
ಇರಾನ್ನ ಪ್ರಮುಖ ಎಲ್ಎನ್ಜಿ ಘಟಕದ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಷೇರುಪೇಟೆಯಲ್ಲಿ ಭಾರೀ ಕುಸಿತ: ಸೆನ್ಸೆಕ್ಸ್ 1,700 ಅಂಕ ಪತನ; ಕಾರಣ ಏನು ಗೊತ್ತೇ?
ಎಚ್ಡಿಎಫ್ಸಿ (HDFC) ಬ್ಯಾಂಕ್ನ ಅರೆಕಾಲಿಕ ಅಧ್ಯಕ್ಷರಾಗಿದ್ದ ಅತನು ಚಕ್ರವರ್ತಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಆ ಬ್ಯಾಂಕಿನ ಷೇರುಗಳು 5ರಷ್ಟು (4.76%) ಕುಸಿತ ಕಂಡಿವೆ.
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಕಚ್ಚಾ ತೈಲ ಬೆಲೆಯಲ್ಲಿನ ಹಠಾತ್ ಏರಿಕೆಯ ಪರಿಣಾಮವಾಗಿ ಗುರುವಾರ ಭಾರತೀಯ ಷೇರುಪೇಟೆಯಲ್ಲಿ ಭಾರೀ ರಕ್ತಪಾತ ಕಂಡುಬಂದಿದೆ. ಆರಂಭಿಕ ವಹಿವಾಟಿನಲ್ಲಿಯೇ ಹೂಡಿಕೆದಾರರು ವ್ಯಾಪಕ ಮಾರಾಟಕ್ಕೆ ಮುಂದಾದ ಕಾರಣ ಬಿಎಸ್ಇ ಸೆನ್ಸೆಕ್ಸ್ ಬರೋಬ್ಬರಿ 1,700 ಅಂಕಗಳಷ್ಟು ಕುಸಿದು 75,010.66 ಮಟ್ಟಕ್ಕೆ ತಲುಪಿದೆ.
ಇದೇ ವೇಳೆ ಎನ್ಎಸ್ಇ ನಿಫ್ಟಿ ಕೂಡ ಶೇಕಡಾ 2.23ರಷ್ಟು ಕುಸಿತ ಕಂಡು 23,248.60 ಅಂಕಗಳಿಗೆ ವಹಿವಾಟು ಅಂತ್ಯಗೊಳಿಸಿದ್ದು, ಎಲ್ಲಾ ವಲಯಗಳ ಷೇರುಗಳ ಮೇಲೂ ಈ ನಕಾರಾತ್ಮಕ ಪ್ರಭಾವ ಬೀರಿದೆ.
ತೈಲ ಬೆಲೆ ಏರಿಕೆಯ ಬಿಸಿ
ಇರಾನ್ನ ಪ್ರಮುಖ ಎಲ್ಎನ್ಜಿ ಘಟಕದ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಇದರ ನೇರ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್ಗೆ 111 ಡಾಲರ್ ಗಡಿ ದಾಟಿದೆ. ಭಾರತವು ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಈ ಬೆಲೆ ಏರಿಕೆಯು ದೇಶದಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಹಾಗೂ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗುವ ಆತಂಕ ಹುಟ್ಟುಹಾಕಿದೆ. ಇದು ದೇಶದ ಸಣ್ಣ ಆರ್ಥಿಕತೆಯ (ಮ್ಯಾಕ್ರೋಎಕಾನಮಿ) ಸ್ಥಿರತೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಱರು ವಿಶ್ಲೇಷಿಸಿದ್ದಾರೆ.
ಷೇರುಗಳ ಕುಸಿತ
ಮಾರುಕಟ್ಟೆಯ ಈ ಭಾರಿ ಕುಸಿತದಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳು ಪ್ರಮುಖ ಪಾತ್ರ ವಹಿಸಿವೆ. ಎಚ್ಡಿಎಫ್ಸಿ (HDFC) ಬ್ಯಾಂಕ್ನ ಅರೆಕಾಲಿಕ ಅಧ್ಯಕ್ಷರಾಗಿದ್ದ ಅತನು ಚಕ್ರವರ್ತಿ ಅವರು ಆಂತರಿಕ ಮೌಲ್ಯಗಳು ಮತ್ತು ನೈತಿಕತೆಯ ಭಿನ್ನಾಭಿಪ್ರಾಯಗಳ ಕಾರಣ ನೀಡಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಆ ಬ್ಯಾಂಕಿನ ಷೇರುಗಳು ಸುಮಾರು ಶೇಕಡಾ 5ರಷ್ಟು (4.76%) ಕುಸಿತ ಕಂಡಿವೆ. ಇದರೊಂದಿಗೆ ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಸಿಐಸಿಐ ಬ್ಯಾಂಕ್ಗಳ ಷೇರುಗಳ ಮೌಲ್ಯವೂ ತಗ್ಗಿದೆ. ಇಂಧನ ವಲಯದ ಅನಿಶ್ಚಿತತೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಲಾರ್ಸನ್ ಅಂಡ್ ಟೂಬ್ರೊ, ಬಜಾಜ್ ಫೈನಾನ್ಸ್ ಹಾಗೂ ವಿಮಾನಯಾನ ಸಂಸ್ಥೆ ಇಂಡಿಗೋದ ಷೇರುಗಳೂ ಕೂಡ ಭಾರಿ ನಷ್ಟ ಅನುಭವಿಸಿವೆ. ಆದರೆ, ಇಂಧನ ಬೆಲೆ ಏರಿಕೆಯ ಲಾಭ ಪಡೆದ ಕೋಲ್ ಇಂಡಿಯಾ ಷೇರುಗಳು ಮಾತ್ರ ಏರಿಕೆ ದಾಖಲಿಸಿವೆ.
ವಿದೇಶಿ ಹೂಡಿಕೆದಾರರ ಹಿಂದೇಟು
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದ್ದರೂ, ಭವಿಷ್ಯದಲ್ಲಿ ದರ ಕಡಿತದ ಸುಳಿವು ನೀಡದೆ ಕಠಿಣ ನಿಲುವು ತಳೆದಿರುವುದು ಜಾಗತಿಕ ನಗದು ಹರಿವಿನ ಮೇಲೆ ಪರಿಣಾಮ ಬೀರಿದೆ. ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಬಲಗೊಳ್ಳುತ್ತಿರುವ ಡಾಲರ್ ಮೌಲ್ಯದಿಂದಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದಂತಹ ತಲ್ಲಣದ ಮಾರುಕಟ್ಟೆಗಳಿಂದ ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಿದ್ದಾರೆ.

