Rangi Taranga | ದಶಕದ ನಂತರ ರಂಗಿತರಂಗ ಮರುಬಿಡುಗಡೆ; ಜುಲೈ 4ರಿಂದ ಮತ್ತೆ ತೆರೆಗೆ
x

ರಂಗಿತರಂಗ ಸಿನಿಮಾದ ದೃಶ್ಯ

Rangi Taranga | ದಶಕದ ನಂತರ 'ರಂಗಿತರಂಗ' ಮರುಬಿಡುಗಡೆ; ಜುಲೈ 4ರಿಂದ ಮತ್ತೆ ತೆರೆಗೆ

'ರಂಗಿತರಂಗ'ದ ಮೂಲಕ ಅಮೆರಿಕದಲ್ಲಿ ಕನ್ನಡಕ್ಕೆ ಒಂದು ಹೊಸ ಮಾರುಕಟ್ಟೆ ಸೃಷ್ಟಿಯಾಯಿತು. ಆ ವರ್ಷದ ಬಹುಪಾಲು ಪ್ರಶಸ್ತಿಗಳನ್ನು ಬಾಚಿಕೊಂಡ 'ರಂಗಿತರಂಗ' ಈ ಜುಲೈ 4 ರಂದು ಮರು ಬಿಡುಗಡೆಯಾಗುತ್ತಿದೆ.


2015ರಲ್ಲಿ ತೆರೆಕಂಡಿದ್ದ ಅನೂಪ್ ಭಂಡಾರಿ ನಿರ್ದೇಶನದ ಬ್ಲಾಕ್‌ ಬಸ್ಟರ್ ಚಲನಚಿತ್ರ 'ರಂಗಿತರಂಗ', ಈಗ ಹತ್ತು ವರ್ಷಗಳ ನಂತರ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಜುಲೈ 4 ರಂದು ಈ ಸಿನಿಮಾ ಮರು ಬಿಡುಗಡೆಯಾಗಲಿದೆ.

ಈ ಬಗ್ಗೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಟಿ ನಡೆಸಿ ತಮ್ಮ ಸಿನಿಮಾದ ಅನುಭವಗಳನ್ನು ಹಂಚಿಕೊಂಡರು.

ಈ ಸಿನಿಮಾವನ್ನು ಎಚ್.ಕೆ. ಪ್ರಕಾಶ್ ಅವರು ನಿರ್ಮಾಣ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಅವರು,"ಹತ್ತು ವರ್ಷಗಳ ನಂತರವೂ 'ರಂಗಿತರಂಗ' ಪ್ರಕಾಶ್ ಎಂದೇ ನನ್ನನ್ನು ಗುರುತಿಸುತ್ತಾರೆ. ನಿರೂಪ್ ನಟಿಸಿದ್ದ ಒಂದು ಟೆಲಿ ಫಿಲಂ ನೋಡಿ ಮೆಚ್ಚಿಕೊಂಡಿದ್ದೆ. ಅವರೊಂದಿಗೆ ಸಿನಿಮಾ ಮಾಡಬೇಕೆಂದು ನಿರೂಪ್ ಅವರ ತಂದೆ ಸುಧಾಕರ್ ಭಂಡಾರಿ ಅವರನ್ನು ಸಂಪರ್ಕಿಸಿದ್ದೆ. ಅವರು ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದ ಪ್ರೀ-ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದ್ದರು. ಆಗ ಅನೂಪ್ ಅವರ ಬಳಿ ಕಥೆ ಕೇಳಿದೆ. ಹಾಡುಗಳನ್ನು ಕೇಳಿದ ಕೂಡಲೇ ಈ ಸಿನಿಮಾ ನಾನೇ ಮಾಡಬೇಕು ಎಂದು ತೀರ್ಮಾನಿಸಿದೆ. ಆ ಚಿತ್ರವೇ 'ರಂಗಿತರಂಗ'. ಯಶಸ್ಸಿನ ಉತ್ತುಂಗಕ್ಕೇರಿ ಈಗ 10ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹತ್ತು ವರ್ಷಗಳ ನಂತರವೂ ನನ್ನನ್ನು 'ರಂಗಿತರಂಗ' ಪ್ರಕಾಶ್ ಎಂದೇ ಗುರುತಿಸುತ್ತಾರೆ ಎಂದು ತಿಳಿಸಿದರು.

ಅಮೆರಿಕಾದಲ್ಲಿ ಕನ್ನಡಕ್ಕೆ ಹೊಸ ಮಾರುಕಟ್ಟೆ ಸೃಷ್ಟಿಸಿತು

"ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ನಾನು ಹಾಲಿವುಡ್ ಸ್ಟಾರ್ ರಸೆಲ್ ಹಾರ್ವರ್ಡ್ ಅವರೊಂದಿಗೆ ಅಂತರರಾಷ್ಟ್ರೀಯ ಕಿರುಚಿತ್ರಗಳನ್ನು ಮಾಡಿದ್ದೆ. 'ರಂಗಿತರಂಗ'ದ ಪ್ರೀ-ಪ್ರೊಡಕ್ಷನ್ ಕಾರ್ಯದಲ್ಲಿರುವಾಗ, ಈ ಚಿತ್ರ ನಾನೇ ಮಾಡಬೇಕೆಂದು ಎಚ್.ಕೆ. ಪ್ರಕಾಶ್ ಅವರ ಆಸೆಯನ್ನು ನೋಡಿ ಅವರ ಉತ್ಸಾಹಕ್ಕೆ ಕೈಜೋಡಿಸಿದೆ. ಸಾಯಿಕುಮಾರ್ ಅವರನ್ನು ಹೊರತುಪಡಿಸಿ, ಬಹುತೇಕ ಎಲ್ಲ ಕಲಾವಿದರು ಹೊಸಬರಾಗಿದ್ದರು. ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಅರವಿಂದ್ – ಎಲ್ಲರ ಸಂಘಟಿತ ಶ್ರಮವೇ ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣ. ಛಾಯಾಗ್ರಾಹಕ ವಿಲಿಯಂ ಡೇವಿಡ್ ನನ್ನ ಕಲ್ಪನೆಗೆ ಸೂಕ್ತ ದೃಶ್ಯಗಳನ್ನು ಸಂಯೋಜಿಸಿ ಯಶಸ್ಸಿಗೆ ಕಾರಣರಾದರು ಎಂದು ತಿಳಿಸಿದರು.

2015ರ ಜುಲೈ 3ರಂದು ನಮ್ಮ ಚಿತ್ರ ಬಿಡುಗಡೆಯಾದಾಗ, ಕಪಾಲಿ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಬಂದ ಕೆಲವರು ನಮ್ಮ ನಿರ್ಮಾಪಕರಿಗೆ 'ನಿಮಗೆ ಪೋಸ್ಟರ್ ಖರ್ಚು ಕೂಡ ಬರುವುದಿಲ್ಲ' ಎಂದು ಹೆದರಿಸಿದ್ದರು. ಆದರೆ, ನಮ್ಮ ನಿರ್ಮಾಪಕರಿಗೆ ಚಿತ್ರ ಗೆಲ್ಲುತ್ತದೆ ವಿಶ್ವಾಸವಿತ್ತು. ಅದು ಸುಳ್ಳಾಗಲಿಲ್ಲ. ಜನ ನಮ್ಮ ಕೈ ಹಿಡಿದರು. 'ಬಾಹುಬಲಿ', 'ಬಜರಂಗಿ ಭಾಯಿಜಾನ್', 'ಶ್ರೀಮಂತುಡು' ನಂತಹ ದೊಡ್ಡ ಚಿತ್ರಗಳ ಜೊತೆ ಬಿಡುಗಡೆಯಾದರೂ ನಮ್ಮ ಕನ್ನಡ ಚಿತ್ರ ಸೂಪರ್ ಹಿಟ್ ಆಯಿತು.

'ರಂಗಿತರಂಗ'ದ ಮೂಲಕ ಅಮೆರಿಕದಲ್ಲಿ ಕನ್ನಡಕ್ಕೆ ಒಂದು ಹೊಸ ಮಾರುಕಟ್ಟೆ ಸೃಷ್ಟಿಯಾಯಿತು. ಆ ವರ್ಷದ ಬಹುಪಾಲು ಪ್ರಶಸ್ತಿಗಳನ್ನು ಬಾಚಿಕೊಂಡ 'ರಂಗಿತರಂಗ' ಈ ಜುಲೈ 4 ರಂದು ಮರು-ಬಿಡುಗಡೆಯಾಗುತ್ತಿದೆ. ಮತ್ತೆ ನಮ್ಮ ಚಿತ್ರವನ್ನು ಕನ್ನಡಿಗರು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ," ಎಂದು ನಿರ್ದೇಶಕ ಅನೂಪ್ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಎರಡು ಕಣ್ಣುಗಳು

