
ಪ್ರಿಯತಮೆಯನ್ನು ಕೊಂದು ದೇಹ ತುಂಡರಿಸಿ ಫ್ರಿಜ್ನಲ್ಲಿಟ್ಟ ನೌಕಾಪಡೆ ಸಿಬ್ಬಂದಿ
ಪ್ರಿಯತಮೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್ನಲ್ಲಿಟ್ಟ ನೌಕಾಪಡೆ ಸಿಬ್ಬಂದಿ
ವಿಶಾಖಪಟ್ಟಣಂ: ಪ್ರಿಯತಮೆಯನ್ನು ಕೊಂದು ದೇಹ ತುಂಡರಿಸಿ ಫ್ರಿಜ್ನಲ್ಲಿಟ್ಟ ನೌಕಾಪಡೆ ಸಿಬ್ಬಂದಿ! ಆನ್ಲೈನ್ನಲ್ಲಿ ಚಾಕು ತರಿಸಿ ಕೃತ್ಯ ಎಸಗಿದ ರವೀಂದ್ರ ಅರೆಸ್ಟ್.
ನೌಕಾಪಡೆಯ ತಾಂತ್ರಿಕ ಸಿಬ್ಬಂದಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯೊಳಗೆ ಅಡಗಿಸಿಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಈ ಭೀಕರ ಕೃತ್ಯವೆಸಗಿದ 30 ವರ್ಷದ ಚಿಂತಡ ರವೀಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಗಾಜುವಾಕ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿದ್ದ ರವೀಂದ್ರ, ಮೌನಿಕಾ ಎಂಬುವವರನ್ನು ಪ್ರೀತಿಸುತ್ತಿದ್ದನು. ಘಟನೆಯ ದಿನ ಮೌನಿಕಾಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ರವೀಂದ್ರ, ಆಕೆಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಆಕೆಯನ್ನು ಕೊಲೆ ಮಾಡಿದ್ದಾನೆ. ಇದು ಕೇವಲ ಆವೇಶದಲ್ಲಿ ನಡೆದ ಕೊಲೆಯಲ್ಲ, ಬದಲಿಗೆ ರವೀಂದ್ರ ಮೊದಲೇ ಸಂಚು ರೂಪಿಸಿದ್ದ ಎನ್ನಲಾಗಿದೆ. ಕೊಲೆಗೆ ಮುನ್ನವೇ ಈತ ಶ್ರೀನಗರದ ಅಂಗಡಿಯೊಂದರಲ್ಲಿ ಚಾಕುಗಳಿಗಾಗಿ ಹುಡುಕಾಟ ನಡೆಸಿದ್ದನು, ಅಲ್ಲಿ ಸಿಗದಿದ್ದಾಗ ಆನ್ಲೈನ್ ಮೂಲಕ ಚಾಕು ತರಿಸಿಕೊಂಡಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.
ಸುಟ್ಟು ಹಾಕಿದ ಆರೋಪಿ
ಕೊಲೆಯ ನಂತರ ರವೀಂದ್ರ ಆಕೆಯ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿದ್ದಾನೆ. ಒಂದು ಭಾಗವನ್ನು ಫ್ರಿಜ್ನಲ್ಲಿ ಅಡಗಿಸಿಟ್ಟರೆ, ಮತ್ತೊಂದು ಭಾಗವನ್ನು ಚೀಲದಲ್ಲಿ ತುಂಬಿಸಿ ಮಂಚದ ಅಡಿಯಲ್ಲಿ ಇಟ್ಟಿದ್ದನು. ತಲೆಯನ್ನು ಯಾರಿಗೂ ತಿಳಿಯದಂತೆ ಅಡವಿವರಂ ಎಂಬ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ. ಈ ಕೃತ್ಯ ನಡೆಯುವಾಗ ರವೀಂದ್ರನ ಪತ್ನಿ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಈತ ಈ ಘೋರ ಅಪರಾಧವೆಸಗಿದ್ದಾನೆ. ಇಷ್ಟೆಲ್ಲಾ ನಡೆದರೂ ನೆರೆಹೊರೆಯವರಿಗೆ ಯಾವುದೇ ಅನುಮಾನ ಬಾರದಂತೆ ಆತ ವರ್ತಿಸಿದ್ದನು.
ಕೊನೆಗೆ ತನ್ನ ಈ ಭೀಕರ ಕೃತ್ಯದ ಬಗ್ಗೆ ರವೀಂದ್ರ ತನ್ನ ಸ್ನೇಹಿತನೊಬ್ಬನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ನೇಹಿತನ ಸಲಹೆಯಂತೆ ಗಾಜುವಾಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ರವೀಂದ್ರ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಮನೆಗೆ ತೆರಳಿದಾಗ ಅಲ್ಲಿನ ದೃಶ್ಯ ಕಂಡು ಹೌಹಾರಿದ್ದಾರೆ. ಸದ್ಯ ಪೊಲೀಸರು ರವೀಂದ್ರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್ ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಸುಮಾರು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ತುಂಬಿಸಿಡಲಾಗಿತ್ತು. ಹಲವಾರು ದಿನಗಳ ನಂತರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಈ ಭೀಕರ ದೃಶ್ಯ ಪತ್ತೆಯಾಗಿತ್ತು. ತನಿಖೆಯ ವೇಳೆ ಮುಕ್ತಿರಂಜನ್ ರಾಯ್ ಎಂಬಾತ ಈ ಕೃತ್ಯ ಎಸಗಿದ್ದು ಪತ್ತೆಯಾಯಿತು, ಆದರೆ ಪೊಲೀಸರು ಆತನನ್ನು ಬಂಧಿಸುವ ಮೊದಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದನು.

