
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಕಾಂಗ್ರೆಸ್ ಪಕ್ಷದ ಇಂದಿನ ನಾಯಕತ್ವವು ರಾಜಕೀಯವನ್ನು '9 ರಿಂದ 5' ರ ತನಕ ಮಾಡುವ ಒಂದು ಆರಾಮದಾಯಕ ಕೆಲಸವೆಂದು ಪರಿಗಣಿಸಿದಂತಿದೆ. ಸತತ ಸೋಲು ಅನುಭವಿಸಿದರೂ, ಸವಲತ್ತುಗಳು ಮುಂದುವರಿಯುತ್ತವೆ.
ಸ್ಪರ್ಧಾತ್ಮಕ ಚುನಾವಣಾ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಬದಲಾವಣೆಯಿಂದ ಉಂಟಾಗುವ ದೀರ್ಘಾಕಾಲೀನ ಪ್ರಯೋಜನಗಳ ಬಗ್ಗೆ ಖ್ಯಾತ ಕವಿ ಹಾಗೂ ಹಿರಿಯ ಸಾಹಿತಿ ಕೆ.ಸಚ್ಚಿದಾನಂದನ್ ಅವರು ನೀಡಿರುವ ಹೇಳಿಕೆಗಳು ಕೇರಳದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಸಚ್ಚಿದಾನಂದನ್ ಅವರ ಈ ʼದೀರ್ಘಾಕಾಲೀನ ಬದಲಾವಣೆʼಯ ಆಕಸ್ಮಿಕ ಪ್ರತಿಪಾದನೆಯ ಹಿಂದೆ ಮುಂದೆ ಬರಲಿರುವ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರದ ಹಸಿವು ಅಡಗಿದೆ ಎಂದು ಎಡಪಂಥೀಯ ಕಾರ್ಯಕರ್ತರು ಟೀಕಿಸುತ್ತಿದ್ದಾರೆ.
ಆದರೆ ಕೇರಳದ ಪ್ರಗತಿಪರ ಮೌಲ್ಯಗಳ ಪರವಾಗಿ ಸದಾ ದನಿ ಎತ್ತುತ್ತ ಬಂದಿರುವ ಸಚ್ಚಿದಾನಂದನ್ ಅವರ ವ್ಯಕ್ತಿತ್ವಕ್ಕೆ ಮತ್ತು ಅವರ ಸಾಹಿತ್ಯಿಕ ಕೊಡುಗೆಗಳನ್ನು ಗಮನಿಸಿದರೆ ಇಂತಹ ಟೀಕೆಗಳು ನಿಜಕ್ಕೂ ತರ್ಕಹೀನ ಎನಿಸುತ್ತವೆ. ಅವರ ಸಾಹಿತ್ಯವು ಮಲಯಾಳಿ ಸಂವೇದನೆಯನ್ನು ಶ್ರೀಮಂತಗೊಳಿಸುವುದರ ಜೊತೆಗೆ ಜಾಗತಿಕ ವಿದ್ಯಮಾನಗಳೊಂದಿಗೆ ಸದಾ ಸಂವಾದ ನಡೆಸುತ್ತ ಬಂದಿದೆ ಎಂಬುದು ಗಮನಾರ್ಹ.
ನಿರಂತರವಾಗಿ ಅಧಿಕಾರದಲ್ಲಿ ಇರುವುದರಿಂದ ಉಂಟಾಗುವ ಭ್ರಷ್ಟಾಚಾರದ ಪರಿಣಾಮಗಳನ್ನು ಹೊರತುಪಡಿಸಿ ಆಡಳಿತ ಬದಲಾವಣೆಯ ಅಗತ್ಯದ ಬಗ್ಗೆ ಸಚ್ಚಿದಾನಂದನ್ ಅವರ ನಿಲುವನ್ನು ಬೆಂಬಲಿಸಲು ಹಲವು ಕಾರಣಗಳಿವೆ: ಸತತ ಮುವತ್ತನಾಲ್ಕು ವರ್ಷಗಳ ಕಾಲ ಪಶ್ಚಿಮ ಬಂಗಾಲದಲ್ಲಿ ಅಧಿಕಾರ ನಡೆಸಿದ ಎಡರಂಗದ ಅನುಭವವನ್ನೇ ಅವರು ಉದಾಹರಣೆಯಾಗಿ ನೀಡಿದ್ದಾರೆ. ಅಷ್ಟು ದೀರ್ಘ ಕಾಲ ಸತತವಾಗಿ ಆಡಳಿತ ನಡೆಸಿದ ಬಳಿಕ ಅಲ್ಲಿನ ಪ್ರಮುಖ ಎಡಪಕ್ಷವಾದ ಸಿಪಿಐ-ಎಂ ಇಂದು ರಾಜ್ಯದ ರಾಜಕೀಯದ ಭೂಪಟದಲ್ಲಿಯೇ ಮೂಲೆಗುಂಪಾಗಿ ಹೋಗಿದೆ.
