ಮುದ್ರಾ ಯೋಜನೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಆದ್ಯತೆ: ನಿರ‍್ಮಲಾ ಸೀತಾರಾಮನ್

ರಾಮೇಶ್ವರಂ, ತಮಿಳುನಾಡು (ಪಿಟಿಐ): ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ವಿತ್ತ ಮತ್ತು ಕಾರ‍್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಪ್ರಧಾನಮಂತ್ರಿ ಸ್ವನಿಧಿ ಸೇವಾ ಸಮೃದ್ಧಿ ಕಾರ‍್ಯಕ್ರಮದಡಿ ಫಲಾನುಭವಿಗಳಿಗೆ ಮಂಜೂರು ಪತ್ರಗಳನ್ನು ವಿತರಿಸಿ ಮಾತನಾಡಿ, ಪುರಸಭೆಯ ಅಧಿಕಾರಿಗಳು ಬಯಲು ಶೌಚ ಬಳಸದ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಈ ಯೋಜನೆಯ ಲಾಭ ಪಡೆಯಲು ಸಹಕರಿಸಬೇಕು ಎಂದರು.

ಇದು ಪಿಎಂಎಸ್ವಿಎ ನಿಧಿ ಯೋಜನೆಯ ಭಾಗವಾಗಿದ್ದು, ಅರ‍್ಹ ಫಲಾನುಭವಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಕೇಂದ್ರ ಸರ‍್ಕಾರದ ಎಂಟು ಯೋಜನೆಗಳಿಗೆ ಪ್ರವೇಶವನ್ನು ನೀಡುತ್ತದೆ. ಅವರ ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ-ಆರ‍್ಥಿಕ ಉನ್ನತಿಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ ಎಂದರು.

ಜನಧನ್-ಆಧಾರ್-ಮೊಬೈಲ್ ತ್ರಿವಳಿ ಮೂಲಕ ಆಧಾರ್ ಕಾರ್ಡ್‌ ನ್ನು ಫಲಾನುಭವಿಗೆ ಒದಗಿಸಲಾಗಿದೆ. ನಂತರ ಆತ/ಆಕೆ ಬ್ಯಾಂಕ್ ಖಾತೆಯನ್ನು ತೆರೆಯಬಹುದು ಮತ್ತು ನೇರವಾಗಿ ಆರ‍್ಥಿಕ ನೆರವು ಪಡೆಯಬಹುದು. ಕೇಂದ್ರವು ಫಲಾನುಭವಿಯ ಖಾತೆಗೆ ಹಣ ವರ‍್ಗಾಯಿಸಲಿದ್ದು, ಮಧ್ಯವರ‍್ತಿಗಳನ್ನು ತಪ್ಪಿಸಲಾಗಿದೆ ಎಂದು ಹೇಳಿದರು.

ಕೇಂದ್ರವು 100 ರೂ. ನೀಡಿದರೆ, ಫಲಾನುಭವಿಗೆ ಸಿಗುವುದು ಕೇವಲ 15 ರೂ. ಉಳಿದ 85 ರೂ. ʻಮಧ್ಯಸ್ಥಿಕೆದಾರರು ಮತ್ತು ಇತರರ' ಪಾಲಾಗುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿ, ʻಅವರೇ (ರಾಜೀವ್ ಗಾಂಧಿ) ಇದನ್ನು ಪ್ರಸ್ತಾಪಿಸಿದ್ದಾರೆ. 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕೇಂದ್ರ ನೀಡುವ ಆರ‍್ಥಿಕ ಸಹಾಯವನ್ನು ಫಲಾನುಭವಿ ನೇರವಾಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನಮಗೆ ಸಲಹೆ ನೀಡಿದರು. ತಂತ್ರಜ್ಞಾನವನ್ನು ಬಳಸುವುದರಿಂದ ಫಲಾನುಭವಿಗಳು ಮೊತ್ತವನ್ನು ನೇರವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ, ಇದರಿಂದಾಗಿ ಮಧ್ಯವರ‍್ತಿಗಳನ್ನು ತಪ್ಪಿಸಬಹುದು,ʼ ಎಂದು ಅವರು ಹೇಳಿದರು.

ʻಫಲಾನುಭವಿಗಳಿಗೆ ಸೇವೆ ಸಲ್ಲಿಸಲು ಬ್ಯಾಂಕ್ ಖಾತೆಗಳನ್ನು ತೆರೆಯುವುದನ್ನು ದೇಶದಾದ್ಯಂತ ಸಾಮೂಹಿಕ ಆಂದೋಲನದಂತೆ ನಡೆಸಲಾಯಿತು. ಮುದ್ರಾ ಯೋಜನೆಯನ್ನು ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಬ್ಯಾಂಕ್ ಸಾಲ ಒದಗಿಸಲು ಪರಿಚಯಿಸಲಾಗಿದೆ. ಈ ಕಾರ‍್ಯಕ್ರಮದಡಿ ಸಣ್ಣ ಉದ್ಯಮಗಳನ್ನು ನಡೆಸುತ್ತಿರುವ ಅಥವಾ ವ್ಯಾಪಾರವನ್ನು ಪ್ರಾರಂಭಿಸಲು ಆಸಕ್ತಿಯಿರುವ ಮಹಿಳೆಯರು ಬ್ಯಾಂಕ್ ಅನ್ನು ಸಂಪರ‍್ಕಿಸಿ, ಮುದ್ರಾ ಯೋಜನೆಯಿಂದ ಸಾಲ ಪಡೆದು ಉದ್ಯಮವನ್ನು ಆರಂಭಿಸಬಹುದು. ಈ ಯೋಜನೆಯ 100 ಫಲಾನುಭವಿಗಳಲ್ಲಿ 60 ಮಂದಿ ಮಹಿಳೆಯರಿದ್ದಾರೆʼʼ ಎಂದು ವಿವರಿಸಿದರು.

ʻಪಿಎಂಎಂವೈ ಅನ್ನು ಕೃಷಿಯೇತರ ಸಣ್ಣ/ಸೂಕ್ಷ್ಮ ಉದ್ಯಮಗಳಿಗೆ 10 ಲಕ್ಷ ರೂ.ವರೆಗೆ ಸಾಲ ಒದಗಿಸಲು ಏಪ್ರಿಲ್ 8, 2015 ರಂದು ಪ್ರಾರಂಭಿಸಲಾಯಿತು. ಬೀದಿ ವ್ಯಾಪಾರಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಬ್ಯಾಂಕುಗಳ ಮೂಲಕ ಪಿಎಂಎಸ್ವಿಎ ನಿಧಿ ಯೋಜನೆಯನ್ನು ಪರಿಚಯಿಸಿದೆ ಎಂದು ಹೇಳಿದರು.


Next Story