ಪೆನ್‌ಡ್ರೈವ್‌ ಪ್ರಕರಣ | ಭವಾನಿ ರೇವಣ್ಣ ʼಕುಟುಂಬ ರಾಜಕೀಯʼ ಮಹತ್ವಾಕಾಂಕ್ಷೆ ಭಂಗ!
x

ಪೆನ್‌ಡ್ರೈವ್‌ ಪ್ರಕರಣ | ಭವಾನಿ ರೇವಣ್ಣ ʼಕುಟುಂಬ ರಾಜಕೀಯʼ ಮಹತ್ವಾಕಾಂಕ್ಷೆ ಭಂಗ!

ಲೈಂಗಿಕ ಹಗರಣವು ದೇವೇಗೌಡರ ರಾಜಕೀಯ ಕುಟುಂಬ ಮತ್ತು ಜೆಡಿಎಸ್‌ ಪಕ್ಷದ ʼಇಮೇಜ್‌ʼಗೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಹಾನಿ ಉಂಟಾಗಿದೆ. ʼಡ್ಯಾಮೇಜ್ ಕಂಟ್ರೋಲ್ʼ ಪ್ರಕ್ರಿಯೆಯಲ್ಲಿ ಪಕ್ಷ ನಿರತವಾಗಿದ್ದರೂ ರೇವಣ್ಣ ಕುಟುಂಬವನ್ನು ಉಳಿಸುವ ಸ್ಥಿತಿಯಲ್ಲಿ ಪಕ್ಷವಿಲ್ಲ. ಕುಟುಂಬ ಸದಸ್ಯರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಕುಮಾರಸ್ವಾಮಿಯವರೂ ಇಲ್ಲ ಎನ್ನಲಾಗಿದೆ.


ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಹೆಚ್.ಡಿ.ರೇವಣ್ಣ ಬಂಧನವಾದ ಬೆನ್ನಲ್ಲೇ ಇದೀಗ ಭವಾನಿ ರೇವಣ್ಣ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪತಿ ವಿರುದ್ಧದ ಅಪಹರಣ ಪ್ರಕರಣದ ಬಿಸಿ ತಟ್ಟಿರುವ ಬೆನ್ನಲ್ಲೇ ಎಚ್.ಡಿ. ರೇವಣ್ಣ ಪತ್ನಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊದಲ ಸೊಸೆ ಭವಾನಿ ರೇವಣ್ಣ ಆತಂಕದಲ್ಲಿದ್ದಾರೆ. ಈ ಬೆಳವಣಿಗೆಗಳು ‘ರಾಜಕೀಯ ಮಹತ್ವಾಕಾಂಕ್ಷೆಯ’ ಮಹಿಳೆ ಭವಾನಿ ರೇವಣ್ಣ ರಾಜಕೀಯ ಬದುಕಿಗೆ ಅಂತ್ಯ ಹಾಡಿರುವಂತಿದೆ!

ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಕುಟುಂಬದ ಹಲವಾರು ಸದಸ್ಯರು ರಾಜಕೀಯದಲ್ಲಿದ್ದರೂ ಕುಟುಂಬ ಮತ್ತು ಪಕ್ಷದೊಳಗಿನ ಎರಡು ಬಣಗಳು ಪರಸ್ಪರ ಪೈಪೋಟಿ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಅವು ಮಾಜಿ ಸಚಿವ ಎಚ್‌.ಡಿ. ರೇವಣ್ಣ (ಅಣ್ಣ) ಮತ್ತು ಎಚ್‌.ಡಿ. ಕುಮಾರಸ್ವಾಮಿ (ತಮ್ಮ) ಅವರ ಕುಟುಂಬಗಳು.

ಜೆಡಿಎಸ್‌ನ ಮಾಜಿ ಸಚಿವರೊಬ್ಬರ ಪ್ರಕಾರ, ಎಚ್‌.ಡಿ. ರೇವಣ್ಣ ಅವರು ಹಾಸನ ರಾಜಕೀಯದತ್ತ ಮಾತ್ರ ಗಮನಹರಿಸುತ್ತಿದ್ದರೆ, ಆದರೆ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯವನ್ನು ನೋಡಿಕೊಳ್ಳುತ್ತಿದ್ದಾರೆ . ರೇವಣ್ಣ ಕುಟುಂಬಕ್ಕೆ ಎಚ್‌ಡಿಕೆ ಅವರಂತೆ ಸಿಎಂ ಅಗುವ ಅಥವಾ ರಾಷ್ಟ್ರ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಮಹತ್ವಾಕಾಂಕ್ಷೆ ಇಲ್ಲ. ಆದರೆ, ಎಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಜೆಡಿಎಸ್‌ನಿಂದ ಶಾಸಕಿಯಾದ ನಂತರ ತಮಗೂ ರಾಜಕೀಯದಲ್ಲಿ ಅವಕಾಶ ನೀಡದಿರುವುದಕ್ಕೆ ಮಾವ ದೇವೇಗೌಡರ ವಿರುದ್ಧವೂ ಭವಾನಿ ಅಸಮಾಧಾನ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಪತಿ ಹೆಚ್.ಡಿ.ರೇವಣ್ಣ ಅವರು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವಾಗಲೂ ಪ್ರಬಲ ಸಚಿವರಾಗಿದ್ದರೂ, ಅವರನ್ನು ಸಿಎಂ ಅಭ್ಯರ್ಥಿ ಎಂದು ಪಕ್ಷ ಪರಿಗಣಿಸಲಿಲ್ಲ. "ಆದರೆ ಭವಾನಿ ತಮ್ಮ ಕುಟುಂಬವು (ಭವಾನಿ, ರೇವಣ್ಣ, ಪುತ್ರರಾದ ಸೂರಜ್ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ) ರಾಜಕೀಯವಾಗಿ ಪ್ರಬಲವಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು" ಎಂದು ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಇದರಿಂದ ಪಕ್ಷದೊಳಗೆ ಹೆಚ್.ಡಿ.ರೇವಣ್ಣ ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವೆ ಮನಸ್ತಾಪ ಉಂಟಾಗಿ ಗೌಡರ ರಾಜಕೀಯ ಕುಟುಂಬದಲ್ಲಿ ಎರಡು ‘ಪವರ್ ಸೆಂಟರ್’ ಸೃಷ್ಟಿಯಾಗಿದ್ದವು. 2019 ರ ಸಂಸತ್ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದ ಹೆಚ್‌ಡಿಕೆ ಅವರ ಪುತ್ರ ನಿಖಿಲ್ ಅವರನ್ನು ಮಂಡ್ಯದಿಂದ ಸಂಸದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಅಸಮಾಧಾನಗೊಂಡಿದ್ದ ಭವಾನಿ ರೇವಣ್ಣ, ದೇವೇಗೌಡರ ಬದಲು ಪುತ್ರ ಪ್ರಜ್ವಲ್ ಅವರನ್ನು ಹಾಸನದಿಂದ ಸಂಸದರನ್ನಾಗಿಸುವಂತೆ ಪತಿ ರೇವಣ್ಣ ಅವರಿಗೆ ಒತ್ತಡ ಹೇರಿದ್ದರು ಎನ್ನಲಾಗಿದೆ!

