ಡಿಕೆಶಿ ವರ್ತನೆ ಕುರಿತು ಹೆಚ್.ಡಿ. ಕುಮಾರಸ್ವಾಮಿ ಟೀಕೆ: "ಕಣ್ಣೀರಿನ ಡ್ರಾಮಾ' ಎಂದ ಸಚಿವರು
ಕಾಲ್ತುಳಿತ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವರ್ತನೆಯನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ. ಡಿಕೆಶಿ ಅವರು ಕಪ್ ಗೆದ್ದ ಆರ್ಸಿಬಿ ತಂಡವನ್ನು ನೇರವಾಗಿ ಸ್ವಾಗತಿಸಿ, ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದು ಮತ್ತು ನಂತರ ಕಣ್ಣೀರು ಹಾಕಿದ್ದು ಕೇವಲ "ಡ್ರಾಮಾ" ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಡಿಸಿಎಂ ಕನಕಪುರದಿಂದ ನೇರವಾಗಿ ಹೆಚ್ಎಎಲ್ಗೆ ಹೋಗಿ ಶೋ ಆಫ್ ಮಾಡಿದ್ದಾರೆ. ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ, ಡಿಕೆಶಿ ಅವರು ತರಾತುರಿಯಲ್ಲಿ ಹೋಗಿ ತಮ್ಮನ್ನು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಕುಮಾರಸ್ವಾಮಿ ದೂರಿದ್ದಾರೆ.
"ಡಿಸಿಎಂ ಆರ್ಸಿಬಿಗೆ ಎಸ್ಕಾರ್ಟ್ ಮಾಡಿ ಹೋಟೆಲ್ಗೆ ಬಿಟ್ಟಿದ್ದಾರೆ. ವಿಜಯೋತ್ಸವದ ಆಯೋಜನೆಯಲ್ಲಿ ಡಿಕೆಶಿ ಅವರ ಪಾತ್ರ ಬಹಳ ದೊಡ್ಡದಿತ್ತು ಮತ್ತು ಅವರು ತಂಡವನ್ನು ಸ್ವಾಗತಿಸುವಲ್ಲಿ ಪ್ರಮುಖವಾಗಿ ನಿಂತಿದ್ದರು ಎಂದು ಕುಮಾರಸ್ವಾಮಿ ಸೂಚಿಸಿದ್ದಾರೆ.
ಮೊಸಳೆ ಕಣ್ಣೀರು
ಡಿಕೆ ಶಿವಕುಮಾರ್ 24 ಗಂಟೆ ಬಳಿಕ ಕಣ್ಣೀರು ಹಾಕಿದ್ದಾರೆ. ದುರಂತ ಸಂಭವಿಸಿದ ತಕ್ಷಣ ಕಣ್ಣೀರು ಹಾಕದ ಡಿಕೆಶಿ, 24 ಗಂಟೆಗಳ ನಂತರ ಕಣ್ಣೀರು ಹಾಕಿದ್ದು ಕೇವಲ ಒಂದು ಪ್ರಹಸನ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಕಣ್ಣೀರು ಹೃದಯದಿಂದ ಬರಬೇಕು. ಎಲ್ಲವೂ ಸುಳ್ಳು. ಇವರ ಡ್ರಾಮಾ ಬಯಲಾಗಿದೆ. ಡಿಕೆಶಿ ಅವರ ಕಣ್ಣೀರು ನೈಜವಲ್ಲ, ಬದಲಿಗೆ ರಾಜಕೀಯ ಲಾಭಕ್ಕಾಗಿ ಅಥವಾ ಸಾರ್ವಜನಿಕ ಸಹಾನುಭೂತಿ ಪಡೆಯಲು ಮಾಡಿದ ನಾಟಕ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.