ಪೊಲೀಸ್ ಸ್ಟೋರಿ ಮತ್ತು ರಂಗಿತರಂಗ ಈ ಎರಡು ಚಿತ್ರಗಳು ನನ್ನ ಎರಡು ಕಣ್ಣುಗಳು. ಇಂತಹ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಬಹಳ ಖುಷಿಯಾಗಿದೆ. ಈಗಲೂ ನಾನು ಹೋದ ಕಡೆ 'ರಂಗಿತರಂಗ'ದ ನನ್ನ ಪಾತ್ರಕ್ಕೆ ಜನ ಮೆಚ್ಚುಗೆ ಸೂಚಿಸುತ್ತಾರೆ. ಚಿತ್ರ ಮರು-ಬಿಡುಗಡೆಯಲ್ಲೂ ದಾಖಲೆ ಬರೆಯಲಿ" ಎಂದು ಹಿರಿಯ ನಟ ಸಾಯಿಕುಮಾರ್ ಶುಭ ಹಾರೈಸಿದರು.

ಅಣ್ಣನ ಮೊದಲ ಚಿತ್ರಕ್ಕೆ ನಾನೇ ಹೀರೋ ಎಂದಾಗ ಖುಷಿ ಅಷ್ಟಿಷ್ಟಲ್ಲ

ಸಿನಿಮಾದ ನಾಯಕ ನಿರೂಪ್‌ ಭಂಡಾರಿ ಮಾತನಾಡಿ, ಅಣ್ಣನ ಮೊದಲ ಚಿತ್ರಕ್ಕೆ ನಾನೇ ಹೀರೋ ಎಂದಾಗ ಖುಷಿ ಅಷ್ಟಿಷ್ಟಲ್ಲ. ನಾನು ಐಟಿ ಉದ್ಯೋಗಿಯಾಗಿದ್ದರೂ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದೆ. ರತನ್ ಠಾಕೂರ್ ಗ್ರಾಂಟ್ ಅವರ ನಟನಾ ಶಾಲೆಯಲ್ಲಿ ನಟನೆ ಅಭ್ಯಾಸ ಮಾಡಿದೆ. ಅಣ್ಣನ ನಿರ್ದೇಶನದ ಕಿರುಚಿತ್ರಗಳಿಗೆ ನಾನೇ ಹೀರೋ. ಬೆಳ್ಳಿತೆರೆಯ ಮೇಲೆ ಅನೂಪ್ ನಿರ್ದೇಶನದ ಮೊದಲ ಚಿತ್ರಕ್ಕೂ ನಾನೇ ನಾಯಕ ಎಂದು ತಿಳಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಮೊದಲ ದೃಶ್ಯದಲ್ಲೇ ನಾನು ಸಾಯಿಕುಮಾರ್ ಅವರೊಂದಿಗೆ ಫೈಟ್ ಮಾಡಬೇಕಿತ್ತು. ಆಗ ನನಗಾದ ಭಯ ಈಗಲೂ ಕಣ್ಣ ಮುಂದೆ ಇದೆ. ಅಮೆರಿಕಾಗೆ ಹೋದಾಗ ಅಲ್ಲಿ ನಮ್ಮ ಚಿತ್ರವನ್ನು ನೋಡಲು ಬಂದಿದ್ದ ಜನಸಾಗರ ಕಂಡು ಬಹಳ ಖುಷಿಪಟ್ಟಿದ್ದೆ ಎಂದು ತಿಳಿಸಿದರು.

ಇನ್ನೂ 'ರಂಗಿತರಂಗ' ಮೂಲಕವೇ ಗುರುತಿಸುತ್ತಾರೆ

ನಾನು ಐಟಿ ಉದ್ಯೋಗಿ. ಅನೂಪ್ ಅವರು ಈ ಚಿತ್ರದ ಕಥೆ ಹೇಳಿದಾಗ ನಟಿಸಲು ಬಹಳ ಇಷ್ಟವಾಯಿತು. ಚಿತ್ರ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ, ಈಗಲೂ ನನ್ನನ್ನು 'ರಂಗಿತರಂಗ'ದ ಮೂಲಕವೇ ಗುರುತಿಸುತ್ತಾರೆ ಎಂದು ನಾಯಕಿ ರಾಧಿಕಾ ನಾರಾಯಣ್ ತಿಳಿಸಿದರು.

ರಂಗಿತರಂಗ ಸಿನಿಮಾದ ಚಿತ್ರೀಕರಣವನ್ನು ವಿಲಿಯಂ ಡೇವಿಡ್ ಮಾಡಿದ್ದರು. ಅವರು ಈ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Read More
Next Story