ರಣವೀರ್ ಸಿಂಗ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ಜೀವ ಬೆದರಿಕೆ
x
ನಟ ರಣವೀರ್‌ ಸಿಂಗ್‌

ರಣವೀರ್ ಸಿಂಗ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ಜೀವ ಬೆದರಿಕೆ

ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಅವರ ಸಿಬ್ಬಂದಿಗೆ ಬಿಷ್ಣೋಯ್ ಗ್ಯಾಂಗ್‌ನ ಶೂಟರ್ ಹ್ಯಾರಿ ಬಾಕ್ಸರ್‌ನಿಂದ ಜೀವ ಬೆದರಿಕೆ ಬಂದಿದೆ.


ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹೊಸ ಮತ್ತು ಗಂಭೀರವಾದ ಬೆದರಿಕೆ ಬಂದಿದೆ. ಈ ಬಾರಿ ಕೇವಲ ರಣವೀರ್ ಮಾತ್ರವಲ್ಲದೆ, ಅವರ ಇಡೀ ಸಿಬ್ಬಂದಿ ಮತ್ತು ಮ್ಯಾನೇಜರ್‌ಗಳನ್ನು ಗುರಿಯಾಗಿಸುವುದಾಗಿ ಗ್ಯಾಂಗ್ ಎಚ್ಚರಿಸಿದೆ.

ಫೆಬ್ರವರಿ 10 ರಂದು ರಣವೀರ್ ಅವರಿಗೆ ಮೊದಲ ಬಾರಿಗೆ 1 ಕೋಟಿ ರೂಪಾಯಿ ಬೇಡಿಕೆಯಿರುವ ವಾಟ್ಸಾಪ್ ವಾಯ್ಸ್ ನೋಟ್ ಬಂದಿತ್ತು. ಈಗ ಬಂದಿರುವ ಎರಡನೇ ವಾಯ್ಸ್ ನೋಟ್‌ನಲ್ಲಿ "ಮಾತು ತಪ್ಪಿದರೆ ಶಿಕ್ಷೆ ಏನು ಎಂದು ತೋರಿಸುತ್ತೇವೆ" ಎಂದು ಬೆದರಿಸಲಾಗಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಅವರ ಹೆಸರನ್ನೂ ಪ್ರಸ್ತಾಪಿಸಿರುವ ಗ್ಯಾಂಗ್, "ಲೈನ್‌ಗೆ ಬನ್ನಿ, ಇಲ್ಲದಿದ್ದರೆ ಬಾಲಿವುಡ್ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಸಶಸ್ತ್ರ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಚಿತ್ರ 'ಧುರಂಧರ್: ದಿ ರಿವೇಂಜ್' ಮಾರ್ಚ್ 19 ರಂದು ಬಿಡುಗಡೆಯಾಗಲಿದ್ದು, ಈ ಸಮಯದಲ್ಲಿ ಈ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಯಾರು ಈ ಹ್ಯಾರಿ ಬಾಕ್ಸರ್?

ಪೊಲೀಸರ ಮೂಲಗಳ ಪ್ರಕಾರ, ಈ ಬೆದರಿಕೆ ಕರೆಗಳ ಹಿಂದೆ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಶೂಟರ್ ಹ್ಯಾರಿ ಬಾಕ್ಸರ್ ಎಂಬಾತನ ಕೈವಾಡವಿದೆ. ಈತ ಕೆನಡಾ ಅಥವಾ ಯುರೋಪ್‌ನಲ್ಲಿ ಕುಳಿತು ಭಾರತದ ಸೆಲೆಬ್ರಿಟಿಗಳಿಗೆ ಇಂಟರ್ನೆಟ್ ಕರೆಗಳ ಮೂಲಕ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಈ ಹಿಂದೆ ಗಾಯಕ ಎಪಿ ಧಿಲ್ಲೋನ್ ಅವರ ಮನೆಯ ಮೇಲೆ ನಡೆದ ಗುಂಡಿನ ದಾಳಿಯಲ್ಲೂ ಈತನ ಹೆಸರು ಕೇಳಿಬಂದಿತ್ತು.

