KPSC ಯಿಂದ KEA ಕೈ ಸೇರಿದರೂ ಸುಧಾರಣೆ ಕಾಣದ ನೇಮಕಾತಿ ಪ್ರಕ್ರಿಯೆ; ಅಲ್ಲೂ ಭ್ರಷ್ಟಾಚಾರದ ವಾಸನೆ

ಭ್ರಷ್ಟಾಚಾರ ಆರೋಪದಿಂದಾಗಿ ಕೆಪಿಎಸ್‌ಸಿಯಿಂದ ಕೆಇಎಗೆ ಹೋದರೂ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಅಂತ್ಯ ಕಾಣದಾಗಿದೆ. ಇತ್ತೀಚೆಗೆ ಕೆಇಎ ನಡೆಸಿದ ಪರೀಕ್ಷೆಗಳಲ್ಲಿಯೂ ಗೊಂದಲಗಳು ಉಂಟಾಗಿ ಮರು ಪರೀಕ್ಷೆಗೆ ಹೈಕೋರ್ಟ್ ಅದೇಶಿಸಿರುವುದೇ ಸಾಕ್ಷಿ.;

Update: 2025-05-31 03:30 GMT

ಕೆಪಿಎಸ್‌ಸಿ ಹಾಗೂ ಕೆಇಎ ಪ್ರಾಧಿಕಾರ

ರಾಜ್ಯದಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರಗಳು ನಡೆಸುತ್ತಿರುವ ಪರೀಕ್ಷೆಗಳು ಭ್ರಷ್ಟಾಚಾರ ಹಾಗೂ ಅಕ್ರಮಗಳ ಆರೋಪದಿಂದ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ. 

ಕಾಲಮಿತಿಯಲ್ಲಿ ನಡೆಯದ ನೇಮಕಾತಿ ಪ್ರಕ್ರಿಯೆಯಿಂದಾಗಿ ಸುಗಮ ಆಡಳಿತವೂ ಅಸಾಧ್ಯವಾಗಿದೆ. ಸರ್ಕಾರಿ ಯಂತ್ರದ ಪಾರದರ್ಶಕ ಕಾರ್ಯನಿರ್ವಹಣೆಗೆ ಈ ನೇಮಕಾತಿ ಅಕ್ರಮಗಳೇ ತೊಡಕಾಗಿ ಕಾಡುತ್ತಿವೆ.

ಸರ್ಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು 1951ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಸ್ಥಾಪಿಸಿತು. ಇದು ಸಾಂವಿಧಾನಿಕ ಸಂಸ್ಥೆಯಾಗಿದೆ. ಆದರೆ, ಇತ್ತೀಚೆಗೆ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರ, ವಿಳಂಬ ಧೋರಣೆ, ಹುದ್ದೆಗೆ ದರ ನಿಗಧಿಯಂತಹ ಗಂಭೀರ ಆರೋಪಗಳಿಂದ ಪರೀಕ್ಷಾರ್ಥಿಗಳ ವಿಶ್ವಾಸ ಕಳೆದುಕೊಂಡಿದೆ.

2011ರಲ್ಲಿ ನಡೆದ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅಕ್ರಮ ಕೆಪಿಎಸ್ಸಿ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಕಳಂಕ ಅಂಟಿಸಿದೆ. ಈ ಅಕ್ರಮದಲ್ಲಿ ಆಯೋಗದ ಅಧ್ಯಕ್ಷರು, 9 ಮಂದಿ ಸದಸ್ಯರು ಭಾಗಿಯಾಗಿದ್ದರು.

ಇದಾದ ಬಳಿಕ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಾಕಷ್ಟು ಸುಧಾರಣೆ ತಂದರೂ ಪರೀಕ್ಷಾ ಅಕ್ರಮಗಳು ಮಾತ್ರ ನಿಂತಿಲ್ಲ. 2022 ರಲ್ಲಿ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಳಿಕ ರಾಜ್ಯ ಸರ್ಕಾರ ಮರು ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿತು. ಅಲ್ಲಿಯವರೆಗೆ ಸಿಇಟಿ ಪರೀಕ್ಷೆ ಮಾತ್ರ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿಕೊಂಡಿತು. 

ಕೆಇಎಗೆ ಹಸ್ತಾಂತರವಾದ ಪರೀಕ್ಷೆಗಳು 

ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿದ್ದ ಹಲವು ಪರೀಕ್ಷೆಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹಸ್ತಾಂತರವಾದವು. ಅವುಗಳಲ್ಲಿ ಪ್ರಮುಖವಾಗಿ 545 ಹಾಗೂ 402 ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ನಡೆದ ಮರು ಪರೀಕ್ಷೆ, 2500 ಬಿಎಂಟಿಸಿ ನಿರ್ವಾಹಕ ಹುದ್ದೆಗಳ ನೇಮಕಾತಿ, 1000 ಗ್ರಾಮ ಆಡಳಿತ ಅಧಿಕಾರಿಗಳು, 404 ಸಹಾಯಕ ಎಂಜಿನಿಯರ್‌ ಹಾಗೂ ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕಾತಿ ಪರೀಕ್ಷೆ, 1001 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು, ವಿವಿಧ ನಿಗಮ ಹಾಗೂ ಮಂಡಳಿಗಳಲ್ಲಿ 650 ಗ್ರೂಪ್‌ ʼಸಿʼ ಹುದ್ದೆಗಳಿಗೆ ಪರೀಕ್ಷೆ ನಡೆಸಿದೆ.

ಇದರಲ್ಲಿ ಕೆಲ ಪರೀಕ್ಷೆಗಳು ಯಾವುದೇ ಲೋಪಗಳಿಲ್ಲದೆ ಸುಸೂತ್ರವಾಗಿ ನಡೆದರೆ, ಮತ್ತೆ ಕೆಲ ಪರೀಕ್ಷೆಗಳು ಕೆಪಿಎಸ್‌ಸಿ ಅಕ್ರಮದಂತೆ ಪುನರಾವರ್ತನೆ ಆದ ಕಾರಣ ಈಗ ಕೆಇಎ ಮೇಲೆ ವಿಶ್ವಾಸಾರ್ಹತೆ ಕ್ಷೀಣಿಸುತ್ತಿದೆ. 

ಕೆಇಎ ನಡೆಸಿದ ಪರೀಕ್ಷೆಗಲ್ಲೂ ಲೋಪ

2022ರಲ್ಲಿ ಕೆಪಿಎಸ್ ಸಿ ನಡೆಸಿದ ಪಿಎಸ್‌ಐ ಹುದ್ದೆಗಳ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಬಳಿಕ ಮರುಪರೀಕ್ಷೆ ಹೊಣೆಯನ್ನು ಕೆಇಎಗೆ ವಹಿಸಲಾಯಿತು. ಮರು ಪರೀಕ್ಷೆಯನ್ನು ಯಾವುದೇ ಲೋಪಗಳಿಲ್ಲದೇ ನಡೆಸುವಲ್ಲಿ ಯಶಸ್ವಿಯೂ ಆಯಿತು. 

2017 ರಲ್ಲಿ ಕೆಪಿಸಿಎಲ್‌ ನಡೆಸಿದ ಎಇ ಹಾಗೂ ಜೆಇ ಹುದ್ದೆಗಳ ಪರೀಕ್ಷೆಯಲ್ಲಿ ಲೋಪಗಳು ಕಂಡ ಬಂದ ಹಿನ್ನೆಲೆ ಮರು ಪರೀಕ್ಷೆ ನಡೆಸುವ ಹೊಣೆಯನ್ನು ಕೆಇಎಗೆ ವರ್ಗಾಯಿಸಲಾಯಿತು. ಅದರಂತೆ 2024 ಫೆಬ್ರುವರಿ ತಿಂಗಳಲ್ಲಿ ಎಇ ಹಾಗೂ ಜೆಇ ಹುದ್ದೆಗಳ ಪರೀಕ್ಷೆಗೆ ಋಣಾತ್ಮಕ ಅಂಕಗಳ ಆದೇಶ ಹೊರಡಿಸಿ ಪರೀಕ್ಷೆ ನಡೆಸಿತ್ತು. ಅದರ ಆಧಾರದ ಮೇಲೆ ಮೇ ತಿಂಗಳಲ್ಲಿ ಆಯ್ಕೆಪಟ್ಟಿಯನ್ನೂ ಪ್ರಕಟಿಸಿತ್ತು. ಆಯ್ಕೆಪಟ್ಟಿಯಲ್ಲಿ ಹೆಸರಿಲ್ಲದ ಅಭ್ಯರ್ಥಿಗಳು ಋಣಾತ್ಮಕ ಅಂಕದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 2024 ಮೇ ತಿಂಗಳಲ್ಲಿ ಪ್ರಕಟಿಸಿದ್ದ ಆಯ್ಕೆ ಪಟ್ಟಿ ರದ್ದುಗೊಳಿಸಿ ಮರುಪರೀಕ್ಷೆಗೆ ಆದೇಶಿಸಿದೆ.

