ಮುಖ್ಯಮಂತ್ರಿಯಾಗುವ ಯಾವುದೇ ಆಸೆ ನನಗಿಲ್ಲ: ನಟ ಚೇತನ್ ಕುಮಾರ್ ಸ್ಪಷ್ಟನೆ
x

ನಟ ಚೇತನ್ ಕುಮಾರ್ ಮುಂಬರುವ ಚುನಾವಣೆಗೆ 'ಸತ್ಯದ ಪಂಥ' ಪಕ್ಷ ಸ್ಥಾಪಿಸಲಿದ್ದಾರೆ. 

ಮುಖ್ಯಮಂತ್ರಿಯಾಗುವ ಯಾವುದೇ ಆಸೆ ನನಗಿಲ್ಲ: ನಟ ಚೇತನ್ ಕುಮಾರ್ ಸ್ಪಷ್ಟನೆ

2028ರ ಚುನಾವಣೆಗೆ ಹೊಸ ಪಕ್ಷ ಘೋಷಿಸಿದ ನಟ ಚೇತನ್, ವಿಜಯ್ ಅಥವಾ ಪವನ್ ಕಲ್ಯಾಣ್ ಹಾದಿ ತಮ್ಮದಲ್ಲ ಎಂದಿದ್ದಾರೆ. ತಮಗೆ ಸಿಎಂ ಆಗುವ ಆಸೆ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.


