ಕನ್ನಡದ ಬಗ್ಗೆ ಕಮಲ್‍ ಹಾಸನ್‍ ಹೇಳಿಕೆ; ಕರ್ನಾಟಕದಲ್ಲಿ ‘ಥಗ್‍ ಲೈಫ್‍’ ಬಹಿಷ್ಕಾರಕ್ಕೆ ಆಗ್ರಹ
x

ಕನ್ನಡದ ಬಗ್ಗೆ ಕಮಲ್‍ ಹಾಸನ್‍ ಹೇಳಿಕೆ; ಕರ್ನಾಟಕದಲ್ಲಿ ‘ಥಗ್‍ ಲೈಫ್‍’ ಬಹಿಷ್ಕಾರಕ್ಕೆ ಆಗ್ರಹ

‘ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿತು …’ ಎಂದು ಕಮಲ್‍ ಹಾಸನ್‍ ಅವರ ಹೇಳಿಕೆ ಇದೀಗ ಸಾಕಷ್ಟು ವಿವಾದಕ್ಕೀಡಾಗಿದೆ. ಈ ಬಗ್ಗೆ ಸೋಷಿಯಲ್‍ ಮೀಡಿಯಾದಲ್ಲಿ ಹಲವರು ಆಕ್ರೋಷ ವ್ಯಕ್ತಪಡಿಸಿದ್ದು, ಅವರ ಹೊಸ ಚಿತ್ರ ‘ಥಗ್‍ ಲೈಫ್‍’ನ್ನು ಕರ್ನಾಟಕದಲ್ಲಿ ಬಹಿಷ್ಕರಿಸಬೇಕೆಂದು ಆಗ್ರಹಿಸಿದ್ದಾರೆ.


‘ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿತು …’ ಎಂದು ಕಮಲ್‍ ಹಾಸನ್‍ ಅವರ ಹೇಳಿಕೆ ಇದೀಗ ಸಾಕಷ್ಟು ವಿವಾದಕ್ಕೀಡಾಗಿದೆ. ಈ ಬಗ್ಗೆ ಸೋಷಿಯಲ್‍ ಮೀಡಿಯಾದಲ್ಲಿ ಹಲವರು ಆಕ್ರೋಷ ವ್ಯಕ್ತಪಡಿಸಿದ್ದು, ಅವರ ಹೊಸ ಚಿತ್ರ ‘ಥಗ್‍ ಲೈಫ್‍’ನ್ನು ಕರ್ನಾಟಕದಲ್ಲಿ ಬಹಿಷ್ಕರಿಸಬೇಕೆಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ, ಚೆನ್ನೈನಲ್ಲಿ ನಡೆದ ‘ಥಗ್‍ ಲೈಫ್‍’ ಚಿತ್ರದ ಪ್ರೀ-ರಿಲೀಸ್‍ ಇವೆಂಟ್‍ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡದ ಶಿವರಾಜಕುಮಾರ್‍ ಸಹ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡುವ ಭರದಲ್ಲಿ ‘ಕನ್ನಡವು ತಮಿಳಿನಿಂದ ಹುಟ್ಟಿತು …’ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು. ಅವರ ಈ ಹೇಳಿಕೆ ಹಲವರಿಗೆ ಸಾಕಷ್ಟು ಸಿಟ್ಟು ತಿರಿಸಿದೆ. ಹೀಗೆ ಹೇಳುವ ಮೂಲಕ, ಕಮಲ್‍ ಹಾಸನ್‍ ಅವರು ತಮಿಳು ಭಾಷೆಯು ಕನ್ನಡಕ್ಕಿಂತ ಶ್ರೇಷ್ಠ ಎಂಬ ಭಾವನೆಯನ್ನು ಹೇರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಸೋಷಿಯಲ್‍ ಮೀಡಿಯಾದಲ್ಲಿ ಹಲವರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಈ ಕುರಿತು ಹಲವರು ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್‍ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾನು ಕಮಲ್‍ ಹಾಸನ್‍ ಅವರ ದೊಡ್ಡ ಅಭಿಮಾನಿಯಾಗಿದ್ದರೂ, ಭಾಷೆಯ ವಿಷಯದಲ್ಲಿ ಅವರ ಈ ಅಗೌರವ ಸಹಿಸುವುದಿಲ್ಲ ಎಂದು ಕೆಲವರು ಹೇಳಿದರೆ, ಕಮಲ್‍ ಹಾಸನ್‍ ತಮ್ಮ ಹೇಳಿಕೆಗೆ ಕ್ಷಮೆ ಕೇಳದಿದ್ದರೆ ಜೂನ್‍ 06ರಂದು ಬಿಡುಗಡೆಯಾಗುತ್ತಿರುವ ಅವರ ‘ಥಗ್‍ ಲೈಫ್‍’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು, ಅದಕ್ಕೆ ನಿಷೇಧ ಹೇರಬೇಕು ಎಂದು ಇನ್ನೂ ಕೆಲವರು ಆಗ್ರಹಿಸಿದ್ದಾರೆ. ಸೋಷಿಯಲ್‍ ಮೀಡಿಯಾದಲ್ಲಿ ಬಾಯ್ಕಾಟ್‍ ಥಗ್‍ಲೈಫ್‍ ಎಂಬ ಅಭಿಯಾನವೇ ಪ್ರಾರಂಭವಾಗಿದೆ.

