ರಾಮಾಯಣ ಟ್ರೇಲರ್‌ನಲ್ಲಿ ವಿವೇಕ್ ಒಬೆರಾಯ್ ಸರ್ಪ್ರೈಸ್ ಎಂಟ್ರಿ
x

ವಿದ್ಯುಜ್ಜಿಹ್ವ ಪಾತ್ರದಲ್ಲಿ ಮಿಂಚಿದ ವಿವೇಕ್ ಒಬೆರಾಯ್

'ರಾಮಾಯಣ' ಟ್ರೇಲರ್‌ನಲ್ಲಿ ವಿವೇಕ್ ಒಬೆರಾಯ್ ಸರ್ಪ್ರೈಸ್ ಎಂಟ್ರಿ

'ರಾಮಾಯಣ' ಟ್ರೇಲರ್‌ನಲ್ಲಿ ವಿದ್ಯುಜ್ಜಿಹ್ವ ಪಾತ್ರದಲ್ಲಿ ವಿವೇಕ್ ಒಬೆರಾಯ್ ಅಚ್ಚರಿ ಎಂಟ್ರಿ ನೀಡಿದ್ದಾರೆ. ಯಶ್ ಜೊತೆಗಿನ ಯುದ್ಧದ ದೃಶ್ಯ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಚಿತ್ರದ ನಿರೀಕ್ಷೆ ಹೆಚ್ಚಿಸಿದೆ.


Click the Play button to hear this message in audio format

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತ ಚರ್ಚೆ ಜೋರಾಗಿದೆ. ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿರುವ ಟ್ರೇಲರ್‌ಗೆ ಸಿನಿಪ್ರಿಯರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಟ್ರೇಲರ್‌ನಲ್ಲಿನ ಹಲವು ಅದ್ಭುತ ದೃಶ್ಯಗಳ ನಡುವೆ ಅಭಿಮಾನಿಗಳ ಗಮನ ಸೆಳೆದ ಮತ್ತೊಂದು ಅಚ್ಚರಿ ಎಂದರೆ ನಟ ವಿವೇಕ್ ಒಬೆರಾಯ್ ಅವರ ಪಾತ್ರ. ಯಾವುದೇ ಪ್ರಚಾರವಿಲ್ಲದೆ ಟ್ರೇಲರ್‌ನಲ್ಲಿ ಕ್ಷಣಮಾತ್ರ ಕಾಣಿಸಿಕೊಂಡಿರುವ ವಿವೇಕ್, ವಿದ್ಯುಜ್ಜಿಹ್ವ ಎಂಬ ರಾಕ್ಷಸ ರಾಜಕುಮಾರನ ಪಾತ್ರದಲ್ಲಿ ನಟಿಸಿದ್ದಾರೆ.

ಈ ಪಾತ್ರವು ಶೂರ್ಪನಖಿಯ ಪತಿಯಾಗಿದ್ದು, ಚಿತ್ರದಲ್ಲಿ ಶೂರ್ಪನಖಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ದಟ್ಟ ಗಡ್ಡ, ಮೀಸೆ, ಯುದ್ಧದ ಕವಚ ಹಾಗೂ ವಿಭಿನ್ನ ಗೆಟಪ್‌ನಲ್ಲಿರುವ ವಿವೇಕ್ ಅವರನ್ನು ಮೊದಲ ನೋಟದಲ್ಲೇ ಗುರುತಿಸುವುದು ಕಷ್ಟವಾಗುವಂತಿದೆ.

ಯಶ್-ವಿವೇಕ್ ಕಾಳಗದ ದೃಶ್ಯ ವೈರಲ್

ಟ್ರೇಲರ್‌ನಲ್ಲಿನ ರಾವಣನಾಗಿ ಕಾಣಿಸಿಕೊಂಡ ಯಶ್ ಹಾಗೂ ವಿದ್ಯುಜ್ಜಿಹ್ವನಾಗಿ ಕಾಣಿಸಿಕೊಂಡಿರುವ ವಿವೇಕ್ ಒಬೆರಾಯ್ ನಡುವಿನ ಯುದ್ಧದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯ ರಾವಣನ ಹಿನ್ನಲೆ ಕಥೆಯನ್ನು ಇನ್ನಷ್ಟು ಆಳವಾಗಿ ಚಿತ್ರದಲ್ಲಿ ತೋರಿಸಲಾಗುತ್ತದೆ ಎಂಬ ಸುಳಿವು ನೀಡಿದೆ.

ಅಭಿಮಾನಿಗಳು ಈ ಕಾಳಗವನ್ನು ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿ ಈಗಲೇ ಗುರುತಿಸಿದ್ದು, ರಾವಣನ ಉದಯ ಮತ್ತು ಅವನ ಕ್ರೂರ ಸ್ವಭಾವವನ್ನು ಚಿತ್ರದಲ್ಲಿ ವಿಭಿನ್ನವಾಗಿ ಅನಾವರಣಗೊಳಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಸಂಭಾವನೆ ಪಡೆಯದ ವಿವೇಕ್ ಒಬೆರಾಯ್

ಈ ಚಿತ್ರದ ಮತ್ತೊಂದು ವಿಶೇಷ ಸಂಗತಿಯೆಂದರೆ ವಿವೇಕ್ ಒಬೆರಾಯ್ ತಮ್ಮ ಪಾತ್ರಕ್ಕಾಗಿ ಯಾವುದೇ ಸಂಭಾವನೆ ಪಡೆಯದಿರುವುದು. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ತಮ್ಮ ಸಂಭಾವನೆಯನ್ನು ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ದತ್ತಿ ಕಾರ್ಯಕ್ಕೆ ನೀಡುವಂತೆ ಕೇಳಿದ್ದಾಗಿ ಅವರು ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತೀಯ ಸಿನೆಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿರುವುದರಿಂದ ಈ ಯೋಜನೆಯ ಭಾಗವಾಗಿರುವುದು ಸಂತಸದ ಸಂಗತಿ ಎಂದು ವಿವೇಕ್ ಹೇಳಿದ್ದಾರೆ.

ತಾರಾಗಣದ ಮೇಲೆ ಹೆಚ್ಚಿದ ಕುತೂಹಲ

'ರಾಮಾಯಣ' ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ನಟಿಸಿದ್ದು, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್‌ ಬಿಡುಗಡೆಯಾದ ಬಳಿಕ ಈ ಬಹುನಿರೀಕ್ಷಿತ ಪೌರಾಣಿಕ ಚಿತ್ರಕ್ಕಾಗಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Read More
Next Story