
ನಟಿ ಪ್ರೇರಣಾ ಭಟ್
ಡಾರ್ಕ್ ಕಾಮಿಡಿ ಕಥಾಹಂದರದ "ಗಾರ್ಜಿಯಸ್ ರಾಸ್ಕಲ್"
ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ಹಾಗೂ ಡಾರ್ಕ್ ಕಾಮಿಡಿ ಕಥಾ ಹಂದರದ ಜೊತೆಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇವೆ ಎಂದು ನಿರ್ದೇಶಕ ಚೇತನ್ ಕೃಷ್ಣ ಆರ್. ತಿಳಿಸಿದ್ದಾರೆ.
ಕನ್ನಡದಲ್ಲಿ ಹೊಸ ತಂಡಗಳ ಹೊಸ ಪ್ರಯತ್ನಗಳನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಅದೇ ಸಾಲಿನಲ್ಲಿ ಹೊಸ ತಂಡವೊಂದರಿಂದ "ಗಾರ್ಜಿಯಸ್ ರಾಸ್ಕಲ್" ಎಂಬ ಚಿತ್ರ ಮೂಡಿಬಂದಿದ್ದು, ಇದೇ ಮಾರ್ಚ್ 6 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
'ಅದೃಷ್ಟಲಕ್ಷ್ಮಿ ಪ್ರೊಡಕ್ಷನ್ಸ್' ಲಾಂಛನದಲ್ಲಿ ಆರ್. ಚೇತನ್ ಕೃಷ್ಣ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ಚೇತನ್ ಕೃಷ್ಣ ಅವರು ಸಂಗೀತ ನೀಡಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ತಮಿಳಿನ ಖ್ಯಾತ ಗಾಯಕ ವೇಲುಮುರುಗನ್ ಹಾಗೂ "ಸರಿಗಮಪ" ಖ್ಯಾತಿಯ ದರ್ಶನ್ ನಾರಾಯಣ್ ಧ್ವನಿ ನೀಡಿದ್ದಾರೆ. ಈ ಹಾಡುಗಳಿಗೆ ಕೇಳುಗರು ಈಗಾಗಲೇ ಫಿದಾ ಆಗಿದ್ದಾರೆ.
ಚಿತ್ರದ ಪೋಸ್ಟರ್
ಪ್ರಮೋದ್ ಜೋಯಿಸ್ ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶಂಕು ಅವರ ಛಾಯಾಗ್ರಹಣ, ಅಕ್ಷಯ್ ಪಿ. ರಾವ್ ಅವರ ಸಂಕಲನ ಹಾಗೂ ನಂದು (ಕೆಜಿಎಫ್ ಖ್ಯಾತಿ) ಅವರ ಶಬ್ದ ವಿನ್ಯಾಸವಿದೆ. ಶ್ರೀನಿವಾಸ್ ಬೆಟ್ಟದಪುರ ಅವರು ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಚರಣ್ ಸುವರ್ಣ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಪ್ರೇರಣಾ ಭಟ್, ಯುವಿನ್, ರಾಜವೀರ್ ಸಿಂಗ್, ಚೇತನ್ ಮಹೇಶ್, ಶಕ್ತಿಕುಮಾರ್, ಸುನೀಲ್ ಪುರಾಣಿಕ್ ಹಾಗೂ ಸ್ವಾತಿ ಮುಂತಾದವರಿದ್ದಾರೆ.
ನಿರ್ಮಾಪಕರ ಹೇಳುವುದೇನು?
ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಚೇತನ್ ಕೃಷ್ಣ ಆರ್., "ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ನಮ್ಮ ಚಿತ್ರವು 'ಡಾರ್ಕ್ ಕಾಮಿಡಿ' ಕಥಾಹಂದರವನ್ನು ಹೊಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲಾ ಅಂಶಗಳು ಚಿತ್ರದಲ್ಲಿದ್ದು, ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ 6 ರಂದು 'ಗಾರ್ಜಿಯಸ್ ರಾಸ್ಕಲ್' ತೆರೆಗೆ ಬರುತ್ತಿದೆ. ನನ್ನ ನಿರ್ಮಾಣದ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ," ಎಂದು ಮನವಿ ಮಾಡಿದರು.

