Bangalore Stampede| ವಿಧಾನಸೌಧದ ಸನ್ಮಾನ ವೇದಿಕೆ ಮೇಲೆ ಅವಕಾಶ ಇದ್ದದ್ದು 30 ಜನರಿಗೆ, ಬಂದಿದ್ದು ನೂರಾರು ಮಂದಿ!

ಲೋಕೋಪಯೋಗಿ ಇಲಾಖೆ ವಿಧಾನಸಭೆ ಭದ್ರತಾ ಪೊಲೀಸರಿಗೆ ನೀಡಿದ ಅನುಮತಿ ಪತ್ರ ʼದ ಫೆಡರಲ್‌ ಕರ್ನಾಟಕʼಕ್ಕೆ ಲಭಿಸಿದೆ. ಅದರ ಪ್ರಕಾರ ಅನುಮತಿ ಪ್ರಕಾರ ವೇದಿಕೆಯಲ್ಲಿ ಇರಬೇಕಾಗಿದ್ದ ಅತಿಥಿಗಳ ಸಂಖ್ಯೆಯಲ್ಲೇ ಲೋಪ ಆಗಿರುವುದು ಗೊತ್ತಾಗಿದೆ.;

Update: 2025-06-06 11:18 GMT

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಟ್ರೋಫಿ ಗೆಲುವಿನ ಸನ್ಮಾನ ಕಾರ್ಯಕ್ರಮ ವಿಧಾನಸೌಧದ ಭವ್ಯ ಮೆಟ್ಟಿಲುಗಳ (ಗ್ರ್ಯಾಂಡ್ ಸ್ಟೆಪ್ಸ್​) ಮೇಲೆ ನಡೆದಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿ, ಪರ- ವಿರೋಧ ಚರ್ಚೆಗೆ  ಕಾರಣವಾಗಿದೆ. ಈ ನಡುವೆ ಕಾರ್ಯಕ್ರಮದಲ್ಲಿ ಭಾರೀ ಭದ್ರತಾ ವೈಫಲ್ಯ ಉಂಟಾಗಿರುವುದು ಇದೀಗ ಬೆಳಕಿಗೆ ಬಂದಿದ್ದು, ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದ್ದರೆ ಸರ್ಕಾರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಲೋಕೋಪಯೋಗಿ ಇಲಾಖೆ (PWD) ವಿಧಾನಸೌಧ ಭದ್ರತಾ ಪೊಲೀಸರಿಗೆ ನೀಡಿರುವ ಪತ್ರದ ಪ್ರಕಾರ, ಕಾರ್ಯಕ್ರಮದ ವೇದಿಕೆಯ ಮೇಲೆ ಕೇವಲ 25 ರಿಂದ 30 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ವಾಸ್ತವದಲ್ಲಿ ವೇದಿಕೆಯ ಮೇಲೆ ನೂರಾರು ಜನರು ಕಿಕ್ಕಿರಿದು ತುಂಬಿದ್ದರು. ರಾಜಕೀಯ ನಾಯಕರು ಸೇರಿದಂತೆ ಅವರ ಕಟುಂಬದ ಸದಸ್ಯರು, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸೇರಿದ್ದರು.

ಈ ಬೆಳವಣಿಗೆಯು ಆರ್‌ಸಿಬಿ ಕಾಲ್ತುಳಿತ ದುರಂತದ ನಂತರ ಸರ್ಕಾರದ ನಿರ್ಲಕ್ಷ್ಯ ಮತ್ತು ವ್ಯವಸ್ಥಾಪನಾ ಲೋಪಗಳ ಕುರಿತು ನಡೆಯುತ್ತಿರುವ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ, ವಿಧಾನಸೌಧದಂತಹ ಅತಿ ಸೂಕ್ಷ್ಮ ಪ್ರದೇಶದಲ್ಲೂ ಭದ್ರತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಲೋಕೋಪಯೋಗಿ ಇಲಾಖೆ ಪತ್ರದಲ್ಲಿ ಏನಿದೆ?