ಪ್ರಜಾಪ್ರಭುತ್ವದ ಆಶಯ
ಇದೇ ವರ್ಷದ ಮೇ ತಿಂಗಳಲ್ಲಿ ಕೇರಳದಲ್ಲಿ ಎಡಪಕ್ಷಗಳು ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಿಂತ ಸೋಲು ಅನುಭವಿಸುವುದೇ ಒಳಿತು ಎಂಬುದಕ್ಕೆ ಪ್ರಮುಖ ಕಾರಣವೆಂದರೆ, ಆ ಫಲಿತಾಂಶವು ರಾಷ್ಟ್ರ ರಾಜಕೀಯದ ಮೇಲೆ ಬೀರಲಿರುವ ಪ್ರಭಾವ. ಭಾರತದ ಪ್ರಜಾಪ್ರಭುತ್ವವು ಇಂದು ಮಾರಣಾಂತಿಕ ದಾಳಿಗೆ ಒಳಗಾಗಿದೆ ಎಂಬುದು ಎಡಪಕ್ಷದವರಿಗೆ ತಿಳಿಯದ ಸಂಗತಿಯೇ? ರಾಷ್ಟ್ರೀಯ ಮಟ್ಟದಲ್ಲಿ ಈ ದಾಳಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷವು, ಎಷ್ಟೇ ಅಸಮರ್ಥವಾಗಿ ಅಥವಾ ಎಡವಟ್ಟುಗಳ ಮೂಲಕವಾದರೂ ಸರಿ, ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದೆ. 2014ರಿಂದ ಹಿನ್ನಡೆ ಅನುಭವಿಸುತ್ತಿದ್ದರೂ ಸಹ, ಬಿಜೆಪಿಗೆ ಇರುವ ಏಕೈಕ ರಾಷ್ಟ್ರೀಯ ಪರ್ಯಾಯವೆಂದರೆ ಅದು ಕಾಂಗ್ರೆಸ್ ಮಾತ್ರ.
ಪ್ರಸ್ತುತ, ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ (ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ) ಮುಖ್ಯಮಂತ್ರಿಗಳನ್ನು ಹೊಂದಿದೆ. ರಾಹುಲ್ ಗಾಂಧಿ ಅವರೇ ಬಿಜೆಪಿಯ ಪಾಲಿಗೆ ಚುನಾವಣಾ ಲಾಭದಾಯಕ ವ್ಯಕ್ತಿಯಾಗಿದ್ದರೂ ಭಾರತವನ್ನು 'ಹಿಂದೂ ರಾಷ್ಟ್ರ'ವನ್ನಾಗಿ ಮಾಡುವ ಸಂಘ ಪರಿವಾರದ ಯೋಜನೆಯನ್ನು ವಿರೋಧಿಸುವ ಪ್ರಮುಖ ಶಕ್ತಿಯಾಗಿ ಕಾಂಗ್ರೆಸ್ ಉಳಿದಿದೆ.
ಅಂತಹ ಬಹುಸಂಖ್ಯಾತವಾದಿ ರಾಷ್ಟ್ರದಲ್ಲಿ ಮುಸ್ಲಿಂ ಮತ್ತು ಕ್ರೈಸ್ತರು ಎರಡನೇ ದರ್ಜೆಯ ನಾಗರಿಕರಾಗುವ ಭೀತಿಯಿದೆ, ಹೇಗೆಂದರೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಹೇಗಿದೆಯೋ ಹಾಗೆ.
