
ಪ್ರಕಾಶ್ ರಾಜ್ ಅವರು ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಚಿತ್ರದ ಬಗ್ಗೆ ವ್ಯಂಗ್ಯವಾಡಿದ್ದು, ಅಲ್ಲು ಅರ್ಜುನ್ ಮತ್ತು ಜೂನಿಯರ್ ಎನ್ಟಿಆರ್ ಅವರ ಮೆಚ್ಚುಗೆಯನ್ನು ಟೀಕಿಸಿದ್ದಾರೆ.
Prakash raj| ಧುರಂಧರ್ 2 ವಿರುದ್ಧ ಪ್ರಕಾಶ್ ರಾಜ್ ಕಿಡಿ: ದಕ್ಷಿಣದ ಸ್ಟಾರ್ ನಟರ ನಡೆಯ ಬಗ್ಗೆ ಅಸಮಾಧಾನ
ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ಅವರ 'ಧುರಂಧರ್: ದಿ ರಿವೆಂಜ್' ಚಿತ್ರದ ಕುರಿತು ನಟ ಪ್ರಕಾಶ್ ರಾಜ್ ಹಂಚಿಕೊಂಡಿರುವ ವಿಮರ್ಶಾತ್ಮಕ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನ, ಸ್ಪೈ-ಥ್ರಿಲ್ಲರ್ 'ಧುರಂಧರ್: ದಿ ರಿವೆಂಜ್' ಸಿನಿಮಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ನಟ ಪ್ರಕಾಶ್ ರಾಜ್ ಈ ಚಿತ್ರದ ಬಗ್ಗೆ ವ್ಯಂಗ್ಯವಾಡಿದ್ದು, ಚಿತ್ರವನ್ನು ಹೊಗಳುತ್ತಿರುವ ದಕ್ಷಿಣ ಭಾರತದ ಖ್ಯಾತ ನಟರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಕೇವಲ ಪ್ರಚಾರಕ್ಕಾಗಿ ಮಾಡಲ್ಪಟ್ಟಿದೆ ಎಂಬ ಟೀಕೆಗಳ ನಡುವೆಯೇ ಪ್ರಕಾಶ್ ರಾಜ್ ಅವರ ಈ ಹೇಳಿಕೆಗಳು ಭಾರೀ ವೈರಲ್ ಆಗುತ್ತಿವೆ.
ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ 1961ರ 'ಹಮ್ ದೋನೋ' ಚಿತ್ರದ 'ಅಭಿ ನಾ ಜಾವೋ ಛೋಡ್ ಕರ್' ಎಂಬ ಹಳೆಯ ಹಾಡನ್ನು ಹಂಚಿಕೊಂಡಿರುವ ಪ್ರಕಾಶ್ ರಾಜ್, "ನಾನು ಧುರಂಧರ್ನಿಂದ ಬಹಳ ದೂರವಿದ್ದೇನೆ, ನೀವು ಹೇಗಿದ್ದೀರಿ?" ಎಂದು ಪರೋಕ್ಷವಾಗಿ ಚಿತ್ರವನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್, ಮಹೇಶ್ ಬಾಬು ಮತ್ತು ವಿಜಯ್ ದೇವರಕೊಂಡ ಅವರಂತಹ ಸ್ಟಾರ್ ನಟರು ಸಿನಿಮಾವನ್ನು ಹೊಗಳಿದ್ದನ್ನು ಪ್ರಶ್ನಿಸಿರುವ ಪೋಸ್ಟ್ ಒಂದನ್ನು ಮರುಹಂಚಿಕೊಂಡಿರುವ ಅವರು, ಕೃತಜ್ಞತೆಯ ಹಂಗುಗಳು ಈಗ ದಕ್ಷಿಣಕ್ಕೂ ಹರಡುತ್ತಿವೆ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.
ದಕ್ಷಿಣದ ಸ್ಟಾರ್ಗಳ ಮೆಚ್ಚುಗೆ
ಈ ನಡುವೆ, ರಾಮ್ ಚರಣ್ ಅವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿರ್ದೇಶಕ ಆದಿತ್ಯ ಧರ್ ಅವರ ಕೆಲಸ ಮತ್ತು ರಣವೀರ್ ಸಿಂಗ್ ಅವರ ನಟನೆಯನ್ನು ಶ್ಲಾಘಿಸಿದ್ದಾರೆ. "ಧುರಂಧರ್ 2 ಸಿನಿಮಾ ಅತ್ಯಂತ ಪ್ರಭಾವಶಾಲಿ ಮತ್ತು ಗಟ್ಟಿಯಾದ ಕಥಾಹಂದರ ಹೊಂದಿದೆ. ರಣವೀರ್ ಅದ್ಭುತವಾಗಿ ನಟಿಸಿದ್ದಾರೆ" ಎಂದು ಅವರು ಬರೆದುಕೊಂಡಿದ್ದರು. ಇದೇ ರೀತಿಯಲ್ಲಿ ಇತರ ತೆಲುಗು ಸ್ಟಾರ್ ನಟರು ಕೂಡ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು.
ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಕೂಡ ಈ ಚಿತ್ರದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಆದಿತ್ಯ ಧರ್ ಅವರು ಈ ಹಿಂದೆ ಮಾಡಿದ್ದ ಚಿತ್ರಕ್ಕಿಂತ ಈ ಬಾರಿ ಇನ್ನೂ ಸ್ಪಷ್ಟವಾಗಿ ರಾಜಕೀಯ ಪ್ರಚಾರದ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ಈ ಹಿಂದೆ ಇದು ಸೂಕ್ಷ್ಮವಾಗಿತ್ತು, ಆದರೆ ಈ ಬಾರಿ ಅತಿ ವಿಶ್ವಾಸದಿಂದ ನೇರವಾಗಿ ಮಾಡಲಾಗಿದೆ" ಎಂದು ಅವರು ಟೀಕಿಸಿದ್ದಾರೆ.
ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇದು 2025ರಲ್ಲಿ ತೆರೆಕಂಡಿದ್ದ 'ಧುರಂಧರ್' ಸಿನಿಮಾದ ಮುಂದುವರಿದ ಭಾಗವಾಗಿದೆ.