ಒತ್ತಡಕ್ಕೆ ಮಣಿದ ದೇವೇಗೌಡರು ತಮ್ಮ ತವರು ಕ್ಷೇತ್ರವಾದ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಎನ್ನಲಾಗಿದೆ. ಹಾಸನದಲ್ಲಿ ಪ್ರಜ್ವಲ್ ಗೆದ್ದರೆ, ತುಮಕೂರಿನಲ್ಲಿ ದೇವೇಗೌಡರು ಸೋತಿದ್ದರು. ಆದರೆ, ಭವಾನಿ ಅವರ ಈ ನಡೆ ಹಾಸನದ ರಾಜಕೀಯವನ್ನು ರೇವಣ್ಣ ಕುಟುಂಬದ ಹಿಡಿತಕ್ಕೆ ಸಿಗುವಂತೆ ಮಾಡಿದ್ದು. ಮಗ ಪ್ರಜ್ವಲ್ ಸಂಸದ ಹಾಗೂ ತಂದೆ ರೇವಣ್ಣ ಹಾಸನದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಆದರೆ 2023ರ ವಿಧಾನಸಭೆ ಚುನಾವಣೆ ವೇಳೆಗೆ ರೇವಣ್ಣ ಮತ್ತು ಎಚ್‌ಡಿಕೆ ಕುಟುಂಬದ ನಡುವಿನ ಭಿನ್ನಾಭಿಪ್ರಾಯ ತೀವ್ರವಾಯಿತು. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿರುವುದು ಭವಾನಿ ರೇವಣ್ಣ ಅವರ ಚಿಂತೆಯಾಗಿತ್ತು. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಎರಡು ಬಾರಿ ಶಾಸಕರಾಗಿದ್ದು, ತಮಗೆ ಅಂತಹ ಅವಕಾಶ ಸಿಕ್ಕಿಲ್ಲ ಎಂದು ಭವಾನಿ ರೇವಣ್ಣ ಚಿಂತಿತರಾಗಿದ್ದರೆನ್ನಲಾಗಿದೆ. ಭವಾನಿ ಅವರು ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಪತಿ ರೇವಣ್ಣ ಅವರ ಮೂಲಕ ದೇವೇಗೌಡರ ಮೇಲೆ ಒತ್ತಡ ಹೇರಿ ಜೆಡಿಎಸ್ ಭದ್ರಕೋಟೆಯಲ್ಲಿ ಶಾಸಕರಾಗಬೇಕೆಂದು ಹಂಬಲಿಸಿದ್ದರು. ಆದರೆ ಹಾಸನದಿಂದ ತಮ್ಮ ಆಪ್ತ ಸ್ವರೂಪ್ ಎಚ್ ಎಸ್ ಪ್ರಕಾಶ್ ಗೆ ಟಿಕೆಟ್ ನೀಡಲು ಎಚ್ ಡಿಕೆ ಪ್ರಯತ್ನಿಸುತ್ತಿದ್ದರು. ಇದು ದೇವೇಗೌಡರ ಮುಂದೆ ರೇವಣ್ಣ ಕುಟುಂಬ ಮತ್ತು ಎಚ್‌ಡಿಕೆ ನಡುವೆ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು ಎಂದು ಎಚ್‌ಡಿಕೆ ಸಂಪುಟದ ಮಾಜಿ ಸಚಿವರೊಬ್ಬರು ʼದ ಫೆಡರಲ್‌ಗೆ ತಿಳಿಸಿದ್ದಾರೆ.

ಆದರೆ ಹೆಚ್‌ಡಿಕೆ, ರೇವಣ್ಣ ಮತ್ತು ಭವಾನಿ ರೇವಣ್ಣ ಅವರ ಮನವೊಲಿಸಿ, ಸ್ವರೂಪ್‌ಗೆ ಸ್ಥಾನ ನೀಡುವಲ್ಲಿ ಕೊನೆಗೂ ಯಶಸ್ವಿಯಾದರು. ಬದಲಿಗೆ ಸೂರಜ್ ರೇವಣ್ಣ ಅವರನ್ನು ವಿಧಾನಪರಿಷತ್ ಸದಸ್ಯ (ಎಂಎಲ್‌ಸಿ) ಮಾಡುವುದಾಗಿ ಭರವಸೆ ನೀಡಿದರು. ಇದರಿಂದ ಭವಾನಿ ಅಸಮಾಧಾನಗೊಂಡಿದ್ದರೂ, ಅವರ ಮೊದಲ ಮಗ ಸೂರಜ್ ನಂತರ ಜೆಡಿಎಸ್‌ನಿಂದ ಮೇಲ್ಮನೆಯಲ್ಲಿ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದರು. "ಎಚ್‌ಡಿಕೆ ಪುತ್ರ ನಿಖಿಲ್ 2019 ರ ಲೋಕಸಭಾ ಚುನಾವಣೆ ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಈಗ ನಿಖಿಲ್‌ಗಾಗಿ ತಮ್ಮ ಚನ್ನಪಟ್ಟಣ ಕ್ಷೇತ್ರವನ್ನು ತೆರವು ಮಾಡಲು HDK ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ" ಎಂದು ಹೆಸರು ಹೇಳಲಿಚ್ಛಸಿದ ಆ ಮುಖಂಡ ವಿವರಿಸಿದರು.

