ದೇವಾನು ದೇವತೆಗಳ ಅಧಿಪತಿಯಾದ ಶರಣ್‍; ‘ರಾಮರಸ’ ಚಿತ್ರದಲ್ಲಿ ನಟನೆ
x
ಶರಣ್‌

ದೇವಾನು ದೇವತೆಗಳ ಅಧಿಪತಿಯಾದ ಶರಣ್‍; ‘ರಾಮರಸ’ ಚಿತ್ರದಲ್ಲಿ ನಟನೆ

‘ಜಟ್ಟ’ ಗಿರಿರಾಜ್‍ ನಿರ್ದೇಶನದಲ್ಲಿ ನಿರ್ಮಾಪಕ-ನಿರ್ದೇಶಕ ಗುರು ದೇಶಪಾಂಡೆ ಮತ್ತು ವಿಕ್ರಮ್‍ ಆರ್ಯ ಜೊತೆಯಾಗಿ ನಿರ್ಮಿಸುತ್ತಿರುವ ಚಿತ್ರ ‘ರಾಮರಸ’.


ಶರಣ್‍ ಹೊಸ ಚಿತ್ರವೊಂದರಲ್ಲಿ ನಟಿಸದೆ ಕೆಲವು ಸಮಯವೇ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅದೇ ‘ಅವತಾರ ಪುರುಷ’, ‘ಅವತಾರ ಪುರುಷ 2’ ಮತ್ತು ‘ಛೂ ಮಂತರ್’ ಚಿತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಶರಣ್‍, ಅದರಿಂದ ಕೊನೆಗೂ ಆಚೆ ಬಂದಿದ್ದಾರೆ. ಆ ಚಿತ್ರಗಳ ಬಿಡುಗಡೆ ಗೊಂದಲ, ಮುಂದೂಡಿಕೆ … ಈ ಬಗ್ಗೆಯೇ ಸುದ್ದಿಯಾಗುತ್ತಿದ್ದ ಶರಣ್‍ ಮಧ್ಯದಲ್ಲೊಂದು ಅರವಿಂದ್‍ ಕುಪ್ಳೀಕರ್‍ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯಾಯಿತಾದರೂ, ಆ ಚಿತ್ರದ ಸುದ್ದಿಯೇ ಇಲ್ಲ.

ಇದೀಗ ಕೊನೆಗೂ ಹೊಸ ಚಿತ್ರವೊಂದರಲ್ಲಿ ಶರಣ್‍ ಹೆಸರು ಕೇಳಿ ಬರುತ್ತಿದೆ. ಈಗ ಅವರು ಹೊಸ ಚಿತ್ರವೊಂದರಲ್ಲಿ ದೇವಾನು ದೇವತೆಗಳ ಅಧಿಪತಿಯಾಗಿ, ಹೋಮ - ಹವನ ಮತ್ತು ಯಜ್ಞಗಳ ಒಡೆಯನಾದ ದೇವೇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಅದೇ ‘ರಾಮರಸ’.

‘ಜಟ್ಟ’ ಗಿರಿರಾಜ್‍ ನಿರ್ದೇಶನದಲ್ಲಿ ನಿರ್ಮಾಪಕ-ನಿರ್ದೇಶಕ ಗುರು ದೇಶಪಾಂಡೆ ಮತ್ತು ವಿಕ್ರಮ್‍ ಆರ್ಯ ಜೊತೆಯಾಗಿ ನಿರ್ಮಿಸುತ್ತಿರುವ ಚಿತ್ರ ‘ರಾಮರಸ’. ಈ ಚಿತ್ರದ ಶೀರ್ಷಿಕೆಯನ್ನು ಕಳೆದ ವರ್ಷ ರಾಮನವಮಿಯ ಸಂದರ್ಭದಲ್ಲಿ ಘೋಷಿಸಲಾಗಿತ್ತು. ಆ ನಂತರ ಚಿತ್ರದ ನಾಯಕನನ್ನಾಗಿ ಕಾರ್ತಿಕ್‍ ಮಹೇಶ್‍ ಅವರನ್ನು ಪರಿಚಯಿಸಲಾಯಿತು. ಹೇಬಾ ಪಟೇಲ್‍ ಮತ್ತು ಬಾಲಾಜಿ ಮನೋಹರ್‍ ಸಹ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಘೋಷಿಸಲಾಯಿತು. ಈಗ ಆ ಚಿತ್ರಕ್ಕೆ ಶರಣ್‍ ಆಗಮನವಾಗಿದೆ. ಗುರುವಾರ ಬೆಳಿಗ್ಗೆ ‘ರಾಮರಸ’ದಲ್ಲಿ ಶರಣ್ ನಟಿಸುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಹಾಗಂತ ಇಷ್ಟಕ್ಕೇ ಮುಗಿಯುವುದಿಲ್ಲ. ಈ ಚಿತ್ರದಲ್ಲಿ ಶರಣ್‍ ಎಷ್ಟು ಹೊತ್ತು ಇರುತ್ತಾರೆ ಎಂಬುದು ಸದ್ಯಕ್ಕೆ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಚಿತ್ರದ ಮುಂದಿನ ಅಧ್ಯಾಯವನ್ನು ರೂಪಿಸುವುದಕ್ಕೆ ಚಿತ್ರತಂಡ ಉದ್ದೇಶಿಸಿದ್ದು, ಆ ಮುಂದಿನ ಅಧ್ಯಾಯದಲ್ಲಿ ಇನ್ನಷ್ಟು ಬಹಿರಂಗವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ರಾಮರಸ’ ಒಂದು ಹಾರಾರ್ ಕಾಮಿಡಿ ಜಾನರ್‍ನ ಚಿತ್ರವಾಗಿದ್ದು, ಗುರು ದೇಶಪಾಂಡೆ ನಡೆಸುತ್ತಿರುವ ಜಿ ಅಕಾಡೆಮಿ ಎಂಬ ತರಬೇತಿ ಸಂಸ್ಥೆಯ 16 ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಅವರೊಂದಿಗೆ ಕನ್ನಡದ ಖ್ಯಾತ ನಟರೊಬ್ಬರು ನಟಿಸುತ್ತಿದ್ದಾರೆ ಎಂದು ಕಳೆದ ವರ್ಷವೇ ಹೇಳಲಾಗಿತ್ತು. ಆದರೆ, ಆ ಖ್ಯಾತ ನಟ ಯಾರು ಎಂಬ ವಿಷಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಶರಣ್‍ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ.

ಬಿ.ಜೆ. ಭರತ್ ಈಗಾಗಲೇ ‘ರಾಮರಸ’ ದ ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು, ಹಿರಿಯ ಛಾಯಾಗ್ರಾಹಕ ಎ.ವಿ. ಕೃಷ್ಣಕುಮಾರ್ ಈ ಚಿತ್ರದ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

Read More
Next Story