
ಸಕಲೇಶಪುರದಲ್ಲಿ ಪ್ರೀ ವೆಡ್ಡಿಂಗ್ ಶೂಟ್; ಪೋಟೊಗ್ರಾಫರ್ ಮೇಲೆ ಹಲ್ಲೆ, ಏಳು ಮಂದಿ ಬಂಧನ
ಸ್ಥಳೀಯರು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕಿಡಿಗೇಡಿಗಳ ಗುಂಪು ಫೋಟೋಗ್ರಾಫರ್ಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು.
ಹಾನಸ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ತಂಡದ ಮೇಲೆ ಸ್ಥಳೀಯರ ಗುಂಪು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಫೋಟೋಗ್ರಾಫರ್ ನವೀನ್ ನಂದನ್ ಕೆ.ಎಸ್. ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಮದುವೆ ನಿಶ್ಚಯವಾಗಿದ್ದ ಜೋಡಿಯ ಫೋಟೋಶೂಟ್ಗಾಗಿ ನವೀನ್ ನಂದನ್, ಚೇತನ್ ಅವರು ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮಾರಗುಂದ, ಬೆಟ್ಟಗೆರೆ ಹಾಗೂ ಮಕ್ಕಿನಗದ್ದೆ ಗ್ರಾಮಗಳ ಸ್ಥಳೀಯರು, ಅನುಮತಿ ಇಲ್ಲದೆ ಫೋಟೋಶೂಟ್ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿ ಜಗಳ ತೆಗೆದಿದ್ದಾರೆ.
ಸ್ಥಳೀಯರು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕಿಡಿಗೇಡಿಗಳ ಗುಂಪು ಫೋಟೋಗ್ರಾಫರ್ಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು.
ಠಾಣೆಯ ಮುಂದೆಯೂ ಫೈಟ್
ಸ್ಥಳೀಯರಿಂದ ಹಲ್ಲೆಗೊಳಗಾದ ಫೋಟೋಗ್ರಾಫರ್ ಹಾಗೂ ಮದುವೆ ಜೋಡಿಯ ಕುಟುಂಬದವರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆಗಲೂ ಠಾಣೆಯ ಸಮೀಪದ ಬಂದ ಸ್ಥಳೀಯರು ಮತ್ತೆ ತಗಾದೆ ತೆಗೆದು ಹಲ್ಲೆ ನಡೆಸಿದರು. ಪೊಲೀಸರು ಸಾಕಷ್ಟು ನಿಯಂತ್ರಿಸಿದರೂ ಹೊಡೆದಾಟಕ್ಕೆ ಇಳಿದಿದ್ದರು. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಒಟ್ಟು 8 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ಈಗಾಗಲೇ 7 ಜನರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ ಸ್ಥಳೀಯರು ಕೂಡ ಫೋಟೋಶೂಟ್ ತಂಡದ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.
"ಪ್ರವಾಸಿ ತಾಣಗಳಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಿರುವುದು ಪ್ರವಾಸೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಲಾಟೆಗೆ ಪ್ರಮುಖ ಕಾರಣವೇನು?
ಪ್ರವಾಸಿಗರು ಫೋಟೋ ತೆಗೆದುಕೊಳ್ಳುವ ವಿಚಾರದಲ್ಲಿ ನಿಯಮ ಪಾಲನೆಗೆ ಸಂಬಂಧಿಸಿದಂತೆ ಸ್ಥಳೀಯರು ಛಾಯಾಗ್ರಾಹಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇದೇ ವಾಗ್ವಾದ ವಿಕೋಪಕ್ಕೆ ಹೋಗಿ ಛಾಯಾಗ್ರಾಹಕರ ಮೇಲೆ ಹಲ್ಲೆಗೆ ಕಾರಣವಾಗಿದೆ. ಈ ವೇಳೆ ಕ್ಯಾಮೆರಾ ಮತ್ತು ಉಪಕರಣಗಳಿಗೂ ಹಾನಿಯಾಗಿದೆ. ಶೂ ಧರಿಸಿ ಫೋಟೋ ಶೂಟ್ ನಡೆಸುತ್ತಿದ್ದಾರೆ ಎಂದು ಹಲ್ಲೆ ನಡೆಸಿದ ಮೂಡಿಗೆರೆ ತಾಲೂಕಿನ ಏಳು ಜನರನ್ನು ಬಂಧಿಸಲಾಗಿದೆ. ಆಶಿ, ಪ್ರಶಾಂತ್, ರಕ್ಷಾ, ಅರವಿಂದ್, ಉಚ್ಚಿತ್, ಪ್ರಜ್ವಲ್ ಮತ್ತು ನಿಶಾಂತ್ ಬಂಧಿತರು.