ದೇವೇಗೌಡರ ಕುಟುಂಬದಲ್ಲಿ ಎರಡು ಬಣಗಳ ನಡುವೆ ಕಲಹ ನಡೆಯುತ್ತಿರುವಾಗಲೇ ಹಾಸನದಿಂದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗುವ ಮೂಲಕ ಇನಿಂಗ್ಸ್ ಆರಂಭಿಸಿದ ಭವಾನಿ ಅವರಿಗೆ ರಾಜ್ಯ ನಾಯಕಿಯಾಗಬೇಕು ಎಂಬ ಆಸೆ ಹೆಚ್ಚಿತ್ತು. "ಭವಾನಿ ರೇವಣ್ಣ ಅವರು ಹಾಸನ ರಾಜಕೀಯ ಮತ್ತು ಜೆಡಿಎಸ್‌ನಲ್ಲಿ ಹಿಡಿತ ಹೊಂದಲು ಬಯಸಿದ್ದರು, ಆದರೆ ಈಗ ಬೆಳಕಿಗೆ ಬಂದಿರುವ ಹಗರಣವು ಅವರ ಕುಟುಂಬ ರಾಜಕೀಯದ ಅಂತ್ಯದ ಭಯದಿಂದ ನರಳುವಂತೆ ಮಾಡಿತು" ಎಂದು ಹಾಸನ ಜಿಲ್ಲೆಯ ಮಾಜಿ ಶಾಸಕರೊಬ್ಬರು ʼದ ಫೆಡರಲ್‌ʼಗೆ ತಿಳಿಸಿದರು.

ಲೈಂಗಿಕ ಹಗರಣವು ದೇವೇಗೌಡರ ರಾಜಕೀಯ ಕುಟುಂಬ ಮತ್ತು ಜೆಡಿಎಸ್‌ ಪಕ್ಷದ "ಇಮೇಜ್‌"ಗೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಹಾನಿ ಉಂಟಾಗುವ ಪರಿಸ್ಥಿತಿಯನ್ನು ಉಂಟುಮಾಡಿದೆ. "ಡ್ಯಾಮೇಜ್ ಕಂಟ್ರೋಲ್" ಪ್ರಕ್ರಿಯೆಯಲ್ಲಿ ಪಕ್ಷ, ನಿರತವಾಗಿದ್ದರೂ ರೇವಣ್ಣ ಕುಟುಂಬವನ್ನು ಉಳಿಸುವ ಸ್ಥಿತಿಯಲ್ಲಿ ಪಕ್ಷವಿಲ್ಲ. ಹೆಚ್.ಡಿ.ರೇವಣ್ಣ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕಾರಣ, ಎಸ್‌ಐಟಿ ತನಿಖೆಯಲ್ಲಿ ಭವಾನಿ ಹೆಸರೂ ಹೊರಬಿದ್ದಿರುವುದರಿಂದ ಕುಟುಂಬ ಸದಸ್ಯರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಕುಮಾರಸ್ವಾಮಿಯವರೂ ಇಲ್ಲ ಎನ್ನಲಾಗಿದೆ.

