ಕರ್ನಾಟಕದಲ್ಲಿ ಕನ್ನಡ ಪೋಸ್ಟರ್ ಕೇಳುವುದರಲ್ಲಿ ತಪ್ಪೇನಿದೆ? ಚರ್ಚೆಗೆ ಕಾರಣವಾಯ್ತು ರಿಯಲ್ ಸ್ಟಾರ್ ಉಪೇಂದ್ರ ಮಾತು!
x

ನಟ ಉಪೇಂದ್ರ 

ಕರ್ನಾಟಕದಲ್ಲಿ ಕನ್ನಡ ಪೋಸ್ಟರ್ ಕೇಳುವುದರಲ್ಲಿ ತಪ್ಪೇನಿದೆ? ಚರ್ಚೆಗೆ ಕಾರಣವಾಯ್ತು ರಿಯಲ್ ಸ್ಟಾರ್ ಉಪೇಂದ್ರ ಮಾತು!

ಕರ್ನಾಟಕದ ಜನರು ಬೇರೆ ಭಾಷೆಯ ಚಲನಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದರೆ ಅವುಗಳನ್ನು ಪ್ರೋತ್ಸಾಹಿಸಲು ಸಿದ್ಧರಿದ್ದಾರೆ. ಪೋಸ್ಟರ್‌ಗಳಲ್ಲಿ ಸ್ಥಳೀಯ ಭಾಷೆಯನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ.


Click the Play button to hear this message in audio format

ಕರ್ನಾಟಕದಲ್ಲಿ ಇತ್ತೀಚೆಗೆ ಪರಭಾಷಾ ಚಿತ್ರಗಳ, ಅದರಲ್ಲೂ ಪ್ರಮುಖವಾಗಿ ತೆಲುಗು ಸಿನಿಮಾಗಳ ಪೋಸ್ಟರ್ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ 'ರಿಯಲ್ ಸ್ಟಾರ್' ಉಪೇಂದ್ರ ಅವರು ಕನ್ನಡಪರ ಹೋರಾಟಗಾರರ ಪರವಾಗಿ ಬ್ಯಾಟ್ ಬೀಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡದ ಪೋಸ್ಟರ್‌ಗಳನ್ನು ನಿರೀಕ್ಷಿಸುವುದು ಮತ್ತು ಡಬ್ಬಿಂಗ್‌ಗೆ ಒತ್ತಾಯಿಸುವುದು ತಪ್ಪಲ್ಲ ಎಂದು ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ರಾಜ್ಯದ ಕೆಲವು ಚಿತ್ರಮಂದಿರಗಳ ಎದುರು ಕನ್ನಡಕ್ಕೆ ಡಬ್ ಆಗದ ತೆಲುಗು ಚಿತ್ರಗಳ ('ಗೇಮ್ ಚೇಂಜರ್', 'ಹರಿ ಹರ ವೀರ ಮಲ್ಲು', 'ಓಜಿ' ಮುಂತಾದವು) ಪೋಸ್ಟರ್‌ಗಳಲ್ಲಿ ಕನ್ನಡ ಭಾಷೆ ಇಲ್ಲದಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೆ, ಕೆಲವು ಕಡೆ ಪೋಸ್ಟರ್‌ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆಗಳೂ ನಡೆದಿದ್ದವು. ಈ ಬೆಳವಣಿಗೆ ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್ ನಡುವೆ ಪರೋಕ್ಷ ಚರ್ಚೆಗೆ ಕಾರಣವಾಗಿತ್ತು.

ಉಪೇಂದ್ರ ಅವರ ನಿಲುವೇನು?

ತಮ್ಮ ನಟನೆಯ, ರಾಮ್ ಅಭಿನಯದ ಬಹುನಿರೀಕ್ಷಿತ ಆಂಧ್ರ ಕಿಂಗ್ ತಾಲೂಕ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಉಪೇಂದ್ರ, ಭಾಷಾಭಿಮಾನದ ವಿಷಯದಲ್ಲಿ ಕನ್ನಡಿಗರ ಪರ ನಿಂತರು.

"ಪ್ರತಿಯೊಬ್ಬರೂ ತಮ್ಮ ತಾಯ್ನುಡಿಯನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಹೀಗಿರುವಾಗ, ಕರ್ನಾಟಕದಲ್ಲಿ ಬಿಡುಗಡೆಯಾಗುವ ಚಿತ್ರಗಳಿಗೆ ಕನ್ನಡದಲ್ಲಿ ಪೋಸ್ಟರ್‌ಗಳು ಇರಬೇಕು ಅಥವಾ ಪ್ರಚಾರ ಸಾಮಗ್ರಿಗಳಲ್ಲಿ ಸ್ಥಳೀಯ ಭಾಷೆ ಬಳಸಬೇಕು ಎಂದು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಕರ್ನಾಟಕದ ಜನತೆ ಪರಭಾಷಾ ಚಿತ್ರಗಳನ್ನು ದ್ವೇಷಿಸುತ್ತಿಲ್ಲ, ಬದಲಿಗೆ ಅವುಗಳನ್ನು ಕನ್ನಡಕ್ಕೆ ಡಬ್ ಮಾಡಿ ತಂದರೆ ಪ್ರೋತ್ಸಾಹಿಸಲು ಸದಾ ಸಿದ್ಧರಿದ್ದಾರೆ," ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕೆ ಇತ್ತೀಚೆಗೆ 'ಪುಷ್ಪ 2' ಸಿನಿಮಾ ಕರ್ನಾಟಕದಲ್ಲಿ ಗಳಿಸಿದ ಭರ್ಜರಿ ಯಶಸ್ಸನ್ನೇ ಸಾಕ್ಷಿಯಾಗಿ ನೀಡಿದರು.

ಲಾಜಿಕ್ ಮಿಸ್ ಮಾಡಿಕೊಂಡರೇ ಬುದ್ಧಿವಂತ?

ಉಪೇಂದ್ರ ಅವರ ಈ ಹೇಳಿಕೆ ಮಿಶ್ರ ಪ್ರತಿಕ್ರಿಯೆಗೂ ಕಾರಣವಾಗಿದೆ. ನಿರೂಪಕರು, "ನೇರವಾಗಿ ತೆಲುಗಿನಲ್ಲಿಯೇ ಬಿಡುಗಡೆಯಾಗುತ್ತಿರುವ (ಡಬ್ ಆಗದ) ಚಿತ್ರಗಳ ಪೋಸ್ಟರ್‌ಗಳನ್ನು ಗುರಿಯಾಗಿಸುವುದು ಸರಿಯೇ?" ಎಂದು ಕೇಳಿದಾಗ, ಉಪೇಂದ್ರ ಅವರು ಆ ಸೂಕ್ಷ್ಮವನ್ನು ಬದಿಗಿಟ್ಟು ಹೋರಾಟಗಾರರ ಬೇಡಿಕೆ ಸರಿ ಎಂದಷ್ಟೇ ಸಮರ್ಥಿಸಿಕೊಂಡರು ಎಂಬ ಮಾತುಗಳು ಕೇಳಿಬಂದಿವೆ. ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ತೆಲುಗು ಚಿತ್ರಗಳನ್ನು ಮೂಲ ಭಾಷೆಯಲ್ಲೇ ನೋಡುವ ದೊಡ್ಡ ವರ್ಗವಿದೆ. ಹೀಗಿರುವಾಗ, ಡಬ್ ಆಗದ ಚಿತ್ರಕ್ಕೂ ಕನ್ನಡ ಪೋಸ್ಟರ್ ಅನಿವಾರ್ಯವೇ ಎಂಬ ಪ್ರಶ್ನೆ ಎದ್ದಿದೆ.

'ಆಂಧ್ರ ಕಿಂಗ್' ಸೇಫ್ ಮಾಡುವ ತಂತ್ರವೇ?

ಉಪೇಂದ್ರ ಅವರ ಈ ಹೇಳಿಕೆಯ ಹಿಂದೆ ಅವರ ಮುಂಬರುವ ಚಿತ್ರದ ಹಿತಾಸಕ್ತಿಯೂ ಅಡಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ನವೆಂಬರ್ 27ರಂದು ಬಿಡುಗಡೆಯಾಗಲಿರುವ 'ಆಂಧ್ರ ಕಿಂಗ್ ತಾಲೂಕ' ಚಿತ್ರದಲ್ಲಿ ಉಪೇಂದ್ರ ಅವರು 'ಸೂಪರ್‌ಸ್ಟಾರ್' ಆಗಿ ಹಾಗೂ ನಟ ರಾಮ್ 'ಅಭಿಮಾನಿ'ಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಮತ್ತು ಕನ್ನಡ ಎರಡೂ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು, ಬಿಡುಗಡೆಯ ಸಮಯದಲ್ಲಿ ಯಾವುದೇ ಭಾಷಾ ವಿವಾದ ಭುಗಿಲೇಳದಂತೆ ತಡೆಯಲು ಉಪ್ಪಿ ಈ ಮೂಲಕ ಕನ್ನಡಪರ ನಿಲುವು ವ್ಯಕ್ತಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುತ್ತಿರಬಹುದು ಎಂದು ಸಿನಿಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

Read More
Next Story