
ರಚಿತಾ ರಾಮ್ ವಿರುದ್ಧ ದೂರು ದಾಖಲಿಸಿದ ನಿರ್ದೇಶಕ ನಾಗಶೇಖರ್
ರಚಿತಾ ಸ್ಪಂದಿಸುತ್ತಿಲ್ಲ ಎಂದಿರುವ ನಾಗಶೇಖರ್, ‘ಜನವರಿಯಲ್ಲಿ ಮೊದಲ ಬಾರಿಗೆ ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿ ಸಿಕ್ಕಿದ್ದು ಬಿಟ್ಟಿರೆ, ಆ ನಂತರ ಒಂದು ಫೋನ್, ಮೆಸೇಜ್ ಯಾವುದೂ ಇಲ್ಲ,ʼ ಎಂದಿದ್ದಾರೆ.
ನಟ-ನಿರ್ದೇಶಕ ನಾಗಶೇಖರ್ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ತಮ್ಮ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ನಾಯಕಿ ಚಿತ್ರದ ಪ್ರಚಾರಕ್ಕೆ ಬರದೇ ಇರುವುದು. ಚಿತ್ರ ಜೂನ್ 06ರಂದು ಚಿತ್ರ ಮರುಬಿಡುಗಡೆಯಾಗಿತ್ತು. ಅದಕ್ಕೂ ಮೊದಲು ಜನವರಿ 17ರಂದು ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಎರಡೂ ಬಾರಿ ರಚಿತಾ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ. ಚಿತ್ರದ ಪತ್ರಿಕಾಗೋಷ್ಠಿಗಳಲ್ಲಿ, ಇವೆಂಟ್ಗಳಲ್ಲಿ ಭಾಗವಹಿಸಲಿಲ್ಲ. ಹಾಗೆಯೇ, ಚಿತ್ರದ ಬಗ್ಗೆ ಮಾತನಾಡಿಲ್ಲ. ರಚಿತಾ ಮತ್ತು ಚಿತ್ರತಂಡದವರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ರಚಿತಾ ಚಿತ್ರತಂಡದಿಂದ ಅಂತರ ಕಾಯ್ದುಕೊಂಡಿದ್ದಾರೆ.
ರಚಿತಾ ವಿರುದ್ಧ ನಾಗಶೇಖರ್ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ತಮ್ಮ ಚಿತ್ರದ ಪ್ರಚಾರಕ್ಕೆ ರಚಿತಾ ಬರದೇ ಆಟ ಆಡಿಸುತ್ತಿದ್ದಾರೆ ಎಂದು ಅವರ ಮೇಲೆ ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ರಚಿತಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಾಗಶೇಖರ್, ‘ಇದಕ್ಕೂ ಮೊದಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದೆವು. ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್ ಅವರ ಹತ್ತಿರ ಸಮಸ್ಯೆ ಹೇಳಿಕೊಂಡಿದ್ದೆವು. ಅವರು ಸಹ ಮಾತನಾಡಿ ವಿಫಲರಾಗಿದ್ದಾರೆ. ನಿರ್ಮಾಪಕರು ಸಿನಿಮಾಗೆ ಕೋಟ್ಯಂತರ ಬಂಡವಾಳ ಹಾಕಿರುತ್ತಾರೆ. ಕಲಾವಿದರಿಗೆ ಸಂಭಾವನೆ, ಗೌರವ, ಊಟ ಎಲ್ಲವೂ ಕೊಟ್ಟಿರುತ್ತಾರೆ. ಕಲಾವಿದರು ಬರೀ ಸಿನಿಮಾದಲ್ಲಿ ನಟಿಸುವುದಷ್ಟೇ ಅಲ್ಲ, ನನ್ನ ಸಿನಿಮಾ ಗೆಲ್ಲಬೇಕು ಅಂತ ನಮ್ಮ ಜೊತೆಗೆ ಇರಬೇಕು. ಆದರೆ, ಅವರು ಇದುವರೆಗೂ ಪ್ರಚಾರಕ್ಕೆ ಬನ್ನಿ ಎಂಬ ನಮ್ಮ ಮನವಿಗೆ ಸ್ಪಂದಿಸಿಲ್ಲ. ಹಾಗಾಗಿ, ಕಲಾವಿದರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ರಾಕ್ಲೈನ್ ವೆಂಕಟೇಶ್ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಮನವೊಲಿಸುವ ಪ್ರಯತ್ನವೇ ಇಲ್ಲ. ನಮ್ಮ ನಡುವೆ ಯಾವುದೇ ಗಲಾಟೆ ಆಗಿಲ್ಲ. ನಮ್ಮಿಂದ ಯಾವುದೇ ತೊಂದರೆ, ತಪ್ಪು ಆಗಿಲ್ಲ. ಹಾಗಿರುವಾಗ, ಯಾಕೆ ಪ್ರಚಾರಕ್ಕೆ ಬರುತ್ತಿಲ್ಲ ಗೊತ್ತಿಲ್ಲ. ಅಂಥವರಿಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ಅವಕಾಶ ಮಾಡಿಕೊಡಬಾರದು ಮತ್ತು ಅಂಥವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ದೂರು ಕೊಡುತ್ತಿದ್ದೇನೆ’ ಎಂದರು.
ರಚಿತಾ ಸ್ಪಂದಿಸುತ್ತಿಲ್ಲ ಎಂದಿರುವ ನಾಗಶೇಖರ್, ‘ಜನವರಿಯಲ್ಲಿ ಮೊದಲ ಬಾರಿಗೆ ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿ ಸಿಕ್ಕಿದ್ದು ಬಿಟ್ಟಿರೆ, ಆ ನಂತರ ಒಂದು ಫೋನ್, ಮೆಸೇಜ್ ಯಾವುದೂ ಇಲ್ಲ. ಆರಂಭದಿಂದಲೂ ನಾವು ಅವರ ಮ್ಯಾನೇಜರ್ ಹತ್ತಿರ ಮಾತನಾಡಿಕೊಂಡು ಬಂದಿದ್ದೆವು. ಅವರು ಸಿಗುತ್ತಿಲ್ಲ, ಬ್ಯುಸಿ ಇದ್ದಾರೆ ಎಂದೆಲ್ಲಾ ಹೇಳುತ್ತಿದ್ದಾರೆ. ನಾನು 150 ಸಿನಿಮಾಗಳಲ್ಲಿ ನಟಿಸಿದ್ದೇನೆ. ವಿಷ್ಣುವರ್ಧನ್ ಅವರಿಂದ ಹಿಡಿದು ವಿನೋದ್ ಪ್ರಭಾಕರ್ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಎರಡೆರಡು ಕಾಲ್ಶೀಟ್ನಲ್ಲಿ ಕೆಲಸ ಮಾಡಿದ್ದೇನೆ. ಒಂದು ಸಿನಿಮಾದ ಪ್ರಮೋಷನ್ಗೆ ಹೋಗೋಕೆ ಆಗದಷ್ಟು ಬ್ಯುಸಿ ಇರುವ ಯಾರನ್ನೂ ನಾನು ನೋಡಿಲ್ಲ. ಶಿವಣ್ಣ ತಮ್ಮ ಸಿನಿಮಾ ಪ್ರಮೋಷನ್ಗೆ ಹೋಗುವುದರ ಜೊತೆಗೆ ಬೇರೆಯವರ ಸಿನಿಮಾ ಪ್ರಮೋಷನ್ಗೂ ಹೋಗುತ್ತಾರೆ. ಉಪೇಂದ್ರ ಬರುತ್ತಾರೆ. ಬೇರೆಯವರ ಸಿನಿಮಾ ಗೆಲ್ಲಬೇಕು ಎಂದು ಪ್ರೋತ್ಸಾಹಿಸುತ್ತಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಎಲ್ಲರೂ ನಮ್ಮ ಚಿತ್ರವನ್ನು ಸದ್ಯದಲ್ಲೇ ನೋಡುತ್ತಿದ್ದಾರೆ. ಅವರ್ಯಾರಿಗೂ ನಮ್ಮ ಚಿತ್ರಕ್ಕೂ ಸಂಬಂಧವೇ ಇಲ್ಲ. ಅವರಿಗೂ ಭಾಷೆಗೂ ಅಷ್ಟೇ ಸಂಬಂಧ. ನಮ್ಮ ಭಾಷೆಯ ಸಿನಿಮಾಗಳು ಗೆಲ್ಲಬೇಕು ಎಂಬ ಕಾರಣಕ್ಕೆ ಅವರು ನಮ್ಮ ಚಿತ್ರವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಬೇರೆಯವರು ಇಷ್ಟೆಲ್ಲಾ ಮಾಡುವಾಗ ನಮ್ಮ ಚಿತ್ರದ ನಾಯಕಿ ಬರದೇ ಇರುವುದಕ್ಕೇ ಏನು ಹೇಳಬೇಕು?’ ಎಂದು ಪ್ರಶ್ನಿಸಿದರು.
ತಮ್ಮ ಇಷ್ಟು ಚಿತ್ರಗಳಲ್ಲಿ ಯಾವ ಚಿತ್ರದಲ್ಲೂ, ಯಾವ ನಾಯಕಿಯಿಂದಲೂ ಸಮಸ್ಯೆ ಆಗಿಲ್ಲ ಎನ್ನುವ ನಾಗಶೇಖರ್, ‘ಚಿತ್ರ ಬಿಡುಗಡೆಯಾಗಿ 12 ದಿನಗಳಾಗಿವೆ. 60 ದಿನಗಳಿಂದ ಪ್ರಚಾರ ಮಾಡುತ್ತಿದ್ದೇವೆ. 70ಕ್ಕೂ ಹೆಚ್ಚು ದಿನಗಳಲ್ಲಿ ಒಂದು ದಿನ ಸಹ ಫ್ರೀ ಇಲ್ಲವಾ? ಚಿತ್ರದ ಪತ್ರಿಕಾಗೋಷ್ಠಿ ಮಾಡಬೇಕು. ನೀವು ಫ್ರೀ ಇರುವಾಗ ಡೇಟ್ ಕೊಡಿ ಎಂದರೆ ಪ್ರತಿಕ್ರಿಯೆ ಸಿಗುತ್ತಿಲ್ಲ. ನಿರ್ಮಾಪಕರು ಕೋಟ್ಯಂತರ ಬಂಡವಾಳ ಹಾಕಿ ಸಿನಿಮಾ ಮಾಡಿದ್ದಾರೆ. ಸಾಕಷ್ಟು ಕಷ್ಟಪಡುತ್ತಿದ್ದಾರೆ. ರಚಿತಾ ಯಾಕೆ ಬರುತ್ತಿಲ್ಲ ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ. ಮಾಧ್ಯಮದವರು ಕೇಳುತ್ತಿದ್ದಾರೆ. ಅವರಿಗೆ ಉತ್ತರ ಏನು ಹೇಳೋದು? ನಾನು ಇದುವರೆಗೂ 11 ಸಿನಿಮಾಗಳನ್ನು ಮಾಡಿದ್ದೇನೆ. ರಮ್ಯಾ, ನಿತ್ಯ ಮೆನನ್, ಭಾವನಾ ಮೆನನ್, ತಮನ್ನಾ ಮುಂತಾದವರ ಜೊತೆಗೆ ಕೆಲಸ ಮಾಡಿದ್ದೇನೆ. ಸಿನಿಮಾ ಪ್ರಚಾರದ ವಿಷಯಕ್ಕೆ ಬಂದರೆ ಯಾರೂ ನಮಗೆ ಸಮಸ್ಯೆ ಮಾಡಿಲ್ಲ. ಇವರಿಗೇನಾಗಿದೆ ಎನ್ನುವ ಕ್ಲಾರಿಟಿ ನಮಗೆ ಬೇಕು. ಹಾಗಾಗಿ, ವಾಣಿಜ್ಯ ಮಂಡಳಿ ಅವರನ್ನು ಕರೆಸಿ ಬುದ್ಧಿ ಹೇಳಿ, ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ಅನ್ಯಾಯ ಯಾವ ಚಿತ್ರತಂಡಕ್ಕೂ ಆಗಬಾರದು’ ಎಂದರು.
ಛಲವಾದಿ ಕುಮಾರ್ ನಿರ್ಮಾಣದ ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಸಂಪತ್ ರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.