ಕಾಂಗ್ರೆಸ್ ತನ್ನೆಲ್ಲಾ ದೋಷಗಳ ನಡುವೆಯೂ ಭಾರತದ ಬಹುಸಂಸ್ಕೃತಿಯ ನಾಗರಿಕ ಮೌಲ್ಯಗಳ ಪರವಾಗಿ ನಿಂತಿದೆ. ಈ ಸಂಸ್ಕೃತಿಯು ದೈವತ್ವದ ವಿವಿಧ ಕಲ್ಪನೆಗಳನ್ನು 'ಧರ್ಮದ್ರೋಹ' ಎಂದು ನೋಡದೆ, ಒಂದೇ ಆಧ್ಯಾತ್ಮಿಕ ಗುರಿಯನ್ನು ತಲುಪುವ ವಿವಿಧ ಮಾನ್ಯತೆ ಪಡೆದ ಹಾದಿಗಳು ಎಂದು ಗುರುತಿಸುತ್ತದೆ.
ಬಹುಸಂಖ್ಯಾತವಾದದ ಪ್ರಭಾವ
ಭಾರತವು ಅದೃಷ್ಟವಶಾತ್ ಪ್ರಜಾಪ್ರಭುತ್ವಕ್ಕೆ ಪೂರಕವಾದ ಸಂಸ್ಕೃತಿಯನ್ನು ಹೊಂದಿದೆ. ಇದು ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರ ದಬ್ಬಾಳಿಕೆಯಿಂದ ರಕ್ಷಿಸುವ ಗುಣವನ್ನು ಹೊಂದಿದೆ. ಆದರೆ, ರಾಷ್ಟ್ರಗೀತೆ 'ವಂದೇ ಮಾತರಂ' ಕುರಿತು ಕೇಂದ್ರ ಸರ್ಕಾರದ ಹೊಸ ಆದೇಶವು, ರಾಷ್ಟ್ರವನ್ನು ಹಿಂದೂ ದೇವತೆಯ ರೂಪದಲ್ಲಿ ಆರಾಧಿಸುವಂತೆ ಎಲ್ಲರನ್ನೂ ಒತ್ತಾಯಿಸುತ್ತಿರುವುದು ಈ ಬಹುಸಂಖ್ಯಾತವಾದಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಯಾವ ದೇಶಗಳಲ್ಲಿ ಏಕದೇವೋಪಾಸನೆ ಪ್ರಬಲವಾಗಿದೆಯೋ, ಅಲ್ಲಿ ಬಹುಸಂಖ್ಯಾತರ ನಂಬಿಕೆಗಳು ಅಲ್ಪಸಂಖ್ಯಾತರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯುವುದು ಪ್ರಜಾಪ್ರಭುತ್ವಕ್ಕೆ ಕಷ್ಟದ ಕೆಲಸವಾಗಿದೆ. ಉದಾಹರಣೆಗೆ, ಅಮೆರಿಕದ ಕೆಲವು ದಕ್ಷಿಣ ರಾಜ್ಯಗಳಲ್ಲಿ ಈಗ ಶಾಲೆಗಳಲ್ಲಿ ʼದೇವರ ದಶಾಜ್ಞೆಗಳನ್ನು' (10 Commandments) ಪ್ರದರ್ಶನ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಧಾರ್ಮಿಕ ಪಾವಿತ್ರ್ಯತೆಯ ಹೆಸರಿನಲ್ಲಿ, ಪ್ರಜಾಪ್ರಭುತ್ವಕ್ಕೆ ಸಮಂಜಸವಲ್ಲದೇ ಇರುವ ಮಧ್ಯಕಾಲೀನ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಮುಂದುವರಿಸಬೇಕೆಂದು ಅಲ್ಪಸಂಖ್ಯಾತರು ಪಟ್ಟು ಹಿಡಿದ ಸಂದರ್ಭದಲ್ಲಿ, ಅದು ಅವರ ಉದ್ದೇಶಕ್ಕೆ ಪೂರಕವಾಗುವುದಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಪ್ರಜಾಪ್ರಭುತ್ವದ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತಲೇ, ತಮ್ಮ ಸಮುದಾಯದ ಒಳಗಿನ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಅಲ್ಪಸಂಖ್ಯಾತ ನಾಯಕರ ಹಂಬಲಕ್ಕೆ ಮಣಿಯಲು ಪ್ರಜಾಪ್ರಭುತ್ವಕ್ಕೆ ಯಾವುದೇ ಕಾರಣವಿಲ್ಲ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಆಯ್ಕೆ ಮಾಡಿಕೊಂಡು ಮತ್ತೊಂದು ಪ್ರಜಾಸತ್ತಾತ್ಮಕ ಹಕ್ಕನ್ನು ಹತ್ತಿಕ್ಕಲು ಅದನ್ನು ಬಳಸಬಾರದು.
ಆರಾಮದಾಯಕ ಕೆಲಸ
ಕಾಂಗ್ರೆಸ್ ಪಕ್ಷದ ಇಂದಿನ ನಾಯಕತ್ವವು ರಾಜಕೀಯವನ್ನು '9 ರಿಂದ 5' ರ ತನಕ ಮಾಡುವ ಒಂದು ಆರಾಮದಾಯಕ ಕೆಲಸವೆಂದು ಪರಿಗಣಿಸಿದಂತಿದೆ. ಚುನಾವಣೆಯಿಂದ ಚುನಾವಣೆಗೆ ಸತತ ಸೋಲು ಅನುಭವಿಸಿದರೂ, ಕಾರ್ಯಕ್ಷಮತೆಗೆ ಯಾವುದೇ ಸಂಬಂಧವೇ ಇರದ ರೀತಿಯಲ್ಲಿ ಇಲ್ಲಿ ಸವಲತ್ತುಗಳು ಹಾಗೆಯೇ ಮುಂದುವರಿಯುತ್ತವೆ. ಅಷ್ಟು ಮಾತ್ರವಲ್ಲದೆ, ಈ ಕೆಲಸವೆಂದರೆ ಕೇವಲ ಸರ್ಕಾರದ ಮೇಲೆ ಪ್ರತಿದಿನ ವಾಗ್ದಾಳಿ ನಡೆಸುತ್ತಾ, ತಮ್ಮ ನಿರಂತರ ಚುನಾವಣಾ ಸೋಲಿಗೆ ತಾವೇ ನೆಪಗಳನ್ನು ಸೃಷ್ಟಿಸಿಕೊಳ್ಳುವುದು ಎಂಬಂತಾಗಿದೆ.
ಪಕ್ಷವು ಯಾವುದೋ ಒಂದು ಹಂತದಲ್ಲಿ, ತನ್ನ ಹಣೆಯ ಮೇಲೆ ವಿರೂಪವಾಗಿ ಕಾಣುತ್ತಿರುವ, ಇಡೀ ದೇಹಕ್ಕೆ ವಿಷವನ್ನು ಹರಡುತ್ತಿರುವ ಮತ್ತು ದೇಹವನ್ನು ಕ್ಷೀಣಿಸುತ್ತಿರುವ ಈ "ಗುಳ್ಳೆ"ಯನ್ನು ಕಿತ್ತೊಗೆಯಲೇಬೇಕಿದೆ. ಎಷ್ಟೇ ರೋಗಗ್ರಸ್ತ ಮತ್ತು ಕ್ಷೀಣವಾಗಿದ್ದರೂ, ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಇನ್ನೂ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂಬುದು ನೆಮ್ಮದಿಯ ಸಂಗತಿ.
ಈ ವರ್ಷ ಕೇರಳದಲ್ಲಿ ಕಾಂಗ್ರೆಸ್ ಗೆಲ್ಲಲು ವಿಫಲವಾದರೆ, ಅದು ಕೇವಲ ಕೇರಳಕ್ಕೆ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತವಾಗಲಿದೆ. ಒಂದಿನಿತೂ ವಿವೇಚನೆ ಇಲ್ಲದ ಬಿಜೆಪಿ, ತನ್ನ ರಾಷ್ಟ್ರೀಯ ವಿರೋಧ ಪಕ್ಷವನ್ನು ನಾಶಪಡಿಸುವ ಹಾದಿಯಲ್ಲಿ ಕೇರಳದಲ್ಲಿ ಎಡಪಕ್ಷಗಳ ವಿಜಯವನ್ನು ಖಚಿತಪಡಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತದೆ. ರಾಷ್ಟ್ರೀಯ ವಿರೋಧ ಪಕ್ಷವು ಮತ್ತಷ್ಟು ದುರ್ಬಲಗೊಳ್ಳುವುದು ಎಡಪಕ್ಷಗಳಿಗೂ ಒಳ್ಳೆಯದಲ್ಲ.
