
ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದ ಬಿಗ್ ಅಪ್ಡೇಟ್! ಹನುಮಾನ್ ಜಯಂತಿಯಂದು ಶ್ರೀರಾಮನ ಮೊದಲ ನೋಟ ಬಿಡುಗಡೆಯಾಗಲಿದೆ.
Ramayana| ರಣಬೀರ್ ಕಪೂರ್ ಅವರ 'ರಾಮ'ನ ಅವತಾರಕ್ಕೆ ಮುಹೂರ್ತ ಫಿಕ್ಸ್
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರತಂಡದಿಂದ ಕೊನೆಗೂ ಸಿಹಿ ಸುದ್ದಿ ಹೊರಬಿದ್ದಿದೆ. ಹನುಮ ಜಯಂತಿಯ ಶುಭ ದಿನದಂದು ರಣಬೀರ್ ಕಪೂರ್ ಅವರ 'ರಾಮ'ನ ಅವತಾರ ಅನಾವರಣಗೊಳ್ಳಲಿದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ 'ರಾಮಾಯಣ' ಸಿನಿಮಾದ ಬಗ್ಗೆ ಶುಕ್ರವಾರ ಶ್ರೀರಾಮನವಮಿಯ ಅಂಗವಾಗಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ದೊಡ್ಡ ಅಪ್ಡೇಟ್ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ರಣಬೀರ್ ಕಪೂರ್ ಅವರ 'ಶ್ರೀರಾಮ'ನ ಪಾತ್ರದ ಮೊದಲ ಅಧಿಕೃತ ಗ್ಲಿಂಪ್ಸ್ ಏಪ್ರಿಲ್ 2ರಂದು ಹನುಮ ಜಯಂತಿಯಂದು ಜಾಗತಿಕ ಮಟ್ಟದಲ್ಲಿ ಅನಾವರಣಗೊಳ್ಳಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ನಮಿತ್, ಅತ್ಯಂತ ಜವಾಬ್ದಾರಿ ಮತ್ತು ಭಕ್ತಿಯಿಂದ ಈ ಮಹಾಕಾವ್ಯವನ್ನು ತೆರೆಯ ಮೇಲೆ ತರುತ್ತಿರುವುದಾಗಿ ತಿಳಿಸಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು 'ರಾವಣ'ನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅವರೇ ಸಹ-ನಿರ್ಮಾಪಕರೂ ಆಗಿರುವುದು ವಿಶೇಷ. ಚಿತ್ರದಲ್ಲಿ ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ವಿಶ್ವದರ್ಜೆಯ ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾಗುತ್ತಿರುವ ಈ ಸಿನಿಮಾಗೆ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರಂತಹ ಸಂಗೀತ ದಿಗ್ಗಜರು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.
ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಆರಂಭಿಸಿರುವ ಚಿತ್ರತಂಡ, ಮಾರ್ಚ್ ಅಂತ್ಯದ ವೇಳೆಗೆ ಅಮೆರಿಕಾದಲ್ಲಿ ದೊಡ್ಡ ಮಟ್ಟದ ಮಾಧ್ಯಮಗೋಷ್ಠಿ ನಡೆಸಲು ಯೋಜಿಸಿದೆ. 4,000 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು 2026ರ ದೀಪಾವಳಿಗೆ ತೆರೆಕಾಣಲಿದ್ದರೆ, ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ. ಈ ಘೋಷಣೆಯು ಚಿತ್ರಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದು, ಏಪ್ರಿಲ್ 2ರಂದು ಹೊರಬರಲಿರುವ 'ರಾಮ'ನ ದರ್ಶನಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ.

