ಚಿನ್ನ ವಂಚನೆ ಪ್ರಕರಣ : ಐಶ್ವರ್ಯಾಗೌಡಳಿಗೆ ಸೇರಿದ 3.98 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿ ಇಡಿ
ವಾಮಮಾರ್ಗದಲ್ಲಿ ಸಂಪಾದಿಸಿದ್ದ 2.01 ಕೋಟಿ ರು. ಮೌಲ್ಯದ ಪ್ಲ್ಯಾಟ್, ನಿವೇಶನಗಳು ಹಾಗೂ ನಿರ್ಮಾಣವಾಗಿರುವ ಕಟ್ಟಡ ಮತ್ತು 1.97 ಕೋಟಿ ರೂ.ಮೊತ್ತದ ನಗದು, ವಾಹನ ಜಪ್ತಿ ಮಾಡಿದ ಇಡಿ ಅಧಿಕಾರಿಗಳು;
ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಚಿನ್ನದ ವ್ಯಾಪಾರಿಗಳು ಹಾಗೂ ಇನ್ನಿತರ ವ್ಯಕ್ತಿಗಳಿಗೆ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯಾಗೌಡಳಿಗೆ ಸೇರಿದ ಒಟ್ಟು 3.98 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಐಶ್ವರ್ಯಾಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ. ತನ್ನ ತನಿಖೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು. ವಂಚನೆ ಕೃತ್ಯಕ್ಕೆ ಪತಿ ಹರೀಶ್ ಭಾಗಿಯಾಗಿರುವುದು ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ವಾಮಮಾರ್ಗದಲ್ಲಿ ಸಂಪಾದಿಸಿದ್ದ 2.01 ಕೋಟಿ ಮೌಲ್ಯದ ಪ್ಲ್ಯಾಟ್, ನಿವೇಶನಗಳು ಹಾಗೂ ನಿರ್ಮಾಣವಾಗಿರುವ ಕಟ್ಟಡ ಹಾಗೂ 1.97 ಕೋಟಿ ರೂ.ಮೊತ್ತದ ಹಣ ಹಾಗೂ ವಾಹನಗಳು ಒಳಗೊಂಡಂತೆ ಒಟ್ಟು 3.98 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ತಿಳಿಸಿದೆ.
ವಂಚನೆ ಸಂಬಂಧ ಬೆಂಗಳೂರು ನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ 6ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದ್ದವು. ಪೂರ್ವಾಸಂಚು ರೂಪಿಸಿ ಚಿನ್ನದ ವ್ಯಾಪಾರಿಗಳು ಹಾಗೂ ಇನ್ನಿತರರಿಂದ ಹೆಚ್ಚಿನ ಹಣದ ಆಮಿಷವೊಡ್ಡಿ ಕೋಟ್ಯಂತರ ರೂ. ನಗದು ಹಾಗೂ ಚಿನ್ನಾಭರಣ ಪಡೆಯುತ್ತಿದ್ದರು. ಬಳಿಕ ಹಣ ನೀಡುವಂತೆ ದೂರುದಾರರು ಪ್ರಶ್ನಿಸಿದಾಗ ರಾಜಕೀಯ ನಾಯಕರ ಪ್ರಭಾವ ಬಳಸಿ ಐಶ್ವರ್ಯಗೌಡ ದಂಪತಿ ಧಮಕಿ ಹಾಕುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ
ಅಕ್ರಮವಾಗಿ ಬಹುಕೋಟಿ ವರ್ಗಾವಣೆ ಕುರಿತಂತೆ ಐಶ್ವರ್ಯಾಗೌಡಳಿಗೆ ಸಂಬಂಧಿಸಿದ ಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪರಿಶೀಲಿಸಿದಾಗ ವಂಚನೆ ಕೃತ್ಯಕ್ಕೆ ಸಂಬಂಧಿಸಿದ ಪೂರಕ ದಾಖಲಾತಿಗಳು, ಡಿಜಿಟಲ್ ಸಾಕ್ಷ್ಯಾಧಾರಗಳು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ನ್ಯಾಯಾಲಯವು ಐಶ್ವರ್ಯಗೌಡಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.