ಪರೀಕ್ಷಾ ಕ್ರಮದ ಎಡವಟ್ಟಿನಿಂದಾಗಿ ಅಭ್ಯರ್ಥಿಗಳು ಮತ್ತಷ್ಟು ವಿಳಂಬ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಗೊಂದಲದಲ್ಲಿ ಅಭ್ಯರ್ಥಿಗಳು

ಪರೀಕ್ಷಾ ಪ್ರಾಧಿಕಾರಗಳು ನೇಮಕಾತಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸದ ಕಾರಣ ಅಭ್ಯರ್ಥಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಕೆಪಿಎಸ್‌ಸಿ ಹಾಗೂ ಕೆಇಎ ನೇಮಕಾತಿ ವಿಧಾನಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್‌ ಮರೂರು ಅವರು ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿ, "ಕೆಪಿಎಸ್‌ಸಿ, ಕೆಇಎ ಹಾಗೂ ಪೊಲೀಸ್‌ ನೇಮಕಾತಿ ಪ್ರಾಧಿಕಾರ ಸೇರಿದಂತೆ ಯಾರನ್ನು ನಂಬಿ ನಾವು ಅಧ್ಯಯನ ಮಾಡಬೇಕು ಎಂದು ತಿಳಿಯದಾಗಿದೆ.  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ 404 ಎಇ ಹಾಗೂ ಜೆಇ ಪರೀಕ್ಷೆ, ಕೆಎಎಸ್‌ ಗೆಜೆಟೆಡ್‌ ಪ್ರೊಬೆಷನರಿ ನೇಮಕಾತಿಯಲ್ಲಿ ಲೋಪಗಳಾಗಿರುವುದು ಗಮನಕ್ಕೆ ಬಂದರೂ ಸರ್ಕಾರ ಕ್ರಮಕ್ಕೆ ಮುಂದಾಗಿಲ್ಲ. ಇದೀಗ ಹೈಕೋರ್ಟ್‌ ಎಇ ಹಾಗೂ ಜೆಇ ಮರು ಪರೀಕ್ಷೆಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಆದರೆ, ಇದೇ ರೀತಿ ಮುಂದುವರಿದರೆ ಹಲವು ವರ್ಷಗಳಿಂದ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ನಿಷ್ಠಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆ ಕನಸಾಗಿಯೇ ಉಳಿಯಲಿದೆʼʼ ಎಂದರು. 

ವಿದ್ಯಾರ್ಥಿಗಳಿಗೆ ಕೆಪಿಎಸ್‌ಸಿ ಮೇಲಿನ ನಂಬಿಕೆ ಹೋದಾಗ ಕೆಇಎ ನಿಷ್ಪಕ್ಷಪಾತವಾಗಿ ಪರೀಕ್ಷೆ ನಡೆಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಇಎಯಲ್ಲೂ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿರುವುದು ಆಘಾತ ತಂದಿದೆ. ಪರೀಕ್ಷೆಗಳು ಉತ್ತಮವಾಗಿ ನಡೆದರೆ ಅರ್ಹರಿಗೆ ಉದ್ಯೋಗಗಳು ದೊರೆಯುತ್ತವೆ ಎಂದು ತಿಳಿಸಿದರು.  

ನೇಮಕಾತಿ ಪ್ರಕ್ರಿಯೆ ವಿಳಂಬ 

ರಾಜ್ಯ ನೇಮಕಾತಿ ಸಂಸ್ಥೆಗಳಾದ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪೊಲೀಸ್‌ ನೇಮಕಾತಿ ಘಟಕಗಳು ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ವಿದ್ಯಾರ್ಥಿಗಳನ್ನು ಘಾಸಿಗೊಳಿಸಿದೆ.

ಕೆಪಿಎಸ್‌ಸಿ ಈವರೆಗೆ ನಡೆಸಿದ ಯಾವ ನೇಮಕಾತಿಯೂ ನಿಗದಿತ ಸಮಯ ಹಾಗೂ ಭ್ರಷ್ಟಾಚಾರದ ಕಳಂಕವಿಲ್ಲದೇ ನಡೆದಿಲ್ಲ ಎಂದು ಪ್ರತಿಪಕ್ಷಗಳು ಹಾಗೂ ಅಭ್ಯರ್ಥಿಗಳು ಆರೋಪಿಸುತ್ತಾರೆ.

