲ್ ಆಫ್ ಫೋಟೊಗ್ರಫಿಯ 2025ರ ಮೇ 23ರ ಸಂಚಿಕೆಯಲ್ಲಿ ವೆರೊನಿಕಾ ಎಸ್ಪೊಸಿಟೊ ಅವರು ಸಾಲ್ಗಾಡೊ ಅವರ ಬಗ್ಗೆ ಹೀಗೆ ಬರೆಯುತ್ತಾರೆ; “ಸಾಲ್ಗಾಡೊ ಅವರ ಛಾಯಾಚಿತ್ರಗಳು ಯಾವತ್ತೂ ಕಪ್ಪು-ಬಿಳುಪಿನಲ್ಲಿ ಇರುತ್ತಿದ್ದವು. ಅವು ಸಾಮಾನ್ಯವಾಗಿ ಬೆರಗಗೊಳಿಸುವಷ್ಟು ಅತಿಯಾದ ಕಾಂಟ್ರಾಸ್ಟ್ ಅಚ್ಚಾಗುತ್ತಿದ್ದವು. ಅವು ಅವರಿಗಿದ್ದ ಮಹತ್ವಾಕಾಂಕ್ಷೆಯ ದ್ಯೋತಕವಾಗಿದ್ದವು. ಅಂದರೆ ಗ್ಯಾಲರಿಗಳಲ್ಲಿರಲಿ, ಮ್ಯೂಸಿಯಂನಲ್ಲಿರಲಿ ಅವು ಪ್ರಜ್ವಲಿಸುವಂತೆ ಕಾಣಬೇಕಿತ್ತು. ಕಪ್ಪು ಅವರಿಷ್ಟದ ಬಣ್ಣ. ಅವರ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿದ್ದ ಲ್ಯಾಂಡ್-ಸ್ಕೇಪ್ ಚಿತ್ರಗಳು ಇದಕ್ಕೆ ಸಾಕ್ಷಿಯಾಗಿದ್ದವು. ಮಳೆ ಸುರಿಸುವ ಮೋಡಗಳ ಸುತ್ತಲೂ ಹೊಮ್ಮುವ ಬೆಳಕಿನ ಕೋಲುಗಳು, ಪರ್ವತಗಳ ಪ್ರಭಾವಳಿಯಾಗಿರುವ ಮತ್ತು ನೀರಿನಿಂದ ಮೂಡುವ ಬೆಳಕಿನ ಸಾಲುಗಳು ಅವರ ಚಿತ್ರದ ಆಕರ್ಷಣೆಯಾಗಿದ್ದವು. ಅವರಿಗೆ ಫಿಲ್ಮ್ ನಿಂದ ಬರುವ ಗ್ರೇನಿನೆಸ್ (graininess) ಎಂದರೆ ಎಷ್ಟು ಇಷ್ಟವಿತ್ತೆಂದರೆ ಅವರು ಅಂತಿಮವಾಗಿ ತಮ್ಮ ಲೈಕಾವನ್ನು ಡಿಜಟಲ್ ಕ್ಯಾಮರಕ್ಕಾಗಿ ಬದಲಾಯಿಸಿದಾಗ ನೈಜ ಫಿಲ್ಮ್ ನ್ನು ನೆನಪಿಸುವ ಗ್ರೇನ್ ನ್ನು ತರಲು ತಮ್ಮ ಚಿತ್ರಗಳನ್ನು ಹೆಚ್ಚಾಗಿ ಡಿಜಿಟಲ್ ನಲ್ಲಿ ಪರಿವರ್ತನೆ ಮಾಡುತ್ತಿದ್ದರು.”

