
ಸ್ಯಾಂಡಲ್ವುಡ್ ಸ್ಟಾರ್ಗಳಿಗೆ ರಶ್ಮಿಕಾ ಆಮಂತ್ರಣ ನೀಡಿದ್ದಾರೆ.
Rashmika Wedding| ಸ್ಯಾಂಡಲ್ವುಡ್ ಸ್ಟಾರ್ಗಳಿಗೆ ರಶ್ಮಿಕಾ ಆಮಂತ್ರಣ: ಕಿರಿಕ್ ಪಾರ್ಟಿ ತಂಡಕ್ಕೆ ಇಲ್ವಾ ಇನ್ವಿಟೇಶನ್?
ರಶ್ಮಿಕಾ ಅವರಿಗೆ ಚಿತ್ರರಂಗಕ್ಕೆ ಮೊದಲ ಅವಕಾಶ ನೀಡಿದ 'ಕಿರಿಕ್ ಪಾರ್ಟಿ' ತಂಡದ ರಿಷಬ್ ಶೆಟ್ಟಿ ಅಥವಾ ರಕ್ಷಿತ್ ಶೆಟ್ಟಿ ಅವರ ಹೆಸರು ಈ ಪಟ್ಟಿಯಲ್ಲಿ ಇಲ್ಲದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹ ಮಹೋತ್ಸವವು ಫೆಬ್ರವರಿ 26 ರಂದು ನಡೆಯಲಿದ್ದು, ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದೆ. ಈ ಸಂಭ್ರಮಕ್ಕೆ ಕನ್ನಡ ಚಿತ್ರರಂಗದ ಆಯ್ದ 11 ಗಣ್ಯರಿಗೆ ಮಾತ್ರ ಆಮಂತ್ರಣ ನೀಡಲಾಗಿದ್ದು, ರಶ್ಮಿಕಾ ಅವರು ಸ್ವತಃ ವೈಯಕ್ತಿಕವಾಗಿ ಮೆಸೇಜ್ ಮಾಡುವ ಮೂಲಕ ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ.
ಈ ಆಮಂತ್ರಣ ಪಟ್ಟಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇವರೊಂದಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೂ ಆಹ್ವಾನ ತಲುಪಿದೆ. ತಾಂತ್ರಿಕ ವರ್ಗ ಮತ್ತು ನಟಿಯರ ಪೈಕಿ ನಿರ್ದೇಶಕರಾದ ಎ. ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಮತ್ತು ನಟಿ ಆಶಿಕಾ ರಂಗನಾಥ್ ಅವರಿಗೆ ಮಾತ್ರ ಲಗ್ನ ಪತ್ರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸ್ಯಾಂಡಲ್ವುಡ್ನಲ್ಲಿ ಶುರುವಾದ ಚರ್ಚೆ
ಈ ಆಮಂತ್ರಣ ಪಟ್ಟಿಯು ಸ್ಯಾಂಡಲ್ವುಡ್ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ರಶ್ಮಿಕಾ ಅವರಿಗೆ ಚಿತ್ರರಂಗಕ್ಕೆ ಮೊದಲ ಅವಕಾಶ ನೀಡಿದ 'ಕಿರಿಕ್ ಪಾರ್ಟಿ' ತಂಡದ ರಿಷಬ್ ಶೆಟ್ಟಿ ಅಥವಾ ರಕ್ಷಿತ್ ಶೆಟ್ಟಿ ಅವರ ಹೆಸರು ಈ ಪಟ್ಟಿಯಲ್ಲಿ ಇಲ್ಲದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಮೊದಲ ಸಿನಿಮಾ ತಂಡವನ್ನು ರಶ್ಮಿಕಾ ಮರೆತಿದ್ದಾರೆಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಮದುವೆಗೆ ಯಾರನ್ನು ಕರೆಯಬೇಕು ಎಂಬುದು ಅವರ ವೈಯಕ್ತಿಕ ಇಷ್ಟ ಎಂದು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಬಹುನಿರೀಕ್ಷಿತ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹಕ್ಕೆ ಇಡೀ ಚಿತ್ರರಂಗವೇ ಕಾತರದಿಂದ ಕಾಯುತ್ತಿದ್ದು, ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಜೋಡಿಗೆ ವಿಶೇಷವಾಗಿ ಶುಭ ಹಾರೈಸುವ ಮೂಲಕ ಗಮನ ಸೆಳೆದಿದ್ದಾರೆ. ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದ ಐಟಿಸಿ ಮೊಮೆಂಟೋಸ್ (ITC Mementos) ಹೋಟೆಲ್ನಲ್ಲಿ ಈ ತಾರಾ ಜೋಡಿಯ ಮದುವೆ ಶಾಸ್ತ್ರೋಕ್ತವಾಗಿ ನಡೆಯಲಿದೆ.
ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಧಾನ ಮಂತ್ರಿಗಳು ವಿಜಯ್ ದೇವರಕೊಂಡ ಅವರ ಪೋಷಕರಾದ ಮಾಧವಿ ಮತ್ತು ಗೋವರ್ಧನ್ ರಾವ್ ಅವರಿಗೆ ವೈಯಕ್ತಿಕ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ವಿವಾಹಕ್ಕೆ ಆಮಂತ್ರಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಅವರ ಜೀವನದ ಈ ಹೊಸ ಅಧ್ಯಾಯವು ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ. "ವಿಜಯ್ ಮತ್ತು ರಶ್ಮಿಕಾ ಅವರ ಮದುವೆಗೆ ಆಮಂತ್ರಿಸಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ದೇವರಕೊಂಡ ಮತ್ತು ಮಂದಣ್ಣ ಕುಟುಂಬಕ್ಕೆ ಈ ಶುಭ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ಮೋದಿ ತಿಳಿಸಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮದುವೆಯ ಪವಿತ್ರತೆಯನ್ನು ಉಲ್ಲೇಖಿಸಿರುವ ಪ್ರಧಾನಿಗಳು, "ಸಪ್ತಪದಿಯ ಏಳು ಹೆಜ್ಜೆಗಳ ಮೂಲಕ ಈ ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗಲಿ. ಸಿನಿಮಾ ರಂಗದಲ್ಲಿ ಇಬ್ಬರಿಗೂ ಸ್ಕ್ರಿಪ್ಟ್ಗಳು ಹೊಸದೇನಲ್ಲ, ಆದರೆ ಪ್ರೀತಿ ಮತ್ತು ಅನುರಾಗದಿಂದ ಕೂಡಿರುವ ಜೀವನದ ಈ ನೈಜ ಅಧ್ಯಾಯವು ಬೆಳ್ಳಿತೆರೆಯ ಮ್ಯಾಜಿಕ್ಗಿಂತಲೂ ಹೆಚ್ಚು ಹೊಳೆಯಲಿ" ಎಂದು ಆಶೀರ್ವದಿಸಿದ್ದಾರೆ. ಅಲ್ಲದೆ, ಪರಸ್ಪರರ ಅಪೂರ್ಣತೆಗಳನ್ನು ಒಪ್ಪಿಕೊಂಡು, ಶಕ್ತಿಗಳನ್ನು ಗೌರವಿಸುತ್ತಾ ಉತ್ತಮ ಸಂಗಾತಿಗಳಾಗಿ ಸಾಗಲಿ ಎಂದು ಹಾರೈಕೆಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈಗಾಗಲೇ ಉದಯಪುರದಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದ್ದು, ಫೆಬ್ರವರಿ 24 ರಿಂದಲೇ ಸಂಗೀತ ಕಾರ್ಯಕ್ರಮ ಆರಂಭವಾಗಿದೆ. ಫೆಬ್ರವರಿ 25 ರಂದು ಹಳದಿ ಮತ್ತು ಮೆಹಂದಿ ಶಾಸ್ತ್ರಗಳು ವಿಜೃಂಭಣೆಯಿಂದ ಜರುಗುತ್ತಿವೆ. ಎರಡು ಕುಟುಂಬಗಳ ಸಂಪ್ರದಾಯದಂತೆ ವಿವಾಹ ಮಹೋತ್ಸವವು ನಡೆಯಲಿದ್ದು, ಕೇವಲ ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗಿಯಾಗುತ್ತಿದ್ದಾರೆ.

