ಫ್ಲ್ಯಾಟ್​ಫಾರ್ಮ್​ ಅನ್ನು ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಸಂಪೂರ್ಣವಾಗಿ ಕಾರ್ಯಾರಂಭವಾದ ನಂತರ, ಸರ್ಕಾರಿ ಇಲಾಖೆಗಳು ಟೆಂಡರ್ ಆಹ್ವಾನಿಸದೆ ತಮ್ಮ ಲೇಖನ ಸಾಮಗ್ರಿ ಮತ್ತು ಇತರ ಅಗತ್ಯಗಳನ್ನು ಖರೀದಿಸಬಹುದು.

ಕರ್ನಾಟಕ ಸರ್ಕಾರದ ಉದ್ಯಮವಾದ ಎಂಎಸ್‌ಐಎಲ್ (ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್) ತನ್ನದೇ ಆದ ಇ-ಕಾಮರ್ಸ್ ಫ್ಲ್ಯಾಟ್​ಫಾರ್ಮ್​ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಉಪಕ್ರಮವು ಸರ್ಕಾರಿ ಮತ್ತು ಖಾಸಗಿ ಉತ್ಪಾದಕರಿಗೆ ಮಾರುಕಟ್ಟೆ ಸೃಷ್ಟಿಸುವ ಗುರಿಯನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ಪೋರ್ಟಲ್‌ನಂತೆಯೇ ಕೆಲಸ ಮಾಡಲಿದೆ.

ಶನಿವಾರ (ಮಾರ್ಚ್​ 29)ರಂದು ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಯೋಜನೆ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾರೆ. ಇದನ್ನು ಪ್ರಗತಿಪರ ಹೆಜ್ಜೆ ಎಂದು ಬಣ್ಣಿಸಿದ ಸಚಿವರು, ಅದರ ಅನುಷ್ಠಾನಕ್ಕಾಗಿ ಸಮಗ್ರ ನಕ್ಷೆ ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

"ಈ ಫ್ಲ್ಯಾಟ್​ಫಾರ್ಮ್​ ಅನ್ನು ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಸಂಪೂರ್ಣವಾಗಿ ಕಾರ್ಯಾರಂಭವಾದ ನಂತರ, ಸರ್ಕಾರಿ ಇಲಾಖೆಗಳು ಟೆಂಡರ್ ಆಹ್ವಾನಿಸದೆ ತಮ್ಮ ಲೇಖನ ಸಾಮಗ್ರಿ ಮತ್ತು ಇತರ ಅಗತ್ಯಗಳನ್ನು ಖರೀದಿಸಬಹುದು. ಅಲ್ಲದೆ, ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಹ ಈ ಪ್ಲ್ಯಾಟ್​ಫಾರ್ಮ್​ ಬಳಸಬಹುದು. ಇದು ಕೇಂದ್ರ ಸರ್ಕಾರದ ಜಿಇಎಂ ಪೋರ್ಟಲ್‌ನಂತೆ ಕಾರ್ಯನಿರ್ವಹಿಸುತ್ತದೆ," ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.

ಮೊದಲ ಹಂತದಲ್ಲಿ ಎಂಎಸ್​ಐಎಲ್​ ಉತ್ಪನ್ನಗಳು

ಮೊದಲ ಹಂತದಲ್ಲಿ, ಕೇವಲ ಎಂಎಸ್‌ಐಎಲ್ ಉತ್ಪನ್ನಗಳು ಮಾತ್ರ ಈ ವೇದಿಕೆಯಲ್ಲಿ ಲಭ್ಯವಿರುತ್ತವೆ. ಎರಡನೇ ಹಂತದಲ್ಲಿ ಮೈಸೂರು ಸ್ಯಾಂಡಲ್ ಸೋಪ್, ಲಿಡ್ಕರ್ ಉತ್ಪನ್ನಗಳು, ಮೈಸೂರು ಸಿಲ್ಕ್, ಕಾವೇರಿ ಎಂಪೋರಿಯಂ, ಮತ್ತು ನಂದಿನಿ ಸೇರಿದಂತೆ ವಿವಿಧ ಸರ್ಕಾರಿ ಉದ್ಯಮಗಳ ಉತ್ಪನ್ನಗಳನ್ನು ಮಾರಲಾಗುತ್ತದೆ. ವೇದಿಕೆಯು ಎಂಎಸ್‌ಎಂಇಗಳು (ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟವನ್ನು ಮಾಡಲಿದೆ.

ಎಲೆಕ್ಟ್ರಾನಿಕ್ ಉತ್ಪನ್ನಗಳು

ಮೂರನೇ ಹಂತದಲ್ಲಿ ಗ್ರಾಹಕ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟದ ಸಾಲಿಗೆ ಸೇರಿಸಲಾಗುವುದು. ಆದರೆ ಅಂತಿಮ ಹಂತದಲ್ಲಿ ತಾಜಾ ಉತ್ಪನ್ನಗಳನ್ನು ಸೇರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಇ-ಕಾಮರ್ಸ್ ಕ್ಷೇತ್ರದ ಬೃಹತ್​ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಪಾಟೀಲ್, ಭಾರತದ ವಾರ್ಷಿಕ ಇ-ಕಾಮರ್ಸ್ ವಹಿವಾಟು ಪ್ರಸ್ತುತ 75 ಬಿಲಿಯನ್ ಡಾಲರ್‌ಗಳಷ್ಟಿದ್ದು, 2030 ರ ವೇಳೆಗೆ ಇದು 350 ಬಿಲಿಯನ್ ಡಾಲರ್‌ಗಳಿಗೆ ಏರಲಿದೆ ಎಂದು ಹೇಳಿದರು. ದೇಶದಲ್ಲಿ ಸುಮಾರು 900 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು, ಇ-ಕಾಮರ್ಸ್ ಬೆಳವಣಿಗೆಗೆ ಮಾರುಕಟ್ಟೆ ಪರಿಸ್ಥಿತಿಗಳು ಅತ್ಯಂತ ಅನುಕೂಲಕರವಾಗಿವೆ ಎಂದು ಅವರು ವಿವರಿಸಿದ್ದಾರೆ.

ಸಭೆಯಲ್ಲಿ ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ನಿರ್ದೇಶಕ ಚಂದ್ರಪ್ಪ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Next Story