ಉಗ್ರರು ಯಾವುದೇ ರಾಜ್ಯದಲ್ಲಿರಲಿ, ಮಟ್ಟಹಾಕಬೇಕಾದ ಕೆಲಸ ಕೇಂದ್ರದಿಂದ ಆಗಬೇಕು: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಉಗ್ರರನ್ನು ಮಟ್ಟಹಾಕಬೇಕಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಇಲ್ಲಿ ನೆಲೆಸಿರುವ ವಿದೇಶದವರ ಬಗ್ಗೆ ಕಣ್ಗಾವಲು ಇರಿಸಲು ಕೇಂದ್ರ ಗೃಹ ಸಚಿವರು ಸೂಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಉಗ್ರರು ಯಾವುದೇ ರಾಜ್ಯದಲ್ಲಿರಲಿ ಅವರನ್ನು ಮಟ್ಟಹಾಕಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.
ಉಗ್ರರ ಚಟುವಟಿಕೆಗಳಿಗೆ ಅವಕಾಶ ಕೊಡಕೂಡದು. ಪಹಲ್ಗಾಮ್ ಘಟನೆ ಅತ್ಯಂತ ಖಂಡನೀಯವಾದ ಹಾಗೂ ಅಮಾನುಷವಾದ ಘಟನೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಪುಲ್ವಾಮಾ ಘಟನೆಯೂ ಇದೇ ಜಿಲ್ಲೆಯಲ್ಲಿ ನಡೆದಿದ್ದರಿಂದ ಎಚ್ಚರಿಕೆಯಿಂದ ಇರಬೇಕಾಗಿತ್ತು. ಬಂದೋಬಸ್ತು ಸಡಿಲಗೊಳಿಸಬಾರದಿತ್ತು. ಇಲ್ಲಿ ಗುಪ್ತಚರ ವ್ಯವಸ್ಥೆಯ ವೈಫಲ್ಯವಾಗಿದೆ ಎಂದರು.
ಘಟನೆ ನಡೆದ ಬಳಿಕ ಕ್ರಮ ತೆಗೆದುಕೊಳ್ಳುವುದು ಬೇರೆ. ಘಟನೆಯಾಗದಂತೆ ತೆಗೆದುಕೊಳ್ಳುವ ಕ್ರಮಗಳು ಬೇರೆ. ಅದನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಪುಲ್ವಾಮಾ 40 ಸೈನಿಕರು ಪ್ರಾಣತೆತ್ತರು. ಈ ಘಟನೆಯಲ್ಲಿ 28 ಜನ ನಾಗರಿಕರು ಮೃತರಾಗಿದ್ದಾರೆ. ಇದನ್ನು ತಪ್ಪಿಸಲು ಕ್ರಮ ವಹಿಸಬೇಕಿತ್ತು.ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು.ಉಗ್ರರು ಯಾವುದೇ ಧರ್ಮ ಜಾರಿಗೆ ಸೇರಿರಲಿ ಅವರೆಲ್ಲರನ್ನೂ ಮಟ್ಟ ಹಾಕಬೇಕಿರುವುದು ಸರ್ಕಾರದ ಜವಾಬ್ದಾರಿ ಅದಕ್ಕೆ ಬೇಕಾಗಿರುವ ಎಲ್ಲಾ ಸಹಕಾರ, ಬೆಂಬಲವನ್ನು ನಾವು, ನಮ್ಮ ಸರ್ಕಾರ ಪಕ್ಷ ಕೊಡುತ್ತದೆ ಎಂದರು.