
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ ತಮ್ಮ ವಿವಾಹದ ಒಂದು ತಿಂಗಳ ಸಂಭ್ರಮಾಚರಣೆಯ ನಂತರ ಇದೀಗ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ.
VIROSH| ಹನಿಮೂನ್ ನಂತರ ಅನಂತಪುರದಲ್ಲಿ 'ರಣಬಾಲಿ', ರಶ್ಮಿಕಾ ವಿಜಯ್ ಸಂಭ್ರಮ
ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆ ನಂತರ 'ರಣಬಾಲಿ' ಚಿತ್ರೀಕರಣಕ್ಕೆ ಮರಳಿದ್ದಾರೆ. ಇವರ ಮೊದಲ ತಿಂಗಳ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಹಾಗೂ ಸಿನಿಮಾ ಅಪ್ಡೇಟ್ ಇಲ್ಲಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ ತಮ್ಮ ವಿವಾಹದ ಒಂದು ತಿಂಗಳ ಸಂಭ್ರಮಾಚರಣೆಯ ನಂತರ ಇದೀಗ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇದೀಗ ಅನಂತಪುರದಲ್ಲಿ ನಡೆಯುತ್ತಿರುವ ತಮ್ಮ ಮುಂದಿನ ಚಿತ್ರ 'ರಣಬಾಲಿ' ಸೆಟ್ಗೆ ಈ ನವದಂಪತಿ ಆಗಮಿಸಿದ್ದು, ಅಲ್ಲಿ ಅವರಿಗೆ ಆರತಿ ಬೆಳಗುವ ಮೂಲಕ ಭವ್ಯವಾಗಿ ಸ್ವಾಗತಿಸಲಾಗಿದೆ.
ಮದುವೆಯ ನಂತರ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಈ ಜೋಡಿ, ಶೂಟಿಂಗ್ ಆರಂಭಿಸುವ ಮೊದಲು ಹಣೆಗೆ ತಿಲಕ ಇಟ್ಟುಕೊಂಡು ಕ್ಯಾಶುವಲ್ ಉಡುಪಿನಲ್ಲಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಮೊದಲ ತಿಂಗಳ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ವಿಜಯ್ ದೇವರಕೊಂಡ ಅವರು ಮದುವೆಯ ಅಪರೂಪದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಕೆಲವು ಪ್ರಮುಖ ತಿರುವುಗಳು ಎದುರಾಗುತ್ತವೆ ಎಂದು ಬರೆದುಕೊಂಡಿರುವ ಅವರು, ತಮ್ಮ ಮದುವೆಯನ್ನು ಸ್ಮರಣೀಯವಾಗಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ವೃತ್ತಿಜೀವನದ ವಿಷಯಕ್ಕೆ ಬಂದರೆ, ರಾಹುಲ್ ಸಾಂಕೃತ್ಯನ್ ನಿರ್ದೇಶನದ 'ರಣಬಾಲಿ' ಚಿತ್ರವು ಸೆಪ್ಟೆಂಬರ್ 11, ರಂದು ತೆರೆಕಾಣಲು ಸಿದ್ಧವಾಗಿದೆ. ಇದಲ್ಲದೆ ವಿಜಯ್ ದೇವರಕೊಂಡ ಅವರು 'ರೌಡಿ ಜನಾರ್ದನ' ಎಂಬ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಡಿಸೆಂಬರ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನ 'ಕಾಕ್ಟೇಲ್ 2' ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೂನ್ ಅವರೊಂದಿಗೆ ನಟಿಸುತ್ತಿದ್ದಾರೆ. ಜೊತೆಗೆ ಅಟ್ಲಿ ಮತ್ತು ಅಲ್ಲು ಅರ್ಜುನ್ ಅವರ ಕಾಂಬಿನೇಷನ್ನ ಬಹುನಿರೀಕ್ಷಿತ ಸಿನಿಮಾದಲ್ಲಿಯೂ ರಶ್ಮಿಕಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಗುರುವಾರವಷ್ಟೇ ಈ ಜೋಡಿ ಮದುವೆಯ ಒಂದು ತಿಂಗಳ ನೆನಪಿಗಾಗಿ ವಿಜಯ್ ದೇವರಕೊಂಡ ಅವರು ಸಂಗೀತ ಮತ್ತು ರಿಸೆಪ್ಷನ್ ಕಾರ್ಯಕ್ರಮದ ಕೆಲವು ಅನ್ಸೀನ್ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿ, "ಜೀವನದಲ್ಲಿ ಕೆಲವು ದೊಡ್ಡ ಕ್ಷಣಗಳು ಬರುತ್ತವೆ, ಅವುಗಳನ್ನು ನಾವು ಎದುರಿಸಲೇಬೇಕು. ಆ ಕ್ಷಣಗಳು ಕಣ್ಮುಚ್ಚಿ ಬಿಡುವುದರೊಳಗೆ ಕಳೆದುಹೋಗುತ್ತವೆ. ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಆಚರಿಸಿದರೆ, ಆ ನೆನಪುಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ" ಎಂದು ಬರೆದುಕೊಂಡಿದ್ದರು.
ತಮ್ಮ ಮದುವೆಯನ್ನು ಅವಿಸ್ಮರಣೀಯವಾಗಿಸಿದ ಮೂವರು ಮಹಿಳೆಯರಿಗೆ ವಿಜಯ್ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಮೊದಲನೆಯದಾಗಿ, ತಮಗೆ ಬೇಕಾದ ವಿನ್ಯಾಸದ ಆಭರಣಗಳನ್ನು ಸಿದ್ಧಪಡಿಸಿಕೊಟ್ಟ ಆಭರಣ ವಿನ್ಯಾಸಕಿ ಅರ್ಪಿತಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಎರಡನೆಯದಾಗಿ, ತಮ್ಮ ಆಪ್ತ ಗೆಳತಿ ಐಶ್ವರ್ಯಾ ಅವರ ಬಗ್ಗೆ ಬರೆದಿರುವ ವಿಜಯ್, ಮದುವೆಯ ಸ್ಥಳದ ಆಯ್ಕೆಯಿಂದ ಹಿಡಿದು ಪ್ರತಿಯೊಂದು ಹಂತದಲ್ಲೂ ಅವರು ಜೊತೆಗಿದ್ದರು ಎಂದು ಸ್ಮರಿಸಿದ್ದಾರೆ. ಅವರ ಮೇಲಿನ ಗೌರವಾರ್ಥವಾಗಿ ರಿಸೆಪ್ಷನ್ ದಿನದಂದು ವಿಜಯ್ ಅವರು ಐಶ್ವರ್ಯಾ ಅವರ ಕಾಲುಂಗುರಗಳನ್ನೇ ನೆಕ್ಲೇಸ್ ಮತ್ತು ಬ್ರೇಸ್ಲೆಟ್ ಆಗಿ ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಮೂರನೆಯದಾಗಿ, ಮದುವೆಯ ಯೋಜಕಿ (ವೆಡ್ಡಿಂಗ್ ಪ್ಲಾನರ್) ಪ್ರಿಯಾ ಅವರ ಶ್ರಮವನ್ನು ಕೊಂಡಾಡಿದ್ದು, ಅವರು ಈಗ ನಮ್ಮ ಕುಟುಂಬದ ಸದಸ್ಯರಂತಾಗಿದ್ದಾರೆ ಎಂದು ತಿಳಿಸಿದ್ದರು.
ರಶ್ಮಿಕಾ ಮಂದಣ್ಣ ಭಾವುಕ ನುಡಿ
ಇತ್ತ ರಶ್ಮಿಕಾ ಮಂದಣ್ಣ ಕೂಡ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. "ನಾವು ಮದುವೆಯಾಗಿ ಆಗಲೇ ಒಂದು ತಿಂಗಳು ಕಳೆಯಿತು ಎಂದರೆ ನಂಬಲಾಗುತ್ತಿಲ್ಲ. ಮದುವೆ ಎಂಬುದು ಒಂದು ಕಾಲದಲ್ಲಿ ದೂರದ ಆಲೋಚನೆಯಾಗಿತ್ತು, ಆದರೆ ಈಗ ಅದು ನಿಜವಾಗಿದೆ. ಈ ಸುಂದರ ಪ್ರಯಾಣದಲ್ಲಿ ನಮಗೆ ಬೆಂಬಲವಾಗಿ ನಿಂತ ಮಹಿಳೆಯರೇ ನನ್ನ ಪಾಲಿನ ಸೈನಿಕರು. ಈ ಪ್ರೀತಿ ಶಾಶ್ವತವಾದದ್ದು" ಎಂದು ರಶ್ಮಿಕಾ ಬರೆದುಕೊಂಡಿದ್ದರು.
ಸದ್ಯ ಈ ದಂಪತಿಗಳು ತಮ್ಮ ಹನಿಮೂನ್ ವಿರಾಮದ ನಂತರ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಶೀಘ್ರದಲ್ಲೇ 'ರಣಬಾಲಿ' ಚಿತ್ರದ ಮೂಲಕ ತೆರೆಯ ಮೇಲೆ ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ.

