ಕೃತಕ ಬುದ್ಧಿಮತ್ತೆಯ ʼನಾಡಪ್ರಭುʼ ಸೇರಿದಂತೆ ಮೂರು ʼಕೆಂಪೇಗೌಡʼ ಚಿತ್ರಗಳು
x

ಕೃತಕ ಬುದ್ಧಿಮತ್ತೆಯ ʼನಾಡಪ್ರಭುʼ ಸೇರಿದಂತೆ ಮೂರು ʼಕೆಂಪೇಗೌಡʼ ಚಿತ್ರಗಳು

ಕೆಂಪೇಗೌಡರ ಬಗ್ಗೆ ಇದುವರೆಗೂ ಕನ್ನಡದಲ್ಲಿ ಒಂದೂ ಚಲನಚಿತ್ರ ತಯಾರಾಗದೇ ಇರುವುದು ಸೋಜಿಗ. ಅದಕ್ಕೆ ಕಾರಣ- ಸದ್ಯಕ್ಕೆ ಕನ್ನಡದಲ್ಲಿ ಕೆಂಪೇಗೌಡರ ಬಗ್ಗೆ ಮೂರು ಚಲನಚಿತ್ರಗಳು ನಿರ್ಮಾಣದ ಹಂತದಲ್ಲಿ ಇವೆ


ಒಂದೇ ಘಟನೆ ಅಥವಾ ವ್ಯಕ್ತಿಯ ಬಗ್ಗೆ ಒಂದಕ್ಕಿಂತ ಹೆಚ್ಚು ಚಲನಚಿತ್ರಗಳು ತಯಾರಾಗುವುದು ಅಪರೂಪವೇನಲ್ಲ. ಕನ್ನಡದಲ್ಲಿ ಕೂಡ ಐತಿಹಾಸಿಕ ಪುರುಷರಾದ ಬಸವಣ್ಣ, ಕಾಳಿದಾಸ ಮುಂತಾದವರ ಮೇಲೆ ಒಂದಕ್ಕಿಂತ ಹೆಚ್ಚು ಚಲನಚಿತ್ರಗಳು ತಯಾರಾಗಿವೆ. ಮೂರ್ನಾಲ್ಕು ವರ್ಷಗಳ ಹಿಂದೆ ಸುದೀಪ್ ಮತ್ತು ದರ್ಶನ್ ಅಭಿನಯದಲ್ಲಿ ಚಿತ್ರದುರ್ಗದ ಮದಕರಿ ನಾಯಕರ ಬಗ್ಗೆ ಎರಡು ಬೇರೆ ಬೇರೆ ಚಾಲನೆ ಚಿತ್ರಗಳು ತಯಾರಾಗಲು ಸಿದ್ದಗೊಂಡಿದ್ದವು. ಕೊನೆಗೆ ಅವೆರಡು ಚಿತ್ರಗಳು ಸ್ಥಗಿತಗೊಂಡಿದ್ದು ಬೇರೆ ಕಥೆ.

ಶುಕ್ರವಾರ ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನವನ್ನು ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಭರ್ಜರಿಯಾಗಿ ಆಚರಿಸಲಾಯಿತು. ಪ್ರತಿ ಜಯಂತಿಯಂದು ಅವರ ಹೆಸರಿನ ಸಿನಿಮಾ ಮಾಡುವ ಬಗ್ಗೆ ಘೋಷಣೆ ಮಾಡುತ್ತಿರುವುದು ಮಾತ್ರ ನಿರಂತರವಾಗಿ ಮುಂದುವರಿದಿದೆ!

ಆದರೆ, ಕೆಂಪೇಗೌಡರ ಬಗ್ಗೆ ಇದುವರೆಗೂ ಕನ್ನಡದಲ್ಲಿ ಒಂದೂ ಚಲನಚಿತ್ರ ತಯಾರಾಗದೇ ಇರುವುದು ಸೋಜಿಗ. ಅದಕ್ಕೆ ಕಾರಣ- ಸದ್ಯಕ್ಕೆ ಕನ್ನಡದಲ್ಲಿ ಕೆಂಪೇಗೌಡರ ಬಗ್ಗೆ ಮೂರು ಚಲನಚಿತ್ರಗಳು ನಿರ್ಮಾಣದ ಹಂತದಲ್ಲಿ ಇವೆ.