ಎಡಪಕ್ಷಗಳ ದೊಡ್ಡ ಕ್ರಾಂತಿ
ಲೋಕಸಭೆಯಲ್ಲಿ ಸಿಪಿಐ(ಎಂ) ಹೊಂದಿರುವ ನಾಲ್ವರು ಸಂಸದರಲ್ಲಿ ಮೂವರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಬೆಂಬಲದಿಂದ ಆಯ್ಕೆಯಾಗಿದ್ದಾರೆ ಎಂಬುದನ್ನು ಮರೆತುಬಿಡಿ. ಸಂಘ ಪರಿವಾರವು ಎಡಪಕ್ಷಗಳನ್ನು ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂನಷ್ಟೇ ಭಾರತಕ್ಕೆ ಪರಕೀಯ ಮತ್ತು ಹಾನಿಕಾರಕ ಎಂದು ಪರಿಗಣಿಸುತ್ತದೆ. ಕೇವಲ ಉಳಿದುಕೊಂಡಿರುವ ಪ್ರಜಾಪ್ರಭುತ್ವವು ಮಾತ್ರ, ಮಧ್ಯ ಭಾರತದಲ್ಲಿ ಮಾವೋವಾದಿಗಳನ್ನು ಎದುರಿಸಿದ ರೀತಿಯಲ್ಲೇ ಕೇರಳದ ಕಮ್ಯುನಿಸ್ಟರನ್ನು ಎದುರಿಸದಂತೆ ಅದರ ಶಕ್ತಿಗಳನ್ನು ತಡೆಹಿಡಿದಿದೆ.
ಸಮಾಜದ ಜನಸಾಮಾನ್ಯರ ವಿವಿಧ ವರ್ಗಗಳನ್ನು ಸಂಘಟಿಸುವುದು, ಭೂಸುಧಾರಣೆಗಳನ್ನು ಜಾರಿಗೆ ತರುವುದು, ರಾಜಕೀಯ ಅಧಿಕಾರ ಮತ್ತು ಅಧಿಕಾರಿಶಾಹಿಯ ಮೇಲಿನ ನಿಯಂತ್ರಣವನ್ನು ಸ್ಥಳೀಯ ಸರ್ಕಾರಗಳಿಗೆ ವಿಕೇಂದ್ರೀಕರಿಸುವುದು ಹಾಗೂ ಮುಖ್ಯವಾಗಿ, ಕಾಂಗ್ರೆಸ್ ಸೇರಿದಂತೆ ರಾಜ್ಯದ ಇತರ ರಾಜಕೀಯ ಪಕ್ಷಗಳು ತಮ್ಮದೇ ಆದ ಪ್ರಜಾಸತ್ತಾತ್ಮಕ ಕಾರ್ಯಸೂಚಿಯನ್ನು ಒಪ್ಪಿಕೊಳ್ಳುವಂತೆ ಪ್ರಭಾವ ಬೀರುವುದು - ಇವುಗಳ ಮೂಲಕ ಕೇರಳದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಿರುವುದು ಮತ್ತು ವಿಸ್ತರಿಸಿರುವುದು ಎಡಪಕ್ಷಗಳು ಸಾಧಿಸಿದ ಬಹುದೊಡ್ಡ ಕ್ರಾಂತಿಯಾಗಿದೆ. ಇಡೀ ಭಾರತಕ್ಕೆ ಇಂದು ತುರ್ತಾಗಿ ಬೇಕಿರುವುದು ಇದೇ ರೀತಿಯ ಕ್ರಾಂತಿಯೇ ಆಗಿದೆ.
ಮುಸ್ಲಿಂ ಲೀಗ್ನ ಪ್ರಾಮುಖ್ಯತೆ
ಕಾಂಗ್ರೆಸ್ ಪಕ್ಷದ ಸತತ ಎರಡನೇ ಸೋಲು ಕೇರಳಕ್ಕೆ ಸಂಬಂಧಿಸಿದಂತೆ ಮತ್ತೊಂದು ಹಿನ್ನಡೆಯನ್ನು ತಂದೊಡ್ಡುವ ಸಾಧ್ಯತೆಯಿದೆ: ಅದು ಮುಸ್ಲಿಂ ಲೀಗ್ ದುರ್ಬಲಗೊಳ್ಳುವುದು. ಅದು ರಾಜ್ಯದಲ್ಲಿ ಪ್ರಭಾವಕ್ಕಾಗಿ ಹವಣಿಸುತ್ತಿರುವ ಮೂಲಭೂತವಾದಿ ಇಸ್ಲಾಮಿಕ್ ಗುಂಪುಗಳಿಗೆ ಲಾಭದಾಯಕವಾಗಿ ಪರಿಣಮಿಸಬಹುದು.
