ಅಧಿಕಾರಿಗಳ ಬಳಿ ಚರ್ಚಿಸಿ ಸಿಎಂ ಕಾರ್ಯಕ್ರಮ ಆಯೋಜಿಸಬೇಕಿತ್ತು: ಮಾಜಿ ಸಚಿವ ಅರಗ ಜ್ಞಾನೇಂದ್ರ

ಆರ್ಸಿಬಿ ಟ್ರೋಫಿ ಜಯಿಸಿದ ಮಂಗಳವಾರ(ಜೂ.3) ದ ರಾತ್ರಿಯಿಂದಲೇ ಜನರು ಸಂಭ್ರಮಾಚರಣೆ ಮಾಡಲು ಆರಂಭಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವರು ಅಧಿಕಾರಿಗಳ ಜತೆ ಸಭೆ ನಡೆಸಿ ವಿಜಯೋತ್ಸವ ನಡೆಸುವ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕಿತ್ತು. ಕಾರ್ಯಕ್ರಮ ಮಾಡುತ್ತೇವೆ ಭಾಗವಹಿಸಿ ಎಂದು ಸರ್ಕಾರವೇ ಆಹ್ವಾನ ನೀಡಿ ಸಾರ್ವಜನಿಕರಿಗೆ ಸೂಕ್ತ ಭದ್ರತೆ ನೀಡದೆ ಜವಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ದುರಂತ ನಡೆದ ಸ್ಥಳದಲ್ಲಿ ಅಂಬ್ಯಲೆನ್ಸ್, ಅಗ್ನಿಶಾಮಕ ವಾಹನಗಳು ಇರಲಿಲ್ಲ. ಕೇವಲ ಮೂರು ಕೆಎಸ್ಆರ್ಪಿ ಬಸ್ನಲ್ಲಿನ ಸಿಬ್ಬಂದಿಗಳಿಂದ ಎಷ್ಟು ಭದ್ರತೆ ನೀಡಲು ಸಾಧ್ಯ. ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದರೂ ತರಾತುರಿಯಲ್ಲಿ ಆಯೋಜಿಸುವುದು ಬೇಕಿರಲಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ತಂಡಗಳು ಟ್ರೋಫಿ ಜಯಿಸಿದ್ದರೆ ಸಮಾರಂಭ ಮಾಡಬಹುದಿತ್ತು. ಕ್ಲಬ್ ತಂಡವಾಗಿರುವ ಆರ್ಸಿಬಿ ಗೆಲುವು ಸಂಭ್ರಮಿಸುವ ಅಗತ್ಯವಿರಲಿಲ್ಲ ಎಂದರು.