ಬಿಗ್ ಬಾಸ್ ಕನ್ನಡ 12|ಗ್ರ್ಯಾಂಡ್ ಫಿನಾಲೆಗೂ ಮುನ್ನ ರಾಶಿಕಾ ಶೆಟ್ಟಿ ಅನಿರೀಕ್ಷಿತ ಔಟ್
x
ಬಿಗ್‌ ಬಾಸ್‌ ಸ್ಪರ್ಧಿ ರಾಶಿಕಾ ಶೆಟ್ಟಿ

ಬಿಗ್ ಬಾಸ್ ಕನ್ನಡ 12|ಗ್ರ್ಯಾಂಡ್ ಫಿನಾಲೆಗೂ ಮುನ್ನ ರಾಶಿಕಾ ಶೆಟ್ಟಿ ಅನಿರೀಕ್ಷಿತ ಔಟ್

ಫಿನಾಲೆ ವಾರದಲ್ಲಿ ಕೇವಲ 5 ಅಥವಾ 6 ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುವುದರಿಂದ, ಈ ವಾರದ ಮಧ್ಯದಲ್ಲಿ ಇನ್ನೊಬ್ಬರು ಮನೆಯಿಂದ ಹೊರಹೋಗುವ ಸಾಧ್ಯತೆಯಿದೆ.


Click the Play button to hear this message in audio format

ಕನ್ನಡ ಬಿಗ್‌ಬಾಸ್‌ 12ರ ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ, ಪ್ರಬಲ ಸ್ಪರ್ಧಿ ರಾಶಿಕಾ ಶೆಟ್ಟಿ ಅವರು ಮನೆಯಿಂದ ಹೊರನಡೆದಿದ್ದಾರೆ. ಸ್ಪರ್ಧೆಯು ಅಂತಿಮ ಹಂತಕ್ಕೆ ತಲುಪುತ್ತಿರುವ ಸಮಯದಲ್ಲಿ ನಡೆದ ಈ ಎಲಿಮಿನೇಷನ್ ವೀಕ್ಷಕರಲ್ಲಿ ಭಾರಿ ಆಶ್ಚರ್ಯವನ್ನುಂಟು ಮಾಡಿದೆ.

ವಾರಾಂತ್ಯದ ಸಂಚಿಕೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಯುವಾಗ ಮನೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಹುತೇಕ ಸ್ಪರ್ಧಿಗಳು ನಾಮಿನೇಷನ್‌ನ ಅಪಾಯದ ವಲಯದಲ್ಲಿದ್ದರು. ಅಂತಿಮವಾಗಿ ಸುದೀಪ್‌ ಅವರ ಸಮ್ಮುಖದಲ್ಲಿ ನಡೆದ ಈ ತೀರ್ಪಿನ ವೇಳೆ, ಒಬ್ಬರ ನಂತರ ಒಬ್ಬರು ಸ್ಪರ್ಧಿಗಳು ಸೇಫ್ ಎಂದು ಘೋಷಿಸಲ್ಪಟ್ಟರು. ಅಂತಿಮ ಕ್ಷಣದಲ್ಲಿ ರಾಶಿಕಾ ಶೆಟ್ಟಿ ಮತ್ತು ರಘು ಅವರು ಹೊರನಡೆಯುವ ಭೀತಿಯಲ್ಲಿದ್ದರು. ಆದರೆ ಸಾರ್ವಜನಿಕರ ಓಟ್‌ಗಳ ಆಧಾರದ ಮೇಲೆ ರಶಿಕಾ ಶೆಟ್ಟಿ ಅವರನ್ನು ಮನೆಯಿಂದ ಹೊರನಡೆಯಲಿದ್ದಾರೆ ಎಂದು ಘೋಷಿಸಲಾಯಿತು.

