Kamal Hassan Controversy | ಕರ್ನಾಟಕದಲ್ಲಿ ‘ಥಗ್‍ ಲೈಫ್‍’ ಬಿಡುಗಡೆ ಇಲ್ಲ … ಯಾಕೆ ಗೊತ್ತಾ?
x

Kamal Hassan Controversy | ಕರ್ನಾಟಕದಲ್ಲಿ ‘ಥಗ್‍ ಲೈಫ್‍’ ಬಿಡುಗಡೆ ಇಲ್ಲ … ಯಾಕೆ ಗೊತ್ತಾ?

‘ಥಗ್‍ ಲೈಫ್‍’ ಚಿತ್ರ ಚೆನ್ನಾಗಿಲ್ಲ ಎಂಬ ವಿಮರ್ಶೆಗಳು ಎಲ್ಲಡೆ ಎದುರಾಗಿವೆ. ಚಿತ್ರ ಎಲ್ಲೆಡೆ ಸೋತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಡುಗಡೆ ಮಾಡಿದರೆ, ಜನ ನೋಡುವುದಿಲ್ಲ ಎಂಬುದು ವಿತರಕರ ವಾದ.


ಕಮಲ್‍ ಹಾಸನ್‍ ಅಭಿನಯದ ‘ಥಗ್‍ ಲೈಫ್‍’ ಚಿತ್ರವು ಹಲವು ಅಡೆತಡೆಗಳನ್ನು ದಾಟಿ ಇದೀಗ ಕರ್ನಾಟಕದಲ್ಲಿ ಬಿಡುಗಡೆಗೆ ಸಿದ್ಧವಿದೆ. ಚಿತ್ರವನ್ನು ಯಾವುದೇ ಸಮಸ್ಯೆ ಇಲ್ಲದೆ ಬಿಡುಗಡೆ ಮಾಡುವುದಕ್ಕೆ ಅನುವು ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಆದರೆ, ಕರ್ನಾಟಕದಲ್ಲಿ ‘ಥಗ್‍ ಲೈಫ್‍’ ಚಿತ್ರ ಬಿಡುಗಡೆಯಾಗುತ್ತಿಲ್ಲ. ಚಿತ್ರವನ್ನು ಬಿಡುಗಡೆ ಮಾಡದಿರುವುದಕ್ಕೆ ವಿತರಕರು ತೀರ್ಮಾನಿಸಿದ್ದಾರೆ.

ವಿವಾದಾತ್ಮಕ ಹೇಳಿಕೆಯಿಂದ ಸಮಸ್ಯೆ

‘ಥಗ್ ಲೈಫ್‍’ ಚಿತ್ರವು ಜೂನ್‍ 06ರಂದು ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲಾಯ್ತು. ಕರ್ನಾಟಕದಲ್ಲಿ ಬಿಡುಗಡೆ ಆಗದಿರುವುದಕ್ಕೆ ಕಾರಣವಾಗಿದ್ದು ಕಮಲ್‍ ಹಾಸನ್‍ ಅವರ ಆ ಒಂದು ಮಾತು. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ‘ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿತು …’ ಎಂದು ಕಮಲ್‍ ಹಾಸನ್‍ ಹೇಳಿದ್ದರು. ಈ ಹೇಳಿಕೆಯು ಕರ್ನಾಟಕದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಯ್ತು. ಕನ್ನಡ ವಿರೋಧಿ ಹೇಳಿಕೆ ನೀಡಿದ ಕಮಲ್ ಹಾಸನ್‍ ಅವರ ‘ಥಗ್‍ ಲೈಫ್‍’ ಚಿತ್ರವನ್ನು ಕರ್ನಾಟಕದಲ್ಲಿ ಬಹಿಷ್ಕರಿಸಬೇಕು ಎಂದು ಚರ್ಚೆಯಾಯಿತು.

