ಜಾತಿ ಗಣತಿ ಮಾಹಿತಿ ಸೋರಿಕೆ ಮಾಡಿದ ಕಾಣದ ಕೈ ಯಾವುದು? ಕುಮಾರಸ್ವಾಮಿ ಪ್ರಶ್ನೆ
x

ಜಾತಿ ಗಣತಿ ಮಾಹಿತಿ ಸೋರಿಕೆ ಮಾಡಿದ ಕಾಣದ ಕೈ ಯಾವುದು? ಕುಮಾರಸ್ವಾಮಿ ಪ್ರಶ್ನೆ


ಜಾತಿ ಗಣತಿ ವಿಚಾರದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೇರವಾಗಿ ಆರೋಪ ಮಾಡಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ,  ಅನುಮಾನ ನಿಜವಾಯಿತು! ಎಂದು ಹೇಳಿಕೊಂಡಿದ್ದಾರೆ.

"ಮುಖ್ಯಮಂತ್ರಿ ಮಹೋದಯರ ಪ್ರಕಾರ ಅದು ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ! ಶ್ರೀ  ಸಿದ್ದರಾಮಯ್ಯ ಈಗ ಉಲ್ಟಾ ಹೊಡೆದಿದ್ದಾರೆ! 'ಅದು ಜಾತಿ ಸಮೀಕ್ಷೆ ಅಲ್ಲ.. ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ' ಎಂದು ಹೊಸ ಪೀಪಿ ಊದುತ್ತಿದ್ದಾರೆ," ಎಂದು ಟೀಕಿಸಿದ್ದಾರೆ.

"ಹಾಗಾದರೆ ಹಾದಿ ಬೀದಿಯಲ್ಲಿ ತೇಲಾಡುತ್ತಿರುವ, ಬಿದ್ದೂಬಿದ್ದು ಹೊರಳಾಡುತ್ತಿರುವ ಅಂಕಿ ಸಂಖ್ಯೆಗಳು ಏನು? ಸೋರಿಕೆಯಾಗಿರುವ ದತ್ತಾಂಶ ಮತ್ತು ಸಿಎಂ ಅವರು ಹೇಳಿದ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ದತ್ತಾಂಶವು ಎರಡೂ ಒಂದೇನಾ? ಅಥವಾ ಅಲ್ಲವಾ? ವರದಿ ಬಹಿರಂಗಕ್ಕೆ ಮೊದಲೇ ವ್ಯವಸ್ಥಿತವಾಗಿ ಸೋರಿಕೆ ಮಾಡಿದ್ದು ಯಾರು? ಅದರ ಹಿಂದಿರುವ ಕಳ್ಳ ಕೈ ಯಾವುದು? ಬೀದಿಪಾಲಾದ ದತ್ತಾಂಶ ಇಟ್ಟುಕೊಂಡು ಏನು ಮಾಡುತ್ತೀರಿ?," ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಾಹೇಬರೇ.. ಸೋರಿಕೆ ಬಗ್ಗೆ ತಪ್ಪದೇ ತನಿಖೆ ಮಾಡಿಸಿ. ಅದು ಆಯೋಗದಿಂದ ಸೋರಿಕೆ ಆಯಿತಾ? ಅಥವಾ ಸಂಪುಟದಲ್ಲಿ ಸಚಿವರ ಕೈ (!?) ಸೇರಿದ ಮೇಲೆ ಸೋರಿಕೆ ಆಯಿತಾ? ಅಥವಾ ನಿಮ್ಮ ಗ್ಯಾಂಗ್ ಕೈ ಚಳಕವಾ? ತನಿಖೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೀರಾ? ನೀವೇ ಹೇಳಬೇಕು.  ಸೋರಿಕೆಗೆ ನಿಮ್ಮ ಸರಕಾರವೇ ಹೊಣೆ, ಸಂಶಯವೇ ಇಲ್ಲ. ಯಾವುದೇ ಕಾರಣಕ್ಕೂ ಸೋರಿಕೆಯಾದ ಈ ವರದಿಯನ್ನು ಸಂಪುಟದಲ್ಲಿ ಮಂಡಿಸಲೇಬಾರದು. ಮಂಡಿಸಿ ಸಂಪುಟದ ಪಾವಿತ್ರ್ಯತೆ ಹಾಳು ಮಾಡಬಾರದು ಎಂದು ಕುಮಾರಸ್ವಾಮಿ ಖಡಕ್‌ ಆಗಿ ಹೇಳಿದ್ದಾರೆ.

"ನೆಮ್ಮದಿಯಾಗಿದ್ದ ರಾಜ್ಯಕ್ಕೆ ಬೆಂಕಿ ಹಾಕಿದ್ದೀರಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದ್ದೀರಿ. ನಿಮ್ಮ ದುರುದ್ದೇಶ, ದುಷ್ಟತನದ ಪರಾಕಾಷ್ಠೆ ಇದು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಳ್ಳಿ ಇಟ್ಟ ಪಾಪ ಸುಮ್ಮನೆ ಬಿಡುವುದಿಲ್ಲ, ಎಂದು ಟೀಕಿಸಿದ್ದಾರೆ.


Read More
Next Story