ಕೇರಳದ ಮುಸ್ಲಿಂ ಲೀಗ್, ಪಾಕಿಸ್ತಾನಕ್ಕಾಗಿ ಹೋರಾಡಿದ ಪ್ರತ್ಯೇಕತಾವಾದಿ ಶಕ್ತಿಗಿಂತ ತೀರಾ ಭಿನ್ನವಾಗಿದೆ. ಬಹುಸಂಖ್ಯಾತರೊಂದಿಗೆ ಶಾಂತಿ ಮತ್ತು ಘನತೆಯಿಂದ ಸಹಬಾಳ್ವೆ ನಡೆಸಲು, ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳಲು ಮುಸ್ಲಿಂ ಅಲ್ಪಸಂಖ್ಯಾತರು ರಾಜಕೀಯ ಸಾಧನವೊಂದನ್ನು ರೂಪಿಸಿಕೊಂಡ ವಿಶ್ವದ ಕೆಲವೇ ಉದಾಹರಣೆಗಳಲ್ಲಿ ಇದೂ ಒಂದು. ಈ ಪಕ್ಷವು ಸಮುದಾಯದ ಸಾಮಾಜಿಕ ಪ್ರಗತಿಯನ್ನು ವಿಶಾಲವಾಗಿ ಬೆಂಬಲಿಸುತ್ತಾ, ಧಾರ್ಮಿಕ ಗ್ರಂಥಗಳನ್ನು ಅಕ್ಷರಶಃ ಅರ್ಥ ಮಾಡಿಕೊಳ್ಳುವುದರಿಂದ ಉಂಟಾಗುವ ಮಧ್ಯಕಾಲೀನ ಆಚರಣೆಗಳತ್ತ ಮರಳುವ ಒತ್ತಡವನ್ನು ವಿರೋಧಿಸುತ್ತಾ ಬಂದಿದೆ.
ಮುಸ್ಲಿಂ ಲೀಗ್ ಕೇರಳದಲ್ಲಿ ಕಾಂಗ್ರೆಸ್ನ ದೀರ್ಘಕಾಲದ ಮಿತ್ರಪಕ್ಷವಾಗಿದೆ. ಒಂದು ವೇಳೆ ಕಾಂಗ್ರೆಸ್ ನೇತೃತ್ವದ ರಂಗವು ಮತ್ತೊಮ್ಮೆ ಚುನಾವಣೆಯಲ್ಲಿ ಸೋತರೆ, ಅದು ಲೀಗ್ನ ರಾಜಕೀಯ ಪ್ರಸ್ತುತತೆಯನ್ನು ಕುಂದಿಸುತ್ತದೆ ಮತ್ತು ಬೆಂಬಲಕ್ಕಾಗಿ ಕಾಯುತ್ತಿರುವ ಮೂಲಭೂತವಾದಿ ಗುಂಪುಗಳಿಗೆ ದಾರಿ ಮಾಡಿಕೊಡುತ್ತದೆ. ಇದು ಕೇರಳಕ್ಕಾಗಲಿ ಅಥವಾ ಇಡೀ ಭಾರತಕ್ಕಾಗಲಿ ಒಳ್ಳೆಯದಲ್ಲ.
ಅಧಿಕಾರವು ಭ್ರಷ್ಟಗೊಳಿಸುತ್ತದೆ ಎಂಬ ಪ್ರವೃತ್ತಿಯನ್ನು ಹೊರತುಪಡಿಸಿ, ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳ ಸೋಲು ಭವಿಷ್ಯದಲ್ಲಿ ಎರಡು ಹೆಜ್ಜೆ ಮುಂದೆ ಇಡಲು ನೆರವಾಗುವ ಒಂದು ಹೆಜ್ಜೆ ಹಿನ್ನಡೆಯಾಗಲಿದೆ ಎಂಬ ವಾದವನ್ನು ಬೆಂಬಲಿಸಲು ಇತರ ಕಾರಣಗಳೂ ಇವೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

