ಪದ್ಮ ಪ್ರಶಸ್ತಿ ವಿಜೇತ ಸ್ವಾಮೀಜಿ ವಿರುದ್ಧ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಗರ್ಭಪಾತ ದೂರು ದಾಖಲು
2013ರ ಜನವರಿಯಿಂದ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ತಮ್ಮ ಸಹಚರರ ಜತೆ ಸೇರಿ ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.;
ಪದ್ಮಶ್ರೀ ಪುರಸ್ಕೃತ ಸ್ವಾಮೀಜಿ ಪ್ರದೀಪ್ತಾನಂದ ಅಲಿಯಾಸ್ ಕಾರ್ತಿಕ್ ಮಹಾರಾಜ್ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಅತ್ಯಾಚಾರ, ಬೆದರಿಕೆ ಹಾಗೂ ಗರ್ಭಪಾತಕ್ಕೆ ಒತ್ತಾಯಿಸಿದ ಗಂಭೀರ ಆರೋಪಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಘಟನೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಮುರ್ಷಿದಾಬಾದ್ನ ನಬಗ್ರಾಮ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಜೂನ್ 26ರಂದು ಕಾರ್ತಿಕ್ ಮಹಾರಾಜ್ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಯ ಪ್ರಕಾರ, 2013ರಿಂದ ಅವರು ಕಾರ್ತಿಕ್ ಮಹಾರಾಜ್ ಅವರಿಂದ ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದಾರೆ. 'ಚಾಣಕ್ ಆದಿವಾಸಿ ಅಬಾಸಿಕ್ ಬಾಲಿಕಾ ವಿದ್ಯಾಲಯ'ದಲ್ಲಿ (ಭಾರತ್ ಸೇವಾಶ್ರಮ ಸಂಘದಿಂದ ನಿರ್ವಹಿಸಲ್ಪಡುತ್ತದೆ) ಕೆಲಸದ ಭರವಸೆ ನೀಡಿ ಸ್ವಾಮೀಜಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ಮಹಾರಾಜ್ ಈ ಶಾಲೆಯ ಕಾರ್ಯದರ್ಶಿಯಾಗಿದ್ದಾರೆ.
ಮಹಿಳೆಯ ದೂರಿನಂತೆ, 2012ರ ಡಿಸೆಂಬರ್ನಲ್ಲಿ ಕಾರ್ತಿಕ್ ಮಹಾರಾಜ್ ಅವರನ್ನು ಭೇಟಿಯಾದಾಗ, ಶಾಲೆಯಲ್ಲಿ ಶಿಕ್ಷಕಿ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. 2013ರ ಜನವರಿಯಿಂದ ಶಾಲೆಯ ಹಾಸ್ಟೆಲ್ನ ನಾಲ್ಕನೇ ಮಹಡಿಯಲ್ಲಿ ಖಾಲಿ ಕೊಠಡಿಯೊಂದರಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಈ ಅವಧಿಯಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ. 2013ರ ಜೂನ್ನಲ್ಲಿ ಗರ್ಭಿಣಿಯಾದಾಗ, ಬರ್ಹಾಂಪುರದ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಕಾರ್ತಿಕ್ ಮಹಾರಾಜ್ ಒತ್ತಾಯಿಸಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಜೂನ್ 12ರಂದು ಕಾರ್ತಿಕ್ ಮಹಾರಾಜ್ರನ್ನು ಸಂಪರ್ಕಿಸಿದಾಗ, ಜೂನ್ 13ರಂದು ಸಂಜೆ 7 ಗಂಟೆಗೆ ಬರ್ಹಾಂಪುರದ ನಿರ್ದಿಷ್ಟ ಸ್ಥಳದಲ್ಲಿ ಕಾಯುವಂತೆ ಸೂಚಿಸಿದ್ದರು. ನಂತರ ಇಬ್ಬರು ವ್ಯಕ್ತಿಗಳು ತಮ್ಮನ್ನು ವಾಹನದಲ್ಲಿ ಕರೆದೊಯ್ದು, ಜೀವ ಬೆದರಿಕೆ ಹಾಕಿದ್ದಲ್ಲದೆ, ಕಾರ್ತಿಕ್ ಮಹಾರಾಜ್ರನ್ನು ಮತ್ತೆ ಸಂಪರ್ಕಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದೂ ಮಹಿಳೆ ದೂರಿದ್ದಾರೆ. ಈ ಆರೋಪಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಾರ್ತಿಕ್ ಮಹಾರಾಜ್ ಪ್ರತಿಕ್ರಿಯೆ ಏನು?
ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಕಾರ್ತಿಕ್ ಮಹಾರಾಜ್ ನಿರಾಕರಿಸಿದ್ದಾರೆ. "ಇದು ನನ್ನ ಹೆಸರು ಮತ್ತು ಕೀರ್ತಿಯನ್ನು ಕೆಡಿಸಲು ರೂಪಿಸಲಾದ ಒಂದು ಷಡ್ಯಂತ್ರ" ಎಂದು ಅವರು ಹೇಳಿದ್ದಾರೆ. ಈ ಆರೋಪಗಳು ಆಧಾರರಹಿತವೆಂದು ಅವರು ವಾದಿಸಿದ್ದಾರೆ.
ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಈ ಆರೋಪವನ್ನು ಬಿಜೆಪಿಯೊಂದಿಗಿನ ಕಾರ್ತಿಕ್ ಮಹಾರಾಜ್ ಅವರ ನಿಕಟ ಸಂಬಂಧಕ್ಕೆ ಜೋಡಿಸಿದೆ. "ಕಾರ್ತಿಕ್ ಮಹಾರಾಜ್ ಬಿಜೆಪಿ ನಾಯಕರ ಆಪ್ತ ಸಹವರ್ತಿ ಮತ್ತು ನರೇಂದ್ರ ಮೋದಿ ಸರ್ಕಾರದ ವಿಶೇಷ ಶಿಫಾರಸಿನ ಮೇರೆಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದವರು. ಈಗ ಅವರು ಮುರ್ಷಿದಾಬಾದ್ನ ಶಾಲಾ ಕಟ್ಟಡದೊಳಗೆ ಮಹಿಳೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ" ಎಂದು ಟಿಎಂಸಿ ಟೀಕಿಸಿದೆ.
ಕಾರ್ತಿಕ್ ಮಹಾರಾಜ್ ಅವರ ಬೆಂಬಲಿಗರು ಈ ಆರೋಪಗಳನ್ನು ಬಲವಾಗಿ ಖಂಡಿಸಿದ್ದಾರೆ. "ಪೊಲೀಸರು ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡಿದರೆ ಚಳುವಳಿ ಆರಂಭಿಸುತ್ತೇವೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕೆಲವರು ಕಾರ್ತಿಕ್ ಮಹಾರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಸಮರ್ಥಿಸಿದರೆ, ಇನ್ನು ಕೆಲವರು ಇದನ್ನು ರಾಜಕೀಯ ಷಡ್ಯಂತ್ರ ಎಂದು ಬಣ್ಣಿಸಿದ್ದಾರೆ.