ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರ? ಮೈಸೂರಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಸಿಎಂ

ಚಿನ್ನಸ್ವಾಮಿ ಕ್ರೀಡಾಂಗಣದ ಸೀಮಿತ ಸಾಮರ್ಥ್ಯದಿಂದಾಗಿ ದುರಂತ ಸಂಭವಿಸಿತೇ ಎಂಬ ಪ್ರಶ್ನೆ ಎದ್ದಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸಬಾರದು ಎಂಬ ದೃಷ್ಟಿಯಿಂದ, ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದೇ ಎಂಬ ಪ್ರಶ್ನೆ ಅವರಿಗೆ ಎದುರಾಗಿತ್ತು.;

Update: 2025-06-08 15:45 GMT

ಚಿನ್ನಸ್ವಾಮಿ ಸ್ಟೇಡಿಯಂ 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ನಗರದ ಮಧ್ಯಭಾಗದಿಂದ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ರಾಜ್ಯ ಸರ್ಕಾರ ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು ಭೇಟಿ ವೇಳೆ ವಿಮಾನ ನಿಲ್ದಾಣದಲ್ಲಿ ಭಾನುವಾರ (ಜೂನ್8ರಂದು) ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಎದುರಾದ ಪ್ರಶ್ನೆಗೆ ಅವರು ಈ ಬಗ್ಗೆ ಸರ್ಕಾರ ಪರಿಶೀಲಿಸಲಿದೆ ಎಂದು ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಸೀಮಿತ ಸಾಮರ್ಥ್ಯದಿಂದಾಗಿ ದುರಂತ ಸಂಭವಿಸಿತೇ ಎಂಬ ಪ್ರಶ್ನೆ ಎದ್ದಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸಬಾರದು ಎಂಬ ದೃಷ್ಟಿಯಿಂದ, ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದೇ ಎಂಬ ಪ್ರಶ್ನೆ ಅವರಿಗೆ ಎದುರಾಗಿತ್ತು.

ಪೊಲೀಸರ ವೈಫಲ್ಯವೇ ದುರಂತಕ್ಕೆ ಕಾರಣ 

ಕಾಲ್ತುಳಿತ ದುರಂತಕ್ಕೆ ಪೊಲೀಸರ ಕರ್ತವ್ಯ ಲೋಪವೇ ನೇರ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. "ಪೊಲೀಸರು ತಪ್ಪು ಮಾಡಿದ್ದಾರೆ. ಕ್ರೀಡಾಂಗಣದ ಬಳಿಯ ಕಾರ್ಯಕ್ರಮದಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆ ಒದಗಿಸಲು ವಿಫಲರಾದ ಕಾರಣ ಈ ದುರಂತ ಸಂಭವಿಸಿದೆ. ಆದ್ದರಿಂದ, ಸಂಬಂಧಪಟ್ಟ ಐದು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ," ಎಂದು ಅವರು ತಿಳಿಸಿದರು.

 

ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. "ಪೊಲೀಸ್ ಇಲಾಖೆಯಿಂದ ಸಮಗ್ರ ಭದ್ರತಾ ಮಾಹಿತಿ ಒದಗಿಸಲಾಗಿರಲಿಲ್ಲ. ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತಾದರೂ, ಪೊಲೀಸರು ಷರತ್ತುಗಳನ್ನು ಸರಿಯಾಗಿ ಪಾಲಿಸಲಿಲ್ಲ. ಈ ಘಟನೆ ಸರ್ಕಾರಕ್ಕೆ ತೀವ್ರ ಬೇಸರ ತಂದಿದೆ," ಎಂದು ಸಿಎಂ ಹೇಳಿದರು.

ಬಿಜೆಪಿ-ಜೆಡಿಎಸ್ ರಾಜಕೀಯ ಆರೋಪಗಳಿಗೆ ಸಿಎಂ ತಿರುಗೇಟು

ಬಿಜೆಪಿ ಮತ್ತು ಜೆಡಿಎಸ್ ಕಾಲ್ತುಳಿತ ಘಟನೆಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. "ಬಿಜೆಪಿಯವರು ಓಪನ್ ಬಸ್ ಮೆರವಣಿಗೆಗೆ ಅನುಮತಿ ನೀಡದಿರುವುದನ್ನು ಗೃಹ ಸಚಿವರ ವೈಫಲ್ಯ ಎಂದು ಟೀಕಿಸಿದ್ದರು. ಈಗ ಘಟನೆಯ ನಂತರ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಇದು ಅವರ ಇಬ್ಬದಿತನದ ನಿಲುವನ್ನು ಸ್ಪಷ್ಟಪಡಿಸುತ್ತದೆ," ಎಂದು ಅವರು ಟೀಕಿಸಿದರು.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವ ಬಗ್ಗೆ ಅಡ್ವೊಕೇಟ್ ಜನರಲ್‌ನೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿಎಂ ತಿಳಿಸಿದರು. ಮೈಸೂರಿನಲ್ಲಿ ದಸರಾ ಪೂರ್ವಭಾವಿ ಸಭೆ ಮತ್ತು ಕೆಡಿಪಿ ಸಭೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನರೇಗಾ ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡದಿರುವುದನ್ನು ಟೀಕಿಸಿದ ಅವರು, "ಕೇಂದ್ರದ ಇಚ್ಛೆಗೆ ತಕ್ಕಂತೆ ರಾಜ್ಯಗಳು ಹಣ ಪಡೆಯುವ ಪರಿಸ್ಥಿತಿ ಇದೆ," ಎಂದು ಆಕ್ಷೇಪ ವ್ಯಕ್ತಪಡಿಸಿದರು.

Tags:    

Similar News