ಜೈಪುರದಲ್ಲಿ ‘ಖಾಕಿ’ಗೆ ಕಳಂಕ : ಲಂಚ ಆಮಿಷಕ್ಕೆ ಎಸಿಬಿ ಬಲೆಗೆ ಬೆಂಗಳೂರಿನ ಪೊಲೀಸರು
x

ಜೈಪುರದಲ್ಲಿ ‘ಖಾಕಿ’ಗೆ ಕಳಂಕ : ಲಂಚ ಆಮಿಷಕ್ಕೆ ಎಸಿಬಿ ಬಲೆಗೆ ಬೆಂಗಳೂರಿನ ಪೊಲೀಸರು

ಪ್ರಕರಣದ ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಅನುಮತಿಯೊಂದಿಗೆ ವಶಕ್ಕೆ ಪಡೆದು ಕರೆತರುವ ಬದಲು ಬಂಧಿಸದೆ ಇರಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.


Click the Play button to hear this message in audio format

ನ್ಯಾಯ ಒದಗಿಸುವಲ್ಲಿ ಇಡೀ ದೇಶಕ್ಕೆ ಮಾದರಿಯಾಗಬೇಕಿದ್ದ ಕರ್ನಾಟಕ ಪೊಲೀಸ್ ಇಲಾಖೆಯ ಗೌರವ, ಸುದೂರದ ಜೈಪುರದಲ್ಲಿ ಮಣ್ಣುಪಾಲಾಗಿದೆ. ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆಗಾಗಿ ರಾಜಸ್ಥಾನಕ್ಕೆ ತೆರಳಿದ್ದ ಬೆಂಗಳೂರಿನ ಎಚ್.ಎ.ಎಲ್ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳು, ಆರೋಪಿಯೊಬ್ಬನಿಂದ ಲಂಚ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ಸಿಕ್ಕಿಬಿದ್ದು, ಇಲಾಖೆಯ ಮಾನ ಹರಾಜು ಹಾಕಿದ್ದಾರೆ.

ಬೆಂಗಳೂರಿನ ಎಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವೊಂದರ ತನಿಖೆಗಾಗಿ ಸಬ್-ಇನ್ಸ್‌ಪೆಕ್ಟರ್ ಅನಿತಾ, ಕಾನ್ಸ್‌ಟೇಬಲ್‌ಗಳಾದ ಯತೀಶ್ ಕುಮಾರ್ ಮತ್ತು ಉಳ್ವಪ್ಪ ಅವರು ರಾಜಸ್ಥಾನದ ಜೈಪುರಕ್ಕೆ ತೆರಳಿದ್ದರು. ಕಾನೂನು ಪ್ರಕಾರ, ಪ್ರಕರಣದ ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಅನುಮತಿಯೊಂದಿಗೆ ವಶಕ್ಕೆ ಪಡೆದು ಕರೆತರುವುದು ಇವರ ಕರ್ತವ್ಯವಾಗಿತ್ತು. ಆದರೆ, ಇವರು ಕರ್ತವ್ಯ ಪಾಲನೆಗಿಂತ ಹಣ ಮಾಡುವುದೇ ಮುಖ್ಯ ಗುರಿ ಎಂಬಂತೆ ವರ್ತಿಸಿದ್ದಾರೆ. ಜೈಪುರ ತಲುಪಿದ ಈ ಮೂವರು ಪೊಲೀಸರು, ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿದ ಬಳಿಕ, ಆತನನ್ನು ಬಂಧಿಸುವ ಬದಲಿಗೆ ಹಣಕ್ಕಾಗಿ ಪೀಡಿಸಲು ಪ್ರಾರಂಭಿಸಿದ್ದಾರೆ. ನಿನಗೆ ಈ ಪ್ರಕರಣದಿಂದ ಮುಕ್ತಿ ಕೊಡಿಸುತ್ತೇವೆ, ಇಲ್ಲವೇ ಬಂಧಿಸದೆ ಸುಮ್ಮನೆ ಬಿಟ್ಟುಬಿಡುತ್ತೇವೆ ಎಂದು ಆಮಿಷವೊಡ್ಡಿ, ಆತನ ಬಳಿ ಬರೋಬ್ಬರಿ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಪೊಲೀಸರಿಗೆ ವಿರುದ್ಧ ದೂರು ಕೊಟ್ಟ ಆರೋಪಿ