ಸಿಬ್ಬಂದಿಗಳೇ ಸಾಫ್ಟ್ ಟಾರ್ಗೆಟ್

ಸಾಮಾನ್ಯವಾಗಿ ಗ್ಯಾಂಗ್‌ಸ್ಟರ್‌ಗಳು ನಟರನ್ನು ನೇರವಾಗಿ ಟಾರ್ಗೆಟ್ ಮಾಡುತ್ತಾರೆ. ಆದರೆ ಈ ಬಾರಿ ಹ್ಯಾರಿ ಬಾಕ್ಸರ್ ಒಂದು ಹೆಜ್ಜೆ ಮುಂದೆ ಹೋಗಿ, ರಣವೀರ್ ಅವರ ಬೌನ್ಸರ್‌ಗಳು, ಡ್ರೈವರ್‌ಗಳು ಮತ್ತು ವೈಯಕ್ತಿಕ ಮ್ಯಾನೇಜರ್‌ಗಳ ವಿವರಗಳನ್ನು ತಾನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. "ನೀನು ಪೊಲೀಸರ ಹತ್ತಿರ ಹೋಗು ಎಂದು ಬೇರೆಯವರಿಗೆ ಬುದ್ಧಿ ಹೇಳುತ್ತೀಯಾ? ಈಗ ನಿನ್ನ ಮ್ಯಾನೇಜರ್‌ಗಳ ಕುಟುಂಬಕ್ಕೆ ಏನಾಗುತ್ತದೆ ನೋಡು" ಎಂದು ಬೆದರಿಸಿರುವುದು ರಣವೀರ್ ತಂಡದಲ್ಲಿ ಆತಂಕ ಮೂಡಿಸಿದೆ.

ಬಾಲಿವುಡ್‌ನ ಇತರರಿಗೂ ಎಚ್ಚರಿಕೆ

ವಾಯ್ಸ್ ನೋಟ್‌ನಲ್ಲಿ ಕೇವಲ ರಣವೀರ್ ಮಾತ್ರವಲ್ಲದೆ, ಇಡೀ ಬಾಲಿವುಡ್ ನಟ-ನಟಿಯರಿಗೆ ಎಚ್ಚರಿಕೆ ನೀಡಲಾಗಿದೆ. "ಲೈನ್‌ಗೆ ಬನ್ನಿ" ಎನ್ನುವ ಪದವನ್ನು ಬಳಸುವ ಮೂಲಕ, ಬಾಲಿವುಡ್ ಮಂದಿ ತಮ್ಮ ಅಣತಿಯಂತೆ ನಡೆಯಬೇಕು ಎಂಬ ಸಂದೇಶವನ್ನು ಗ್ಯಾಂಗ್ ರವಾನಿಸಿದೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರಿಗೂ ಇಂತಹದ್ದೇ ಬೆದರಿಕೆಗಳು ಬಂದಿದ್ದವು ಎಂಬುದು ಇಲ್ಲಿ ಗಮನಾರ್ಹ.

ಮುಂಬೈ ಪೊಲೀಸರ ರಣತಂತ್ರ

ದಾದರ್ ಪೊಲೀಸರು ಮತ್ತು ಮುಂಬೈ ಕ್ರೈಂ ಬ್ರಾಂಚ್ ರಣವೀರ್ ಅವರ ವಾಸಸ್ಥಳದ ಸುತ್ತಮುತ್ತಲ CCTV ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ರಣವೀರ್ ಸಿಂಗ್ ಅವರ ಫೋನ್‌ನಲ್ಲಿ ಬಂದಿರುವ ವಾಯ್ಸ್ ನೋಟ್‌ನ IP ಅಡ್ರೆಸ್ ಪತ್ತೆಹಚ್ಚಲು ಸೈಬರ್ ಕ್ರೈಂ ವಿಭಾಗ ಶ್ರಮಿಸುತ್ತಿದೆ. ರಣವೀರ್ ಮತ್ತು ದೀಪಿಕಾ ಅವರಿಗೆ 'Y+' ಕೆಟಗರಿ ಭದ್ರತೆ ನೀಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

Read More
Next Story