Loksabha Election 2024| ಮಾಧುಸ್ವಾಮಿ-ಮುದ್ದಹನುಮೇಗೌಡ ಭೇಟಿ: ರಹಸ್ಯ ಮಾತುಕತೆ!

Update: 2024-04-08 05:47 GMT

ತುಮಕೂರು: ಬಿಜೆಪಿಯ ರೆಬಲ್‌ ನಾಯಕ ಜಿಸಿ ಮಾಧುಸ್ವಾಮಿ ಅವರನ್ನು‌ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಭೇಟಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಮೈತ್ರಿ ಅಭ್ಯರ್ಥಿ ಸೋಮಣ್ಣ ಮೇಲೆ ಮಾಧುಸ್ವಾಮಿ ಮುನಿಸುಕೊಂಡು ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದರು. ಇದೀಗ ಚಿಕ್ಕನಾಯಕನಹಳ್ಳಿ ತಾಲೂಕು ಜೆಸಿ.ಪುರದಲ್ಲಿರುವ ಮಾಧುಸ್ವಾಮಿ ಮನೆಗೆ ಮುದ್ದಹನುಮೇಗೌಡ ತೆರಳಿ ಹೂಗುಚ್ಛ ನೀಡಿ ಕುಶಲೋಪರಿ ಮಾತನಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯನ್ನು ಮಾಧುಸ್ವಾಮಿ ನಗುನಗತ್ತಲೇ ಬರಮಾಡಿಕೊಂಡಿದ್ದಾರೆ. ಈ ವೇಳೆ ಹೂಗುಚ್ಚ ಎಲ್ಲಾ ಯಾಕೆ ತಂದಿದ್ದೀರಿ ಎಂದ ಹೇಳಿದ್ದಕ್ಕೆ ನೀವು ಜಿಲ್ಲೆಯ ಹಿರಿಯ ನಾಯಕರಿದ್ದೀರಿ, ನಿಮಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬಂದಿದ್ದೇವೆ ಎಂದು ಹೇಳಿದ್ದಾರೆ. ಕೆಲಕಾಲ ಈ ಇಬ್ಬರು ನಾಯಕರು ರಹಸ್ಯ ಮಾತುಕತೆ ನಡೆಸಿದರು.

ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ ಅವರು, ʻʻಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರು ಬಹಳ ಹಳೆಯ ಸ್ನೇಹಿತರು. ಇಬ್ಬರು ಒಟ್ಟಿಗೆ ಶಾಸಕರಾಗಿದ್ದವರು. ಸ್ನೇಹಿತರು ಅಂತ ಒಬ್ಬ ಅಭ್ಯರ್ಥಿ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸುವುದು ಬೇಡ" ಎಂದರು. "ಅಭ್ಯರ್ಥಿಯಾದವರು ಬೆಂಬಲ ಕೇಳಿದ್ದಾರೆ. ನಾವು ಬೇರೆ ಪಕ್ಷದಲ್ಲಿ ಇರುವವರು ಬೆಂಬಲಿಸುವುದಕ್ಕೆ ಆಗುತ್ತದೆಯೇ?ʼʼ ಎಂದು ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿಗೆ ಬೆಂಬಲು ನೀಡಲು ಹಿಂದೇಟು

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಸೋಮಣ್ಣ ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಮಾಧುಸ್ವಾಮಿ ಬೆಂಬಲ ನೀಡಲು ಒಲವು ತೋರಲಿಲ್ಲ ಎನ್ನಲಾಗಿದೆ.

ಚಿಕ್ಕನಾಯಕನಹಳ್ಳಿ ಜೆ.ಸಿ.ಪುರದಲ್ಲಿನ ಮಾಧುಸ್ವಾಮಿ ಮನೆಗೆ ಮಂಗಳವಾರ ಮಾಜಿ ಸಚಿವ ಬಿ.ಸಿ.ನಾಗೇಶ್ ಅವರ ಜತೆ ಭೇಟಿ ನೀಡಿದ ಸೋಮಣ್ಣ ಅವರು ಮಾಧುಸ್ವಾಮಿ ಮನವೊಲಿಕೆಗೆ ಯತ್ನಿಸಿದರು. ಆದರೆ ಮಾಧುಸ್ವಾಮಿ "ತಾವು ಯಾವುದೇ ಕಾರಣಕ್ಕೂ ನಿಲುವು ಬದಲಿಸುವುದಿಲ್ಲ. ಜಿಲ್ಲೆಯಲ್ಲಿ ಯುವಕರಿಗೆ ಅವಕಾಶ ಸಿಗಬೇಕೆಂದು" ಪಟ್ಟು ಹಿಡಿದರು. ಸಂಸದ ಜಿ.ಎಸ್.ಬಸವರಾಜು ಅವರನ್ನು ನೆಚ್ಚಿಕೊಂಡು ಚುನಾವಣೆ ಮಾಡುವಂತೆ ಸವಾಲೆಸೆದರು ಎಂದು ತಿಳಿದುಬಂದಿದೆ.

Tags:    

Similar News