
ಯಲ್ಲಾಪುರದಲ್ಲಿ ಭೀಕರ ಅಪಘಾತ: ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿ, ಆರು ಜನ ದುರ್ಮರಣ
ಅಪಘಾತದಲ್ಲಿ ಕ್ರೂಸರ್ ಚಾಲಕ ಸಂಜೀವ್ (33), ಬಸವರಾಜ್ (48), ಅಭಿಷೇಕ್ ಈಶ್ವರ್ (28), ಅಕ್ಷಯ್ (26), ಅಭಿಷೇಕ್ (26) ಮತ್ತು ಮಂಜುನಾಥ್ ಅಶೋಕ್ ಚುಲಕಿ (32) ಎಂಬುವವರು ಮೃತಪಟ್ಟಿದ್ದಾರೆ.
ಪ್ರವಾಸಕ್ಕೆಂದು ತೆರಳುತ್ತಿದ್ದ ಪ್ರವಾಸಿಗರ ವಾಹನಕ್ಕೆ ಲಾರಿಯೊಂದು ಭೀಕರವಾಗಿ ಡಿಕ್ಕಿಯಾದ ಪರಿಣಾಮ, ಸ್ಥಳದಲ್ಲೇ ಆರು ಮಂದಿ ದುರ್ಮರಣ ಹೊಂದಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಸಮೀಪದ ಬಳಗಾರ್ ಬಳಿ ಸಂಭವಿಸಿದೆ. ಮೃತಪಟ್ಟ ದುರ್ದೈವಿಗಳು ಧಾರವಾಡ ಮೂಲದವರು ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನವು ಸಂಪೂರ್ಣವಾಗಿ ಜಖಂಗೊಂಡಿದೆ.
ಅಪಘಾತದಲ್ಲಿ ಕ್ರೂಸರ್ ಚಾಲಕ ಸಂಜೀವ್ (33), ಬಸವರಾಜ್ (48), ಅಭಿಷೇಕ್ ಈಶ್ವರ್ (28), ಅಕ್ಷಯ್ (26), ಅಭಿಷೇಕ್ (26) ಮತ್ತು ಮಂಜುನಾಥ್ ಅಶೋಕ್ ಚುಲಕಿ (32) ಎಂಬುವವರು ಮೃತಪಟ್ಟಿದ್ದಾರೆ. ಈ ಭೀಕರ ರಸ್ತೆ ಅಪಘಾತದಲ್ಲಿ ಕ್ರೂಸರ್ನಲ್ಲಿದ್ದ ಮತ್ತಿಬ್ಬರು ಯುವಕರು ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವರಾಜ ದುರ್ಗಪ್ಪ ಮಡಿವಾಳ (22), ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28) ಹಾಗೂ ಸಚಿನ್ ಎಂದು ಗುರುತಿಸಲಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ
ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಯಲ್ಲಾಪುರ ಠಾಣೆಯ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕ್ರೂಸರ್ನಲ್ಲಿದ್ದವರು ಪ್ರವಾಸಕ್ಕೆಂದು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