ಜಾರ್ಖಂಡ್‌ನ ಧನ್‌ಬಾಗ್‌ನ ಇದ್ದಿಲು ಗಣಿಗಾರಿಕೆಯ ಬಳಿ ಕಾರ್ಮಿಕರು (ಚಿತ್ರ: ಸಸೆಬಾಸ್ಟಿಯೋ ಸಾಲ್ಗಾಡೊ)

ಪ್ರಸಿದ್ಧ ಮ್ಯಾಗ್ನಮ್ ಫೋಟೋ ಜೊತೆ ಅವರ ಒಡನಾಟ ಆರಂಭವಾಗಿದ್ದು 1979ರಲ್ಲಿ. ಅದರಿಂದಾಗಿ ಅವರ ಛಾಯಾಗ್ರಹಣದ ದಿಕ್ಕು ಬದಲಾಯಿತು. ಅವರ ಕ್ಯಾಮರಾ ಆಧುನಿಕ ನಗರಗಳು ಮತ್ತು ಅಲ್ಲಿ ನೆಲೆಸಿರುವ ಸಮಾಜದ ಕಡೆಗೆ ಫೋಕಸ್ ಮಾಡತೊಡಗಿತು. ಸುಮಾರು 25 ವರ್ಷಗಳ ಕಾಲ ಅದರೊಂದಿಗೆ ಪಯಣ ನಡೆಸಿದ ಸಾಲ್ಗಾಡೊ 1994ರಲ್ಲಿ ಸಾಕ್ಷ್ಯಚಿತ್ರ ಸಂಬಂಧಿ ಛಾಯಾಗ್ರಹಣ ಸೇರಿದಂತೆ ಇನ್ನಿತರ ಪ್ರತಿಷ್ಠಿತ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ದುಃಖವನ್ನು ಬಣ್ಣಿಸುವ ಉಗ್ರಗಾಮಿ!

ಕಪ್ಪು-ಬಿಳುಪು ಚಿತ್ರಗಳ ಮೂಲಕ ದುಡಿಯುವ ವರ್ಗದ ಕಷ್ಟ ಕೋಟಲೆಗಳನ್ನು ಇಡೀ ಜಗತ್ತಿಗೆ ತೋರಿಸಿದ ಸಾಲ್ಗಾಡೊ ಅಂತಿಮವಾಗಿ ತಮ್ಮ ಜೀವನದ ಕೊನೆಯಲ್ಲಿ ಸಾಕ್ಷ್ಯಚಿತ್ರ ಫೋಟೋಗ್ರಫಿಯಂತಹ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಅವರ ಸಹೋದ್ಯೋಗಿಗಳ ಟೀಕೆಗೆ ಗುರಿಯಾಯಿತು. ಅವರನ್ನು ಕೆಲವರು ‘ಎಡಪಂಥೀಯ ಉಗ್ರಗಾಮಿ’ ಎಂದು ಆರೋಪಿಸಿದರು. ‘ದುಃಖವನ್ನು ಶೋಷಿಸುವ ಮತ್ತು ಅದನ್ನು ಬಣ್ಣಿಸುವ’ ಮನಸ್ಥಿತಿ ಎಂದರು.

ಇದಕ್ಕೆ ಸಾಲ್ಗಾಡೊ ಅವರು ಕಳೆದ ವರ್ಷ ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕೊಟ್ಟ ಉತ್ತರವೂ ಮಾರ್ಮಿಕವಾಗಿತ್ತು: “ನಾನು ರಿಚರ್ಡ್ ಅವೆಡಾನ್, ಆನಿ ಲೈಬೋವಿಟ್ಜ್ ಮತ್ತು ಯುರೋಪಿನ ಇನ್ನೂ ಕೆಲವು ಮಹಾನ್ ಛಾಯಾಗ್ರಾಹಕರ ಅತ್ಯದ್ಭುತವಾದ ಛಾಯಾಚಿತ್ರಗಳನ್ನು ನೋಡಿದ್ದೇನೆ. ಅವರು ಬೆಳಕನ್ನು ಬಳಸಿದ ವಿಧಾನ ಅಥವಾ ಸೃಷ್ಟಿಸಿದ ಸಂಯೋಜನೆಯ ಬಗ್ಗೆ ಎಂದಿಗೂ ಟೀಕೆ ಇರಲಿಲ್ಲ. ಆದರೆ ಒಬ್ಬ ವ್ಯಕ್ತಿಯಾಗಿ ನನ್ನ ಬಗ್ಗೆ ಇತ್ತು!”

“ನನ್ನನ್ನು ಅವರು ‘ದುಃಖದ ಸೌಂದರ್ಯೋಪಾಸಕ’ ಎಂದು ಕರೆಯುತ್ತಾರೆ ಮತ್ತು ಬಡ ಜಗತ್ತಿನ ಮೇಲೆ ಸೌಂದರ್ಯವನ್ನು ಹೇರಲು ಪ್ರಯತ್ನಿಸಿದೆ ಎಂದು ಆರೋಪಿಸುತ್ತಾರೆ. ಆದರೆ ಬಡವರ ಜಗತ್ತು ಶ್ರೀಮಂತರ ಜಗತ್ತಿಗಿಂತ ಯಾಕೆ ಅಸಹ್ಯವಾಗಿರಬೇಕು? ಇಲ್ಲಿ ಕಾಣುವ ಬೆಳಕು ಅಲ್ಲಿನಂತೆಯೇ ಇದೆ. ಇಲ್ಲಿನ ಘನತೆ ಅಲ್ಲಿಗೂ ಘನತೆಯೇ ಆಗಿರುತ್ತದೆ. ನನ್ನ ವಿಮರ್ಶಕರಿಗೆ ಇರುವ ದೋಷ ನನಗಿಲ್ಲ. ಅದು ತಪ್ಪಿತಸ್ಥ ಭಾವನೆ. ನಾನು ಯರೋಪಿನಲ್ಲಿ ಹುಟ್ಟಿಲ್ಲ. ನಾನು ಬಂದಿರುವುದು ಮೂರನೇ ಜಗತ್ತಿನಿಂದ. ನಾನು ಹುಟ್ಟಿದಾಗ ಬ್ರೆಜಿಲ್ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿತ್ತು. ನಾನು ತೆಗೆದ ಚಿತ್ರಗಳನ್ನು ನನ್ನ ಕಡೆಯಿಂದ, ನನ್ನ ಜಗತ್ತಿನಿಂದ, ನಾನು ಬಂದ ಜಾಗದಿಂದ ತೆಗೆದಿದ್ದೇನೆ” ಎಂದು ದ ಗಾರ್ಡಿಯನ್ ಗೆ ಹೇಳಿದ ಮಾತು ಎಲ್ಲರಿಗೆ ಕೊಟ್ಟ ಉತ್ತರವಾಗಿತ್ತು.

ಅಮೆಜಾನಿನ ಕಾನನದೊಳಗೆ

2004ರಲ್ಲಿ ಸಾಲ್ಗಾಡೊ ಇನ್ನೊಂದು ಮಹತ್ವದ ಯೋಜನೆ ‘ಜೆನಿಸಿಸ್’ ಆರಂಭಿಸಿದರು. ಆರ್ಕ್ಟಿಕ್ ಮತ್ತು ಇತರ ಭೂಪ್ರದೇಶದ ಸುತ್ತಲೂ ಇರುವ ಪರಿಸರ ವಿಜ್ಞಾನದ ಪ್ರಾಥಮಿಕ ಸ್ವರೂಪವನ್ನು ಅಧ್ಯಯನ ಮಾಡುವುದು ಅದರ ಉದ್ದೇಶವಾಗಿತ್ತು. ಆ ಬಳಿಕ ಅವರು ಕೈಗೆತ್ತಿಕೊಂಡಿದ್ದು ‘ಅಮೆಜೋನಿಯಾ’. ಇದು ಅಮೆಜಾನ್ ನಷ್ಟೇ ಆಗಾಧವೂ ವಿಸ್ತಾರವೂ ಆಗಿತ್ತು. ಸುಮಾರು ಒಂದು ದಶಕ ಕಾಲ ಈ ಯೋಜನೆಯಲ್ಲಿ ಅವರು ಅದೆಷ್ಟು ತಲ್ಲೀನರಾಗಿ ಬಿಟ್ಟರೆಂದರೆ ನಂಬಲಸಾಧ್ಯ. ಆದರೆ ಇದು ಅವರಿಗೆ ಅವರ ಕ್ಯಾಮರಾ ಬದುಕಿನಿಂದ ಅಭೂತಪೂರ್ವವಾದ ಫಲಿತಾಂಶವನ್ನು ನೀಡಿತು. ಇದು ಅವರ ಭಯ, ಆತಂಕ ಮತ್ತು ಮಾನವಕುಲ ಹಾಗೂ ಪರಿಸರದ ಮೇಲಿನ ಪ್ರೀತಿಯಿಂದ ರೂಪುಗೊಂಡಿದ್ದಾಗಿದೆ.

