ಕರ್ನಾಟಕದಲ್ಲಿ 'ತಬರನ ಕಥೆ'ಯಂತೆ ಶಾಸಕರ ಸ್ಥಿತಿ, ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಆಕ್ರೋಶ
ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ ಹಾಗೂ ಬೇಳೂರು ಗೋಪಾಲಕೃಷ್ಣ ಹೇಳುತ್ತಿದ್ದು ಸ್ವಪಕ್ಷಿಯರೇ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ಡಿಕೆ ತಿಳಿಸಿದರು.;
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಶಾಸಕರ ಪರಿಸ್ಥಿತಿ ದಯನೀಯವಾಗಿದ್ದು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ 'ತಬರನ ಕಥೆ'ಯಲ್ಲಿನ ನಾಯಕನ ಸ್ಥಿತಿಯಂತಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಜ್ಯ ಕಾಂಗ್ರೆಸ್ ಸರಕಾರದ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತಾಗಿದೆ. ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ," ಎಂದರು.
ರಾಜ್ಯದ ಆಡಳಿತವನ್ನು "ಆಲಿಬಾಬಾ 40 ಕಳ್ಳರು" ಎಂದು ಜರೆದ ಕುಮಾರಸ್ವಾಮಿ, "ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಕಮೀಷನ್ ಪಡೆದು ಮೋಜು ಮಾಡುತ್ತಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಿಗೆ ಹೋಗಲಾಗದ ದುಸ್ಥಿತಿಯಲ್ಲಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆ ಏನಿದೆ ಎಂದು ಪ್ರಶ್ನಿಸಿದರು. ಸರ್ಕಾರದ ಯೋಜನೆಗಳು ಮತ್ತು ಅನುದಾನಕ್ಕಾಗಿ ಸಚಿವರು ಹಾಗೂ ಕಚೇರಿಗಳ ಸುತ್ತ ಶಾಸಕರು ನಿರಂತರವಾಗಿ ಅಲೆಯಬೇಕಾಗಿದೆ ಎಂದು ಅವರು ಆರೋಪಿಸಿದರು. ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಯೇ ಹೀಗಾದರೆ, ವಿರೋಧ ಪಕ್ಷಗಳ ಶಾಸಕರ ಪಾಡು ಇನ್ನೆಷ್ಟು ಕಷ್ಟಕರ ಎಂಬುದನ್ನು ಕುಮಾರಸ್ವಾಮಿ ಒತ್ತಿ ಹೇಳಿದರು.
ಸ್ವಪಕ್ಷೀಯರಿಂದಲೇ ಭ್ರಷ್ಟಾಚಾರದ ಆರೋಪ: ಕುಮಾರಸ್ವಾಮಿ ಕಿಡಿ
ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಬಿ.ಆರ್. ಪಾಟೀಲ್ (ಯೋಜನಾ ಆಯೋಗದ ಉಪಾಧ್ಯಕ್ಷ), ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಅವರೇ ಹೇಳಿಕೆ ನೀಡುತ್ತಿರುವುದನ್ನು ಕುಮಾರಸ್ವಾಮಿ ಉಲ್ಲೇಖಿಸಿದರು. "ಸ್ವಪಕ್ಷಿಯರೇ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದ್ದಾರೆ," ಎಂದು ಅವರು ಟೀಕಿಸಿದರು.
ಬಿ.ಆರ್. ಪಾಟೀಲ್ ಅವರ ಕ್ಷೇತ್ರದಲ್ಲಿ ಶಾಸಕರ ಗಮನಕ್ಕೆ ಬಾರದಂತೆ 950 ಮನೆಗಳನ್ನು ವಸತಿ ಇಲಾಖೆಯಿಂದ ಹಂಚಿಕೆ ಮಾಡಲಾಗಿದೆ ಎಂಬ ಆರೋಪವನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದರು. "ಪಾಟೀಲ್ ಅವರು ಸಚಿವರ ಆಪ್ತ ಕಾರ್ಯದರ್ಶಿಗೆ ಮೊಬೈಲ್ ಕರೆ ಮೂಲಕ ಪ್ರಶ್ನೆ ಮಾಡಿದ್ದಾರೆ. ಅದರ ಆಡಿಯೋ ವೈರಲ್ ಆಗಿದೆ. 'ನಿಖರವಾದ ಪ್ರಕರಣ ಇದ್ದರೆ ದೂರು ಕೊಡಿ, ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಶಾಸಕರಿಗೆ ಉತ್ತರ ಕೊಡುತ್ತಾರೆ. ಆ ವ್ಯಕ್ತಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಸಚಿವರು ಕೊಟ್ಟಿದ್ದಾರಾ? ವಸೂಲಿ ಮಾಡುವ ಪವರ್ ಕೊಟ್ಟಿದ್ದಾರಷ್ಟೇ," ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಗಳ ವಿರುದ್ಧ ನೇರ ವಾಗ್ದಾಳಿ
"ರಾಜ್ಯದಲ್ಲಿ ಮುಖ್ಯಮಂತ್ರಿ ಎನ್ನುವವರು ಇದ್ದಾರಾ? ಸರಕಾರ ಎನ್ನುವುದು ಇದೆಯಾ? ಡಿಸಿಎಂ ನೋಡಿದರೆ ವಿಷಯ ತಿಳಿದುಕೊಂಡು ಹೇಳುತ್ತೇನೆ ಎಂದು ಕದ್ದು ಓಡುತ್ತಾರೆ," ಎಂದು ಕುಮಾರಸ್ವಾಮಿ ಸಿಎಂ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಕೊಟ್ಟಿರುವ ಭರವಸೆಗಳು ಈಡೇರಿಲ್ಲ. "ವಿರೋಧ ಪಕ್ಷಗಳು ಅಸೂಯೆಯಿಂದ ಮಾತನಾಡುತ್ತಿಲ್ಲ. 'ಕಮೀಷನ್ ಕೊಟ್ಟವರಿಗೆ ಮಾತ್ರ ಅನುದಾನ ಸಿಗುತ್ತಿದೆ' ಎಂದು ನಿಮ್ಮ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ," ಎಂದು ಅವರು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.
