
ವಿಧಾನಸೌಧದಲ್ಲೇ ಭಾರೀ ಕಳ್ಳತನ-ಸಚಿವರ ಕಚೇರಿಯಲ್ಲಿದ್ದ ಚಿನ್ನಾಭರಣ, ನಗದು ಕಳವು
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿನ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಡಿ ಗ್ರೂಪ್ ನೌಕರನೊಬ್ಬನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿನ ಸಚಿವರ ಕಚೇರಿಯಲ್ಲಿಯೇ ಸರಕಾರಿ ಸಿಬ್ಬಂದಿಯೊಬ್ಬ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿನ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಡಿ ಗ್ರೂಪ್ ನೌಕರನೊಬ್ಬನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ, ಅವರ ಕೈಚೀಲದಲ್ಲಿದ್ದ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂ.,ನಗದು ಸಹಿತ ಕಚೇರಿಯಲ್ಲೇ ಮರೆತುಬಿಟ್ಟಿದ್ದರು. ಮಾರನೇ ದಿನ ಕೈ ಚೀಲ ಹುಡುಕಿಕೊಂಡು ಸಚಿವರ ಕಚೇರಿಯಲ್ಲಿ ಓಡಾಡಿದ್ದಾರೆ. ಆದರೆ, ಕೈ ಚೀಲ ಮಾತ್ರ ಪತ್ತೆಯಾಗಿರಲಿಲ್ಲ. ಗಾಬರಿಗೊಂಡ ನವೀನ್, ತಕ್ಷಣ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ತನಿಖೆ ಆರಂಭಿಸಿದರು.
ಸಚಿವರ ಕಚೇರಿಯಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ವೇಳೆ, ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರನೊಬ್ಬ ಕೈ ಚೀಲವನ್ನು ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ. ಕೂಡಲೇ ಆರೋಪಿ ನೌಕರನನ್ನು ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ಆರಂಭಿಸಿದ್ದಾರೆ,
ಭದ್ರತೆ ಬಗ್ಗೆ ಅನುಮಾನ
ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವುದು ಈಗ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಸಾಮಾನ್ಯ ಜನರಿಗೆ ವಿಧಾನಸೌಧ ಪ್ರವೇಶ ಅಷ್ಟು ಸುಲಭವಲ್ಲ. ಪೊಲೀಸರ ಸರ್ಪಗಾವಲಿನಲ್ಲಿರುವ ವಿಧಾನಸೌಧದಲ್ಲಿ ಕಳ್ಳತನ ನಡೆಯಲಿದೆ ಎಂಬ ಸಣ್ಣ ಊಹೆ ಯಾರೊಬ್ಬರಿಗೂ ಇರಲಿಲ್ಲ. ಅದರಲ್ಲೂ ಸಚಿವರ ಕಚೇರಿಯಲ್ಲಿದ್ದ ಕೈ ಚೀಲವನ್ನೇ ಹೊತ್ತಿಕೊಂಡು ಹೋಗಿರುವುದು ಶಕ್ತಿ ಸೌಧದ ಭದ್ರತೆಗಳನ್ನು ಕುರಿತು ಸಾಕಷ್ಟು ಪ್ರಶ್ನೆ ಮೂಡಿಸಿದೆ. ಜನಸಮಾನ್ಯರಿಗೆ ಸೇವೆ ನೀಡಬೇಕಿದ್ದ ಸರಕಾರಿ ಸಿಬ್ಬಂದಿಯೇ ಕಳ್ಳತನ ಮಾಡಿರುವುದು ಇಡೀ ವ್ಯವಸ್ಥೆಯನ್ನೆ ಅಣಕಿಸುವಂತ್ತಿದೆ.

