ಯಶ್ ಡಿಪ್ರೆಷನ್‌ನಲ್ಲಿದ್ದಾರೆ: ಜ್ಯೋತಿಷಿ ವೇಣು ಸ್ವಾಮಿ ವಿವಾದಾತ್ಮಕ ಹೇಳಿಕೆ - ಫ್ಯಾನ್ಸ್ ಆಕ್ರೋಶ
x

ಜ್ಯೋತಿಷಿ ವೇಣು ಸ್ವಾಮಿ ರಾಕಿಂಗ್ ಸ್ಟಾರ್ ಯಶ್ ತೀವ್ರ ಖಿನ್ನತೆಯಲ್ಲಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ಯಶ್ ಡಿಪ್ರೆಷನ್‌ನಲ್ಲಿದ್ದಾರೆ: ಜ್ಯೋತಿಷಿ ವೇಣು ಸ್ವಾಮಿ ವಿವಾದಾತ್ಮಕ ಹೇಳಿಕೆ - ಫ್ಯಾನ್ಸ್ ಆಕ್ರೋಶ

ಜ್ಯೋತಿಷಿ ವೇಣು ಸ್ವಾಮಿ ರಾಕಿಂಗ್ ಸ್ಟಾರ್ ಯಶ್ ತೀವ್ರ ಖಿನ್ನತೆಯಲ್ಲಿದ್ದಾರೆ ಮತ್ತು ಕೆಜಿಎಫ್ ನಂತರ ದೊಡ್ಡ ಯಶಸ್ಸು ಸಿಗದೆ ಕಂಗಾಲಾಗಿದ್ದಾರೆ ಎಂಬ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಕಿಚ್ಚು ಹಚ್ಚಿದೆ.


Click the Play button to hear this message in audio format

ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುವವರು. ಇದೀಗ ಅವರು ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್‌ ಯಶ್ ಕುರಿತು ನೀಡಿರುವ ಹಳೆಯ ಸಂದರ್ಶನದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು ಎರಡು ತಿಂಗಳ ಹಿಂದಿನ ಈ ವಿಡಿಯೋದಲ್ಲಿ ವೇಣು ಸ್ವಾಮಿ ಅವರು ಯಶ್ ಅವರನ್ನು ಏಕವಚನದಲ್ಲಿ ಸಂಬೋಧಿಸಿರುವುದು ಮಾತ್ರವಲ್ಲದೆ, ಅವರು ತೀವ್ರ ಖಿನ್ನತೆಯಲ್ಲಿದ್ದಾರೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಈ ಸಂದರ್ಶನದಲ್ಲಿ ಮಾತನಾಡಿರುವ ವೇಣು ಸ್ವಾಮಿ, "ಯಶ್ ಡಿಪ್ರೆಷನ್‌ನಲ್ಲಿದ್ದಾನೆ. ಕೆಜಿಎಫ್ ಅಂತಹ ಸಿನಿಮಾವನ್ನು ಪದೇ ಪದೇ ಮಾಡಲು ಸಾಧ್ಯವಿಲ್ಲ. ಅಂತಹ ಯಶಸ್ಸನ್ನು ಮರುಕಳಿಸಲು ಸಾಧ್ಯವಾಗದೆ ಮತ್ತು ಮುಂದಿನ ಸಿನಿಮಾಗಳ ಆಯ್ಕೆಯ ಗೊಂದಲದಲ್ಲಿ ಸಿಲುಕಿ ತನ್ನ ಸ್ಟಾರ್‌ಡಂ ಉಳಿಸಿಕೊಳ್ಳುವ ಆತಂಕದಲ್ಲಿ ಯಶ್ ಇದ್ದಾನೆ" ಎನ್ನುವ ಮೂಲಕ ಅವರ ವೃತ್ತಿಜೀವನದ ಬಗ್ಗೆ ವ್ಯತಿರಿಕ್ತ ಭವಿಷ್ಯ ನುಡಿದಿದ್ದಾರೆ. ತೆಲುಗು ನಟರ ಬಗ್ಗೆ ನಾನು ಮಾತನಾಡುವುದಿಲ್ಲ, ಆದರೆ ಈತ ಕನ್ನಡದ ನಟನಾದ ಕಾರಣ ಮಾತನಾಡುತ್ತಿದ್ದೇನೆ ಎಂದು ಹೇಳುವ ಮೂಲಕ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

ವೇಣು ಸ್ವಾಮಿ ಅವರ ಈ ನಡೆಗೆ ಯಶ್ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಒಬ್ಬ ಸಾಧಕ ನಟನ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಹಿಂದೆ ಸಮಂತಾ ಮತ್ತು ನಾಗ ಚೈತನ್ಯ ಅವರ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದು ಅದು ನಿಜವಾದ ನಂತರ ವೇಣು ಸ್ವಾಮಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಆದರೆ ಅಂದಿನಿಂದ ಇಂದಿನವರೆಗೆ ಅವರು ಪ್ರತಿಯೊಂದು ವಿಷಯದಲ್ಲೂ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿ ಅನೇಕ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಮೇಲೆ ಈ ಹಿಂದೆ ಕಾನೂನು ಕ್ರಮಗಳೂ ಜರುಗಿದ್ದರೂ, ಈಗ ಮತ್ತೆ ಯಶ್ ವಿಷಯದಲ್ಲಿ ಇಂತಹ ಹೇಳಿಕೆ ನೀಡಿರುವುದು ಸ್ಯಾಂಡಲ್‌ವುಡ್ ವಲಯದಲ್ಲಿ ದೊಡ್ಡ ಮಟ್ಟದ ಕಿಚ್ಚು ಹಚ್ಚಿದೆ.

ಸದ್ಯ ಯಶ್‌ ನಟನೆಯ 'ಟಾಕ್ಸಿಕ್' ಸಿನಿಮಾ ಈ ಮೊದಲು ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿತ್ತು. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕಂಡುಬಂದಿರುವ ಅಸ್ಥಿರತೆ ಮತ್ತು ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರವು ಈಗ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ.

Read More
Next Story