ಕಮಲ್‍ ಹಾಸನ್‍ ಅವರ ಈ ಹೇಳಿಕೆಯ ಕುರಿತು ಕನ್ನಡ ಚಿತ್ರರಂಗದ ಯಾವುದೇ ಸಂಘಟನೆ ಅಥವಾ ಜನಪ್ರಿಯ ನಟ-ನಟಿಯರು ಯಾವುದೇ ಹೇಳಿಕೆ ನೀಡಿಲ್ಲ. ರಾಜಕೀಯ ವಲದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಮಲ್‍ ಹಾಸನ್‍ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ ಅದರ ಹೆಸರಿನಲ್ಲಿ ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆಯಾಗುತ್ತದೆ. ಅದರಲ್ಲೂ ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನೂ ಗೌರವಿಸುವ ಸಂಸ್ಕಾರ ಇರಬೇಕು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ ಕಮಲ್‍ ಹಾಸನ್‍, ತಮ್ಮ ತಮಿಳು ಭಾಷೆಯನ್ನು ವೈಭವಿಕರಿಸುವ ಮತ್ತಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನೂ ಕುಳ್ಳಿರಿಸಿಕೊಂಡು ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ’ ಎಂದು ಹೇಳಿದ್ದಾರೆ.

ಕಮಲ್ ಅವರ ಹೇಳಿಕೆ ಶಿವರಾಜಕುಮಾರ್‍ ಪಾಲಿಗೆ ಬಿಸಿತುಪ್ಪವಾಗಿದೆ. ಏಕೆಂದರೆ, ಶಿವರಾಜಕುಮಾರ್ ಎದುರಲ್ಲೇ ಕಮಲ್‍ ಹಾಸನ್‍ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು. ಹಾಗಾಗಿ, ಈ ವಿಷಯವಾಗಿ ಶಿವರಾಜಕುಮಾರ್ ಯಾಕೆ ಮೌನವಹಸಿದ್ದಾರೆ, ಯಾಕೆ ಈ ಬಗ್ಗೆ ಪ್ರತಿಕ್ರಿಯ ನೀಡುತ್ತಿಲ್ಲ ಎಂದು ಕೆಲವರು ನೇರವಾಗಿಯೇ ಪ್ರಶ್ನಿಸಿದ್ದಾರೆ.

