
ಕೊಲ್ಲೂರು ದೇವಿಗೆ ವಜ್ರದ ಕಿರೀಟ ಅರ್ಪಿಸಿದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ
ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಸಮರ್ಪಿಸಿದ ಸಂಗೀತ ನಿರ್ದೇಶಕ ಇಳಯರಾಜ
ನನ್ನದು ಏನು ಇಲ್ಲ. ಎಲ್ಲವೂ ದೈವಿಕ. ತಾಯಿ ಮೂಕಾಂಬಿಕೆಯ ಕೃಪೆ ಮತ್ತು ಆಶೀರ್ವಾದದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಸಂಗೀತ ನಿರ್ದೇಶಕ ಇಳಯರಾಜ ತಿಳಿಸಿದ್ದಾರೆ.
ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕೆ ದೇವಿಗೆ ತಮ್ಮ ಭಕ್ತಿಯ ಸಂಕೇತವಾಗಿ ವಜ್ರದ ಕಿರೀಟ ಅರ್ಪಿಸಿದ್ದಾರೆ.
ಇಳಯರಾಜ ತಮ್ಮ ಜೀವನ ಪರ್ಯಂತ ದುಡಿಮೆಯ ಒಂದು ಭಾಗವನ್ನು ತಾಯಿ ಮೂಕಾಂಬಿಕೆಗೆ ಅರ್ಪಿಸುತ್ತಾ ಬಂದಿದ್ದಾರೆ. ಇದೀಗ 4 ಕೋಟಿ ವೆಚ್ಚದಲ್ಲಿ ತಾಯಿ ಮುಕಾಂಬಿಕೆಗೆ ವಜ್ರದ ಕಿರೀಟ ಹಾಗೂ ಇತರ ಆಭರಣಗಳನ್ನು ಸಮರ್ಪಣೆ ಮಾಡಿದ್ದಾರೆ.
ಆಭರಣಗಳ ಸಮರ್ಪಣಾ ಕಾರ್ಯಕ್ರಮ ಬುಧವಾರ ಅತ್ಯಂತ ಸರಳವಾಗಿ ನಡೆಯಿತು. ಮೆರವಣಿಗೆಯಲ್ಲಿ ಬಂದ ಆಡಳಿತ ಮಂಡಳಿಯವರು ಪೂಜೆ ಸಲ್ಲಿಸಿ, ವಜ್ರದ ಕಿರೀಟವನ್ನು ತಾಯಿಯ ಮುಡಿಗೆ ತೊಡಿಸಿದರು. ಜೊತೆಗೆ ವೀರಭದ್ರ ಸ್ವಾಮಿಗೂ ಬೆಳ್ಳಿಯ ಕಿರೀಟ ಹಾಗೂ ಖಡ್ಗವನ್ನು ಇಳಯರಾಜ ಅವರು ಸಮರ್ಪಿಸಿದರು. ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು. ಇದಕ್ಕೂ ಮೊದಲು ಇಳಯರಾಜ ಅವರು ದೇವಿಗೆ ವಜ್ರಖಚಿತ ಹಸ್ತ ಅರ್ಪಿಸಿದ್ದರು.
ಈ ವೇಳೆ ಮಾತನಾಡಿದ ಇಳಯರಾಜ ಅವರು, ನನ್ನದು ಏನು ಇಲ್ಲ. ಎಲ್ಲವೂ ದೈವಿಕ. ತಾಯಿ ಮೂಕಾಂಬಿಕೆಯ ಕೃಪೆ ಮತ್ತು ಆಶೀರ್ವಾದದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದರು.
ಇಳಯರಾಜ ಅವರ ಮಗ ಕಾರ್ತಿಕ್ ಇಳಯರಾಜ, ಮೊಮ್ಮಗ ಯತೀಶ್ ಇಳಯರಾಜ ಮತ್ತು ಇತರರು ಉಪಸ್ಥಿತರಿದ್ದರು.
ತಾಯಿ ಮೂಕಾಂಬಿಕೆ ಕಲಾಮಾತೆಯಾಗಿದ್ದು, ಇಳಿಯರಾಜರಂತೆ ಜೇಸುದಾಸ್ ಕೂಡ ಮೂಕಾಂಬಿಕೆಯ ಭಕ್ತರಾಗಿದ್ದಾರೆ. ದೇಶದ ಅನೇಕ ಸೆಲೆಬ್ರಿಟಿ ನಟರು, ರಾಜಕಾರಣಿಗಳು ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ದರ್ಶನ ಪಡೆಯುತ್ತಾರೆ.