ಕೆಎಂಎಫ್ ಗಾದಿಗೆ ಕಾಂಗ್ರೆಸ್ನಲ್ಲಿಯೇ ಜಿದ್ದಾಜಿದ್ದಿ; ಡಿ.ಕೆ. ಸೋದರರಿಗೆ ಸಿದ್ದರಾಮಯ್ಯ ಆಪ್ತರ ಅಡ್ಡಿ?
ಕೆಎಂಎಫ್ ಅಧ್ಯಕ್ಷರಾಗಲು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹಾದಿ ಸುಲಭವಿಲ್ಲ. ಶಾಸಕರಾದ ಕೆ.ವೈ.ನಂಜೇಗೌಡ ತೀವ್ರ ಪೈಪೋಟಿ ನೀಡಿದ್ದಾರೆ. ಇದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ;
ದೇಶದ ಡೈರಿ ಸಹಕಾರಿ ಸಂಸ್ಥೆಗಳಲ್ಲಿ ಎರಡನೇ ಅತಿದೊಡ್ಡ ಡೈರಿ ಸಹಕಾರಿ ಸಂಸ್ಥೆಯಾಗಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದ (ಕೆಎಂಎಫ್) ಹಿಡಿತ ಸಾಧಿಸಲು ಆಡಳಿತರೂಢ ಕಾಂಗ್ರೆಸ್ನಲ್ಲಿಯೇ ಜಿದ್ದಾಜಿದ್ದಿ ಪ್ರಾರಂಭವಾಗಿದೆ.
ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಂಸದ ಡಿ.ಕೆ. ಸುರೇಶ್ ಬಮೂಲ್ ಅಧ್ಯಕ್ಷರಾದ ಬಳಿಕ ರಾಜಕೀಯ ಗರಿಗೆದರಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರೇ ಕೆಎಂಎಫ್ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸುರೇಶ್ಗೆ ಡಿ.ಕೆ.ಶಿವಕುಮಾರ್ ಬಣದ ಸಂಪೂರ್ಣ ಬೆಂಬಲ ಇದೆ. ಹಾಗಂತ ಸುರೇಶ್ ಹಾದಿ ಸುಗಮವಾಗಿಲ್ಲ.
ಡಿ.ಕೆ.ಶಿ ಸೋದರರು ಕೆಎಂಎಫ್ನಲ್ಲಿ ಪ್ರಾಬಲ್ಯ ಗಳಿಸುವುದನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ತೆರೆಮರೆಯ ಕಸರತ್ತು ನಡೆಸುತ್ತಿದೆ. ಸಿದ್ದರಾಮಯ್ಯ ಅವರ ಆಪ್ತ ಕೆ.ವೈ. ನಂಜೇಗೌಡ ಅವರು ಈಗಾಗಲೇ ʼನಾನೇ ಕೆಎಂಎಫ್ ಅಧ್ಯಕ್ಷʼ ಎಂದು ಹೇಳಿಕೊಳ್ಳುತ್ತಿದ್ದಾರೆ. "ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲೇ ನನ್ನನ್ನು ಕೆಎಂಎಫ್ ಅಧ್ಯಕ್ಷನಾಗಿ ಮಾಡುತ್ತೇವೆಂದು ಮಾತುಕೊಟ್ಟಿದ್ದಾರೆ," ಎಂದು ನಂಜೇಗೌಡ ʼದ ಫೆಡರಲ್ ಕರ್ನಾಟಕʼಕ್ಕೆ ಹೇಳಿದ್ದಾರೆ.
ಆದರೆ ನಂಜೇಗೌಡರನ್ನು ಕೋಲಾರ ಘಟಕಕ್ಕೆ ಅಧ್ಯಕ್ಷನಾಗುವುದನ್ನೇ ತಪ್ಪಿಸಲು ತಮ್ಮ ಬಣದ ನಾರಾಯಣಸ್ವಾಮಿ ಅವರನ್ನು ಹುರಿಯಾಳಾಗಿ ಮಾಡುತ್ತಿದ್ದು, ಸಿದ್ದರಾಮಯ್ಯ ಆಪ್ತಬಣದಲ್ಲಿ ಗುರುತಿಸಿಕೊಂಡಿರುವ ನಂಜೇಗೌಡರನ್ನು ಸೋಲಿಸಲು ಡಿಕೆ ಸೋದರರು ಪಣತೊಟ್ಟಿದ್ದಾರೆ ಎನ್ನಲಾಗಿದೆ. ಆ ಮೂಲಕ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಎದುರಾಗುವ ಕಂಟಕವನ್ನು ʼಮೊಳಕೆಯಲ್ಲೇ ಹೊಸಕಿಹಾಕುವʼ ಚಿಂತನೆ ಅವರದು ಎಂದು ಹೇಳಲಾಗಿದೆ.
ಪ್ರಬಲ ಅಕಾಂಕ್ಷಿ
ಕೆಎಂಎಫ್ ಅಧ್ಯಕ್ಷಗಾದಿ ಮೇಲೆ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾ ನಾಯ್ಕ್ ಮತ್ತೊಮ್ಮೆ ಸ್ಪರ್ಧೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೇ, ತಮ್ಮದೇ ರಾಜಕೀಯ ವಲಯದ ಮೂಲಕ ಪ್ರಭಾವಿ ಬೀರುವ ಕೆಲಸವನ್ನು ತೆರೆಮರೆಯ ಮೇಲೆ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ನಲ್ಲಿ ಕೆಎಂಎಫ್ ಅಧ್ಯಕ್ಷ ವಿಚಾರ ಸಂಬಂಧ ಪರಿಸ್ಥಿತಿ ಮತ್ತಷ್ಟು ಹೆಪ್ಪುಗಟ್ಟುವಂತೆ ಮಾಡಿದೆ.
ಒಕ್ಕೂಟಗಳೆಷ್ಟಿವೆ?
ಕೆಎಂಎಫ್ ಅಡಿಯಲ್ಲಿ 16 ಹಾಲು ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಹಾಲು ಒಕ್ಕೂಟಗಳ ಅಧ್ಯಕ್ಷರ ಪೈಕಿ ಒಬ್ಬರು ಕೆಎಂಎಫ್ ನಿರ್ದೇಶಕರಾಗಲಿದ್ದಾರೆ. 16 ಒಕ್ಕೂಟಗಳ ಪೈಕಿ 14 ಒಕ್ಕೂಟಗಳ ಅಧ್ಯಕ್ಷರ ಚುನಾವಣೆಗಳು ಪೂರ್ಣಗೊಂಡಿವೆ. ಕೋಲಾರ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆದಿದ್ದು, ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಚುನಾವಣೆ ಮೂಲಕ ಗೆಲುವು ಸಾಧಿಸಿದ್ದಾರೆ. ಆದರೆ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಬಳ್ಳಾರಿ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆಯಬೇಕಿದ್ದು, ಜುಲೈ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.
ರಾಜಕೀಯವಾಗಿಯೂ ಪ್ರಾಮುಖ್ಯತೆ
ಕೆಎಂಎಫ್ ಅಧ್ಯಕ್ಷ ಸ್ಥಾನ ರಾಜಕೀಯವಾಗಿಯೂ ಪ್ರಾಮುಖ್ಯತೆ ಪಡೆದಿದೆ. ರಾಜ್ಯಾದ್ಯಂತ ಸುಮಾರು 25 ಲಕ್ಷ ಹಾಲು ಉತ್ಪಾದಕರಿದ್ದಾರೆ. ಐತಿಹಾಸಿಕವಾಗಿಯೂ ಕೆಎಂಎಫ್ ಅಧ್ಯಕ್ಷ ಸ್ಥಾನ ತುಂಬಾ ಬಲಶಾಲಿಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುತ್ರ ಎಚ್ ಡಿ ರೇವಣ್ಣ ಅವರು 2009 ರವರೆಗೆ 15 ವರ್ಷ ಕೆಎಂಎಫ್ ಅಧ್ಯಕ್ಷರಾಗಿದ್ದರು. ಇದೇ ತಂತ್ರದಲ್ಲಿ ಡಿ.ಕೆ.ಶಿವಕುಮಾರ್ ಚಿಂತನೆ ನಡೆಸಿದ್ದಾರೆ. ದೇವೇಗೌಡ ಕುಟುಂಬ ಹಿಡಿತ ಸಾಧಿಸಿದಂತೆ ಮುಂದಿನ ವರ್ಷಗಳಲ್ಲಿ ಕೆಎಂಎಫ್ ಮೇಲೆ ಪ್ರಾಬಲ್ಯ ಮೆರೆಯಲು ರಾಜಕೀಯ ತಂತ್ರಗಾರಿಕೆ ಹೂಡಲಾಗುತ್ತಿದೆ. ಆದರೆ, ಪಕ್ಷದಲ್ಲಿಯೇ ಪೈಪೋಟಿ ಇರುವ ಕಾರಣ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೋಲಾರ ಹಾಲು ಒಕ್ಕೂಟ ಚುನಾವಣೆ ನಡೆದಿದ್ದು, ಬಳ್ಳಾರಿ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆದ ಬಳಿಕ ಕೆಎಂಎಫ್ಗೆ ಚುನಾವಣೆಯಲಿದೆ. ತಮಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆ ಇರುವ ಕಾರಣ ನಂಜೇಗೌಡ ಮತ್ತು ಭೀಮಾನಾಯ್ಕ್ ಅವರ ಬದಲಿಗೆ ಬೇರೊಬ್ಬರನ್ನು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಹೇಳಲಾಗಿದೆ. ಆದರೂ, ನಂಜೇಗೌಡ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ಕೇಳಿದ್ದೇನೆ. ಅವರು ಸಹ ಮಾತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಒಂದೆಡೆ ಡಿ.ಕೆ.ಸುರೇಶ್, ಮತ್ತೊಂದೆಡೆ ನಂಜೇಗೌಡ ಪೈಪೋಟಿ ತೀವ್ರಗೊಂಡಿರುವ ಕಾರಣ ಕೆಎಂಎಫ್ ರಾಜಕೀಯ ತೀವ್ರ ಕುತೂಹಲ ಕೆರಳಿಸಿದೆ.
ಕೋಲಾರದಲ್ಲಿಯೂ ಪೈಪೋಟಿ
ಕೋಲಾರ ಹಾಲು ಒಕ್ಕೂಟ ಚುನಾವಣೆ ವಿಚಾರದಲ್ಲಿಯೂ ಕಾಂಗ್ರೆಸ್ ಶಾಸಕರ ನಡುವೆ ಪೈಪೋಟಿ ಇದೆ. ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮತ್ತು ಬಂಗಾರಪೇಟೆಯ ಎಸ್.ಎನ್. ನಾರಾಯಣಸ್ವಾಮಿ ನಡುವೆ ಜಿದ್ದಾಜಿದ್ದಿಯೇ ಏರ್ಪಟ್ಟಿದೆ. ಒಂದೇ ಪಕ್ಷದವರಾದ ಅವರಿಬ್ಬರು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರಂತೆ ಕೆಎಂಎಫ್ ಚುನಾವಣಾ ಅಖಾಡಕ್ಕಾಗಿ ಹಣಾಹಣಿ ನಡೆಸಿದ್ದಾರೆ ಎನ್ನಲಾಗಿದೆ.
ಇಬ್ಬರೂ ಕೋಮುಲ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕೋಮುಲ್ ಅಧ್ಯಕ್ಷ ಸ್ಥಾನದ ಮೇಲೆ ಇವರಿಬ್ಬರು ಕಣ್ಣಿಡಲು ಮತ್ತೊಂದು ಕಾರಣವಿದೆ. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳು ಕಡಿಮೆ. ಒಂದು ವೇಳೆ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಅವರಿಬ್ಬರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ತೀರಾ ಕಡಿಮೆ ಇದೆ. ಹೀಗಾಗಿ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅವರಿಬ್ಬರಿಗೆ ನಿರಾಸೆಯಾಗಿದೆ.
ಈ ನಡುವೆ, ಸರ್ಕಾರ ಎರಡೂ ವರ್ಷ ಪೂರೈಸಿದ ಬಳಿಕ ಸಚಿವ ಸ್ಥಾನ ಬಿಟ್ಟುಕೊಡುವುದಾಗಿ ಎಂದು ಹೇಳಿದ್ದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ತಮ್ಮ ಪುತ್ರಿ ಹಾಗೂ ಶಾಸಕಿ ರೂಪಕಲಾ ಹೆಸರನ್ನು ಸಚಿವ ಸ್ಥಾನಕ್ಕೆ ಜಿಲ್ಲೆಯಿಂದ ಪ್ರಸ್ತಾಪಿಸುವ ಸಾಧ್ಯತೆ ಇದೆ. ಹೀಗಾಗಿ ನಂಜೇಗೌಡ ಮತ್ತು ನಾರಾಯಣಸ್ವಾಮಿ ಕೋಮುಲ್ ಮೇಲೆ ಕಣ್ಣಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಬಣವು ನಾರಾಯಣಸ್ವಾಮಿಯತ್ತ ಒಲವು ತೋರಿದೆ. ಒಂದು ವೇಳೆ ನಾರಾಯಣಸ್ವಾಮಿ ಗೆಲುವು ಸಾಧಿಸಿದರೆ ಡಿ.ಕೆ.ಸುರೇಶ್ ಅವರ ಕೆಎಂಎಫ್ ಅಧ್ಯಕ್ಷ ಗಾದಿ ಸುಗಮವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ, ಶಿವಕುಮಾರ್ ಬಣದ ನಡುವೆ ಹಣಾಹಣಿ
ಕೆಎಂಎಫ್ ಅಧ್ಯಕ್ಷ ಗಾದಿಗೆ ಭಾರೀ ಲಾಬಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ನಡುವೆ ಹಣಾಹಣಿ ನಡೆಯುತ್ತಿದೆ. ಡಿ.ಕೆ.ಸುರೇಶ್ಗೆ ಸಹೋದರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣದ ಬೆಂಬಲವಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಕೆ.ವೈ. ನಂಜೇಗೌಡ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಡಿ.ಕೆ.ಸುರೇಶ್ ಮತ್ತು ನಂಜೇಗೌಡ ನಡುವೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್ನಲ್ಲಿ ರಾಜಕೀಯ ಘರ್ಷಣೆ ಬಗೆಹರಿಯುತ್ತಿಲ್ಲ. ಇದೆಲ್ಲದರ ನಡುವೆ ಭೀಮಾ ನಾಯ್ಕ್ ಸಹ ಮತ್ತೊಮ್ಮೆ ಕಣಕ್ಕಿಳಿಯುವ ಪ್ರಯತ್ನ ನಡೆಸುತ್ತಿರುವುದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ಸಿದ್ದರಾಮಯ್ಯ ಬೆಂಬಲಿಗರು ಕಾದು ನೋಡುವ ತಂತ್ರದ ಮೊರ ಹೋಗಿದ್ದಾರೆ. ಕೆಲವರಂತೂ ಡಿ.ಕೆ. ಶಿವಕುಮಾರ್ ಒತ್ತಡಕ್ಕೆ ಮಣಿಯಬಾರದು ಎಂಬುದಾಗಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೆಎಂಎಫ್ಗೆ ಅವಿರೋಧ ಆಯ್ಕೆಯಾಗುವುದು ಕಸರತ್ತನ್ನು ಡಿ.ಕೆ.ಸುರೇಶ್ ಮಾಡುತ್ತಿದ್ದಾರೆ. ಆದರೆ, ತೀವ್ರ ಪೈಪೋಟಿ ನಡೆಯುತ್ತಿರುವ ಕಾರಣ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.