ಪೊಲೀಸರ ವಸೂಲಿ ಬಾಜಿ ಮತ್ತು ಒತ್ತಡದಿಂದ ಬೇಸತ್ತ ಆರೋಪಿಯು, ದಾರಿ ಕಾಣದೆ ಕೊನೆಗೆ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳವನ್ನು ಸಂಪರ್ಕಿಸಿದ್ದಾನೆ. ತನ್ನ ಮೇಲೆ ದೌರ್ಜನ್ಯವೆಸಗುತ್ತಿರುವ ಬೆಂಗಳೂರು ಪೊಲೀಸರ ಬಗ್ಗೆ ಸಮಗ್ರ ಮಾಹಿತಿ ನೀಡಿ, ಅವರನ್ನು ಹಿಡಿದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾನೆ. ಆರೋಪಿಯ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ರಾಜಸ್ಥಾನ ಎಸಿಬಿ ಅಧಿಕಾರಿಗಳು, ಜೈಪುರದ ಗಂಗೌರ್ ಹೋಟೆಲ್‌ನಲ್ಲಿ ಬಲೆ ಬೀಸಿದರು. ಪಿಎಸ್‌ಐ ಅನಿತಾ ಮತ್ತು ಇಬ್ಬರು ಕಾನ್ಸ್‌ಟೇಬಲ್‌ಗಳು, ಅಂತಿಮ ಕಂತಿನ ಹಣವಾದ 40 ಸಾವಿರ ರೂಪಾಯಿಯನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ತಂಡವು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದೆ.

ಎಸಿಬಿ ಕಾರ್ಯಾಚರಣೆ

ರಾಜಸ್ಥಾನದ ಎಸಿಬಿ ಡಿಐಜಿ ಓಂ ಪ್ರಕಾಶ್ ಮೀನಾ ಅವರ ಮೇಲ್ವಿಚಾರಣೆಯಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಸ್ಥಳದಲ್ಲಿಯೇ ಮೂವರು ಪೊಲೀಸರನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, ಬಳಿಕ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯು ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವಂತಿದೆ. ಈ ಘಟನೆಯು ಕರ್ನಾಟಕ ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ದೊಡ್ಡ ಪೆಟ್ಟು ನೀಡಿದೆ. ಪ್ರಕರಣದ ತನಿಖೆಗಾಗಿ ಸರ್ಕಾರಿ ವೆಚ್ಚದಲ್ಲಿ ಬೇರೆ ರಾಜ್ಯಕ್ಕೆ ಹೋದವರು, ಅಲ್ಲಿನ ಕಾನೂನು ವ್ಯವಸ್ಥೆಯ ಮುಂದೆ ಕರ್ನಾಟಕದ ಹೆಸರನ್ನು ಕೆಡಿಸಿದ್ದಾರೆ. ಬೆಂಗಳೂರಿನಂತಹ ಮಹಾನಗರದ ಪೊಲೀಸ್ ಅಧಿಕಾರಿಗಳೇ ಇಂತಹ ಕೆಲಸಕ್ಕೆ ಕೈ ಹಾಕಿರುವುದು ಇಲಾಖೆಯ ಆಂತರಿಕ ವ್ಯವಸ್ಥೆಯ ಮೇಲೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರೆತರಲು ಹೋಗುವಾಗ, ಅಲ್ಲಿನ ಸ್ಥಳೀಯ ಪೊಲೀಸರ ಸಹಾಯ ಪಡೆಯುವುದು ವಾಡಿಕೆ. ಆದರೆ, ಇಲ್ಲಿ ಆರೋಪಿಯೊಂದಿಗೆ ಸಂಧಾನ ನಡೆಸಲು ಹೋದ ಪೊಲೀಸರ ನಡೆ, ಅವರ ದುರಾಸೆಯನ್ನು ಎತ್ತಿ ತೋರಿಸಿದೆ.

ಈ ವಿಷಯ ಹೊರಬೀಳುತ್ತಿದ್ದಂತೆಯೇ ಕರ್ನಾಟಕ ಪೊಲೀಸ್ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ, ಇಲಾಖೆಯ ಮರ್ಯಾದೆ ಉಳಿಸಿಕೊಳ್ಳಲು ಇವರನ್ನು ಸೇವೆಯಿಂದ ಅಮಾನತು ಮಾಡುವ ಸಾಧ್ಯತೆಯಿದೆ. ಜೈಪುರದ ಎಸಿಬಿ ತಂಡವು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಅಥವಾ ಇವರು ಇಂತಹ ಕೃತ್ಯಗಳನ್ನು ಬೇರೆಡೆಗೂ ನಡೆಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Read More
Next Story