ಇತ್ತೀಚೆಗೆ ನಡೆದ 2024 ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಎರಡು ಬಾರಿ ಪೂರ್ವಭಾವಿ ಪರೀಕ್ಷೆ ನಡೆಸಿತು. 2024 ಫೆಬ್ರವರಿ 18 ಹಾಗೂ 19 ರಂದು ಕೆಇಎ ನಡೆಸಿದ ಎಇ ಹಾಗೂ ಜೆಇ ಪರೀಕ್ಷೆಯಲ್ಲಿನ ಋಣಾತ್ಮಕ ಅಂಕದ ಗೊಂದಲದಿಂದ ಈಗ ಮರು ಪರೀಕ್ಷೆ ನಡೆಸಲು ಆದೇಶವಾಗಿದೆ. 

ಪೊಲೀಸ್‌ ನೇಮಕಾತಿ ಆಯೋಗವು 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ 2021 ರಲ್ಲಿ ಅಧಿಸೂಚನೆ ಹೊರಡಿಸಿ ಫಲಿತಾಂಶ ಪ್ರಕಟಿಸಿದರೂ ಭ್ರಷ್ಟಾಚಾರ ಆರೋಪದಿಂದ ಮರು ಪರೀಕ್ಷೆ ನಡೆಯಿತು.  

ಇನ್ನಷ್ಟು ಹುದ್ದೆಗಳ ನೇಮಕಾತಿ ಬಾಕಿ

ಒಳ ಮೀಸಲಾತಿ ಸಮೀಕ್ಷೆಯ ಕಾರಣದಿಂದ ಹಲವು ಇಲಾಖೆಗಳು ನೇಮಕಾತಿ ಅಧಿಸೂಚನೆ ಹೊರಡಿಸಿವೆ. ಇನ್ನು ಕೆಲ ಹುದ್ದೆಗಳ ಅಧಿಸೂಚನೆಗೆ ತಡೆ ನೀಡಲಾಗಿದೆ. ಒಳ ಮೀಸಲಾತಿ ವರದಿ ಬಳಿಕ ಸಾರಿಗೆ ಇಲಾಖೆಯಲ್ಲಿ ನಿರ್ವಾಹಕರು, ಎಫ್‌ಡಿಎ, ಎಸ್‌ಡಿಎ, ಜೂನಿಯರ್‌ ಆಫೀಸರ್‌ ಸೇರಿದಂತೆ 5000 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಸಲು ಸಿದ್ದತೆ ನಡೆದಿದೆ.

ಪರೀಕ್ಷಾ ಪ್ರಾಧಿಕಾರಗಳು ಯಾವುದೇ ಲೋಪವಿಲ್ಲದೇ ಇನ್ನಾದರೂ ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ಸುಸೂತ್ರವಾಗಿ ನಡೆಸಲಿ ಎಂಬುದು ಅಭ್ಯರ್ಥಿಗಳ ಆಶಯವಾಗಿದೆ.  

ವಾರ್ಷಿಕ ವೇಳಾಪಟ್ಟಿ ಮಾದರಿ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಗದಿತ ಅವಧಿಯೊಳಗೆ ಪ್ರಸ್ತಾವನೆ ಸಲ್ಲಿಸಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಎಲ್ಲಾ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. 

ಪ್ರತಿ ವರ್ಷ ಮೇ ಅಂತ್ಯದೊಳಗೆ ಸಂಬಂಧಪಟ್ಟ ಇಲಾಖೆಗಳು ಖಾಲಿ ಹುದ್ದೆಗಳ ಮಾಹಿತಿ ಕ್ರೋಢೀಕರಿಸಬೇಕು. ಜೂನ್ ಅಂತ್ಯದೊಳಗೆ ಖಾಲಿ ಹುದ್ದೆ ಭರ್ತಿಗಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿ ಅನುಮೋದನೆ ಪಡೆಯಬೇಕು. ಜುಲೈ ಅಂತ್ಯದೊಳಗೆ ಇಲಾಖೆಗಳು ಆರ್ಥಿಕ ಇಲಾಖೆ ಅನುಮೋದಿಸುವ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರಗಳಿಂದ ಪ್ರಸ್ತಾವನೆ ಸಲ್ಲಿಸಬೇಕು. ಆಗಸ್ಟ್‌ ಅಂತ್ಯದೊಳಗೆ ಕೆಪಿಎಸ್‌ಸಿ, ಕೆಇಎ ಹಾಗೂ ಇತರೆ ಪ್ರಾಧಿಕಾರಗಳಿಂದ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಳಿಸಿ, ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಬೇಕು. ಪ್ರತಿ ವರ್ಷ ನವೆಂಬರ್ ಅಂತ್ಯದೊಳಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

Tags:    

Similar News