Hobbale Films| ಹೊಂಬಾಳೆ ಮ್ಯೂಸಿಕ್‌ನಿಂದ ಕೃಷ್ಣ ಎನಬಾರದೆ ಲೋಕಾರ್ಪಣೆ
x

ಹೊಂಬಾಳೆ ಮ್ಯೂಸಿಕ್‌ನಿಂದ 'ಕೃಷ್ಣ ಎನಬಾರದೆ' ಬಿಡುಗಡೆ

Hobbale Films| ಹೊಂಬಾಳೆ ಮ್ಯೂಸಿಕ್‌ನಿಂದ 'ಕೃಷ್ಣ ಎನಬಾರದೆ' ಲೋಕಾರ್ಪಣೆ

ಹೊಂಬಾಳೆ ಮ್ಯೂಸಿಕ್‌ನಿಂದ 'ಕೃಷ್ಣ ಎನಬಾರದೆ' ಬಿಡುಗಡೆ! ಆಧುನಿಕ ವಿಎಫ್‌ಎಕ್ಸ್ ಮತ್ತು ಫ್ಯೂಚರಿಸ್ಟಿಕ್ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಮ್ಯೂಸಿಕ್ ವಿಡಿಯೋ ಪುರಾಣ ಮತ್ತು ತಂತ್ರಜ್ಞಾನದ ಅದ್ಭುತ ಸಂಗಮ.


Click the Play button to hear this message in audio format

ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ ರಾಮನವಮಿಯ ಅಂಗವಾಗಿ, ʻಕೃಷ್ಣ ಎನಬಾರದೇʼ ಎಂಬ ವಿನೂತನ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಸಾಂಪ್ರದಾಯಿಕ ಕಥೆಗಳಿಗೆ ಕಲ್ಪನಾತೀತ 'ಫ್ಯೂಚರಿಸ್ಟಿಕ್' ಸ್ಪರ್ಶ ನೀಡಿರುವುದು ಈ ವಿಡಿಯೋದ ಪ್ರಮುಖ ಆಕರ್ಷಣೆಯಾಗಿದೆ. ವಿಶೇಷವಾಗಿ ಕಲ್ಕಿ ಅವತಾರದ ಕೃಷ್ಣ ಹಾಗೂ ಕಾಳಿಂಗ ಮರ್ದನದಂತಹ ಪುರಾಣ ಪ್ರಸಂಗಗಳನ್ನು ಅಂತರಾಷ್ಟ್ರೀಯ ಮಟ್ಟದ ವಿಎಫ್‌ಎಕ್ಸ್ ತಂತ್ರಜ್ಞಾನದ ಮೂಲಕ ತೆರೆಯ ಮೇಲೆ ತರಲಾಗಿದ್ದು, 'ಹಳೆಯ ಬೇರು ಹೊಸ ಚಿಗುರು' ಎಂಬಂತೆ ಇಂದಿನ ತಲೆಮಾರಿಗೆ ಹತ್ತಿರವಾಗುವಂತೆ ಚಿತ್ರಿಸಲಾಗಿದೆ.

ಈ ಹಾಡಿನ ಬಿಡುಗಡೆಯ ಸಮಯವೂ ಕೂಡ ವಿಶೇಷ ಅರ್ಥವನ್ನು ಒಳಗೊಂಡಿದೆ. ಮಧ್ಯಾಹ್ನ ಸರಿಯಾಗಿ 12:05ಕ್ಕೆ ಈ ಗೀತೆಯನ್ನು ಹೊರತರಲಾಗಿದ್ದು, ಇದು ಶ್ರೀಕೃಷ್ಣ ಭೂಮಿಯ ಮೇಲೆ ಕಳೆದ 125 ವರ್ಷಗಳ ಸಂಕೇತ ಹಾಗೂ ಶ್ರೀರಾಮನ ಜನ್ಮ ಸಮಯವಾದ ಮಧ್ಯಾಹ್ನದ ಮುಹೂರ್ತಕ್ಕೆ ಹೊಂದಿಕೆಯಾಗುವಂತೆ ಅತ್ಯಂತ ಜಾಣ್ಮೆಯಿಂದ ಯೋಜಿಸಲಾಗಿದೆ. ಸಂಗೀತ ನಿರ್ದೇಶಕ ಅನಿರುದ್ಧ ಶಾಸ್ತ್ರಿ ಅವರು ಈ ಹಾಡಿಗೆ ಸಾಹಿತ್ಯ ಬರೆದು ಸ್ವರಸಂಯೋಜನೆ ಮಾಡಿದ್ದು, ಖ್ಯಾತ ಗಾಯಕ ವಿಜಯ್ ಪ್ರಕಾಶ್, ನರಹರಿ ಆಚಾರ್ ಅವರೊಂದಿಗೆ ಧ್ವನಿಗೂಡಿಸಿದ್ದಾರೆ. ಮೆಗ್-ಅ-ವಾಟ್ ಅವರ ರ‍್ಯಾಪ್ ಮತ್ತು ಶಾಂಡಿಲ್ಯ ಪಿಸಾಪತಿ ಅವರ ಪಿಟೀಲು ವಾದನವು ಹಾಡಿಗೆ ಜಾಗತಿಕ ಮಟ್ಟದ ಮೆರುಗು ನೀಡಿದ್ದು, ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.

ಮೇಘರಾಜ್ ಮತ್ತು ಸುನೀತ್ ಶೆಟ್ಟಿ ಅವರ ಕ್ರಿಯೇಟಿವ್ ಡೈರೆಕ್ಷನ್‌ನಲ್ಲಿ ಅಸ್ತ್ರ ಸ್ಟುಡಿಯೋಸ್ ಈ ದೃಶ್ಯವೈಭವವನ್ನು ಸಿದ್ಧಪಡಿಸಿದೆ. ಭಾರತೀಯ ಪುರಾಣಗಳನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿರಿಸದೆ, ಅದನ್ನು ತಾಂತ್ರಿಕವಾಗಿ ಶ್ರೀಮಂತಗೊಳಿಸಿ ಜಾಗತಿಕ ಮಟ್ಟದ ಗುಣಮಟ್ಟದಲ್ಲಿ ಕಟ್ಟಿಕೊಡುವ ಹೊಂಬಾಳೆ ಮ್ಯೂಸಿಕ್‌ನ ಈ ಧೈರ್ಯದ ಹೆಜ್ಜೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಧುನಿಕತೆಯ ನಡುವೆ ನಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ಬಿಂಬಿಸುತ್ತಿರುವ ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಭಾರತೀಯ ಕಲೆ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಸಾರುತ್ತಿದೆ.

Read More
Next Story