ಕಮಿಷನ್‌ ಆಸೆಗೆ ಮೆಟ್ರೊ ನಿಲ್ದಾಣದಲ್ಲಿ ಅಮುಲ್‌ಗೆ ಅವಕಾಶ; ನಿಖಿಲ್‌ ಕುಮಾರಸ್ವಾಮಿ ಆರೋಪ

ʼಸೇವ್ ನಂದಿನಿʼ ಎಂಬ ಹ್ಯಾಶ್ ಟ್ಯಾಗ್ ಮಾಡಿ, ಕೈನಲ್ಲಿ ಹಾಲಿನ ಪ್ಯಾಕೇಟ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದ ಕಾಂಗ್ರೆಸ್ಸಿಗರು ಇದೀಗ ನಂದಿನಿ ಉತ್ಪನ್ನಗಳನ್ನು ಕಡೆಗಣಿಸಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದ್ದಾರೆ.;

Update: 2025-06-19 13:55 GMT

ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ

ಕಮಿಷನ್‌ ಆಸೆಯಿಂದ ರಾಜ್ಯ ಸರ್ಕಾರ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್‌ ಮಳಿಗೆ ತೆರೆಯಲು ಅವಕಾಶ ನೀಡಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೂ ಮುಂಚೆ ʼನಂದಿನಿ ಉಳಿಸಿʼ, ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂಬ ದೊಡ್ಡ ಮಾತುಗಳಲ್ಲಿ ಕಾಂಗ್ರೆಸ್ಸಿಗರು ಹೋರಾಟ ಮಾಡಿದ್ದರು. ಆದರೆ ಈಗ ಕಮಿಷನ್‌ ಆಸೆಗಾಗಿ ಮೆಟ್ರೊ ನಿಲ್ದಾಣಗಳಲ್ಲಿ ಮಳಿಗೆ ತೆರೆಯುವ ಗುತ್ತಿಗೆಯನ್ನು ಅಮೂಲ್‌ಗೆ ನೀಡಿದ್ದಾರೆ. ನಮ್ಮ ಹೆಮ್ಮೆಯ ನಂದಿನಿಯನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ನಮ್ಮ ನಂದಿನಿ ಉತ್ಪನ್ನಗಳಿಗೆ ಉತ್ತೇಜನ ನೀಡದೇ ಅಮೂಲ್ ಸೇರಿದಂತೆ ಬೇರೆ ಖಾಸಗಿ ಕಂಪೆನಿಗಳ ಮಳಿಗೆ ತೆರೆಯಲು ಅವಕಾಶ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸೋದರ ಡಿ.ಕೆ. ಸುರೇಶ್‌ ಈಗ ಬಮೂಲ್ ಅಧ್ಯಕ್ಷರಾಗಿದ್ದು, ಅವರೇ ಈ ಕುರಿತು ಉತ್ತರ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಜೆಡಿಎಸ್‌ ಪ್ರವಾಸದ ಕುರಿತು ಮಾತನಾಡಿದ ಅವರು, ಯಾವುದೇ ಯಾತ್ರೆ ಆಗಲಿ, ಕೆಲವೊಮ್ಮೆ ಬೇರೆ ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗಬೇಕಾಗುತ್ತದೆ. ಸೂಕ್ತ ಸಂದರ್ಭ ಬಂದಾಗ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಜನತೆಗೆ ಅಭಿವೃದ್ಧಿಯಲ್ಲಿ ಆಗಿರುವ ಹಿನ್ನಡೆ, ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಹಗರಣಗಳನ್ನು ಜನಗಳ ಗಮನಕ್ಕೆ ತರುವಂತಹ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ ರಾಜ್ಯದ ಮೇಲೆ ಮತ್ತಷ್ಟು ಸಾಲ ಹೊರಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಮ್ಮದು ಮನೆಯಲ್ಲಿ ಕುಳಿತು ರಾಜಕಾರಣ ಮಾಡುವ ಪಕ್ಷವಲ್ಲ. ಹಳ್ಳಿಗಳಿಗೆ ತೆರಳಿ ಪ್ರತಿ ಕನ್ನಡಿಗನನ್ನು ತಲುಪುತ್ತೇವೆ‌‌. ಎಲ್ಲಾ ಸಮುದಾಯಗಳನ್ನು ಜಾತ್ಯಾತೀತ ಮನೋಭಾವನೆಯಿಂದ ಒಪ್ಪಿಕೊಂಡಾಗಿದೆ ಎಂದರು.

Tags:    

Similar News