ಐಶ್ವರ್ಯಾಗೌಡ ಪ್ರಕರಣ : ಡಿ.ಕೆ.ಸುರೇಶ್ ಬೆನ್ನಲ್ಲೇ ಇತರರಿಗೂ ಇಡಿ ನೊಟೀಸ್‌ ಸಾಧ್ಯತೆ?

ಡಿ.ಕೆ.ಸುರೇಶ್‌ಗೆ ನೊಟೀಸ್‌ ಜಾರಿಗೊಳ್ಳುತ್ತಿದ್ದಂತೆ ಐಶ್ವರ್ಯಾಗೌಡ ಸಂಪರ್ಕದಲ್ಲಿದ್ದ ಇತರರಿಗೂ ನಡುಕ ಪ್ರಾರಂಭವಾಗಿದ್ದು, ಅವರಿಗೂ ಜಾರಿನಿರ್ದೇಶನಾಲಯ ನೊಟೀಸ್‌ ಜಾರಿಗೊಳ್ಳುವ ಸಾಧ್ಯತೆ ಇದೆ.;

Update: 2025-06-17 12:08 GMT

ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯಾಗೌಡ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ  ನೋಟಿಸ್‌ ನೀಡಿದೆ. ಇದರ ಬೆನ್ನಲ್ಲೇ ಆಕೆಯ ಸಂಪರ್ಕದಲ್ಲಿದ್ದ ಇತರೆ ರಾಜಕಾರಣಿಗಳಿಗೂ ಇಡಿ ವಿಚಾರಣೆಯ ನಡುಕ ಪ್ರಾರಂಭವಾಗಿದೆ. 

ಡಿ.ಕೆ. ಸುರೇಶ್​ ಸಹೋದರಿ ಎಂಬುದಾಗಿ ಹೇಳಿಕೊಂಡು ಐಶ್ವರ್ಯಗೌಡ ಕೋಟ್ಯಂತರ ರೂ. ಚಿನ್ನಾಭರಣ ವಂಚನೆ ಆರೋಪದ ಮೇರೆಗೆ ಇಡಿ ಬಂಧನಕ್ಕೊಳಗಾಗಿದ್ದರು. ಬಂಧಿತ ವೇಳೆ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಡಿ.ಕೆ.ಸುರೇಶ್‌ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮತ್ತು ತನಿಖೆ ವೇಳೆ ಲಭ್ಯವಾದ ಸಾಕ್ಷಿಗಳನ್ನು ಆಧರಿಸಿ ಇಡಿ ಅಧಿಕಾರಿಗಳು ನೋಟಿಸ್​ ನೀಡಿ ಗುರುವಾರ (ಜೂ.19)  ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಡಿ.ಕೆ.ಸುರೇಶ್‌ಗೆ ನೋಟಿಸ್​ ಜಾರಿಗೊಳ್ಳುತ್ತಿದ್ದಂತೆ ಐಶ್ವರ್ಯಾಗೌಡ ಸಂಪರ್ಕದಲ್ಲಿದ್ದ ಗಣ್ಯ ವ್ಯಕ್ತಿಗಳಿಗೂ ನೋಟಿಸ್​ ಜಾರಿಗೊಳ್ಳುವ ಸಾಧ್ಯತೆ ಇದೆ. ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಾಸಕ ವಿನಯ್‌ ಕುಲಕರ್ಣಿ, ಬೆಂಗಳೂರಿನ ಆರ್.ಆರ್.ನಗರದ ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ಸೇರಿದಂತೆ ಇತರರು ಸಹ ಸಂಪರ್ಕದಲ್ಲಿದ್ದರು. ಇವರಿಗೂ ನೋಟಿಸ್​ ಜಾರಿಗೊಳಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 

ಐಶ್ವರ್ಯಾಗೌಡ ಕಾರ್‌ ಅನ್ನು ವಿನಯ್‌ ಕುಲಕರ್ಣಿ ಬಳಕೆ ಮಾಡಿದ್ದ ಎಂಬ ಆರೋಪ ಇದೆ. ಅಲ್ಲದೇ, ವಿನಯ್ ಕುಲಕರ್ಣಿ ಬಳಿ 24 ಕೋಟಿ ರೂ. ಸಾಲದ ರೂಪದಲ್ಲಿ ಪಡೆದುಕೊಂಡು ದಿನಕ್ಕೆ ಶೇ.೧ರಷ್ಟು ಬಡ್ಡಿ ಕೊಡುವುದಾಗಿ ಐಶ್ವರ್ಯಾಗೌಡ ತಿಳಿಸಿದ್ದರು. ಆದರೆ, ಹಣ ಪಡೆದ ಬಳಿಕ ಬಡ್ಡಿ, ಅಸಲು ನೀಡದೆ ಸಮಯ ಕೇಳಿದ್ದಳು. ವಿನಯ್ ಕುಲಕರ್ಣಿ ಮತ್ತು ಐಶ್ವರ್ಯಾ ಗೌಡ ನಡೆಸಿದ ಮಾತುಕತೆಯ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ. 24 ಕೋಟಿ ರೂ. ಹಣಕ್ಕೆ ಸ್ನೇಹಿತನ ಹೆಸರಿನಲ್ಲಿ ಕೈಸಾಲ ಪಡೆದಿದ್ದಾಗಿ ಒಪ್ಪಂದ ಮಾಡಿಕೊಂಡಿರುವುದು ಮತ್ತು ಮಾಫಿ ಸಾಕ್ಷಿ ಟ್ರ್ಯಾಪ್ ಮಾಡುವಂತೆ ಶಾಸಕ ವಿನಯ್ ಕುಲಕರ್ಣಿ ಟಾಸ್ಕ್ ನೀಡಿದ್ದರು ಎಂಬುದು ಇಡಿ ತನಿಖೆ ವೇಳೆ ಗೊತ್ತಾಗಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕಿರುವ ಕಾರಣ ಜೈಲಿನಲ್ಲಿರುವ ವಿನಯ್‌ ಕುಲಕರ್ಣಿಯನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ಪ್ರಕರಣದ ಹಿನ್ನೆಲೆ

