
ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ಮಣಿರತ್ನಂ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ.
Sai Pallavi: ರುಕ್ಮಿಣಿ ವಸಂತ್ ಕೈತಪ್ಪಿದ ಅವಕಾಶ; ಮಣಿರತ್ನಂ ಚಿತ್ರಕ್ಕೆ ಸಾಯಿ ಪಲ್ಲವಿ
ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ಮಣಿರತ್ನಂ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.
ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದ ಬೆನ್ನಲ್ಲೇ, ಮಣಿರತ್ನಂ ಈಗ 'ರೋಮ್ಯಾಂಟಿಕ್ ಎಂಟರ್ಟೈನರ್' ಕಥೆಯತ್ತ ಮುಖ ಮಾಡಿದ್ದಾರೆ. ಈ ಬಾರಿ ಅವರು ಬಹುಮುಖ ನಟ ವಿಜಯ್ ಸೇತುಪತಿ ಮತ್ತು ಪ್ರತಿಭಾವಂತ ನಟಿ ಸಾಯಿ ಪಲ್ಲವಿ ಅವರನ್ನು ತೆರೆಯ ಮೇಲೆ ತರುತ್ತಿದ್ದಾರೆ. ಈ ಮೊದಲು ಈ ಸಿನಿಮಾಗೆ ಕನ್ನಡತಿ ರುಕ್ಮಿಣಿ ವಸಂತ್ ಹೆಸರು ಕೇಳಿಬರುತ್ತಿದ್ದು, ಇದೀಗ ಸಾಯಿ ಪಲ್ಲವಿ ಅವರ ಹೆಸರು ಫೈನಲ್ ಆಗಿದೆ.
ವಿಶೇಷವೆಂದರೆ, ಈ ಕಥೆಯನ್ನು ಮಣಿರತ್ನಂ ಮೊದಲು ನಟ ಧನುಷ್ ಅವರಿಗೆ ವಿವರಿಸಿದ್ದರು. ಕಥೆ ಇಷ್ಟವಾಗಿದ್ದರೂ, ಸಂಭಾವನೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಧನುಷ್ ಈ ಪ್ರಾಜೆಕ್ಟ್ನಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಆನಂತರ ಈ ಪಾತ್ರಕ್ಕೆ ಸಿಂಬು ಹಾಗೂ ಧ್ರುವ್ ವಿಕ್ರಮ್ ಅವರ ಹೆಸರುಗಳು ಕೇಳಿಬಂದಿದ್ದವು. ಅಂತಿಮವಾಗಿ ವಿಜಯ್ ಸೇತುಪತಿ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ವಿಜಯ್ ಸೇತುಪತಿ ಈಗಾಗಲೇ ಮಣಿರತ್ನಂ ಅವರ 'ಚೆಕ್ಕ ಚಿವಂತ ವಾನಂ' ಚಿತ್ರದಲ್ಲಿ ಅಭಿನಯಿಸಿದ್ದರು, ಇದು ಅವರ ಎರಡನೇ ಕಾಂಬಿನೇಷನ್ ಆಗಿದೆ.
ನಾಯಕಿಯಾಗಿ ಸಾಯಿ ಪಲ್ಲವಿ ಆಯ್ಕೆಯಾಗಿರುವುದು ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಮುನ್ನ ಈ ಪಾತ್ರಕ್ಕೆ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರ ಹೆಸರು ಕೂಡ ಕೇಳಿಬಂದಿತ್ತು. ಆದರೆ ಈಗ ಸಾಯಿ ಪಲ್ಲವಿ ಅಂತಿಮಗೊಂಡಿದ್ದು, ಅವರು ಇದೇ ಮೊದಲ ಬಾರಿಗೆ ವಿಜಯ್ ಸೇತುಪತಿ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ.
ಈ ಸಿನಿಮಾವನ್ನು ಖ್ಯಾತ ನಿರ್ಮಾಣ ಸಂಸ್ಥೆ 'ಲೈಕಾ ಪ್ರೊಡಕ್ಷನ್ಸ್' ಬ್ಯಾಂಕ್ರೋಲ್ ಮಾಡಲಿದ್ದು, ಎಂದಿನಂತೆ ಮಣಿರತ್ನಂ ಅವರ ಆಪ್ತ ಗೆಳೆಯ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಮುಂದಿನ ತಿಂಗಳಿಂದಲೇ ಚಿತ್ರದ ಶೂಟಿಂಗ್ ಆರಂಭವಾಗುವ ಸಾಧ್ಯತೆಗಳಿದ್ದು, ಮತ್ತೊಮ್ಮೆ ಪ್ರೇಮಕಥೆಯ ಮೂಲಕ ಮಣಿರತ್ನಂ ಮತ್ತೆ ಕಮ್ಬ್ಯಾಕ್ ಮಾಡಲಿದ್ದಾರೆ ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.
ದಕ್ಷಿಣ ಭಾರತದ ಪ್ರತಿಷ್ಠಿತ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಭಾಷಾ ನಟಿ ಸಾಯಿ ಪಲ್ಲವಿ ಅವರಿಗೆ ‘ಅಮರನ್’ ಚಿತ್ರದ ಅದ್ಭುತ ನಟನೆಗಾಗಿ ಅವರಿಗೆ 'ಬ್ಲ್ಯಾಕ್ ಲೇಡಿ' ಪ್ರಶಸ್ತಿ ಲಭಿಸಿತ್ತು. ಕಳೆದ 10 ವರ್ಷಗಳ ಅವಧಿಯಲ್ಲಿ ಮೂರು ಭಾಷೆಗಳಲ್ಲಿ ಒಟ್ಟು ಏಳು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಸಾಯಿಪಲ್ಲವಿ ಮುಡಿಗೇರಿಸಿಕೊಂಡಿದ್ದಾರೆ. ಕೇರಳ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ನಡೆದ ಪ್ರತಿಷ್ಠಿತ 70ನೇ ಫಿಲ್ಮ್ಫೇರ್ ಅವಾರ್ಡ್ ಸೌತ್ ಈ ಬಾರಿ ಕೇರಳದ ಕೊಚ್ಚಿಯಲ್ಲಿ ಇತಿಹಾಸ ಸೃಷ್ಟಿಸಿತ್ತು.
ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿ ಇಂದು ವರ್ಗೀಸ್ ಅವರ ಪಾತ್ರಕ್ಕೆ ಜೀವ ತುಂಬಿದ್ದ ಸಾಯಿ ಪಲ್ಲವಿ, ತಮ್ಮ ನೈಜ ನಟನೆಯ ಮೂಲಕ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದರು. ಅಮರನ್ ಚಿತ್ರದಲ್ಲಿ ಅವರ ಭಾವನಾತ್ಮಕ ಅಭಿನಯಕ್ಕೆ ವಿಮರ್ಶಕರಿಂದ ಹಾಗೂ ಸಿನಿರಸಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

