ಆಕ್ಸಿಯಂ-4 ಮಿಷನ್ | ಭಾರತದ ಅಂತರಿಕ್ಷ ಯಾನಕ್ಕೆ ಹೊಸ ದಿಕ್ಕು: ವಿಜ್ಞಾನಿ ಸುಧೀಂದ್ರ ಬಿಂದಗಿ ವಿಶ್ಲೇಷಣೆ

ಇದು ಭವಿಷ್ಯದ ಬಾಹ್ಯಾಕಾಶ ಸಂಶೋಧನೆಗಳಿಗೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸುಧೀಂದ್ರ ಬಿಂದಗಿ ವಿವರಿಸಿದರು.;

Update: 2025-06-26 02:30 GMT

ಇಡೀ ವಿಶ್ವದ ಹಾಗೂ ಭಾರತದ ಹೆಮ್ಮೆಯ ಬೆಳವಣಿಗೆಯಾಗಿರುವ ಆಕ್ಸಿಯಂ-4 (Axiom-4) ಅಂತರಿಕ್ಷ ಕಾರ್ಯಕ್ರಮದಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಭಾಗವಹಿಸುವಿಕೆಯು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಈ ಮಹತ್ವದ ಯೋಜನೆ, ಅದರ ಪ್ರಯೋಜನಗಳು ಮತ್ತು ಗಗನಯಾತ್ರಿಗಳು ಎದುರಿಸುವ ಸವಾಲುಗಳ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ನಿವೃತ್ತ ಹಿರಿಯ ಬಾಹ್ಯಾಕಾಶ ವಿಜ್ಞಾನಿ, ಮಂಗಳಯಾನ ಮತ್ತು ಚಂದ್ರಯಾನ ಯೋಜನೆಯಲ್ಲಿ ಕೆಲಸ ಮಾಡಿರುವ ಸುಧೀಂದ್ರ ಬಿಂದಗಿ ಮಾತನಾಡಿದ್ದಾರೆ.

Full View

ಆಕ್ಸಿಯಂ-4 ಒಂದು ಅಂತರಾಷ್ಟ್ರೀಯ ಮಟ್ಟದ ಮಹತ್ವದ ಬಾಹ್ಯಾಕಾಶ ಯೋಜನೆಯಾಗಿದ್ದು, ನಾಲ್ಕು ರಾಷ್ಟ್ರಗಳ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಅಮೆರಿಕಾ, ಭಾರತ, ಪೋಲೆಂಡ್ ಮತ್ತು ಹಂಗೇರಿ ದೇಶಗಳು ಈ ಯೋಜನೆಯಲ್ಲಿ ಪಾಲುದಾರಿಕೆಯನ್ನು ಹೊಂದಿವೆ. ಈ ಮಿಷನ್‌ನಲ್ಲಿ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ISS) 14 ದಿನಗಳ ಕಾಲ ತಂಗಲಿದ್ದು, ಅಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲಿದ್ದಾರೆ. ಮುಖ್ಯವಾಗಿ ವಿರಳ ಗುರುತ್ವ (Microgravity) ಸ್ಥಿತಿಯಲ್ಲಿ ವಿವಿಧ ಪ್ರಯೋಗಗಳನ್ನು ನಡೆಸಲಾಗುವುದು, ಇದು ಭವಿಷ್ಯದ ಬಾಹ್ಯಾಕಾಶ ಸಂಶೋಧನೆಗಳಿಗೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸುಧೀಂದ್ರ ಬಿಂದಗಿ ವಿವರಿಸಿದರು.

ಭಾರತವು 2027ರಲ್ಲಿ ತನ್ನದೇ ಆದ ಗಗನಯಾನ (Gaganyaan) ಯೋಜನೆಯ ಮೂಲಕ ಮೂವರು ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ ಹೊಂದಿದೆ. ಆಕ್ಸಿಯಂ-4 ಗಗನಯಾನವು ಭಾರತದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರಮುಖ ಮೆಟ್ಟಿಲಾಗಿದೆ. ಮೊದಲ ಬಾರಿಗೆ ಒಬ್ಬ ಭಾರತೀಯ ಗಗನಯಾತ್ರಿ - ಶುಭಾಂಶು ಶುಕ್ಲಾ - ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೋಗುತ್ತಿರುವುದು ಭಾರತದ ಗಗನಯಾನ ಯೋಜನೆಗೆ ಅಪಾರ ಅನುಕೂಲವನ್ನು ತರುತ್ತದೆ. ಇದು ಭವಿಷ್ಯದ ಯೋಜನೆಗಳಿಗೆ ಅಗತ್ಯವಿರುವ ಅನುಭವ ಮತ್ತು ಜ್ಞಾನವನ್ನು ಒದಗಿಸುತ್ತದೆ ಎಂದು ಸುಧೀಂದ್ರ ಬಿಂದಗಿ ತಿಳಿಸಿದರು.