ಆರೋಪಿ ಐಶ್ವರ್ಯ ಗೌಡ ತನಗೆ ೩.೨೫ ಲಕ್ಷ ರೂ. ನಗದು ಹಾಗೂ 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಬೆಂಗಳೂರಿನ ಆರ್.ಆರ್.ನಗರ ಠಾಣೆಯಲ್ಲಿ ಶಿಲ್ಪಗೌಡ ಎಂಬುವವರು ದೂರು ನೀಡಿದ್ದರು. ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ, ರಿಯಲ್ ಎಸ್ಟೇಟ್ ವಿಲ್ಲಾ ನಿರ್ಮಾಣ ಮಾಡುತ್ತೇನೆ ಮತ್ತು ಕಡಿಮೆ ಬೆಲೆಗೆ ಚಿನ್ನಾಭರಣ ಕೊಡಿಸುತ್ತೇನೆ ಎಂಬುದಾಗಿ ಐಶ್ವರ್ಯ ಗೌಡ ಹಲವರಿಗೆ ವಂಚಿಸಿದ್ದರು. 2022 ರಿಂದ 2024 ರ ಅವಧಿಯಲ್ಲಿ ಅಕ್ರಮವಾಗಿ ಕೋಟ್ಯಂತರ ರೂ. ಹಣದ ವಹಿವಾಟು ಮಾಡಿದ್ದರು. ಸುಮಾರು 70 ಕೋಟಿ ರೂ. ವಹಿವಾಟು ಅಕೌಂಟ್ ಮೂಲಕ ನಡೆಸಿದ್ದ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು.

ಐಶ್ವರ್ಯಗೌಡ ವಿರುದ್ಧ ಬೆಂಗಳೂರಿನ ಆರ್.ಆರ್.ನಗರ ಚಂದ್ರಾಲೇಔಟ್ ಸೇರಿ ಮಂಡ್ಯ ಠಾಣೆಗಳಲ್ಲಿ ಹಲವು ವಂಚನೆ ಕೇಸ್ ದಾಖಲಾಗಿದ್ದವು. ಐಶ್ವರ್ಯ ಗೌಡ ಅಕ್ರಮ ಹಣ ವಹಿವಾಟು ಸಂಬಂಧ ಐಟಿ ಮತ್ತು ಇಡಿಗೆ ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ಪತ್ರ ಬರೆದಿದ್ದರು.

ವಾರಾಹಿ ಜ್ಯುವೆಲ್ಲರಿ ಶಾಪ್ ಮಾಲೀಕರಾದ ವನಿತಾ ಎಸ್. ಐತಾಳ್ ಅವರಿಗೆ 9.82 ಕೋಟಿ ರೂ. ಮೌಲ್ಯದ 14.660 ಕೆ.ಜಿ ಚಿನ್ನಾಭರಣ ವಂಚನೆ ಎಸಗಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಡಿ.ಕೆ. ಸುರೇಶ್ ಹೆಸರಲ್ಲಿ ವಂಚನೆ ಎಸಗಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಡಿ.ಕೆ.ಸುರೇಶ್‌ ಸಹ ಐಶ್ವರ್ಯಾಗೌಡ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್​​ನಲ್ಲಿ ದೂರು ನೀಡಿದ್ದರು. 

ಕೋಟ್ಯಂತರ ರು. ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಬಳಿಕ ಇಡಿ ಅಧಿಕಾರಿಗಳು ಪ್ರಕರಣದಲ್ಲಿ ಪ್ರವೇಶಿಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಐಶ್ವರ್ಯಾಗೌಡ ಸೇರಿದಂತೆ ಆಕೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಡಿಜಿಟಲ್‌ ಮಾಹಿತಿಗಳನ್ನು ಸಂಗ್ರಹಿಸಲಾಗಿತ್ತು. ಇವುಗಳನ್ನು ಪರಿಶೀಲನೆ ನಡೆಸಿದಾಗ ಆರೋಪಗಳ ಕುರಿತು ಮತ್ತಷ್ಟು ಮಾಹಿತಿಗಳು ಹೊರಬಂದಿದ್ದವು. ಇದೇ ಆಧಾರದ ಮೇಲೆ ಇದೀಗ ಡಿ.ಕೆ.ಸುರೇಶ್‌ಗೆ ಇಡಿ ಅಧಿಕಾರಿಗಳು ನೋಟಿಸ್​​ ಜಾರಿಗೊಳಿಸಿದ್ದು, ಇನ್ನಷ್ಟು ಮಂದಿಗೆ ನೋಟಿಸ್​ ನೀಡುವ ನಿರೀಕ್ಷೆ ಇದೆ. 


Tags:    

Similar News