ಕಮಲ್‍ ಹಾಸನ್‍ ಯಾವತ್ತೂ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಗೌರವದ ಮಾತುಗಳನ್ನಾಡಿದ್ದರು. ‘ವಿಕ್ರಮ್‍’ ಚಿತ್ರದ ಪ್ರಚರಕ್ಕೆ ಬೆಂಗಳೂರಿಗೆ ಬಂದಾಗಲೂ ಕರ್ನಾಟಕ ಮತ್ತು ಕನ್ನಡ ಚಿತ್ರರಂಗದ ಒಡನಾಟದ ಬಗ್ಗೆ ಮಾತನಾಡಿದ್ದರು. ‘70ರ ದಶಕದಲ್ಲಿ ಪುಟ್ಟಣ್ಣ ಕಣಗಾಲ್‍ ಚಿತ್ರಗಳು ಬಿಡುಗಡೆಯಾದಾಗ, ಅದನ್ನು ಮೊದಲ ದಿನವೇ ನೋಡುವುದಕ್ಕೆ ನಮ್ಮ ಗುರು ಕೆ. ಬಾಲಚಂದರ್‍ ಬೆಂಗಳೂರಿಗೆ ಕಳುಹಿಸಿಕೊಡುತ್ತಿದ್ದರು. ಬೆಂಗಳೂರಿಗೆ ಬಂದಾಗಲೆಲ್ಲಾ ಬಿ.ವಿ. ಕಾರಂತ್‍ ಮತ್ತು ಗಿರೀಶ್‍ ಕಾರ್ನಾಡ್‍ ಅವರರನ್ನು ಭೇಟಿ ಮಾಡುತ್ತಿದ್ದೆ. ಅವರೊಂದಿಗಿನ ಒಡನಾಟ ಬಹಳ ಚೆನ್ನಾಗಿತ್ತು. ನಾನು ಜನರನ್ನು ಗೌರವಿಸುವುದನ್ನು ಕಲಿತಿದ್ದೇ ಡಾ. ರಾಜಕುಮಾರ್‍ ಅವರನ್ನು ನೋಡಿ. ಅವರಷ್ಟು ವಿನಮ್ರರಾದವರನ್ನು ನೋಡಿಲ್ಲ’ ಎಂದೆಲ್ಲಾ ಹೇಳಿದ್ದರು.

ಹೀಗೆ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದ ಕಮಲ್ ಹಾಸನ್‍ ಹೀಗೆ ಮಾತನಾಡಿದ್ದು ಯಾಕೆ? ಇಷ್ಟಕ್ಕೂ ಎಲ್ಲಾ ಭಾಷೆಗಳೂ ಇನ್ನೊಂದು ಭಾಷೆಯಿಂದ ಯಾವುದೋ ಒಂದು ಕಾರಣಕ್ಕೆ ಸ್ಫೂರ್ತಿ ಪಡೆದಿರುತ್ತವೆ. ಹಾಗಂತ ಯಾವುದೋ ಒಂದು ಭಾಷೆ ಶ್ರೇಷ್ಠ ಎಂದರ್ಥವಲ್ಲ. ಹೀಗಿರುವಾಗ, ಯಾಕೆ ಕಮಲ್‍ ಹಾಸನ್‍ರಂಥ ಹಿರಿಯರು ಇಂಥದ್ದೊಂದು ಬಾಲಿಷ ಮತ್ತು ವಿವಾದಾತ್ಮಕ ಹೇಳಿಕೆ ನೀಡಿದರೋ ಗೊತ್ತಿಲ್ಲ. ಅದರ ಪರಿಣಾಮವಾಗಿ, ಅವರ ಹೊಸ ಚಿತ್ರಕ್ಕೆ ಬಹಿಷ್ಕಾರ ಹಾಕುವ ಮಾತು ಕೇಳಿ ಬರುತ್ತಿದೆ.

ಈ ಹಿಂದೆ, ‘ಬಾಹುಬಲಿ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ತಮಿಳು ನಟ ಸತ್ಯರಾಜ್‍, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಯಾವಾಗ ಚಿತ್ರವನ್ನು ಬ್ಯಾನ್‍ ಮಾಡಬೇಕು ಎಂಬ ಕೂಗು ಕೇಳಿ ಬಂತೋ, ಅವರು ಕ್ಷಮೆ ಕೇಳಿದ್ದರು. ತಮ್ಮ ಮಾತುಗಳಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದ್ದರೆ, ಕ್ಷಮೆ ಕೇಳುವುದಾಗಿ ಹೇಳಿದ್ದರು. ಈಗ ಕಮಲ್‍ ಹಾಸನ್‍ ಸಹ ಕ್ಷಮೆ ಕೇಳಬೇಕು, ಇಲ್ಲವಾದರೆ ‘ಥಗ್‍ ಲೈಫ್‍’ ಬಿಡುಗಡೆ ಮಾಡುವುದಕ್ಕೆ ಬಿಡಬಾರದು ಎಂಬ ಕೂಗು ಕೇಳಿಬರುತ್ತಿದೆ. ಕಮಲ್ ಹಾಸನ್‍ ಕ್ಷಮೆ ಕೇಳುತ್ತಾರಾ? ಕಾದು ನೋಡಬೇಕು.

Read More
Next Story