ಗುಜರಾತ್: ಕಚ್ ನಿವಾಸಿಗಳು ಮನೆಯೊಳಗೆ ಇರುವಂತೆ ಸೂಚನೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾಗರಿಕರು ಮನೆಯೊಳಗೆ ಇರುವಂತೆ ಮತ್ತು ಅನಗತ್ಯವಾಗಿ ಹೊರಗೆ ಹೋಗದಂತೆ ಗುಜರಾತ್ನ ಕಚ್ ಆಡಳಿತವು ಶನಿವಾರ ಎಚ್ಚರಿಕೆ ನೀಡಿದೆ.
ಭಾರತೀಯ ಸಶಸ್ತ್ರ ಪಡೆಗಳು ಶುಕ್ರವಾರ (ಮೇ 9) ರಾತ್ರಿ ಕಚ್ನಲ್ಲಿ ಪಾಕಿಸ್ತಾನದಿಂದ ಬಂದ ಡ್ರೋನ್ಗಳನ್ನು ಹೊಡೆದುರುಳಿಸಿದ್ದವು. ಬಳಿಕ ಕಚ್ ಮತ್ತು ಗುಜರಾತ್ನ ಇತರ ಎರಡು ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಳಿಸಿದ್ದವು.
"ಎಲ್ಲಾ ನಾಗರಿಕರು ಮನೆಯೊಳಗೆ ಸುರಕ್ಷಿತವಾಗಿರಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬೇಡಿ ಮತ್ತು ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ. ಭಯಪಡಬೇಡಿ" ಎಂದು ಕಚ್ ಕಲೆಕ್ಟರ್ ಶನಿವಾರ ಬೆಳಿಗ್ಗೆ ಆಡಳಿತದ ಅಧಿಕೃತ 'ಎಕ್ಸ್' ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪ್ರಧಾನ ಕಚೇರಿ ಭುಜ್ ಅಂತರರಾಷ್ಟ್ರೀಯ ಗಡಿಗಳು ಮತ್ತು ಪಾಕಿಸ್ತಾನದೊಂದಿಗಿನ ನಿಯಂತ್ರಣ ರೇಖೆಯ ಉದ್ದಕ್ಕೂ ಡ್ರೋನ್ಗಳು ಕಂಡುಬಂದ 26 ಸ್ಥಳಗಳಲ್ಲಿ ಒಂದಾಗಿದೆ ಎಂದು ಸೇನೆ ಶುಕ್ರವಾರ ತಿಳಿಸಿದೆ.
ಕಚ್ ಜಿಲ್ಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದ್ದು, ಭಾರತ-ಪಾಕ್ ಗಡಿಗೆ ಹತ್ತಿರವಿರುವ ಬನಸ್ಕಾಂತ ಮತ್ತು ಪಠಾಣ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ. ಪಠಾಣ್ನ ಸಂತಲ್ಪುರ ತಾಲೂಕಿನ ಗಡಿಯಲ್ಲಿರುವ ಕೆಲವು ಹಳ್ಳಿಗಳು ಸಹ ವಿದ್ಯುತ್ ಕಡಿತಗೊಂಡಿವೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶುಕ್ರವಾರ ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಇಲಾಖೆಗಳು ಮತ್ತು ಸಶಸ್ತ್ರ ಮತ್ತು ಅರೆಸೈನಿಕ ಪಡೆಗಳ ನಡುವೆ ಉತ್ತಮ ಸಮನ್ವಯವನ್ನು ಸ್ಥಾಪಿಸುವ ಗುರಿಯನ್ನು ಈ ಸಭೆ ಹೊಂದಿದೆ ಎಂದು ಶುಕ್ರವಾರ ಗಾಂಧಿನಗರದಲ್ಲಿ ನಡೆದ ಸಂವಾದದ ನಂತರ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದರು.