ವಯನಾಡ್‌ ಭೂಕುಸಿತಕ್ಕೆ ಅರಬ್ಬಿ ಸಮುದ್ರದ ಬಿಸಿಯಾಗುವಿಕೆ... ... Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು, 128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ

ವಯನಾಡ್‌ ಭೂಕುಸಿತಕ್ಕೆ ಅರಬ್ಬಿ ಸಮುದ್ರದ ಬಿಸಿಯಾಗುವಿಕೆ ಕಾರಣ: ಹವಾಮಾನ ವಿಜ್ಞಾನಿ

ಅರಬ್ಬಿ ಸಮುದ್ರದ ಬಿಸಿಯಾಗುವಿಕೆಯಿಂದ ಸಾಂದ್ರ ಮೋಡಗಳ ವ್ಯವಸ್ಥೆ ಸೃಷ್ಟಿಯಾಗುತ್ತಿದ್ದು, ಇದರಿಂದ ಕೇರಳದಲ್ಲಿ ಕಡಿಮೆ ಅವಧಿಯಲ್ಲಿ ಭಾರಿ ಮಳೆಯಾಗುತ್ತಿದೆ ಹಾಗೂ ಭೂಕುಸಿತದ ಸಂಭವನೀಯತೆಯನ್ನು ಹೆಚ್ಚಿಸುತ್ತಿದೆ ಎಂದು ಹವಾಮಾನ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಕೊಚ್ಚಿ ವಿಶ್ವವಿದ್ಯಾನಿಲಯದ ಅಟ್ಮಾಸ್ಪೆರಿಕ್‌ ರಡಾರ್‌ ರಿಸರ್ಚ್‌ ಉನ್ನತ ಕೇಂದ್ರದ ಹಿರಿಯ ವಿಜ್ಞಾನಿ ಎಸ್. ಅಭಿಲಾಷ್‌ ಮಾತನಾಡಿ, ಕಾಸರಗೋಡು, ಕಣ್ಣೂರು, ವಯನಾಡ್‌, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲು ಕಳೆದ ಎರಡು ವಾರದಿಂದ ಕೊಂಕಣ ಪ್ರದೇಶವನ್ನು ಪ್ರಭಾವಿಸಿದ ಸಕ್ರಿಯ ಮುಂಗಾರು ಸಮುದ್ರದ ಕುಳಿಗಳು ಕಾರಣ ಎಂದು ಹೇಳಿದರು. ಎರಡು ವಾರ ಮಳೆ ಬಿದ್ದಿರುವುದರಿಂದ ಭೂಮಿ ನೆನೆದು ಸಂತೃಪ್ತವಾಗಿದೆ. ಅರಬ್ಬಿ ಸಮುದ್ರದ ಲ್ಲಿ ಸೋಮವಾರ ರಚನೆಯಾದ ಸಾಂದ್ರ ಮೋಡ ವ್ಯವಸ್ಥೆಯಿಂದ ವಯನಾಡ್‌, ಕಲ್ಲಿಕೋಟೆ, ಮಲಪ್ಪುರಂ ಮತ್ತು ಕಣ್ಣೂರಿನಲ್ಲಿ ಭಾರಿ ಮಳೆಯಾಗಿದೆ. ಮೋಡಗಳು ಬಹಳ ಸಾಂದ್ರವಾಗಿದ್ದು, ಈಂತಹ ಮೋಡಗಳೇ 2029ರಲ್ಲಿ ಕೇರಳದಲ್ಲಿ ಮಹಾ ಪ್ರವಾಹಕ್ಕೆ ಕಾರಣವಾಗಿತ್ತು ಎಂದು ಹೇಳಿದರು.

2019ರಲ್ಲಿ ಆದಂತೆ ಕೆಲವೊಮ್ಮೆ ಈ ಸಾಂದ್ರ ಮೋಡ ವ್ಯವಸ್ಥೆ ಭೂಮಿಯನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಈ ಪ್ರವೃತ್ತಿಯನ್ನು ಅರಬ್ಬಿ ಸಮುದ್ರದಲ್ಲಿ ವಿಜ್ಞಾನಿಗಳು ಗಮನಿಸಿದ್ದಾರೆ ಎಂದರು. ಕೇರಳ ಸೇರಿದಂತೆ ಈ ಪ್ರದೇಶದಲ್ಲಿ ಅರೇಬಿಯನ್‌ ಸಮುದ್ರ ಬಿಸಿಯಾಗುತ್ತಿದ್ದು, ಇದರಿಂದಾಗಿ ವಾತಾವರಣ ಅಸ್ಥಿರವಾಗುತ್ತಿದೆ. ವಾತಾವರಣದಲ್ಲಿನ ಅಸ್ಥಿರತೆಯಿಂದ ಸಾಂದ್ರವಾದ ಮೋಡಗಳು ಸೃಷ್ಟಿಯಾಗುತ್ತಿವೆ. ಈಮೊದಲು ಉತ್ತರ ಕೊಂಕಣದಲ್ಲಿ, ಮಂಗಳೂರಿನ ಉತ್ತರ ಭಾಗದಲ್ಲಿ, ತೀರ ಸಾಮಾನ್ಯವಾಗಿತ್ತು. ಹವಾಮಾನ ಬದಲಾವಣೆಯಿಂದ ಸಾಂದ್ರ ಮೋಡಗಳು ದಕ್ಷಿಣದೆಡೆಗೆ ಧಾವಿಸುತ್ತಿದ್ದು, ಭಾರಿ ಮಳೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.

Update: 2024-07-30 12:28 GMT

Linked news