ಶಾಸಕರಿಗೆ ಕಮಿಷನ್ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, "ಒಂದು ಇಲಾಖೆಯಲ್ಲಿ ಈ ಮಟ್ಟಕ್ಕೆ ಅವ್ಯವಹಾರವಾಗಿದೆ ಎಂದರೆ ರಾಜ್ಯದಲ್ಲಿ ಸಿಎಂ ಎನ್ನುವವರು ಇದ್ದಾರೆಯೇ ಎನ್ನುವ ಅನುಮಾನ ಬರುತ್ತಿದೆ. ಡಿಸಿಎಂ ಅವರು ಬಿ.ಆರ್. ಪಾಟೀಲ್ ಹೇಳಿದ್ದು ಸುಳ್ಳು ಎನ್ನುತ್ತಿದ್ದಾರೆ. ಕಾಗವಾಡ ಶಾಸಕ ರಾಜು ಕಾಗೆ ಕೂಡ ಇದೇ ಆರೋಪ ಮಾಡಿದ್ದಾರೆ. ವಿಶೇಷ ಅನುದಾನ ನೀಡಿ ಕೇಳಿ ಎರಡು ವರ್ಷವಾಯಿತು. ಟೆಂಡರ್ ಮಾಡಲು ಬಿಟ್ಟಿಲ್ಲ, ಹಣವೂ ಬಂದಿಲ್ಲ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಉದ್ದೇಶ ಏನು? ಶಾಸಕಾಂಗ ಪಕ್ಷದಲ್ಲಿ ಅನುದಾನ ಕೊಡುತ್ತೇವೆ, ಅಭಿವೃದ್ಧಿ ಮಾಡುತ್ತೇವೆ ಎಂದವರು ಈಗ ಶಾಸಕರಿಗೆ ಕಮೀಷನ್ ಕಿರುಕುಳ ಕೊಡುತ್ತಿದ್ದಾರೆ. ಶಾಸಕರು ಕ್ಷೇತ್ರಗಳಿಗೆ ಹೋಗದ ರೀತಿಯಲ್ಲಿ ಒತ್ತಡಕ್ಕೆ ಸಿಲುಕಿದ್ದಾರೆ," ಎಂದು ಆರೋಪಿಸಿದರು.
ಅಲ್ಪಸಂಖ್ಯಾತ ನಿಧಿ ಲೂಟಿ ಆರೋಪ
ಅಲ್ಪಸಂಖ್ಯಾತರಿಗೆ ಸೇರಿದ ಕೋಟ್ಯಾಂತರ ರೂಪಾಯಿ ಹಣವನ್ನು ಸಂಪುಟದ ಒಪ್ಪಿಗೆ ಪಡೆಯದೇ ವೆಚ್ಚ ಮಾಡಲಾಗಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. "ಅಲ್ಪಸಂಖ್ಯಾತರಿಗೆ ಸೇರಿದ ಕೋಟ್ಯಾಂತರ ರೂ. ಲೂಟಿಯಾಗಿದೆ. ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯತೆ ಇದೆಯಾ? ಕಾನೂನಾತ್ಮಕವಾಗಿ ಅಲ್ಪಸಂಖ್ಯಾತರಿಗೆ ಎಷ್ಟು ಬೇಕಾದರೂ ನೆರವು ಕೊಡಿ. ಆದರೆ, ಕೊಳ್ಳೆ ಹೊಡೆಯಲು ಹಣಕಾಸು ಇಲಾಖೆ ಒಪ್ಪಿಗೆಯೇ ಇಲ್ಲದೆ ಹಣ ಬಿಡುಗಡೆ ಹೇಗಾಯಿತು? ಇದಕ್ಕೆ ಹೊಣೆ ಯಾರು? ಎಲ್ಲರೂ ಕಾನೂನಿನ ಕಟಕಟೆಯಲ್ಲಿ ನಿಲ್ಲಲೇಬೇಕು," ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವರು ರಾಜೀನಾಮೆ ನೀಡಲಿ, ಅಕ್ರಮಗಳ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. "ನಿಮ್ಮ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜೆಡಿಎಸ್, ಬಿಜೆಪಿ ಶಾಸಕರ ಪರಿಸ್ಥಿತಿ ಏನು? ಅನುದಾನಕ್ಕಾಗಿ ಶಾಸಕರು ಅಲೆಯುತ್ತಿದ್ದಾರೆ. ಯಾರೋ ಮಧ್ಯದಲ್ಲಿ ನಿಂತಿದ್ದಾರೋ ಅವರು ಕಮಿಷನ್ ಪಡೆಯುತ್ತಿದ್ದಾರೆ. ಶಾಸಕರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ," ಎಂದು ಕುಮಾರಸ್ವಾಮಿ ಹೇಳಿದರು.