ಈ ಬಿಗ್‌ಬಾಸ್‌ ಕಾರ್ಯಕ್ರಮದ ಉದ್ದಕ್ಕೂ ರಾಶಿಕಾ ಶೆಟ್ಟಿ ಅವರು ಅತ್ಯಂತ ಶಕ್ತಿಶಾಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ವಿಶೇಷವಾಗಿ ದೈಹಿಕ ಮತ್ತು ಮಾನಸಿಕ ಕಾರ್ಯಗಳಲ್ಲಿ ಅವರು ತೋರುತ್ತಿದ್ದ ಜಾಣ್ಮೆ ಹಾಗೂ ದಕ್ಷತೆ ಅವರನ್ನು ಈ ಸೀಸನ್‌ನ ಬಲಿಷ್ಠ ಮಹಿಳಾ ಸ್ಪರ್ಧಿಗಳಲ್ಲಿ ಒಬ್ಬರನ್ನಾಗಿ ಮಾಡಿತ್ತು. ಟಾಸ್ಕ್‌ಗಳ ಸಮಯದಲ್ಲಿ ಅವರು ತೋರುತ್ತಿದ್ದ ನಾಯಕತ್ವದ ಗುಣಗಳು ಮನೆಯ ಸದಸ್ಯರ ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೂ ತೀವ್ರವಾದ ವಾದ-ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳಿಂದಲೂ ಕೂಡಿದ್ದವು. ನಾಮನಿರ್ದೇಶನಗಳ ಸಮಯದಲ್ಲಿ ನಡೆಯುತ್ತಿದ್ದ ಚರ್ಚೆಗಳು ಅವರನ್ನು ಮನೆಯ ರಾಜಕೀಯದ ಕೇಂದ್ರಬಿಂದುವಾಗಿಸಿದ್ದವು.

ರಾಶಿಕಾ ಅವರ ಈ ಹಠಾತ್ ನಿರ್ಗಮನವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಫಿನಾಲೆ ಹಂತಕ್ಕೆ ಬಂದು ಅವರು ಹೊರಬಿದ್ದಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ. ಕೆಲವರು ಈ ನಿರ್ಧಾರ ಅನ್ಯಾಯವೆಂದು ವಾದಿಸುತ್ತಿದ್ದರೆ, ಇನ್ನು ಕೆಲವರು ಅಂತಿಮ ಹಂತದಲ್ಲಿ ಕೇವಲ ಆಟವಷ್ಟೇ ಅಲ್ಲದೆ ಕಾರ್ಯತಂತ್ರ ಮತ್ತು ಸಾರ್ವಜನಿಕರ ಬೆಂಬಲವೂ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಶಿಕಾ ಶೆಟ್ಟಿ ನಿರ್ಗಮನದ ನಂತರ ಬಿಗ್ ಬಾಸ್ ಟ್ರೋಫಿಗಾಗಿ ನಡೆಯುತ್ತಿರುವ ಸ್ಪರ್ಧೆ ಈಗ ಮತ್ತಷ್ಟು ರಂಗೇರಿದೆ. ಅಂತಿಮ ವಾರಕ್ಕೆ ಕಾಲಿಟ್ಟಿರುವ ಉಳಿದ ಸ್ಪರ್ಧಿಗಳು ಟ್ರೋಫಿ ಗೆಲ್ಲಲು ಸಜ್ಜಾಗುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ 12ರ ಗ್ರ್ಯಾಂಡ್ ಫಿನಾಲೆ ಜನವರಿ 18ರಂದು ನಡೆಯುವ ಸಾಧ್ಯತೆಯಿದೆ. ಫಿನಾಲೆ ವಾರದಲ್ಲಿ ಕೇವಲ 5 ಅಥವಾ 6 ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುವುದರಿಂದ, ಈ ವಾರದ ಮಧ್ಯದಲ್ಲಿ ಇನ್ನೊಬ್ಬರು ಮನೆಯಿಂದ ಹೊರಹೋಗುವ ಸಾಧ್ಯತೆಯಿದೆ. ಧನುಷ್ ಗೌಡ ಈ ಸೀಸನ್‌ನ 'ಟಿಕೆಟ್ ಟು ಫಿನಾಲೆ' ಗೆಲ್ಲುವ ಮೂಲಕ ನೇರವಾಗಿ ಫಿನಾಲೆಗೆ ಪ್ರವೇಶ ಪಡೆದಿದ್ದಾರೆ. ಈ ಸೀಸನ್‌ನ ಅತ್ಯಂತ ಜನಪ್ರಿಯ ಸ್ಪರ್ಧಿ, ಕಾಮಿಡಿ ಮತ್ತು ಸಮಾಧಾನದ ಆಟದ ಮೂಲಕ ಸಾರ್ವಜನಿಕ ಮತದಾನದಲ್ಲಿ ಮೊದಲ ಸ್ಥಾನದಲ್ಲಿರುವ ಗಿಲ್ಲಿ ಅವರು ಈ ಬಾರಿ ಟ್ರೋಫಿ ಗೆಲ್ಲಲಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Read More
Next Story