ಕ್ಷಮೆ ಕೇಳದಿದ್ದರೆ ಬಹಿಷ್ಕರದ ನಿರ್ಧಾರ

ಅದಕ್ಕೆ ಪೂರಕವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‍ ತಂಗಡಿಗೆ ಸಹ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಹೇಳಿದರು. ಇನ್ನು, ಕನ್ನಡಪರ ಸಂಘಟನೆಗಳ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ, ಕಮಲ್‍ ಹಾಸನ್‍ ಅವರು ಕನ್ನಡಿಗರ ಕ್ಷಮೆ ಕೇಳದಿದ್ದರೆ ಚಿತ್ರವನ್ನು ಬಹಿಷ್ಕರಿಸುವುದಾಗಿ ಮಂಡಳಿ ಹೇಳಿತು. ಆದರೆ, ಕಮಲ್‍ ಹಾಸನ್‍ ಮಾತ್ರ ತಾವು ಯಾವುದೇ ತಪ್ಪು ಮಾಡದಿರುವುದರಿಂದ, ಕ್ಷಮೆ ಕೇಳುವುದಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ, ಹೈಕೋರ್ಟ್ ಮೊರೆ ಹೋದರು. ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಈ ಕುರಿತು ವಿಚಾರಣೆ ನಡೆಸಿ ಜೂನ್ 10ರೊಳಗೆ ಕಮಲ್ ಹಾಸನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಯಲ್ಲಿ ಮಾತುಕತೆ ನಡೆಸಿ, ವಿವಾದ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚಿಸಿತು. ಅಲ್ಲಿಯವರೆಗೂ ಕರ್ನಾಟಕದಲ್ಲಿ ‘ಥಗ್‌ ಲೈಫ್’ ಬಿಡುಗಡೆ ಮಾಡದಂತೆ ಆದೇಶಿಸಿತು. ಅಷ್ಟೇ ಅಲ್ಲ, ಕಮಲ್‍ ಹಾಸನ್‍ ಕ್ಷಮೆ ಕೇಳಬೇಕು ಎಂದು ಹೇಳಿತು.

ಕಮಲ್ ಕ್ಷಮೆ ಕೇಳಬೇಕಿಲ್ಲ ಎಂದ ಸುಪ್ರೀಂ ಕೋರ್ಟ್

ಆದರೆ, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಹೈಕೋರ್ಟ್‍ನಲ್ಲಿ ಹಿನ್ನೆಡೆಯಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ಪಿಐಎಲ್‍ ಸಲ್ಲಿಸಲಾಗಿತ್ತು. ಗುರುವಾರ ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸುವುದರ ಜೊತೆಗೆ, ಕಮಲ್‍ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕಿಲ್ಲ ಎಂದು ಆದೇಶಿಸಿದೆ. ಒಬ್ಬರ ಹೇಳಿಕೆಯಿಂದ ಮತ್ತೊಬ್ಬರ ಭಾವನೆಗಳಿಗೆ ನೋವುಂಟಾಗಿದೆ ಎಂಬ ಕಾರಣಕ್ಕಾಗಿ ಚಿತ್ರ ಬಿಡುಗಡೆಯನ್ನು ರದ್ದು ಮಾಡುವುದು ಸರಿಯಲ್ಲಎಂದು ಪೀಠ ಹೇಳಿದೆ. ಚಿತ್ರ ಬಿಡುಗಡೆಗೆ ಭದ್ರತೆ ಒದಗಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದು, ಇದೀಗ ಯಾವುದೇ ಮಾರ್ಗಸೂಚಿಗಳು ಅಥವಾ ನಿರ್ದೇಶನಗಳನ್ನು ನೀಡುವ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್, ಪಿಐಎಲ್ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

ಸಮಸ್ಯೆ ಬಗೆಹರಿದರೂ ಚಿತ್ರ ಬಿಡುಗಡೆ ಇಲ್ಲ

ಅಲ್ಲಿಗೆ ಕರ್ನಾಟಕದಲ್ಲಿ ಚಿತ್ರದ ಬಿಡುಗಡೆಗೆ ಇದ್ದ ಎಲ್ಲಾ ಅಡೆತಡೆಗಳು ಬಗೆಹರಿದಿದ್ದು, ಚಿತ್ರವನ್ನು ಬಿಡುಗಡೆ ಮಾಡಬಹುದಾಗಿದೆ. ಆದರೆ, ಚಿತ್ರವನ್ನು ಬಿಡುಗಡೆ ಮಾಡದಿರಲು ವಿತರಕರು ತೀರ್ಮಾನಿಸಿದ್ದಾರೆ. ಚಿತ್ರದ ಕರ್ನಾಟಕದ ವಿತರಣೆಯ ಹಕ್ಕುಗಳನ್ನು ವೆಂಕಟೇಶ್‍ ಕಮಲಾಕರ್‍ ಖರೀದಿಸಿದ್ದರು. ಮೂಲಗಳ ಪ್ರಕಾರ, ಸುಮಾರು ಎಂಟು ಕೋಟಿ ರೂ.ಗಳನ್ನು ಕೊಟ್ಟು ಅವರು ವಿತರಣೆಯ ಹಕ್ಕುಗಳನ್ನು ಕೊಂಡಿದ್ದರು ಎಂದು ಹೇಳಲಾಗುತ್ತದೆ. ಹಕ್ಕು ಪಡೆದ ನಂತರ ಕೆಲವು ಚಿತ್ರಮಂದಿರಗಳಿಂದ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂಗಡವನ್ನೂ ಪಡೆದಿದ್ದರು. ಆದರೆ, ಈಗ ಚಿತ್ರವನ್ನು ಬಿಡುಗಡೆ ಮಾಡದಿರುವುದಕ್ಕೆ ಅವರು ತೀರ್ಮಾನಿಸಿದ್ದಾರೆ.