ನಿರ್ಬಂಧಿತ ಆಹಾರ

ಶುಭಾಂಶು ಶುಕ್ಲಾ ಅವರ ಆಯ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಸುಧೀಂದ್ರ ಬಿಂದಗಿ ಹೇಳಿದರು. ಬಾಹ್ಯಾಕಾಶ ಯಾನವು ಸಾಕಷ್ಟು ಸವಾಲುಗಳಿಂದ ಕೂಡಿದೆ. ಇವು ಸಾಮಾನ್ಯ ಪೈಲಟ್‌ಗಳಿಗೆ ಸಾಧ್ಯವಾಗುವುದಿಲ್ಲ. ಶುಭಾಂಶು ಶುಕ್ಲಾ ಒಬ್ಬ ಫೈಟರ್ ಜೆಟ್ ಪೈಲಟ್ ಆಗಿರುವುದರಿಂದ, ಅವರ ಅನುಭವ ಮತ್ತು ತರಬೇತಿ ಗಗನಯಾನಕ್ಕೆ ಹೆಚ್ಚು ಸಹಾಯವಾಗಲಿದೆ ಎಂದರು. ಅಂತರಿಕ್ಷದಲ್ಲಿ ಗಗನಯಾತ್ರಿಗಳ ದಿನನಿತ್ಯದ ಜೀವನವೂ ಹಲವು ಸವಾಲುಗಳನ್ನು ಒಳಗೊಂಡಿರುತ್ತದೆ. ಅವರು ಸ್ಲೀಪಿಂಗ್ ಬ್ಯಾಗ್‌ನಲ್ಲಿ ಮಲಗಬೇಕಾಗುತ್ತದೆ. ಅನ್ನ, ಸಾಂಬಾರ್, ಮಾಂಸಾಹಾರಿ ಪದಾರ್ಥಗಳಂತಹ ವಿಶೇಷವಾಗಿ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಕೆಲವು ನಿರ್ಬಂಧಗಳ ಪ್ರಕಾರ ಊಟ ಮಾಡುತ್ತಾರೆ. ಬಾಹ್ಯಾಕಾಶ ಕೇಂದ್ರದಲ್ಲಿ ಬಾತ್‌ರೂಮ್‌ಗಳು ಇರುತ್ತವೆ, ಆದರೆ ಭೂಮಿಯ ಮೇಲಿನಂತೆ ನಿತ್ಯಕರ್ಮಗಳು ಸುಲಭವಲ್ಲ. ವಿರಳ ಗುರುತ್ವದಿಂದಾಗಿ ಪ್ರತಿಯೊಂದಕ್ಕೂ ವಿಶೇಷ ವ್ಯವಸ್ಥೆಗಳ ಅಗತ್ಯವಿರುತ್ತದೆ.

ಶೂನ್ಯ ಗುರುತ್ವಾಕರ್ಷಣೆಯು (Zero Gravity) ಗಗನಯಾತ್ರಿಗಳಿಗೆ ಪ್ರಮುಖ ಸವಾಲನ್ನು ಒಡ್ಡುತ್ತದೆ. ಮೂಳೆಗಳ ಮೇಲೆ ಭಾರವಿರುವುದರಿಂದ, ಮೂಳೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಮೂಳೆಗಳ ಶಕ್ತಿ ಕಳೆದುಕೊಳ್ಳುತ್ತದೆ, ಆದರೆ ಭೂಮಿಗೆ ಮರಳಿದಾಗ ಇದನ್ನು ಸರಿಪಡಿಸಬೇಕಿದೆ. ಇಂತಹ ಆರೋಗ್ಯ ಸಂಬಂಧಿ ಸವಾಲುಗಳನ್ನು ಎದುರಿಸಲು ಗಗನಯಾತ್ರಿಗಳಿಗೆ ವಿಶೇಷ ತರಬೇತಿ ಮತ್ತು ವೈದ್ಯಕೀಯ ನೆರವು ನೀಡಲಾಗುತ್ತದೆ ಎಂದು ಸುಧೀಂದ್ರ ಬಿಂದಗಿ ವಿವರಿಸಿದರು. ಆಕ್ಸಿಯಂ-4 ಯೋಜನೆಯು ಭಾರತಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಅಂತರಾಷ್ಟ್ರೀಯ ಸಹಕಾರ ಮತ್ತು ನಾಯಕತ್ವವನ್ನು ತರಲು ನೆರವಾಗಲಿದೆ ಎಂದು ವಿಜ್ಞಾನಿಗಳು ಆಶಿಸಿದ್ದಾರೆ. 

Tags:    

Similar News