ಲೋಕೋಪಯೋಗಿ ಇಲಾಖೆ ನೀಡಿರುವ ಪತ್ರವು ವಿಧಾನಸೌಧದ ಭದ್ರತಾ ನಿಯಮಗಳ ಅನ್ವಯ. ಅಲ್ಲಿನ ವೇದಿಕೆಯಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಸ್ಪಷ್ಪಪಡಿಸಲಾಗಿತ್ತು. ಅಲ್ಲದೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡುವ ಮೂಲಕ ವೇದಿಕೆಯ ಸ್ಥಿರತೆ ಮತ್ತು ಅಲ್ಲಿರುವ ಗಣ್ಯರ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿತ್ತು. ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ, ವೇದಿಕೆಯಲ್ಲಿ ಅತಿಯಾದ ಜನಸಂದಣಿಗೆ ಅವಕಾಶ ನೀಡಲಾಗಿದೆ ಎಂಬುದು ಸಾಬೀತಾಗಿದೆ. .

ಭದ್ರತಾ ಲೋಪದ ಗಂಭೀರತೆ

ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಮತ್ತು ಗಣ್ಯರು ಉಪಸ್ಥಿತರಿದ್ದರು. ಇಂತಹ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಾಮರ್ಥ್ಯಕ್ಕಿಂತ ಹೆಚ್ಚು ಜನರಿಗೆ ಅವಕಾಶ ನೀಡಿರುವುದು ಭದ್ರತಾ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ. ಅದೇ ರೀತಿ ಅಂತಾರಾಷ್ಟ್ರೀಯ ಖ್ಯಾತಿಯ ವಿರಾಟ್​ ಕೊಹ್ಲಿ ಸೇರಿದಂತೆ ಹಲವಾರು ಕ್ರಿಕೆಟ್ ಆಟಗಾರರೂ ಇದ್ದರು. ಒಂದು ವೇಳೆ ವೇದಿಕೆಯ ಮೇಲೆ ಯಾವುದೇ ಅವಘಡ ಸಂಭವಿಸಿದ್ದರೆ, ಅದರ ಪರಿಣಾಮ ಮತ್ತಷ್ಟು ಗಂಭೀರವಾಗಿರುತ್ತಿತ್ತು ಎಂದು ಆರೋಪಿಸಲಾಗಿದೆ.  

ಅಸಹಾಯಕ ಸ್ಥಿತಿ

ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, 56 ಮಂದಿ ಗಾಯಗೊಂಡರು. ಇಂತಹದ್ದೇ ಜನದಟ್ಟಣೆ ಮತ್ತು ನಿಯಂತ್ರಣದ ಕೊರತೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಂಭವಿಸಿದ್ದರೆ, ಅದರ ಪರಿಣಾಮ ಊಹಿಸಲಾಗದಷ್ಟು ಭೀಕರವಾಗಿರುತ್ತಿತ್ತು. ಆಡಳಿತದ ಕೇಂದ್ರಬಿಂದುವಾದ ವಿಧಾನಸೌಧದ ಮುಂದೆ ಇಂತಹ ಘಟನೆ ನಡೆದಿದ್ದರೆ, ಅದು ಸಾರ್ವಜನಿಕರಲ್ಲಿ ಇನ್ನಷ್ಟು ತೀವ್ರ ಆಕ್ರೋಶ ಮತ್ತು ಅಸಮಾಧಾನ ಉಂಟುಮಾಡುತ್ತಿತ್ತು.

ಇಂತಹ ಘಟನೆ ರಾಜ್ಯದ ರಾಜಧಾನಿಯಲ್ಲೇ, ಅದರಲ್ಲೂ ಸರ್ಕಾರದ ಆಡಳಿತ ಕೇಂದ್ರದ ಮುಂದೆ ನಡೆದಿದ್ದರೆ, ಅದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ, ರಾಜ್ಯ ಸರ್ಕಾರದ ವರ್ಚಸ್ಸಿಗೆ ಭಾರಿ ಧಕ್ಕೆ ತರುತ್ತಿತ್ತು ಎಂಬುದಾಗಿ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಕಾಲ್ತುಳಿತ ದುರಂತದಿಂದ ಸರ್ಕಾರ ರಾಜಕೀಯವಾಗಿ ತೀವ್ರ ಒತ್ತಡದಲ್ಲಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯ  ವಿಧಾನಸೌಧದಲ್ಲಿ ಏನಾದರೂ ಆಗಿದ್ದರೆ  ಸರ್ಕಾರದ ಸ್ಥಿರತೆಗೆ ಸಮಸ್ಯೆ ಆಗಿರುತ್ತಿತ್ತು. 

Tags:    

Similar News