ಈ ಯೋಜನೆಯಿಂದ ಅವರು ನಿಜಕ್ಕೂ ನಿಷಿದ್ಧ ವಲಯಕ್ಕೆ ಕಾಲಿಟ್ಟಂತಾಗಿತ್ತು. ಇದು ಸಾಮಾನ್ಯ ಜನರಿಗೆ ಅಗೋಚರವಾದ, ಏಕಾಏಕಿ ಪುನರುತ್ಥಾನಗಳನ್ನು ತೆರೆದಿಡುವ ಲೋಕವಾಗಿತ್ತು. ಯಾರಿಗೇ ಆಗಲಿ ಇದು ದೃಢನಿಶ್ಚಯದ, ದೂರದೃಷ್ಟಿಯ ಕೆಲಸವಾಗಿತ್ತು. ಇದು ಪ್ರಕೃತಿಯ ಅಂತರಾಳದ ಗರ್ಭ. ಭಾರತದಲ್ಲಿ ನಾವಿದನ್ನು ‘ಸೃಷ್ಟಿ’ ಎಂದು ವ್ಯಾಖ್ಯಾನಿಸುತ್ತೇವೆ. ಎಲ್ಲಾ ಪರಿಸರ ವಿಜ್ಞಾನದ ಮೂಲವೇ ಅದು. ಅಲ್ಲಿ ಅವರು ಮಾಡಿದ ಕೆಲಸದಿಂದಾಗಿ ‘ಕ್ಯಾಮರಾ ಜೀವನದ’ ಅಂತ್ಯದ ಮೊದಲ ಆರಂಭವಾಗಿತ್ತು.

ಆ ಬಳಿಕ ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದರು. ಅಮೆಜಾನ್ ನ ಆಳದಲ್ಲಿರುವ ಸ್ಥಳೀಯ ಸಮುದಾಯಗಳ ಪವಿತ್ರ ಸ್ಥಳಗಳ ಶೋಧ. ಅತ್ಯಂತ ಅಬೇಧ್ಯವಾಗಿರುವ ಪ್ರದೇಶದಲ್ಲಿ ಹಾವುಗಳು, ಚೇಳುಗಳು, ವಿಷಕಾರಿ ಜೀವಿಗಳು ಹಾಗೂ ಅಗೋಚರ ರೋಗಗಳಿಂದ ತುಂಬಿದ ತಾಣಗಳಲ್ಲಿ ಅಭೂತಪೂರ್ವ ಸಾಹಸಗಳನ್ನು ಮಾಡಿದರು. ಆಧುನಿಕ ನಾಗರಿಕತೆಯ ವಿಷಕಾರಿ ಕ್ರೂರ ಸಂಗತಿಗಳು ಅಥವಾ ಅತೃಪ್ತ ಆಕಾಂಕ್ಷೆಗಳಿಂದ ಕಲುಷಿತಗೊಳ್ಳದ ವಿಶ್ವದ ಅತ್ಯಂತ ಪ್ರತ್ಯೇಕಿತ ಬುಡಕಟ್ಟು ಸಮುದಾಯಗಳ ಆನುವಂಶಿಕ ಬುದ್ಧಿವಂತಿಕೆಯನ್ನು ದಾಖಲಿಸುವ ವಿಸ್ಮಯಕಾರಿ ಕೆಲಸವನ್ನು ಮಾಡಿದರು.