ಇದೀಗ ತಮ್ಮ ಕುಟುಂಬವನ್ನು ಉಳಿಸಲು ಕಾನೂನು ನೆರವು ಪಡೆಯಲು ಭವಾನಿ ತಮ್ಮ ಭಾವಮೈದ ಹೆಚ್‌ಡಿಕೆ ಬಳಿ 'ಸಹಾಯ' ಕೋರಿದ್ದಾರೆ ಎನ್ನಲಾಗಿದೆ. ಪ್ರಕರಣ ಬಯಲಾದ ಬಳಿಕ ರೇವಣ್ಣ ಕುಟುಂಬದಿಂದ ಬೇರ್ಪಟ್ಟಿರುವುದಾಗಿ ಹೇಳಿದ್ದರೂ, ಕಾನೂನು ನೆರವು ಪಡೆಯಲು ಎಚ್‌ಡಿಕೆಗೆ ದೇವೇಗೌಡರ ಕುಟುಂಬಸ್ಥರು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ತಮ್ಮ ಸಹೋದರನನ್ನು ಉಳಿಸಲು ಉತ್ತಮ ವಕೀಲರು ಮತ್ತು ಕಾನೂನು ನೆರವು ಪಡೆಯುವ ಮೂಲಕ ರೇವಣ್ಣ ಅವರಿಗೆ ಸಹಾಯ ಮಾಡಲು ಹೆಚ್‌ಡಿಕೆ ಈಗ ಪ್ರಯತ್ನಿಸುತ್ತಿದ್ದಾರೆ . ಆದರೆ ಪ್ರಜ್ವಲ್ ಎದುರಿಸುತ್ತಿರುವ ಕ್ರಿಮಿನಲ್ ಆರೋಪಗಳು ಘೋರವಾಗಿರುವುದರಿಂದ ಪ್ರಜ್ವಲ್‌ಗೆ ಸಹಾಯ ಮಾಡಲು ಆಸಕ್ತಿ ಹೊಂದಿಲ್ಲ ಎಂದು ಹೆಚ್‌ಡಿಕೆ ಪಾಳಯದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಆದರೆ, ಮೂವರು ಸದಸ್ಯರು ಕಾನೂನು ಹೋರಾಟ ಎದುರಿಸಬೇಕಾಗಿರುವುದರಿಂದ ರೇವಣ್ಣ ಕುಟುಂಬಕ್ಕೆ ಇದು ಬಹುತೇಕ ರಾಜಕೀಯ ಅಂತ್ಯ ಎಂದು ಪರಿಗಣಿಸಲಾಗಿದೆ. ಇದು ಮುಂದಿನ ರಾಜಕೀಯದಲ್ಲಿ ರೇವಣ್ಣನವರಿಗಿಂತ ಹೆಚ್‌ಡಿಕೆ ಕುಟುಂಬವನ್ನು ಹೆಚ್ಚು ಪರಿಗಣಿಸುವಂತೆ ಮಾಡಿದೆ!

ಭವಾನಿ ಬಂಧನದ ಭೀತಿ?