Click the Play button to hear this message in audio format

ಚಿತ್ರರಂಗ ಹಾಗೂ ರಾಜಕಾರಣಕ್ಕೆ ದಶಕಗಳ ಇತಿಹಾಸವಿದೆ. ಸದ್ಯ ಇದೇ ಹಾದಿಯಲ್ಲಿ ಸಾಗಲು ಸಜ್ಜಾಗಿರುವ ಕನ್ನಡದ ಖ್ಯಾತ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್, ಮುಂಬರುವ 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಆದರೆ, ತಮ್ಮ ರಾಜಕೀಯ ಪಯಣವು ಇತರ ನಟರ ಹಾದಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ 15 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಚೇತನ್, ಕೇವಲ ಬೀದಿ ಹೋರಾಟಗಳಿಂದ ಸಮಾಜದಲ್ಲಿ ಶಾಶ್ವತ ಮತ್ತು ವ್ಯವಸ್ಥಿತ ಬದಲಾವಣೆ ತರಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ಸಾಮಾಜಿಕ ಚಳವಳಿಗಳು ಜನರನ್ನು ಜಾಗೃತಗೊಳಿಸಬಹುದೇ ಹೊರತು, ಶಾಸಕಾಂಗದ ಅಧಿಕಾರವಿಲ್ಲದೆ ನೀತಿ-ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನದ ಆಶಯಗಳನ್ನು ಈಡೇರಿಸಲು ಮತ್ತು ಜನರ ಬದುಕನ್ನು ಉತ್ತಮಗೊಳಿಸಲು ಅಧಿಕಾರ ವ್ಯವಸ್ಥೆಯ ಭಾಗವಾಗುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಆಯೋಗದಲ್ಲಿ ಸಾವಿರಾರು ರಾಜಕೀಯ ಪಕ್ಷಗಳು ನೋಂದಣಿಯಾಗಿದ್ದರೂ, ತಾವು ಸ್ಥಾಪಿಸಲಿರುವ ಪಕ್ಷವು ಸಂಪೂರ್ಣ ಹೊಸ ಸಿದ್ಧಾಂತವನ್ನು ಹೊಂದಿರುತ್ತದೆ ಎಂದು ಚೇತನ್ ಹೇಳಿದ್ದಾರೆ. ತಮ್ಮ ಪಕ್ಷವು ಯಾವುದೇ ಎಡಪಂಥ, ಬಲಪಂಥ ಅಥವಾ ಮಧ್ಯಮಪಂಥಕ್ಕೆ ಸೇರಿದ್ದಲ್ಲ, ಬದಲಿಗೆ ಅದು 'ಸತ್ಯದ ಪಂಥ' ಆಗಿ ಕಾರ್ಯನಿರ್ವಹಿಸಲಿದೆ. ನ್ಯಾಯ, ಸಮಾನತೆ, ಭ್ರಾತೃತ್ವ, ಧರ್ಮನಿರಪೇಕ್ಷತೆ ಮತ್ತು ವೈಜ್ಞಾನಿಕ ಮನೋಭಾವದಂತಹ ಸಾಂವಿಧಾನಿಕ ಮೌಲ್ಯಗಳೇ ಈ ಪಕ್ಷದ ಅಡಿಪಾಯವಾಗಿದ್ದು, ಇದಕ್ಕಾಗಿ ಈಗಾಗಲೇ ಕರ್ನಾಟಕದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ 'ಸಮಾನತೆ ಸಮಾವೇಶ'ಗಳನ್ನು ನಡೆಸಿ ತಳಮಟ್ಟದಿಂದ ಜನರನ್ನು ಸಂಘಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ತಮಿಳು ನಟ ವಿಜಯ್ ಅಥವಾ ಪವನ್ ಕಲ್ಯಾಣ್ ಅವರ ರಾಜಕೀಯ ಶೈಲಿಯನ್ನು ತಾವು ಅನುಸರಿಸುವುದಿಲ್ಲ ಎಂದು ಚೇತನ್ ಸ್ಪಷ್ಟಪಡಿಸಿದ್ದಾರೆ. ಚಿತ್ರರಂಗದ ಜನಪ್ರಿಯತೆಯಷ್ಟೇ ರಾಜಕೀಯ ಬದಲಾವಣೆಗೆ ಸಾಕಾಗುವುದಿಲ್ಲ ಎಂದಿರುವ ಅವರು, ವಿಜಯ್ ಉತ್ತಮ ನಟನಾಗಿ ಯಶಸ್ವಿಯಾಗಿದ್ದರೂ ಅವರಲ್ಲಿ ನಾಯಕತ್ವದ ಗುಣಗಳು ಇನ್ನೂ ಸಾಬೀತಾಗಿಲ್ಲ ಎಂದಿದ್ದಾರೆ. ತಮ್ಮ ಹೋರಾಟ ವೈಯಕ್ತಿಕ ಪ್ರತಿಷ್ಠೆಗಲ್ಲ ಎಂದು ಸಾರಿರುವ ಚೇತನ್, ತಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಸಚಿವ ಸ್ಥಾನಗಳ ಆಕಾಂಕ್ಷಿಯಲ್ಲ ಎಂದು ಘೋಷಿಸಿದ್ದಾರೆ. ಸಿದ್ಧಾಂತವನ್ನು ನಂಬುವ ಕರ್ನಾಟಕದ ಯಾವುದೇ ಸಾಮಾನ್ಯ ವ್ಯಕ್ತಿ (ಜಾತಿ, ಧರ್ಮ, ಲಿಂಗ ಅಥವಾ ಭಾಷೆಯ ಭೇದವಿಲ್ಲದೆ) ಆ ಉನ್ನತ ಸ್ಥಾನಗಳನ್ನು ಅಲಂಕರಿಸಲಿದ್ದಾರೆ, ತಾವು ಕೇವಲ ಪಕ್ಷದ ಸಿದ್ಧಾಂತದ ಬೆನ್ನೆಲುಬಾಗಿ ಮತ್ತು ಸಂಸ್ಥಾಪಕರಾಗಿ ಮಾತ್ರ ಮುಂದುವರಿಯುವುದಾಗಿ ಹೇಳಿದ್ದಾರೆ.

ಸೆಲೆಬ್ರಿಟಿ ಸ್ಥಾನಮಾನವು ಸಮಾಜದ ಕಡೆಗಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ, ಸಮಾಜದಿಂದ ಯಾರು ಹೆಚ್ಚಿಗೆ ಪಡೆದಿದ್ದಾರೋ ಅವರು ಸಮಾಜಕ್ಕೆ ಮರಳಿ ಕೊಡುಗೆ ನೀಡಬೇಕು ಎಂಬ ತತ್ವವನ್ನು ಪಾಲಿಸುತ್ತಿದ್ದಾರೆ. ತಮ್ಮ ಹೊಸ ರಾಜಕೀಯ ಪಕ್ಷವು ಯಾವುದೇ ವ್ಯಕ್ತಿ ಕೇಂದ್ರಿತವಾಗಿರದೆ, ಸಂಪೂರ್ಣವಾಗಿ ಸಿದ್ಧಾಂತ ಮತ್ತು ಕಾರ್ಯಕರ್ತರ ಆಧಾರಿತವಾಗಿ ಸೇವಾ ಮನೋಭಾವದಿಂದ ಕೆಲಸ ಮಾಡಲಿದೆ ಎಂದು ಚೇತನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More
Next Story