ಆರ್‌ಸಿಬಿ ವಿಜಯೋತ್ಸವ: ಮೃತಪಟ್ಟ ಅಭಿಮಾನಿಗಳ ಸಂಖ್ಯೆ ಏಳಕ್ಕೆ ಏರಿಕೆ


ಆರ್‌ಸಿಬಿ ವಿಜಯೋತ್ಸವ ಸಂಭ್ರಮಾಚರಣೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ 6ನೇ ಗೇಟ್‌ ಬಳಿ ಸಂಭವಿಸಿದ ನೂಕುನುಗ್ಗಲಿನಲ್ಲಿ ಏಳು ಜನ ಮೃತಪಟ್ಟಿದ್ದಾರೆ. ಅಸ್ವಸ್ಥರಾದ 25 ಕ್ಕೂ ಹೆಚ್ಚುಮಂದಿಯನ್ನು ಬೌರಿಂಗ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. 

ವಿಧಾನಸೌಧದಲ್ಲಿ ಆಯೋಜಿಸಿದ್ದ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಗೊಂದಲದ ಗೂಡಾಗುವುದರ ಜತೆಗೆ ನಿರೀಕ್ಷೆಯಂತೆ ನಡೆಯಲಿಲ್ಲ. ಯೋಜನೆಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಮಾತನಾಡುವುದರ ಜತೆಗೆ ಆರ್‌ಸಿಬಿಯಿಂದ ಇಬ್ಬರು ಆಟಗಾರರು ಮಾತನಾಡುವುದಿತ್ತು. ಆದರೆ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ ನಡೆದು ಇಡೀ ಕಾರ್ಯಕ್ರಮಕ್ಕೆ ಸೂತಕದ ಛಾಯೆ ಆವರಿಸಿತ್ತು.

ಮಳೆ ಸುರಿದ ಕಾರಣ ವಿಧಾನಸೌಧ ಬಳಿ ನಡೆದ ಸನ್ಮಾನ ಕಾರ್ಯಕ್ರಮದಿಂದ ಆಟಗಾರರು ಬೇಗನೆ ಹೊರಟರು. ವೇದಿಕೆಯ ಮೇಲೆ ಸಚಿವರು ಹಾಗು ಅಧಿಕಾರಿಗಳು ತುಂಬಿದ್ದರು. ಸನ್ಮಾನ ಮಾಡುವ ವೇಳೆ ಯಾರಿಗೆ ಸನ್ಮಾನ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗಲಿಲ್ಲ. ಇನ್ನು ಸನ್ಮಾನ ಕಾರ್ಯಕ್ರಮ ಯೋಜನೆಯಂತೆ ನಡೆಯದೆ ಗೊಂದಲದ ಗೂಡಾಯಿತು.

ಸರ್ಕಾರದ ಈ ಅವ್ಯವಸ್ಥೆಯ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. 

 

Read More
Next Story