ಇದೀಗ ಭವಾನಿ ರೇವಣ್ಣ ಅವರನ್ನು ಲೈಂಗಿಕ ಅವ್ಯವಹಾರ ಪ್ರಕರಣಕ್ಕೆ ಸಾಕ್ಷಿಯಾಗಿ ಅಥವಾ ಆರೋಪಿಯನ್ನಾಗಿ ಸೇರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಲೈಂಗಿಕ ಕಿರುಕುಳ ಪ್ರಕರಣಗಳ ಎರಡು ಎಫ್‌ಐಆರ್‌ಗಳಲ್ಲಿ ಸಂತ್ರಸ್ತೆಯರ ಹೇಳಿಕೆಗಳಲ್ಲಿ ಆಕೆಯ ಹೆಸರನ್ನು ಉಲ್ಲೇಖಿಸಲಾಗಿದೆ. ಒಬ್ಬರು ಆಕೆಯ ಪತಿ ರೇವಣ್ಣ ಮತ್ತು ಮಗ ಪ್ರಜ್ವಲ್ ಸಂತ್ರಸ್ತರಾಗಿದ್ದರೆ, ಸಂತ್ರಸ್ತೆಯ ಅಪಹರಣದ ಮತ್ತೊಂದು ಪ್ರಕರಣದಲ್ಲಿ ಪೊಲೀಸರಿಗೆ ಮಾಹಿತಿ ನೀಡದಂತೆ ತಡೆಯಲು ಆಕೆಯ ಅಪಹರಣ ಮಾಡಿದ ಪ್ರಕರಣದಲ್ಲಿ ರೇವಣ್ಣ ನಂಬರ್ ಒನ್ ಆರೋಪಿ ಮತ್ತು ಭವಾನಿ ಅವರ ಸಂಬಂಧಿ ಸತೀಶ್ ಬಾಬಣ್ಣ ಎರಡನೇ ಆರೋಪಿ.

ರೇವಣ್ಣ ಹಾಸನ ಜಿಲ್ಲೆಯವರಾದರೂ, ಭವಾನಿ ಮೈಸೂರು ಜಿಲ್ಲೆಯ ಕೆಆರ್ ನಗರದವರು. ಸತೀಶ್ ಬಾಬಣ್ಣ ಭವಾನಿ ಅವರ ಹತ್ತಿರದ ಸಂಬಂಧಿಯಾಗಿದ್ದು, ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತನ್ನನ್ನು ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗುವಂತೆ ಭವಾನಿ ಹೇಳಿದ್ದಾಗಿ ಹೆಚ್.ಡಿ.ರೇವಣ್ಣನವರ ಸೂಚನೆಯಂತೆ ಅಪಹರಿಸಿದ್ದಾರೆ ಎಂದು ಸತೀಶ್ ಹೇಳಿರುವುದಾಗಿ ಸಂತ್ರಸ್ತೆ ಎಸ್‌ಐಟ ಮುಂದೆ ಹೇಳಿಕೆ ನೀಡಿದ್ದಾರೆ.

ಇದೀಗ ರೇವಣ್ಣ ಹೊರತಾಗಿ ಸತೀಶ್, ಎಚ್‌.ವೈ ಸುಜಯ್, ಮಧು, ತಿಮ್ಮಪ್ಪ, ಮನು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, 47ರ ಹರೆಯದ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ ಎಸ್‌ಐಟಿ ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಆರೋಪಿಗಳ ಪಾತ್ರದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಎಚ್‌ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ಅವರ ಪಾತ್ರದ ಕುರಿತು ವಿಚಾರಣೆ ನಡೆಸಲಾಗುತ್ತಿದೆ.

ಹೀಗಾಗಿ ಭವಾನಿ ರೇವಣ್ಣ ಅವರಿಂದ ಹೇಳಿಕೆ ಪಡೆಯಲು ಎಸ್‌ಐಟ ನಿರ್ಧರಿಸಿದ್ದು, ತನಿಖೆಗೆ ಹಾಜರಾಗುವಂತೆ ಈಗಾಗಲೇ ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ. ಆದರೆ, ಪ್ರಕರಣದಲ್ಲಿ ಆಕೆಯ ನೇರ ಪಾತ್ರ ಸಾಬೀತಾಗದೆ ಇರುವುದರಿಂದ ಆರೋಪಿ ಮತ್ತು ಸಂತ್ರಸ್ತರ ಹೇಳಿಕೆ ಆಧರಿಸಿ ಆಕೆಯನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಬೇಕೇ ಅಥವಾ ಪ್ರಕರಣದ ಸಾಕ್ಷಿಯಾಗಿ ಪರಿಗಣಿಸಬೇಕೇ ಎಂಬ ಗೊಂದಲದಲ್ಲಿ ಎಸ್‌ಐಟಿ ಇದೆ.

Read More
Next Story