ಡಾಲಿ ಚಿತ್ರ

ಈ ಮೂರರಲ್ಲಿ ಎರಡು ಚಲನಚಿತ್ರಗಳನ್ನು ಈಗಾಗಲೇ ಘೋಷಿಸಲಾಗಿದೆ. ಒಂದು, ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ನಿರ್ದೇಶನ ಮಾಡುತ್ತಿರುವ ಮತ್ತು ಡಾಲಿ ಧನಂಜಯ ಅಭಿನಯಿಸುತ್ತಿರುವ ಚಿತ್ರ. ಸಂತ ಶಿಶುನಾಳ ಶರೀಫ, ಕಲ್ಲರಳಿ ಹೂವಾಗಿ ಮುಂತಾದ ಐತಿಹಾಸಿಕ ಹಿನ್ನೆಲೆಯುಳ್ಳ ಚಲನಚಿತ್ರಗಳನ್ನು ನಿರ್ದೇಶನ ಮಾಡಿರುವ ನಾಗಾಭರಣ ಅವರ ಕೆಂಪೇಗೌಡರ ಚಲನಚಿತ್ರದ ಮೇಲೆ ನಿರೀಕ್ಷೆ ಇದೆ. ಅದರ ಚಿತ್ರೀಕರಣ ಇನ್ನು ಶುರುವಾಗಿಲ್ಲ; ಆದರೆ ಧನಂಜಯ ಅವರನ್ನೊಳಗೊಂಡ ಚಿತ್ರದ ಒಂದು ಪೋಸ್ಟರ್ ಅನ್ನು ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿದೆ. ಈ ಚಿತ್ರದ ಶೀರ್ಷಿಕೆ "ನಾಡಪ್ರಭು ಕೆಂಪೇಗೌಡ."

ಕೆಂಪೇಗೌಡರ ಬಗ್ಗೆ ಮತ್ತೊಂದು ಚಿತ್ರವನ್ನು ಮತ್ತೋರ್ವ ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರು ನಿರ್ದೇಶನ ಮಾಡುವುದಾಗಿ ಪ್ರಕಟಿಸಲಾಗಿದೆ. ಇದರಲ್ಲಿ ಕೆಂಪೇಗೌಡರ ಪಾತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿದೆ. ಆದರೆ ಅದು ಅಧಿಕೃತವಲ್ಲ.

ಕೆಂಪೇಗೌಡರ ಜಯಂತಿಗೆ ಚಿತ್ರದ ನಿರ್ಮಾಪಕ ಕಿರಣ್ ತೊಟ್ಟಂಬೈಲು ಇಂದು ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. "ಧರ್ಮಭೀರು ನಾಡಪ್ರಭು ಕೆಂಪೇಗೌಡ" ಎಂದು ಹೆಸರಿಟ್ಟಿದ್ದ ಈ ಚಿತ್ರಕ್ಕೆ ಈಗ ಇಂಗ್ಲೀಷ್ ನಲ್ಲಿ "ದಿ ಫೌಂಡರ್ ಆಫ್ ಬೆಂಗಳೂರು," ಎಂದು ನಾಮಕರಣ ಮಾಡಿದ್ದಾರೆ. ಜನವರಿ 15, 2027ಕ್ಕೆ ಈ ಚಲನಚಿತ್ರದ ಬಿಡುಗಡೆಯ ದಿನಾಂಕವೆಂದು ಕೂಡ ಘೋಷಿಸಿಕೊಂಡಿದ್ದಾರೆ.

ನಾಗಾಭರಣ ಮತ್ತು ದಿನೇಶ್ ಬಾಬು ನಿರ್ದೇಶಿಸುತ್ತಿರುವ ಈ ಎರಡು ಚಲನಚಿತ್ರಗಳ ಮೂಲ ಕಥೆಯ ಬಗ್ಗೆ ವಿವಾದ ಉಂಟಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನು ಕೂಡ ಏರಿತ್ತು. ನಾಗಾಭರಣ ಅವರ ತಂಡದಲ್ಲಿ ಕೆಲಸ ಮಾಡಿದವರೊಬ್ಬರು ದಿನೇಶ್ ಬಾಬು ಅವರ ತಂಡಕ್ಕೆ ಸೇರ್ಪಡೆಯಾಗಿದ್ದು ವಿವಾದವನ್ನು ಸೃಷ್ಟಿಸಿತ್ತು.

ಇದರ ನಡುವೆ ಈಗ ಮತ್ತೊಂದು ಚಿತ್ರತಂಡ ಎಐ(AI)ನಲ್ಲಿ ಕೆಂಪೇಗೌಡರ ಬಗ್ಗೆ ಚಲನಚಿತ್ರ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಶುಕ್ರವಾರ ಸಂಜೆ 6 ಗಂಟೆಗೆ ಈ ಹೊಸ ಚಿತ್ರದ ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರದ ನಿರ್ದೇಶಕ ನೂತನ್ ಈ ಹಿಂದೆ "ಲವ್ ಯು" ಎನ್ನುವ ಭಾರತದ ಪ್ರಪ್ರಥಮ AI ನಲ್ಲಿ ಸೃಷ್ಟಿಯಾದ ಚಲನಚಿತ್ರವನ್ನು ತಯಾರಿಸಿದ್ದರು. ಆ ಚಿತ್ರ ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರವನ್ನು ಗಳಿಸಿ ಬಿಡುಗಡೆಗೆ ಸಿದ್ಧವಾಗಿದೆ.

ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಚಿತ್ರದ ನಿರ್ದೇಶಕ ನೂತನ್, "ನಾನು ಆ ಹಿರಿಯ ನಿರ್ದೇಶಕರುಗಳ ವಿರುದ್ಧ ಸ್ಪರ್ಧೆಗೆ ನಿಂತಿಲ್ಲ. ಕನ್ನಡದ ಐತಿಹಾಸಿಕ ಮಹಾಪುರುಷರ ಬಗ್ಗೆ ಚಲನಚಿತ್ರಗಳು ತಯಾರಾಗುವುದು ತೀರಾ ಅಪರೂಪ. ಎಐ ತಂತ್ರಜ್ಞಾನದೊಂದಿಗೆ ಈಗಾಗಲೇ ಒಂದು ಚಲನಚಿತ್ರ ಮಾಡಿರುವ ಅನುಭವ ಇರುವುದರಿಂದ ನಾನು ಕೆಂಪೇಗೌಡರ ಬಗ್ಗೆ ಈ ಚಲನಚಿತ್ರ ಮಾಡುತ್ತಿದ್ದೇನೆ. ಚಿತ್ರ ಈಗಾಗಲೇ ತಯಾರಿಕೆಯ ಹಂತದಲ್ಲಿದೆ. ತಂತ್ರಜ್ಞಾನ ಉಪಯೋಗ ಮಾಡುತ್ತಿರುವುದರಿಂದ ಚಿತ್ರದ ತಯಾರಿಕೆಗೆ ಬಹಳ ಸಮಯ ಹಿಡಿಯುವುದಿಲ್ಲ. ಈ ಚಿತ್ರದ ನಂತರ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ ಬಗ್ಗೆಯು ಒಂದು ಚಲನಚಿತ್ರ ನಿರ್ದೇಶನ ಮಾಡುತ್ತಿದ್ದೇನೆ," ಎಂದರು.

ನಾಗಾಭರಣ ಸಂಶೋಧನೆ

ಈ ಮೂರು ಚಿತ್ರಗಳಲ್ಲಿ ನಾಗಾಭರಣ ಅವರು ತಮ್ಮ ಚಿತ್ರಕ್ಕಾಗಿ ಕಳೆದ 15-20 ವರ್ಷಗಳಿಂದ ಕೆಂಪೇಗೌಡರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಇಲ್ಲಿಯವರೆಗೂ ಚಿತ್ರಕಥೆಯನ್ನು 35 ಬಾರಿ ತಿದ್ದುಪಡಿ ಮಾಡಿದ್ದಾರೆ. ದಿನೇಶ್ ಬಾಬು ಅವರ ಚಿತ್ರಕ್ಕೆ ಕಳೆದ ವರ್ಷವೇ ಸ್ಕ್ರಿಪ್ಟ್ ಪೂಜೆ ಮಾಡಲಾಯಿತು. ಈಗ ಇವರಿಬ್ಬರನ್ನು ಹಿಂದಿಕ್ಕಿ ನೂತನ್ ಅವರು ತಮ್ಮ ಚಲನಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಈ AI ಚಿತ್ರ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆಯೂ ಇದೆ.

1510ರಲ್ಲಿ ಜನಿಸಿದ ಹಿರಿಯ ಕೆಂಪೇಗೌಡರು 1537 ರಲ್ಲಿ ಬೆಂಗಳೂರು ನಗರವನ್ನು ನಿರ್ಮಿಸಿದರು ಎನ್ನುವುದು ಇತಿಹಾಸ. ಕರ್ನಾಟಕ ಸಾಮ್ರಾಜ್ಯದ ರಾಜಧಾನಿ ವಿಜಯನಗರದ ವೈಭವವನ್ನು ಕಂಡಿದ್ದ ಕೆಂಪೇಗೌಡರು ಅದೇ ರೀತಿಯ ನಗರವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು ಎನ್ನುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಅವರು ಹಲವಾರು ಕೆರೆಗಳನ್ನು ದೇವಸ್ಥಾನಗಳನ್ನು ಕಟ್ಟಿಸಿದ ಇತಿಹಾಸವು ಇದ್ದು ಅತ್ಯುತ್ತಮ ಆಡಳಿತಗಾರ ಎನ್ನುವ ಮನ್ನಣೆಗೆ ಪಾತ್ರರಾಗಿದ್ದರು. ಕರ್ನಾಟಕ/ವಿಜಯನಗರ ಸಾಮ್ರಾಜ್ಯದ ಅದೀನದಲ್ಲಿ ಯಲಹಂಕ ನಾಡಿನ ಪ್ರಭುಗಳಾಗಿದ್ದ ಹಿರಿಯ ಕೆಂಪೇಗೌಡರು 1565 ರ ಐತಿಹಾಸಿಕ ತಾಳಿಕೋಟೆ/ರಕ್ಕಸ-ತಂಗಡಿ ಯುದ್ಧದಲ್ಲೂ ಪಾಲ್ಗೊಂಡಿದ್ದರು.

Read More
Next Story