ಹುಸಿಯಾದ ಚಿತ್ರದ ಬಗ್ಗೆ ಇದ್ದ ನಿರೀಕ್ಷೆ

‘ಥಗ್ ಲೈಫ್‍’ ಚಿತ್ರವು ಬಿಡುಗಡೆಯಾಗಿ ಎರಡು ವಾರಗಳಾಗಿದ್ದು, ಈ ಎರಡು ವಾರಗಳಲ್ಲಿ 50 ಕೋಟಿ ರೂ. ಸಹ ಗಳಿಕೆ ಮಾಡಿಲ್ಲ. ಆರಂಭದಲ್ಲಿ ಈ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳಿದ್ದವು. ಅದಕ್ಕೆ ಕಾರಣ, ‘ನಾಯಗನ್‍’ನಂತಹ ಚಿತ್ರವನ್ನು ನೀಡಿದ್ದ ಮಣಿರತ್ನಂ ಮತ್ತು ಕಮಲ್‍ ಹಾಸನ್‍ ಜೋಡಿ, ಈ ಚಿತ್ರವನ್ನು ರೂಪಿಸಿತ್ತು. ಸುಮಾರು 38 ವರ್ಷಗಳ ನಂತರ ಈ ಜೋಡಿ ವಾಪಸ್ಸು ಬಂದ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಕುತೂಹಲ, ನಿರೀಕ್ಷೆಗಳು ಹೆಚ್ಚಿದ್ದವು. ಆದರೆ, ಚಿತ್ರ ಪ್ರೇಕ್ಷಕರ ನಿರೀಕ್ಷೆಗಳಿಗೆ ನಿಲುಕದೆ ಫ್ಲಾಪ್‍ ಆಯಿತು. ಚಿತ್ರದ ಬಗ್ಗೆ ಸಾಕಷ್ಟು ಟೀಕೆ-ಟಿಪ್ಪಣಿಗಳು ಕೇಳಿಬಂದವು. ದೊಡ್ಡ ತಾರಾಗಣ, ತಾಂತ್ರಿಕ ತಂಡ ಎಲ್ಲವೂ ಇದ್ದು, ಚಿತ್ರ ಗೆಲ್ಲಲಿಲ್ಲ.

ಬಿಡುಗಡೆ ಮಾಡಿದರೂ ಜನ ನೋಡುವುದಿಲ್ಲ

ಹೀಗೆ ಎಲ್ಲೆಡೆ ಸೋತ ಚಿತ್ರವನ್ನು ಕರ್ನಾಟಕಕ್ಕೆ ತಂದು ಬಿಡುಗಡೆ ಮಾಡಿದರೆ ಏನೂ ಪ್ರಯೋಜನವಿಲ್ಲ ಎಂಬುದು ವಿತರಕರಿಗೆ ಗೊತ್ತಿದೆ. ಇವತ್ತಿನ ಕಾಲಮಾನದಲ್ಲಿ ಚೆನ್ನಾಗಿರುವ ಚಿತ್ರಗಳೇ ಎರಡು ವಾರಗಳ ನಂತರ ಗಳಿಕೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಿರುವಾಗ, ಪ್ರೇಕ್ಷಕರಿಂದ ತಿರಸ್ಕೃತಗೊಂಡಿರುವ ಚಿತ್ರಗಳಿಗಂತೂ ಗಳಿಕೆ ಆಗುವುದಿಲ್ಲ. ‘ಥಗ್‍ ಲೈಫ್‍’ ಚಿತ್ರ ಚೆನ್ನಾಗಿಲ್ಲ ಎಂಬ ವಿಮರ್ಶೆಗಳು ಎಲ್ಲಡೆ ಎದುರಾಗಿವೆ. ಅಷ್ಟೇ ಅಲ್ಲ, ಚಿತ್ರ ಎಲ್ಲೆಡೆ ಸೋತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಡುಗಡೆ ಮಾಡಿದರೆ, ಜನ ನೋಡುವುದಿಲ್ಲ ಎಂಬುದು ಸ್ಪಷ್ಟ. ಮೇಲಾಗಿ, ಕಮಲ್‍ ಹಾಸನ್‍ ಹೇಳಿಕೆಯ ಬಗ್ಗೆ ವಿರೋಧವಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುವುದು ಸಂಶಯವೇ. ಇನ್ನು, ಬಿಡುಗಡೆ ಮಾಡಿದರೆ, ವಿರೋಧ ವ್ಯಕ್ತವಾಗಬಹುದೆಂಬ ಭಯ ಪ್ರದರ್ಶಕರಿಗೂ ಇದೆ. ಹಾಗಾಗಿ, ಚಿತ್ರವನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನವಾಗಿದ್ದು, ಕರ್ನಾಟಕದಲ್ಲಿ ‘ಥಗ್‍ ಲೈಫ್‍’ ಚಿತ್ರ ಬಿಡುಗಡೆಯಾಗುತ್ತಿಲ್ಲ.

Read More
Next Story