ಅಮೆಜಾನ್ ದಟ್ಟ ಕಾಡಿನ ಗರ್ಭದಲ್ಲಿ ಅಂತಹ ಬುಡಗಟ್ಟು ಜನಾಂಗಗಳ ಜೊತೆ ಸಹಜೀವನ ನಡೆಸಿದರು, ಅವರೊಂದಿಗೇ ಬೆರೆತರು, ಅವರೊಂದಿಗೇ ಊಟಮಾಡುತ್ತ ಅವರದೇ ಆದ ಕಥೆಗಳನ್ನು ಆಲಿಸಿದರು. ಅದನ್ನೆಲ್ಲ ಅವರ ಕ್ಯಾಮರಾ ಲೆನ್ಸ್ ಕೂಡ ದಾಖಲಿಸುತ್ತ ಹೋಯಿತು. ಅಂತಹ ದುರ್ಗಮ ಅಡವಿಯ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡಿದ್ದು, ಕೈಹಿಡಿದು ನಡೆದಿದ್ದು ಅವರ ಜೀವನ ಸಂಗಾತಿ ಲೆಲಿಯಾ ವನಿಕಾ. ಜಗತ್ತಿನ ಯಾವ ಛಾಯಾಗ್ರಾಹಕರು ಹಿಂದೆಂದೂ ಮಾಡದ ಸಾಹಸವದು. ಇದೆಲ್ಲಕ್ಕೆ ಅವರಿಬ್ಬರ ದಿಟ್ಟತನ, ತಾಳ್ಮೆಯೇ ಕಾರಣ.

“ನೀವು ಒಂದು ಭಾವಚಿತ್ರವನ್ನು ತೆಗೆದಾಗ ಆ ಶಾಟ್ ನಿಮ್ಮಲ್ಲ. ಆ ವ್ಯಕ್ತಿ ಅದನ್ನು ನಿಮಗೆ ನೀಡಿದ್ದು. ಇತಿಹಾಸದ ಚರ್ಮದ ಮೇಲೆ ಬೆಳಕು ಚೆಲ್ಲಿದಂತೆ ಆ ಬೆಳಕು ನಿಮಗೇನೋ ನೀಡುತ್ತ ಹೋಗುತ್ತದೆ. ಅದು ಪವಿತ್ರವಾದುದು. ಪ್ರತಿಯೊಂದು ಫೋಟೊಗ್ರಾಫ್ ನೋಟ ಮತ್ತು ನೋಡುಗನ ನಡುವೆ ಹಂಚಿಕೊಂಡ ಉಸಿರು,” ಎನ್ನುತ್ತಾ ಫೋಟೋಗ್ರಫಿ ಜೀವನಕ್ಕೆ ಹೊಸ ಭಾಷ್ಯೆ ಬರೆದವರು ಸೆಬಾಸ್ಟಿಯೊ ಸಾಲ್ಗಾಡೊ.

ಅವರ ಚಿತ್ರಗಳು ನೆಲೆತಪ್ಪಿದವರೊಂದಿಗೆ ನಡೆಯುತ್ತವೆ, ಮರೆತುಹೋದವರನ್ನು ತಾಳ್ಮೆಯಿಂದ ಕಾಯುತ್ತವೆ... ಕತ್ತಲೆಯನ್ನು ಕೇವಲ ಬೆಳಗಿಸುವುದಕ್ಕಿಂತ ಹೆಚ್ಚಾಗಿ ಜನರು ಅದರೊಳಗೆ ಹೇಗೆ ಹೊಳೆಯುತ್ತಾರೆ ಎಂಬುದನ್ನು ನಮಗೆ ತೋರಿಸಿಕೊಟ್ಟವರು ಅವರು. ತಮ್ಮ ಲೆನ್ಸ್ ಮೂಲಕ ಗಾಯಗೊಂಡ ಜಗತ್ತಿನ ದರ್ಶನ ಮಾಡಿಸಿದವರು ಈ ಅಪ್ರತಿಮ ಪ್ರತಿಭೆ ಸೆಬೆಸ್ಟಿಯೊ ಸಾಲ್ಗಾಡೊ.

Read More
Next Story