
ಸಿಯಾ ಗೋಯಲ್ ಕುಳಿತಿದ್ದ ಭಂಗಿಯ ಹಿಂದಿತ್ತು ಭೀಕರ ರಹಸ್ಯ
ತನಗೇನೂ ಆಗಬಾರದೆಂದು ಕೆಳಗೆ ಕುಳಿತು ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿಸಿದ ಸಿಯಾ
ಪುಣೆಯ ಉದ್ಯಮಿ ಕೇತನ್ ಕೊಲೆಗೆ ಸಿಯಾ ಹಾಗೂ ಚೇತನ್ ಸ್ಕೆಚ್ ಹಾಕಿದ್ದರು. ಕೋಟೆಯಿಂದ ಕೇತನ್ ತಳ್ಳುವಾಗ ಆತ ತನ್ನನ್ನು ಹಿಡಿಯಬಾರದು ಎಂದೇ ಸಿಯಾ ಸಂಕೇತದ ನೆಪದಲ್ಲಿ ಕೆಳಗೆ ಕುಳಿತಿದ್ದಳು.
ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವಿ ಪತಿ ಕೇತನ್ನನ್ನು ಪ್ರಪಾತಕ್ಕೆ ತಳ್ಳಲು ಪ್ರಿಯಕರ ಚೇತನ್ ಚೌಧರಿಗೆ ಸಂಕೇತ ನೀಡಲು ಸಿಯಾ ಗೋಯಲ್ ಕೆಳಗೆ ಕುಳಿತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅವಳು ಹಾಗೆ ಕೆಳಗೆ ಕುಳಿತಿದ್ದು ಕೇವಲ ಸಂಕೇತ ನೀಡಲು ಮಾತ್ರವಲ್ಲ, ಬದಲಿಗೆ ಕೆತಾನ್ ತನ್ನನ್ನು ಹಿಡಿದು ಪ್ರಪಾತಕ್ಕೆ ಎಳೆಯದಂತೆ ಮುನ್ನೆಚ್ಚರಿಕೆ ವಹಿಸಲು ಎನ್ನುವ ಆಘಾತಕಾರಿ ಮಾಹಿತಿಯೂ ಲಭ್ಯವಾಗಿದೆ.
90 ಕಿಲೋಮೀಟರ್ ದೂರ ಸ್ಕೂಟರ್ನಲ್ಲೇ ಪ್ರಯಾಣ
ಜೂನ್ 18 ರಂದು ನಡೆದ ಈ ಹತ್ಯೆಗೆ ಸಂಬಂಧಿಸಿದಂತೆ 20 ವರ್ಷದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ 22 ವರ್ಷದ ಚೇತನ್ ಚೌಧರಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿ ಚೇತನ್ ಟೋಲ್ ಪ್ಲಾಜಾಗಳಲ್ಲಿ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಕಾರನ್ನು ಬಿಟ್ಟು, ಪುಣೆಯಿಂದ ಲೋಹಗಢ ಕೋಟೆಯವರೆಗೆ ಸುಮಾರು 90 ಕಿಲೋಮೀಟರ್ ದೂರ ಸ್ಕೂಟರ್ನಲ್ಲೇ ಪ್ರಯಾಣಿಸಿ ತನ್ನ ಕೈಚಳಕ ತೋರಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ತನ್ನ ಸುರಕ್ಷತೆಗಾಗಿ ಕೆಳಗೆ ಕುಳಿತಿದ್ದ ಸಿಯಾ
ಪೊಲೀಸ್ ಅಧಿಕಾರಿಗಳ ಪ್ರಕಾರ, ಸಿಯಾ ಗೋಯಲ್ ನೀರು ಕುಡಿಯುವ ನೆಪದಲ್ಲಿ ಅಥವಾ ಶೂ ಲೇಸ್ ಕಟ್ಟುವ ನೆಪದಲ್ಲಿ ಕೆಳಗೆ ಕುಳಿತುಕೊಳ್ಳಬೇಕು ಮತ್ತು ಅದೇ ಸಮಯಕ್ಕೆ ಚೇತನ್ ಬಂದು ಕೆತನ್ನನ್ನು ಪ್ರಪಾತಕ್ಕೆ ತಳ್ಳಬೇಕು ಎಂದು ಇಬ್ಬರು ಮುಂಚಿತವಾಗಿಯೇ ಸಂಚು ರೂಪಿಸಿದ್ದರು. ಈ ಯೋಜನೆಯನ್ನು ಅವರು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದರು. ಆದರೆ, ಸಿಯಾ ಕೆಳಗೆ ಕುಳಿತುಕೊಳ್ಳಲು ಮತ್ತೊಂದು ಪ್ರಮುಖ ಕಾರಣವಿತ್ತು. ಚೇತನ್ ಹಿಂದಿನಿಂದ ಬಂದು ಕೆತಾನ್ನನ್ನು ತಳ್ಳಿದಾಗ, ಬೀಳುವ ಆತುರದಲ್ಲಿ ಕೆತಾನ್ ತನ್ನ ರಕ್ಷಣೆಗಾಗಿ ಸಿಯಾಳನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಆಕೆಯೂ ಪ್ರಪಾತಕ್ಕೆ ಬೀಳಬಹುದು ಎಂಬ ಭಯ ಅವರಿಗಿತ್ತು. ಹೀಗಾಗಿ ಸಿಯಾಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಪ್ಲಾನ್ ಮಾಡಲಾಗಿತ್ತು.ಆರೋಪಿ ಚೇತನ್ ತನ್ನ ಗುರುತು ಸಿಗದಂತೆ ಹೂಡಿ ಧರಿಸಿ ಕೋಟೆಯನ್ನು ಹತ್ತಿದ್ದ ಮತ್ತು ಕೃತ್ಯ ಎಸಗಿದ ಬಳಿಕ ಪುನಃ ಹೂಡಿ ಧರಿಸಿ ಅದೇ ಸ್ಕೂಟರ್ನಲ್ಲಿ ಪುಣೆಗೆ ಪರಾರಿಯಾಗಿದ್ದ.
ಇತ್ತೀಚೆಗಷ್ಟೇ ಪೊಲೀಸರು ಸಿಯಾ ಗೋಯಲ್ ರನ್ನು ಲೋಹಗಢ ಕೋಟೆಗೆ ಕರೆದೊಯ್ದು, ಡಮ್ಮಿ ಗೊಂಬೆಯನ್ನು ಬಳಸುವ ಮೂಲಕ ಅಪರಾಧ ನಡೆದ ಸ್ಥಳದ ಮರುಸೃಷ್ಟಿ ಮಾಡಿದ್ದಾರೆ. ಇಬ್ಬರೂ ಆರೋಪಿಗಳು ಕೊಲೆಗೆ ಸೂಕ್ತವಾದ ಸ್ಥಳವನ್ನು ಹುಡುಕಲು ಈಗಾಗಲೇ ಕೋಟೆಗೆ ಭೇಟಿ ನೀಡಿ ರಿಹರ್ಸಲ್ ನಡೆಸಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಮುಂದುವರಿದಿದ್ದು, ಪೊಲೀಸರು ಆರೋಪಿಗಳ ಪೋಷಕರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.

